ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಆವಶ್ಯಕವಿರುವ ಘಟಕಗಳು

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ – ಮಾಲಿಕೆ ೪

೧. ತರಕಾರಿಗಳನ್ನು ಬೆಳೆಸಲು ಆವಶ್ಯಕ ಘಟಕಗಳು

‘ವನಸ್ಪತಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಗೆ ‘ದ್ಯುತಿಸಂಶ್ಲೇಷಣೆ (ಫೋಟೋ ಸಿಂಥೆಸಿಸ್)’ ಎಂದು ಹೇಳುತ್ತಾರೆ. ಈ ಪ್ರಕ್ರಿಯೆಗಾಗಿ ಗಾಳಿ (ಕಾರ್ಬನ್ ಡೈಆಕ್ಸೈಡ್), ನೀರು ಮತ್ತು ಸೂರ್ಯಪ್ರಕಾಶ ಇವು ಆವಶ್ಯಕವಾಗಿರುತ್ತವೆ. ಈ ೩ ಘಟಕಗಳನ್ನು ಹೊರತುಪಡಿಸಿ ಬೇಕಾಗುವ ಘಟಕಗಳನ್ನು ಗಿಡಗಳು ಮಣ್ಣಿನಿಂದ ಹೀರಿಕೊಳ್ಳುತ್ತವೆ. ಆದುದರಿಂದ ಗಿಡಗಳಿಗೆ ಗೊಬ್ಬರವನ್ನು ಹಾಕಬೇಕಾಗುತ್ತದೆ. ಪ್ರಾಣಿಗಳಿಗೆ ವಿವಿಧ ಕೀಟಗಳು ತೊಂದರೆ ಕೊಡುತ್ತವೆ ಅಥವಾ ಕಚ್ಚುತ್ತವೆ, ಅದೇ ರೀತಿ ವನಸ್ಪತಿಗಳಿಗೂ ಕೀಟಗಳಿಂದ ತೊಂದರೆಯಾಗುತ್ತದೆ. ಈ ಹಾನಿಕರ ಕೀಟಗಳಿಂದ ಗಿಡಗಳ ರಕ್ಷಣೆಯಾಗಬೇಕೆಂದು ಗಿಡಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ. ಪ್ರಾಣಿಗಳಿಗೆ ಯಾವ ರೀತಿ ಜೀವಾಣು (Bacteria), ವಿಷಾಣು (Virus) ಮತ್ತು ಬುರುಸು (Fungus) ಗಳಿಂದಾಗಿ ರೋಗವಾಗುತ್ತದೋ, ಅದೇ ರೀತಿ ವನಸ್ಪತಿಗಳಿಗೂ ರೋಗವಾಗುತ್ತದೆ. ಇದನ್ನು ತಡೆಗಟ್ಟಲು ಜೀವಾಣುನಾಶಕ, ವಿಷಾಣುನಾಶಕ ಹಾಗೆಯೇ ಬುರುಸುನಾಶಕಗಳನ್ನು ಬಳಸಬೇಕಾಗುತ್ತದೆ. ಸ್ವಲ್ಪದರಲ್ಲಿ ತರಕಾರಿಗಳನ್ನು ಬೆಳೆಸಲು ಗಾಳಿ ಮತ್ತು ಸೂರ್ಯಪ್ರಕಾಶ ಇವು ನಿಸರ್ಗದಿಂದ ಲಭ್ಯವಾಗುತ್ತವೆ ಮತ್ತು ಮಣ್ಣು, ಗೊಬ್ಬರ, ಕೀಟನಾಶಕಗಳು, ಬುರುಸುನಾಶಕಗಳು ಇತ್ಯಾದಿಗಳ ವ್ಯವಸ್ಥೆಯನ್ನು ನಾವು ಮಾಡಬೇಕಾಗುತ್ತದೆ. ‘ಸುಭಾಷ ಪಾಳೆಕರ ನೈಸರ್ಗಿಕ ಬೇಸಾಯ’ ಈ ಪದ್ಧತಿಯಲ್ಲಿ ಬಳಸಲಾಗುವ ಜೀವಾಮೃತ ಮತ್ತು ಬೀಜಾಮೃತ ಪದಾರ್ಥಗಳು ಪೂರ್ಣ ನೈಸರ್ಗಿಕ ಮತ್ತು ದುಷ್ಪರಿಣಾಮರಹಿತವಾಗಿದ್ದು ಇವು ಗೊಬ್ಬರ ಮತ್ತು ಬುರುಸುನಾಶಕಗಳಾಗಿ ಕೆಲಸ ಮಾಡುತ್ತವೆ. ಈ ಪದ್ಧತಿಯಲ್ಲಿ ತಯಾರಿಸಲಾಗುವ ‘ನೀಮಾಸ್ತ್ರ’, ‘ದಶಪರ್ಣೀ ಅರ್ಕ’ ಇವುಗಳಂತಹ ಪದಾರ್ಥಗಳು ಕೀಟನಾಶಕಗಳೆಂದು ಕೆಲಸ ಮಾಡುತ್ತವೆ.

೨. ಕೃಷಿಗಾಗಿ ಖರೀದಿಸಿದ ವಸ್ತುಗಳಿಗಿಂತ ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ !

೨ ಅ. ಕುಂಡಗಳ ಖರೀದಿಗೆ ಪರ್ಯಾಯಗಳು : ಕುಂಡಗಳ ಬದಲು ನಿರುಪಯುಕ್ತ ಪ್ಲಾಸ್ಟಿಕಿನ ಡಬ್ಬಿಗಳು, ಬಾಟಲಿಗಳು, ಚೀಲಗಳು, ಹಾಗೆಯೇ ಚಪ್ಪಟೆ ಪಾತ್ರೆಗಳನ್ನು ಬಳಸಬಹುದು. ಅವುಗಳ ಆಕಾರವು ಕನಿಷ್ಠ ೨ ರಿಂದ ೪ ಇಂಚಿನಷ್ಟು ಮಣ್ಣು ಅಥವಾ ಗಿಡಗಳ ಒಣಗಿದ ಎಲೆಗಳು, ಕಡ್ಡಿಗಳ ಪದರು ಹರಡುವಷ್ಟಿರಬೇಕು. ಹೆಚ್ಚುವರಿ ನೀರು ಹರಿದು ಹೋಗಲು ಅವುಗಳ ತಳಕ್ಕೆ ೨ ರಿಂದ ೪ ಛಿದ್ರಗಳನ್ನು ಮಾಡಬೇಕು. ಇವುಗಳಲ್ಲಿ ಲಭ್ಯವಿರುವ ಮಣ್ಣು, ಒಣಗಿದ ಎಲೆಗಳು ಅಥವಾ ‘ಕಂಪೋಸ್ಟ್ (ಕಸದಿಂದ ತಯಾರಿಸಿದ ಗೊಬ್ಬರ)’ವನ್ನು ತುಂಬಿ ಅದರ ಮೇಲೆ ನೀರು, ಜೀವಾಮೃತ ಅಥವಾ ಮುಸುರೆ ನೀರನ್ನು ಸಿಂಪಡಿಸಿ ಮಣ್ಣನ್ನು ಒದ್ದೆ ಮಾಡಬೇಕು.

೨ ಆ. ಬೀಜಗಳ ಖರೀದಿಗೆ ಪರ್ಯಾಯ : ಕೆಲವು ಸೊಪ್ಪುತರಕಾರಿಗಳ ಬೀಜಗಳು ಮನೆಯಲ್ಲಿಯೇ ಲಭ್ಯವಿರುತ್ತವೆ, ಉದಾ. ಧನಿಯಾ(ಕೊತ್ತಂಬರಿ ಬೀಜ), ಮೆಂತ್ಯೆ ಕಾಳು, ಹರಿವೆಸೊಪ್ಪು, ಸಾಸಿವೆ (ಸಾಸಿವೆ ಎಲೆಗಳಿಂದ ಪಲ್ಯವನ್ನು ಮಾಡಬಹುದು. ಇದಕ್ಕೆ ಹಿಂದಿಯಲ್ಲಿ ‘ಸರಸೊ ಕಾ ಸಾಗ’ ಎಂದು ಹೇಳುತ್ತಾರೆ.) ಇದನ್ನು ಹೊರತು ಪಡಿಸಿ ಚಿಕ್ಕ ನೀರುಳ್ಳಿಗಳು ಅಥವಾ ಬೆಳ್ಳುಳ್ಳಿಗಳ ಪಕಳೆಗಳನ್ನೂ ಮಣ್ಣಿನಲ್ಲಿ ಹೂತರೆ ಅವುಗಳಿಂದ ಸಸಿಗಳು ತಯಾರಾಗುತ್ತವೆ. ಒಣಗಿದ ಮೆಣಸಿನಕಾಯಿಗಳ ಬೀಜಗಳು, ಟೊಮೆಟೊ ಬೀಜಗಳು, ಚವಳಿ, ಪುದೀನಾದ ಕಾಂಡಸಹಿತ ಬೇರು ಇವುಗಳಿಂದಲೂ ಕೃಷಿಯನ್ನು ಮಾಡಬಹುದು.

ಈ ಬೀಜಗಳನ್ನು ಕುಂಡಗಳಲ್ಲಿ ಅಥವಾ ಪಾತಿಗಳಲ್ಲಿ ಆಳಕ್ಕೆ ಬಿತ್ತದೇ ಬೀಜಗಳ ದಪ್ಪಳತೆಯಷ್ಟು ಆಳವಾಗಿ ಬಿತ್ತಬೇಕು. ಈ ಎಲ್ಲ ತರಕಾರಿಗಳು ೪ ರಿಂದ ೮ ದಿನಗಳ ನಂತರ ಅಂಕುರಿಸುತ್ತವೆ.

೩. ಸಸ್ಯಗಳಿಗೆ ಆವಶ್ಯಕವಿರುವಷ್ಟು ಬಿಸಿಲು ಮತ್ತು ನೀರು ಸಿಗಬೇಕು !

ನಾವು ಬೆಳೆಸುವ ಗಿಡಗಳ ಮೇಲೆ, ಕನಿಷ್ಠ ೨ ರಿಂದ ೪ ಗಂಟೆ ಬೆಳಗಿನ ಬಿಸಿಲು ಬೀಳುವಂತೆ ನೋಡಬೇಕು. ಗಿಡಗಳ ನಿಯಮಿತವಾಗಿ ನಿರೀಕ್ಷಣೆ ಮಾಡಬೇಕು. ಮಣ್ಣು ಒಣಗಿದ್ದರೆ ಕೈಗಳಿಂದ ನಿಧಾನವಾಗಿ ನೀರನ್ನು ಸಿಂಪಡಿಸಬೇಕು. ನೀರು ಸಿಂಪಡಿಸುವಾಗ ಅಂಕುರಿಸಲು ಹಾಕಿದ ಬೀಜಗಳು ಹೊರಗೆ ಬರದಂತೆ ಕಾಳಜಿ ವಹಿಸಬೇಕು. ಆರಂಭದಲ್ಲಿ ಸಸಿಗಳು ನಾಜೂಕಾಗಿರುವಾಗ ನೀರಿನ ಒಂದು ದೊಡ್ಡ ಹನಿಯಿಂದಲೂ ಅವುಗಳು ನಶಿಸಬಹುದು. ಅದಕ್ಕಾಗಿ ಪ್ಲಾಸ್ಟಿಕಿನ ಬಾಟಲಿಯ ಮುಚ್ಚಳಕ್ಕೆ ಚಿಕ್ಕ ತೂತು ಮಾಡಿ ಅಭಿಷೇಕದ ಧಾರೆಯಂತೆ ನಿಧಾನವಾಗಿ ನೀರನ್ನು ಹಾಕಬೇಕು. ಅತಿಯಾಗಿ ನೀರು ಹಾಕಿದರೆ ಬುರುಸುಜನ್ಯ ರೋಗಗಳು ಹೆಚ್ಚಾಗಬಹುದು. ಹಾಗಾಗಿ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಹಾಕಬೇಕು.’

– ಓರ್ವ ಕೃಷಿತಜ್ಞರು, ಪುಣೆ (೨.೧೨.೨೦೨೧)

ತರಕಾರಿಗಳನ್ನು ಬೆಳೆಸುವುದರ ವೇಳಾಪಟ್ಟಿ

ಸನಾತನದ ಜಾಲತಾಣದಲ್ಲಿ ಓದಿರಿ : ‘ಮನೆಯಲ್ಲಿಯೇ ನೈಸರ್ಗಿಕ ಪದ್ಧತಿಯಿಂದ ಕೃಷಿಯನ್ನು ಹೇಗೆ ಮಾಡಬೇಕು’, ಈ ಬಗೆಗಿನ ಸವಿಸ್ತಾರ ಮಾಹಿತಿ

www.sanatan.org/mr/a/82985.html (ಈ ಕೊಂಡಿಯಲ್ಲಿ  ನೇರವಾಗಿ ಹೋಗಲು ಪಕ್ಕದ ‘QR‘ ಕೊಡನ್ನು‘ಸ್ಕ್ಯಾನ್’ ಮಾಡಿರಿ !)

ಟಿಪ್ಪಣಿ -‘QR’ ಕೋಡ್ ಎಂದರೆ ‘Quick Response’ ಕೋಡ್. ‘ಸ್ಮಾರ್ಟ್ ಫೋನ್’ನಲ್ಲಿ ‘QR’ ಕೋಡ್ ಸ್ಕ್ಯಾನ್‌ರ್ ಈ ತಂತ್ರಾಶವನ್ನು (ಆಪ್) ಆರಂಭಿಸಿ ‘QR‘ ಕೊಡ್ ಮೇಲೆ ‘ಸ್ಮಾರ್ಟ್ ಫೋನ್‌’ನ ಛಾಯಾಚಿತ್ರಕವನ್ನು (ಕ್ಯಾಮೆರಾವನ್ನು) ಹಿಡಿಯಬೇಕು, ಅಂದರೆ ‘ಕೋಡ್ ಸ್ಕ್ಯಾನ್’ ಆಗುತ್ತದೆ ಮತ್ತು ‘ಸ್ಮಾರ್ಟ್ ಫೋನ್’ನಲ್ಲಿ ಜಾಲತಾಣದ ಕೊಂಡಿಯು ತಾನಾಗಿಯೇ ತೆರೆಯುತ್ತದೆ. ಅದರ ಬೆರಳಚ್ಚು ಮಾಡಬೇಕಾಗುವುದಿಲ್ಲ.

ಸಾಧಕರಿಗೆ ಸೂಚನೆ

ವೈದ್ಯ ಮೇಘರಾಜ ಪರಾಡಕರ್

ಸನಾತನದ ಜಾಲತಾಣದಲ್ಲಿನ ಕೃಷಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿಲ್ಲದಿದ್ದರೆ ಅವುಗಳನ್ನು ಆದಷ್ಟು ಬೇಗನೆ ನೋಡಿ ಕೃಷಿಯನ್ನು ಆರಂಭಿಸಿ !

‘ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧ ರಿಂದ) ಸನಾತನವು ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನವನ್ನು ಹಮ್ಮಿಕೊಂಡಿದೆ. ಆಪತ್ಕಾಲದ ಪೂರ್ವಸಿದ್ಧತೆಯೆಂದು ಪ್ರತಿಯೊಬ್ಬ ಸಾಧಕರ ಮನೆಯಲ್ಲಿ ಸ್ವಲ್ಪವಾದರೂ ತರಕಾರಿ, ಹಣ್ಣಿನ ಗಿಡಗಳು ಮತ್ತು ಔಷಧಿ ವನಸ್ಪತಿಗಳನ್ನು ಬೆಳೆಸಬೇಕು, ಎಂಬುದು ಈ ಅಭಿಯಾನದ ಉದ್ದೇಶವಾಗಿದೆ. ಅತ್ಯಂತ ಸುಲಭ ಮತ್ತು ನೈಸರ್ಗಿಕ ಪದ್ಧತಿಯಿಂದ ಮಾರುಕಟ್ಟೆಯಿಂದ ಏನನ್ನೂ ಖರೀದಿಸದೇ ಮನೆಯಲ್ಲಿಯೇ ಗಿಡಗಳನ್ನು ಹೇಗೆ ಬೆಳೆಸಬೇಕು, ಎಂಬ ಸವಿಸ್ತಾರ ಮಾರ್ಗದರ್ಶನ ಮಾಡುವ ವಿಡಿಯೋಗಳನ್ನು ಸನಾತನದ ಜಾಲತಾಣದಲ್ಲಿ (ಪುಟ ೯ ರಲ್ಲಿ ನೀಡಿದ ಕೊಂಡಿಯಲ್ಲಿ) ನೀಡಲಾಗಿದೆ. ಸಾಧಕರು ಈ ವಿಡಿಯೋಗಳನ್ನು ನೋಡಿರದಿದ್ದರೆ ಆದಷ್ಟು ಬೇಗನೆ ನೋಡಬೇಕು ಮತ್ತು ವಿಷಯ ತಿಳಿದು ಕೃಷಿಯನ್ನು ಆರಂಭಿಸಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧೧.೨೦೨೧)