ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಗೊಬ್ಬರವನ್ನು ಬಳಸದೆ, ಜೀವಾಮೃತವನ್ನು ಬಳಸಿ ಗಿಡಗಳನ್ನು ಬೆಳೆಸಲು (ಕೈದೋಟಕ್ಕಾಗಿ) ಫಲವತ್ತಾದ ಮಣ್ಣನ್ನು ಹೇಗೆ ತಯಾರಿಸಬೇಕು ?

ಸನಾತನದ `ಮನೆಮನೆಗಳಲ್ಲಿ ಕೈದೋಟ’ ಅಭಿಯಾನ – ಮಾಲಿಕೆ ೫

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/55797.html

‘ಸುಭಾಷ ಪಾಳೆಕರ ನೈಸರ್ಗಿಕ ಬೇಸಾಯ’ ಪದ್ಧತಿಯಲ್ಲಿ ‘ಹ್ಯೂಮಸ್’ಗೆ (ನೈಸರ್ಗಿಕ ಪದಾರ್ಥಗಳ ವಿಭಜನೆಯ ನಂತರ ರೂಪುಗೊಂಡ ಫಲವತ್ತಾದ ಮಣ್ಣು) ಬಹಳ ಮಹತ್ವವಿದೆ. ಈ ‘ಹ್ಯೂಮಸ್’ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

೧. ಮಣ್ಣಿನ ಲಭ್ಯತೆ ಬಗ್ಗೆ ನಗರದ ಜನರಿಗೆದುರಾಗುವ ಸಮಸ್ಯೆ

ಗಿಡಗಳಿಗೆ ಆಧಾರಕ್ಕಾಗಿ, ಹಾಗೆಯೇ ಆಹಾರದ್ರವ್ಯಗಳನ್ನು ದೊರಕಿಸಿಕೊಳ್ಳಲು ಮಣ್ಣಿನ ಆವಶ್ಯಕತೆ ಇರುತ್ತದೆ. ನಗರದ ಜನರಿಗೆ ಮನೆಯಲ್ಲಿ ಕೈದೋಟ ಮಾಡುವುದಿದ್ದರೆ ಮಣ್ಣನ್ನು ಎಲ್ಲಿಂದ ತರಬೇಕು ? ಎಂಬ ಪ್ರಶ್ನೆ  ಉದ್ಭವಿಸುತ್ತದೆ. ನಗರಗಳಲ್ಲಿ ಮಣ್ಣು ಸಿಗುವುದು ಕಠಿಣವಿರುತ್ತದೆ ಮತ್ತು ದೊರಕಿದ ಮಣ್ಣು ಫಲವತ್ತಾಗಿರುತ್ತದೆ, ಎಂದು ಹೇಳಲು ಬರುವುದಿಲ್ಲ. ಹೆಚ್ಚಾಗಿ ಮನೆಗಳಲ್ಲಿ ಕೈದೋಟವನ್ನು ಮೇಲ್ಛಾವಣಿಯಲ್ಲಿ ಮಾಡಲಾಗುತ್ತದೆ. ಮಣ್ಣು ಜಡವಾಗಿರುವುದರಿಂದ ಮೇಲಿನ ವರೆಗೆ ತೆಗೆದುಕೊಂಡು ಹೋಗುವುದು ಕಠಿಣವಿರುತ್ತದೆ, ಹಾಗೆಯೇ ಮೇಲ್ಛಾವಣಿಗೂ ಮಣ್ಣು ಭಾರವಾಗುತ್ತದೆ.

೨. ನೈಸರ್ಗಿಕ ಪದಾರ್ಥಗಳು

ವಿಘಟನೆಯಾಗಿ ತಯಾರಾಗುವ ‘ಫಲವತ್ತಾದ ಮಣ್ಣು (ಹ್ಯೂಮಸ್)’ ಒಣಗಿದ ಹುಲ್ಲು, ಕೊಳೆತ ಕಸ, ಗಿಡಗಳ ಒಣಗಿದ ಎಲೆ ಮತ್ತು ಕಡ್ಡಿಗಳು, ತೆಂಗಿನನಾರು, ಅಡುಗೆಮನೆಯಲ್ಲಿನ ಹಸಿ ಕಸ ಈ ಎಲ್ಲವುಗಳನ್ನು ಕೊಳೆಸಿ ನಾವು ಗಿಡಗಳಿಗಾಗಿ ‘ಫಲವತ್ತಾದ ಮಣ್ಣು’ ತಯಾರಿಸಿಕೊಳ್ಳಬಹುದು. ಇಂತಹ ನೈಸರ್ಗಿಕ ಪದಾರ್ಥಗಳು ಕೊಳೆತು ಯಾವ ‘ಮಣ್ಣು’ ತಯಾರಾಗುತ್ತದೋ ಅದಕ್ಕೆ ಆಂಗ್ಲ ಭಾಷೆಯಲ್ಲಿ ‘ಹ್ಯೂಮಸ್’ ಎಂದು ಹೇಳುತ್ತಾರೆ.

೩. ‘ಫಲವತ್ತಾದ ಮಣ್ಣು’ ತಯಾರಿಸಲು ನಗರಗಳಲ್ಲಿ ಲಭ್ಯವಿರುವ ಸಾಧನಗಳು

‘ಹ್ಯೂಮಸ್’ ಇದು ಗಿಡಗಳಿಗಾಗಿ ಆಹಾರ ದ್ರವ್ಯಗಳ ಗಣಿಯಾಗಿದೆ. ನಗರಗಳಲ್ಲಿನ ಸೊಸೈಟಿಗಳಲ್ಲಿ ದೊಡ್ಡ ಮರಗಳು ಇರುವಲ್ಲಿ ಒಣಗಿದ ಎಲೆಗಳು, ಕಡ್ಡಿಗಳು ಸಿಗುತ್ತವೆ. ಮಾವಿನಹಣ್ಣುಗಳ ಸುಗ್ಗಿಯಲ್ಲಿ ಮಾವುಗಳನ್ನಿಡುವ ಪೆಟ್ಟಿಗೆಗಳಲ್ಲಿ ಒಣಗಿದ ಹುಲ್ಲು ಸಿಗುತ್ತದೆ. ಮನೆಯಲ್ಲಿನ ಕೊಳೆತ ಕಸ, ಹಾಗೆಯೇ ತೆಂಗಿನನಾರು ಈ ಎಲ್ಲವುಗಳನ್ನು ಬಳಸಿ ನಾವು ಉತ್ತಮ ದರ್ಜೆಯ ‘ಹ್ಯೂಮಸ್’ ತಯಾರಿಸಬಹುದು.

೪. ಸೊಪ್ಪುತರಕಾರಿಗಳನ್ನು ಬೆಳೆಸಲು ಪಾತಿಗಳನ್ನು ಹೇಗೆ ತಯಾರಿಸಬೇಕು ?

ಮನೆಯಲ್ಲಿಯೇ ಗಿಡಗಳನ್ನು ಬೆಳೆಸಲು ಹಗಲಿನಲ್ಲಿ ಕನಿಷ್ಠ ೩ – ೪ ಗಂಟೆ ಬಿಸಿಲು ಬೀಳುವಂತಹ ಜಾಗವನ್ನು ಆಯ್ಕೆ ಮಾಡಬೇಕು. (ಸೊಪ್ಪುತರಕಾರಿಗಳನ್ನು ಬೆಳೆಸಲು ಎಷ್ಟು ಹೆಚ್ಚು ಬಿಸಿಲು ಸಿಗುವುದೋ ಅಷ್ಟು ಒಳ್ಳೆಯದು.) ಈ ಸ್ಥಳದಲ್ಲಿ ಗಿಡಗಳನ್ನು ಬೆಳೆಸಲು ಕುಂಡಗಳನ್ನು ಇಡಬೇಕು ಅಥವಾ ಇಟ್ಟಿಗೆಗಳನ್ನು ಬಳಸಿ ಪಾತಿಗಳನ್ನು ತಯಾರಿಸಿಕೊಳ್ಳಬೇಕು. ಪಾತಿಗಳ ಅಗಲ ೨ ಅಡಿಗಳ ವರೆಗಷ್ಟೇ ಇರಬೇಕು. ಹೀಗೆ ಮಾಡುವುದರಿಂದ ನಮಗೆ ಪಾತಿಗಳಲ್ಲಿ ಗಿಡಗಳನ್ನು ಬೆಳೆಸಲು ಸುಲಭವಾಗುತ್ತದೆ. ಕೆಳಗೆ ಬಗ್ಗಬಾರದೆಂದು ನೆಲದಿಂದ ನಿಶ್ಚಿತ ಅಂತರದಲ್ಲಿ ಪಾತಿಗಳನ್ನು ತಯಾರಿಸಿಕೊಳ್ಳಲು ಬರುತ್ತದೆ. ಮನೆಯ ಕಿಟಕಿಗಳಲ್ಲಿ ಎಲ್ಲಿ ಬಿಸಿಲು ಬೀಳುತ್ತದೋ ಅಂತಹ ಜಾಗದಲ್ಲಿಯೂ ಪಾತಿಗಳನ್ನು ತಯಾರಿಸಲು ಸಾಧ್ಯವಿದೆ. ಒಂದು ಇಟ್ಟಿಗೆಯ ಅಗಲದಷ್ಟು ಎತ್ತರದ ಅಂದರೆ ಸಾಧಾರಣ ೪ ಇಂಚು ಎತ್ತರದ ಪಾತಿಗಳು ಸಾಕಾಗುತ್ತವೆ. ಹೀಗೆ ಮಾಡುವುದರಿಂದ ಮೇಲ್ಛಾವಣಿಗೆ ಮಣ್ಣಿನ ಭಾರ ಹೆಚ್ಚಾಗುವುದಿಲ್ಲ.

‘ಸುಭಾಷ ಪಾಳೆಕರ ನೈಸರ್ಗಿಕ ಬೇಸಾಯ’ ಪದ್ಧತಿಯಲ್ಲಿ ಈ ಗಿಡಗಳಿಗೆ ಬಹಳ ಕಡಿಮೆ ನೀರು ಸಾಕಾಗುವುದರಿಂದ ಪಾತಿಗಳ ಕೆಳಗೆ ಪ್ಲಾಸ್ಟಿಕಿನ ಹಾಸುಗಳ ಆವಶ್ಯಕತೆ ಇರುವುದಿಲ್ಲ, ಆದರೂ ನೀರು ಕೆಳಗೆ ಇಂಗುವುದೋ ಹೇಗೆ ಎಂಬ ಬಗ್ಗೆ ಸಂದೇಹವಿದ್ದರೆ, ನೆಲದ ಮೇಲೆ ಪ್ಲಾಸ್ಟಿಕಿನ ಹಾಸಿನ ಮೇಲೆ ಇಟ್ಟಿಗೆಗಳ ಪಾತಿಗಳನ್ನು ತಯಾರಿಸಬೇಕು. (ಇಟ್ಟಿಗೆಗಳ ಪಾತಿಗಳನ್ನು ಹೇಗೆ ತಯಾರಿಸಬೇಕು, ಎಂಬ ವಿಡಿಯೋವನ್ನು ಸನಾತನದ ಜಾಲತಾಣದಲ್ಲಿ ನೀಡಲಾಗಿದೆ. ಇದರ ಸಂಪರ್ಕ ಕೊಂಡಿಯನ್ನು ಲೇಖನದ ಕೊನೆಯ ಚೌಕಟ್ಟಿನಲ್ಲಿ ಕೊಡಲಾಗಿದೆ.)

೫. ಪಾತಿಗಳಲ್ಲಿ ನೈಸರ್ಗಿಕ ಕಸವನ್ನು ಹರಡಿ ಅದರ ಮೇಲೆ ವಾರಕ್ಕೊಮ್ಮೆ ಜೀವಾಮೃತವನ್ನು ಸಿಂಪಡಿಸಬೇಕು

ನಾವು ಗಿಡಗಳನ್ನು ಬೆಳೆಸುವ ಕುಂಡಗಳಲ್ಲಿ ಅಥವಾ ಇಟ್ಟಿಗೆಗಳ ಪಾತಿಗಳಲ್ಲಿ ಒಣಗಿದ ನೈಸರ್ಗಿಕ ಕಸ (ಉದಾ. ತೆಂಗಿನನಾರು, ಒಣಗಿದ ಹುಲ್ಲು, ಗಿಡಗಳ ಒಣಗಿದ ಎಲೆಗಳು, ಕಡ್ಡಿಗಳು) ವನ್ನು ಹರಡಿ ಒತ್ತಿಡಬೇಕು. ಇದರ ಮೇಲೆ ಲಭ್ಯವಿದ್ದರೆ ಸ್ವಲ್ಪ ಮಣ್ಣನ್ನು ಹರಡಬೇಕು. ಮಣ್ಣನ್ನು ಹಾಕದಿದ್ದರೂ ನಡೆಯುತ್ತದೆ; ಆದರೆ ಮಣ್ಣನ್ನು ಹಾಕಿದರೆ ಕಸವು ಬೇಗನೆ ಕೊಳೆಯುತ್ತದೆ. ಇದರ ಮೇಲೆ ಅಡುಗೆಮನೆಯಲ್ಲಿನ ಹಸಿ ಕಸವನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಬಹುದು; ಆದರೆ ಹಸಿ ಕಸದ ಪದರು ೧ ಇಂಚಿಗಿಂತ ಹೆಚ್ಚು ಇರಬಾರದು; ಏಕೆಂದರೆ ಹೀಗಾದರೆ ದುರ್ಗಂಧವು ಹರಡಬಹುದು. ದೇಶಿ ಗೋವಿನ(ಹಸುವಿನ) ಸೆಗಣಿಯಲ್ಲಿ ನೈಸರ್ಗಿಕ ಕಸವನ್ನು ಕೊಳೆಯಿಸುವ ಜೀವಾಣುಗಳಿರುತ್ತವೆ. ಈ ಸೆಗಣಿಯಿಂದ ‘ಜೀವಾಮೃತ’ ಹೆಸರಿನ ಪದಾರ್ಥವನ್ನು ತಯಾರಿಸಲಾಗುತ್ತದೆ.

ಈ ಜೀವಾಮೃತವನ್ನು ತಯಾರಿಸಿ ಅದನ್ನು ಹತ್ತು ಪಟ್ಟು ನೀರಿನಲ್ಲಿ ಸೇರಿಸಿ ಕಸದ ಮೇಲೆ ಸಿಂಪಡಿಸಿದರೆ ಈ ಕಸವು ಬೇಗನೆ ಕೊಳೆಯುತ್ತದೆ ಮತ್ತು ಕಸದಿಂದ ಕೈದೋಟಕ್ಕಾಗಿ ಉಪಯುಕ್ತ ‘ಹ್ಯೂಮಸ್’ ತಯಾರಾಗುತ್ತದೆ. ‘ಜೀವಾಮೃತವನ್ನು ಹೇಗೆ ತಯಾರಿಸಬೇಕು ?’ ಈ ಬಗೆಗಿನ ಸವಿಸ್ತಾರ ಮಾಹಿತಿ ನೀಡುವ ವಿಡಿಯೋವನ್ನು ಸನಾತನದ ಜಾಲತಾಣದಲ್ಲಿ ನೀಡಲಾಗಿದೆ. (ಜಾಲತಾಣದ ಸಂಪರ್ಕ ಕೊಂಡಿಯನ್ನು ಈ ಲೇಖನದ ಕೊನೆಗೆ ಕೊಡಲಾಗಿದೆ.) ಪ್ರತಿ ವಾರಕ್ಕೊಮ್ಮೆ ಜೀವಾಮೃತವನ್ನು ತಯಾರಿಸಿ ಅದನ್ನು ಹತ್ತು ಪಟ್ಟು ನೀರಿನಲ್ಲಿ ಸೇರಿಸಿ ಒಂದು ಸಲ ಕಸದ ಮೇಲೆ ಸಿಂಪಡಿಸಬೇಕು. ಪ್ರತಿದಿನ ಬೆಳಗ್ಗೆ, ಸಾಯಂಕಾಲ ಕುಂಡಗಳು ಮತ್ತು ಪಾತಿಗಳಲ್ಲಿನ ಕಸದ ಮೇಲೆ ನೀರನ್ನು ಸಿಂಪಡಿಸಿ ಅದನ್ನು ಒದ್ದೆಯಾಗಿರುವಂತೆ ನೋಡಬೇಕು; ಆದರೆ ಜಾಸ್ತಿ ನೀರು ಹಾಕಬಾರದು. (`ಜೀವಾಮೃತ’ವನ್ನು ತಯಾರಿಸಿ ಅದನ್ನು ಬಳಸುವುದು ಆದರ್ಶವಾಗಿದೆ; ಆದರೆ ಕೆಲವು ಕಾರಣಗಳಿಂದ ಜೀವಾಮೃತವನ್ನು ತಯಾರಿಸುವುದು ಸಾಧ್ಯವಾಗದಿದ್ದರೆ ಕೇವಲ ಬೆಳಗ್ಗೆ ಸಾಯಂಕಾಲ ನೀರನ್ನು ಸಿಂಪಡಿಸಬೇಕು. ಮನೆಯಲ್ಲಿನ ಮುಸುರೆ ಪಾತ್ರೆಗಳನ್ನು ತೊಳೆದ ನೀರನ್ನೂ ಸಹ ಈ ಕಸದ ಮೇಲೆ ಸಿಂಪಡಿಸಲು ಬರುತ್ತದೆ; ಆದರೆ ಇದರಲ್ಲಿ ಸಾಬೂನು ಇರಬಾರದು.)

೬. ಜೀವಾಮೃತದ ಮಹತ್ವ

‘ಜೀವಾಮೃತ’ವು ಗಿಡಗಳಿಗೆ ಮಣ್ಣಿನಿಂದ ಆಹಾರದ್ರವ್ಯವನ್ನು ಲಭ್ಯಮಾಡಿಕೊಡುವ ಜೀವಾಣುಗಳ ಮಿಶ್ರಣವಾಗಿದೆ. ನೈಸರ್ಗಿಕ ಕಸವನ್ನು ಬೇಗನೆ ಕೊಳೆಸಿ ಅದರಲ್ಲಿನ ಆಹಾರದ್ರವ್ಯವನ್ನು ಗಿಡಗಳಿಗೆ ಲಭ್ಯಮಾಡಿಕೊಡುವ ಅಸಂಖ್ಯಾತ ಜೀವಾಣುಗಳು ದೇಶಿ ಹಸುವಿನ ಸೆಗಣಿಯಲ್ಲಿರುತ್ತದೆ. ಪದ್ಮಶ್ರೀ ಸುಭಾಷ ಪಾಳೆಕರ ಇವರು ಈ ಜೀವಾಣುಗಳನ್ನು ಅನೇಕ ಪಟ್ಟುಗಳಲ್ಲಿ ಬೆಳೆಸುವ ಒಂದು ಪದಾರ್ಥವನ್ನು ತಯಾರಿಸಿ ಅದಕ್ಕೆ ‘ಜೀವಾಮೃತ’ ಎಂಬ ಹೆಸರನ್ನು ನೀಡಿದ್ದಾರೆ. ಜೀವಾಮೃತದಿಂದಾಗಿ ನೈಸರ್ಗಿಕ ಕಸವು ಬಹಳ ಬೇಗನೆ ಕೊಳೆಯುತ್ತದೆ ಮತ್ತು ಕಸಕ್ಕೆ ದುರ್ಗಂಧವೂ ಬರುವುದಿಲ್ಲ. ‘ಸುಭಾಷ ಪಾಳೆಕರ ನೈಸರ್ಗಿಕ ಬೇಸಾಯ’ ಪದ್ಧತಿಯಲ್ಲಿ ‘ಜೀವಾಮೃತ’ವು ಮುಖ್ಯ ಆಧಾರವಾಗಿದೆ. ಆದುದರಿಂದ ನಿಯಮಿತವಾಗಿ ಜೀವಾಮೃತವನ್ನು ತಯಾರಿಸುವ ನಿಯೋಜನೆಯನ್ನು ಮಾಡಬೇಕು.

೭. ಕಸವು ಕೊಳೆತಂತೆ ಅದರಲ್ಲಿ ಪುನಃ ಕಸವನ್ನು ತುಂಬುವುದು ಆವಶ್ಯಕ

ನೈಸರ್ಗಿಕ ಕಸವು ಕೊಳೆತಂತೆ, ಅದರ ಗಾತ್ರವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಎರಡನೇಯ ವಾರದಲ್ಲಿ ಕುಂಡಗಳಲ್ಲಿ ಅಥವಾ ಪಾತಿಗಳಲ್ಲಿ ಖಾಲಿ ಜಾಗವು ಸಿಗುತ್ತದೆ. ಇಂತಹ ಸಮಯದಲ್ಲಿ ಅದರ ಮೇಲೆ ಪುನಃ ನೈಸರ್ಗಿಕ ಕಸವನ್ನು ಹರಡುವುದು, ಜೀವಾಮೃತವನ್ನು ಸಿಂಪಡಿಸುವುದು ಇತ್ಯಾದಿ ಕೃತಿಯನ್ನು ಮಾಡಬೇಕು. ಸಾಧಾರಣ ೨೦ ರಿಂದ ೩೦ ದಿನಗಳಲ್ಲಿ ಈ ಕಸದಿಂದ ಕೈದೋಟಕ್ಕೆ ಉಪಯುಕ್ತವಾಗುವ ಫಲವತ್ತಾದ ಮಣ್ಣು ಅಂದರೆ ‘ಹ್ಯೂಮಸ್’ ತಯಾರಾಗುತ್ತದೆ. ನಾವು ಯಾವಾಗ ಅಡುಗೆಮನೆಯಲ್ಲಿನ ಹಸಿ ಕಸವನ್ನು ಹರಡುತ್ತೇವೆಯೋ ಆ ಸಮಯದಲ್ಲಿ ಅದರಲ್ಲಿ ಕೆಲವೊಮ್ಮೆ ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿಗಳಂತಹ ತರಕಾರಿಗಳ ಬೀಜಗಳೂ ಆ ಪಾತಿಗಳಲ್ಲಿ ಬೀಳುತ್ತವೆ. ಇಂತಹ ಬೀಜಗಳು ತಾವಾಗಿಯೇ ಮೊಳಕೆಯೊಡೆದಾಗ ನಮ್ಮ ಪಾತಿಗಳು ಗಿಡಗಳನ್ನು ಬೆಳೆಸಲು ಯೋಗ್ಯವಾಗಿದೆ, ಎಂದು ತಿಳಿಯಬೇಕು ಮತ್ತು ನಂತರ ಅವುಗಳಲ್ಲಿ ಮನೆಯಲ್ಲಿ ಲಭ್ಯವಿರುವ ತರಕಾರಿಗಳ ಬೀಜಗಳನ್ನು ಬೆಳೆಸಬೇಕು. ಮೆಣಸಿನಕಾಯಿ, ಚವಳಿ, ಹೆಸರು, ಟೊಮೆಟೋ, ಮೆಂತ್ಯೆಕಾಳು ಮನೆಯಲ್ಲಿ ಯಾವಾಗಲೂ ಇರುತ್ತವೆ. ಶುಂಠಿ, ಬಟಾಟೆಗೆ ಬಂದ ಮೊಳಕೆ, ಬೆಳ್ಳುಳ್ಳಿಯ ಪಕಳೆಗಳು, ಚಿಕ್ಕ ಈರುಳ್ಳಿ, ಗಜ್ಜರಿಯ ದಂಟಿನ ಕಡೆಗಿನ ಭಾಗ, ಪುದೀನಾದ ಕಾಂಡಸಹಿತ ಬೇರುಗಳು ಸಹ ಮನೆಯಲ್ಲಿರುತ್ತವೆ. ಇವುಗಳ ಕೈದೋಟವನ್ನು ಈ ‘ಹ್ಯೂಮಸ್’ನಲ್ಲಿ ಮಾಡಬಹುದು.

೮. ‘ಹ್ಯೂಮಸ್’ನ ಲಾಭ

ನೈಸರ್ಗಿಕ ಕಸವನ್ನು ಪಸರಿಸಿ ಅದನ್ನು ಜೀವಾಮೃತದ ಸಹಾಯದಿಂದ ವಿಭಜನೆ ಮಾಡಿದರೆ ಗಿಡಗಳಿಗೆ ಆವಶ್ಯಕವಾಗಿರುವ ಎಲ್ಲ ಆಹಾರದ್ರವ್ಯಗಳು ಲಭ್ಯವಾಗುತ್ತವೆ. ಹೊರಗಡೆಯಿಂದ ಯಾವುದೇ ಗೊಬ್ಬರವನ್ನು ಖರೀದಿಸಿ ತರುವ ಆವಶ್ಯಕತೆ ಇರುವುದಿಲ್ಲ. ಈ ‘ಹ್ಯೂಮಸ್’ನಲ್ಲಿ ನಾವು ನೆಡುವ ಸಸಿಗಳು ಅತ್ಯಂತ ಸದೃಢವಾಗುತ್ತವೆ. ಅವುಗಳಲ್ಲಿ ನೈಸರ್ಗಿಕ ರೋಗನಿರೋಧಕ ಕ್ಷಮತೆ ಇರುವುದರಿಂದ ‘ಹ್ಯೂಮಸ್’ನಲ್ಲಿ ನೆಟ್ಟ ಸಸಿಗಳಿಗೆ ರೋಗವಾಗುವ ಸಾಧ್ಯತೆಯು ಕಡಿಮೆಯಿರುತ್ತದೆ. ‘ಹ್ಯೂಮಸ್’ನಲ್ಲಿ ನೀರನ್ನು ಹಿಡಿದಿಡುವ ಕ್ಷಮತೆ ಇರುತ್ತದೆ. ಆದುದರಿಂದ ಸ್ವಲ್ಪ ನೀರು ಹಾಕಿದರೂ ಸಾಕಾಗುತ್ತದೆ. ‘ಹ್ಯೂಮಸ್’ ಮಣ್ಣಿಗಿಂತ ಹಗುರವಾಗಿರುವುದರಿಂದ ಇದು ಮೇಲ್ಛಾವಣಿಗೆ ಭಾರವಾಗುವುದಿಲ್ಲ.

೯. ಮನೆಮನೆಗಳಲ್ಲಿ ಕೈದೋಟ ಅಭಿಯಾನದ ಅಂತರ್ಗತ ಕೃಷಿಗಾಗಿ ನೈಸರ್ಗಿಕ ಕಸದಿಂದ ಪಾತಿಗಳನ್ನು ತಯಾರಿಸಿ ಅವುಗಳಲ್ಲಿ ಗಿಡಗಳನ್ನು ಬೆಳೆಸಿ !

ಈ ಲೇಖನದಲ್ಲಿ ನೀಡಲಾದ ಕೃಷಿಯ ಪದ್ಧತಿಯು, ಅತ್ಯಂತ ಸುಲಭ ಮತ್ತು ಬರುವಾಗ ಹೋಗುವಾಗ ಮಾಡಿ ನೋಡುವಂತಹುದಾಗಿದೆ. ದಿನದಲ್ಲಿ ೧೫ ರಿಂದ ೨೦ ನಿಮಿಷಗಳನ್ನು ತೆಗೆದು ಎಲ್ಲರೂ ಅವಶ್ಯವಾಗಿ ಈ ಕೈದೋಟವನ್ನು ಮಾಡಿ ನೋಡಬೇಕು. ಆರಂಭದಲ್ಲಿ ನೈಸರ್ಗಿಕ ಕಸದ ವಿಭಜನೆಯಾಗಿ ಮಣ್ಣು ತಯಾರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ; ಆದರೆ ಒಂದು ಬಾರಿ ಈ ಮಣ್ಣು ತಯಾರಾದರೆ, ನಾವು ಇದರಲ್ಲಿ ನಮಗೆ ಅವಶ್ಯಕವಿರುವ ಸೊಪ್ಪುತರಕಾರಿಗಳನ್ನು ಆಯೋಜನಾಪೂರ್ವಕ ಕೈದೋಟವನ್ನು ಮಾಡಿ ಮನೆಯಲ್ಲಿಯೇ ಸೊಪ್ಪುತರಕಾರಿಗಳನ್ನು ಬೆಳೆಸಿ ತಿನ್ನಬಹುದು.’

– ಓರ್ವ ಕೃಷಿತಜ್ಞರು, ಪುಣೆ (೮.೧೨.೨೦೨೧)

ಸೊಪ್ಪುತರಕಾರಿಗಳನ್ನು ಬೆಳೆಸುವಾಗ ಸಾಧಕಿಯು ಅನುಭವಿಸಿದ ಈಶ್ವರನ ಕೃಪೆ !

ಸೌ ರಾಘವಿ ಕೊನೆಕರ

ನಾವು ಕಳೆದ ಒಂದೂವರೆ ವರ್ಷಗಳಿಂದ ಆಪತ್ಕಾಲಕ್ಕಾಗಿ ಪೂರ್ವತಯಾರಿಯೆಂದು ಮೇಲ್ಛಾವಣಿಯ ಮೇಲೆ ಸೊಪ್ಪುತರಕಾರಿಗಳನ್ನು ಬೆಳೆಸುತ್ತಿದ್ದೇವೆ. ಇದರಲ್ಲಿ ಬಂದ ವಿವಿಧ ಅನುಭವಗಳು ನಿಸರ್ಗದ ಬಗೆಗಿನ ಅನೇಕ ಹೊಸ ವಿಷಯಗಳನ್ನು ಕಲಿಸುವ, ಆನಂದವನ್ನು ನೀಡುವ, ಹಾಗೆಯೇ ನಿಸರ್ಗರೂಪಿ ಭಗವಂತನ ಪ್ರೇಮವನ್ನು ಅನುಭವಿಸಲು ನೀಡುವಂತಹುದ್ದಾಗಿವೆ. 

೧. ಕೆಸುವಿನ ಸೊಪ್ಪಿನ ೪-೫ ಗೆಡ್ಡೆಗಳನ್ನು ನೆಟ್ಟು ಕೃಷಿ ಮಾಡಿದಾಗ ಅನೇಕ ಬಾರಿ ಪಲ್ಯಕ್ಕಾಗಿ ಕೆಸುವಿನ ಎಲೆಗಳು, ಹಾಗೆಯೇ ಅನೇಕ ಗೆಡ್ಡೆಗಳು ಸಿಗುವುದು

ಕೆಸುವಿನ ೪-೫ ಗೆಡ್ಡೆಗಳಿಂದ ಹುಟ್ಟಿದ ಅನೇಕ ಗೆಡ್ಡೆಗಳು

ತನ್ನಷ್ಟಕ್ಕೆ ಮೊಳಕೆಯೊಡೆದ ಅರಿಶಿಣದ ಸಸಿಯಿಂದ ದೊರಕಿದ ಅರಶಿಣದ ಕೋಡುಗಳು

ನಾವು ಮಾರುಕಟ್ಟೆಯಲ್ಲಿ ಸಿಗುವ ಕೆಸುವಿನ ೪-೫ ಗಡ್ಡೆಗಳನ್ನು ಮೇಲ್ಛಾವಣಿಯಲ್ಲಿ ನೆಟ್ಟಿದ್ದೆವು. ಈ ೪ ಕೆಸುವಿನ ಸಸಿಗಳ ಎಲೆಗಳ ತೆಳುವಾದ ಪಲ್ಯವನ್ನು ಈ ವರ್ಷ ಸಂಪೂರ್ಣ ಮಳೆಗಾಲದಲ್ಲಿ ಅನೇಕ ಬಾರಿ ಮಾಡಿದೆವು. ದೊಡ್ಡ ಎಲೆಗಳನ್ನು ತೆಗೆದರೆ, ಇದಕ್ಕೆ ಪುನಃ ಹೊಸ ಎಲೆಗಳು ಬರುತ್ತಿರುತ್ತವೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಿಧಾನವಾಗಿ ಈ ಸಸಿಗಳು ಒಣಗತೊಡಗುತ್ತವೆ ಅಥವಾ ಮಳೆಗಾಲದಲ್ಲಿ ಬರುವಂತೆ ಬಹಳ ಎಲೆಗಳು ಬರುವುದಿಲ್ಲ. ಸಸಿಗಳ ಕೆಳಗೆ ನೆಲದಲ್ಲಿ ಇದರ ಗೆಡ್ಡೆಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ. ಈ ಸಸಿಗಳಿಗೆ ‘ಗೊಬ್ಬರ-ನೀರು’ ಈ ರೀತಿಯ ಯಾವುದೇ ಕಾಳಜಿ ತೆಗೆದುಕೊಳ್ಳಬೇಕಾದ ಆವಶ್ಯಕತೆ ಇರುವುದಿಲ್ಲ. ಸದ್ಯ ನಾವು ಈ ನಾಲ್ಕೂ ಸಸಿಗಳನ್ನು ಕಿತ್ತು ತೆಗೆದು ಅದರ ಗೆಡ್ಡೆಗಳನ್ನು ಬೇರೆ ಮಾಡಿ ತೂಕ ಮಾಡಿ ನೋಡಿದಾಗ ಅದು ೧ ಕಿಲೋ ೩೦೦ ಗ್ರಾಮ್‌ನಷ್ಟಿತ್ತು.

ಈ ಗೆಡ್ಡೆಯು ಅತ್ಯಂತ ಪೌಷ್ಟಿಕ ಮತ್ತು ರುಚಿಕರವಾಗಿರುತ್ತದೆ. ಎಲೆಗಳಂತೆ ಗೆಡ್ಡೆಗಳೂ ಸ್ವಲ್ಪ ತುರಿಕೆ ತರಿಸುವುದರಿಂದ ಬೇಯಿಸುವಾಗ ಅದರಲ್ಲಿ ಹುಣಸೆಹಣ್ಣಿನ ರಸವನ್ನು ಹಾಕುತ್ತಾರೆ. ಗೆಡ್ಡೆಯನ್ನು ಬೇಯಿಸಿ ಸಹ ತಿನ್ನಬಹುದು, ಹಾಗೆಯೇ ಬಟಾಟೆ ಪಲ್ಯದಂತಹ ಪಲ್ಯ ಮತ್ತು ಬಜ್ಜಿಯೂ (ಗೆಡ್ಡೆಯನ್ನು ಬೇಯಿಸಿ, ಅದಕ್ಕೆ ಕತ್ತರಿಸಿದ ಹಸಿ ಈರುಳ್ಳಿ ಮತ್ತು ಮೊಸರು ಹಾಕಿ ಮಾಡುವ ಪದಾರ್ಥ) ಚೆನ್ನಾಗಿ ಆಗುತ್ತದೆ. ಮಳೆಗಾಲವು ಆರಂಭವಾಗುವ ಮೊದಲು ಸಾಮಾನ್ಯವಾಗಿ ಮೇ ತಿಂಗಳಲ್ಲಿ ಇವುಗಳನ್ನು ಬೆಳೆಸಬಹುದು.

೨. ಮಣ್ಣಿನ ಗುಡ್ಡೆಯಲ್ಲಿ ತಪ್ಪಿ ಉಳಿದ ಅರಿಶಿಣದ ಒಂದು ಕೊಂಡಿನಿಂದ ಅರ್ಧ ಕಿಲೋ ಹಸಿ ಅರಿಶಿಣದ ಕೊಂಬು ದೊರಕುವುದು

ಮೇಲ್ಛಾವಣಿಯಲ್ಲಿ ಒಂದು ಮೂಲೆಯಲ್ಲಿ ಹೆಚ್ಚುವರಿ ಮಣ್ಣಿನ ಗುಡ್ಡೆ ಇತ್ತು. ಅದರಲ್ಲಿ ತಪ್ಪಿ ಒಂದು ಅರಶಿಣದ ಗೆಡ್ಡೆ ಉಳಿದಿರಬೇಕು. ಮಳೆಗಾಲವು ಆರಂಭವಾದಾಗ ಅದರಿಂದ ಅರಿಶಿಣದ ಒಂದು ಸಸಿ ತಾನಾಗಿಯೇ ಹುಟ್ಟಿಕೊಂಡಿತು. ನವೆಂಬರ್ ತಿಂಗಳ ವರೆಗೆ ಮಳೆಗಾಲದ ನೀರಿನಿಂದಾಗಿ ಅದು ದೊಡ್ಡದಾಗುತ್ತಾ ಹೋಯಿತು. ನಾವು ಅದರ ಯಾವುದೇ ಕಾಳಜಿ ತೆಗೆದುಕೊಳ್ಳಲಿಲ್ಲ. ಈಗ ಆ ಸಸಿಯನ್ನು ಕಿತ್ತು ತೆಗೆದಾಗ ಕೆಳಗೆ ಸಿಕ್ಕ ಅರಿಶಿಣದ ಗೆಡ್ಡೆಯ ತೂಕವು ಅರ್ಧ ಕಿಲೋದಷ್ಟಿತ್ತು.

– ಸೌ. ರಾಘವಿ ಮಯೂರೇಶ ಕೊನೆಕರ, ಢವಳಿ, ಫೋಂಡಾ, ಗೋವಾ. (೭.೧೨.೨೦೨೧)

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

ಕೈದೋಟಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಲೇಖನಗಳನ್ನು ಕಳುಹಿಸಿ !

‘ಗಿಡಗಳನ್ನು ಬೆಳೆಸುವುದು (ಕೃಷಿ ಮಾಡುವುದು) ಇದು ಒಂದು ಪ್ರಾಯೋಗಿಕ ವಿಷಯವಾಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಅನುಭವಗಳಿಗೂ ಬಹಳ ಮಹತ್ವವಿರುತ್ತದೆ. ಯಾವ ಸಾಧಕರು ಇಲ್ಲಿಯವರೆಗೆ ಕೃಷಿಯನ್ನು ಮಾಡಿಲ್ಲವೋ, ಅವರು ಕೃಷಿಯನ್ನು ಮಾಡುವಾಗ ತಮಗೆ ಬಂದ ಅನುಭವ, ಆದ ತಪ್ಪುಗಳು, ಆ ತಪ್ಪುಗಳಿಂದ ಕಲಿಯಲು ಸಿಕ್ಕಿದ ಅಂಶಗಳು, ಕೃಷಿಗೆ ಸಂಬಂಧಿಸಿದಂತೆ ಮಾಡಿದ ವೈಶಿಷ್ಟ್ಯಪೂರ್ಣ ಪ್ರಯೋಗ ಇವುಗಳ ಬಗೆಗಿನ ಬರವಣಿಗೆಯನ್ನು ತಮ್ಮ ಛಾಯಾಚಿತ್ರದೊಂದಿಗೆ ಕಳುಹಿಸಬೇಕು. ಈ ಬರವಣಿಗೆಯನ್ನು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಇತರರಿಗೂ ಕಲಿಯಲು ಸಿಗುತ್ತದೆ.

ಬರವಣಿಗೆಯನ್ನು ಕಳುಹಿಸಲು

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಛಿ/o `ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಗಣಕೀಯ ವಿಳಾಸ : [email protected]

ಸನಾತನದ ಜಾಲತಾಣದಲ್ಲಿ ಓದಿರಿ : ‘ಮನೆಯಲ್ಲಿಯೇ ನೈಸರ್ಗಿಕ ಪದ್ಧತಿಯಿಂದ ಕೃಷಿಯನ್ನು ಹೇಗೆ ಮಾಡಬೇಕು’, ಈ ಬಗೆಗಿನ ಸವಿಸ್ತಾರ ಮಾಹಿತಿ

www.sanatan.org/mr/a/82985.html (ಈ ಕೊಂಡಿಯಲ್ಲಿ  ನೇರವಾಗಿ ಹೋಗಲು ಪಕ್ಕದ ‘QR ಕೊಡ್’ಅನ್ನು’ಸ್ಕ್ಯಾನ್’ ಮಾಡಿರಿ !)

ಟಿಪ್ಪಣಿ – ‘QR ಕೋಡ್’ ಎಂದರೆ ‘Quick Response ಕೋಡ್’. ‘ಸ್ಮಾರ್ಟ್ ಫೋನ್’ನಲ್ಲಿನ ‘QR ಕೋಡ್ ಸ್ಕ್ಯಾನರ್’ ಈ ತಂತ್ರಾಶವನ್ನು (ಆ್ಯಪ್) ಆರಂಭಿಸಿ ‘QR ಕೊಡ್’ದ ಮೇಲೆ ‘ಸ್ಮಾರ್ಟ್ ಫೋನ್‌’ನ ಛಾಯಾಚಿತ್ರಕವನ್ನು (ಕ್ಯಾಮೆರಾವನ್ನು) ಹಿಡಿಯಬೇಕು, ಅಂದರೆ ‘ಕೋಡ್’ ‘ಸ್ಕ್ಯಾನ್’ ಆಗುತ್ತದೆಮತ್ತು ‘ಸ್ಮಾರ್ಟ್ ಫೋನ್’ನಲ್ಲಿನ ಜಾಲತಾಣದ ಕೊಂಡಿಯು ತಾನಾಗಿಯೇ ತೆರೆಯುತ್ತದೆ. ಅದರ ಬೆರಳಚ್ಚು ಮಾಡಬೇಕಾಗುವುದಿಲ್ಲ.