ಶಿಕ್ಷಣಪದ್ಧತಿ ಹೇಗಿರಬೇಕು, ಎಂಬುದನ್ನು ಬುದ್ಧಿ ನಿಶ್ಚಯಿಸಬಹುದೇ ? 

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು `ಐಐಟಿ, ಮುಂಬಯಿ’ಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‍ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕ ರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/ ೧೧ ನೇ ಸಂಚಿಕೆಯಲ್ಲಿ ‘ಮಾನವೀ ಬುದ್ಧಿ ಮತ್ತು ಪಾರಮಾರ್ಥಿಕ ಸತ್ಯ !’ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.

(ಭಾಗ ೧೩)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada//54188.html

೪೯. ಶಿಕ್ಷಣವ್ಯವಸ್ಥೆ ಹೇಗಿರಬೇಕು ಮತ್ತು ಆ ವಿಷಯದ ನಿರ್ಣಯ !

‘ಶಿಕ್ಷಣವ್ಯವಸ್ಥೆ ಹೇಗಿರಬೇಕು ? ಇದರ ಅರ್ಥ ಮುಂದಿನಂತಿದೆ – ಶಿಕ್ಷಣದ ಉದ್ದೇಶವನ್ನು ನಿಗದಿಪಡಿಸುವುದು, ಕಲಿಯುವುದು ಮತ್ತು ಕಲಿಸುವುದು ಮತ್ತು ಇವುಗಳಿಗೆ ಸಂಬಂಧಿಸಿದ ನಿಯಮಗಳು, ಹಾಗೆಯೇ ಗುರು ಮತ್ತು ಶಿಷ್ಯರ ಯೋಗ್ಯತೆ ಮತ್ತು ಅವರ ನಡುವಿನ ಸಂಬಂಧ ಹೇಗಿರಬೇಕು ? ಎಂಬುದನ್ನು ನಿಗದಿಪಡಿಸುವುದು, ಅದೇ ರೀತಿ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯ (ಪಠ್ಯಕ್ರಮ)ವನ್ನು ನಿರ್ಧರಿಸುವುದು ಇತ್ಯಾದಿ ! ಶಿಕ್ಷಣಕ್ಕೆ ಸಂಬಂಧಿಸಿದ ಇಂತಹ ಈ ಪ್ರಕ್ರಿಯೆಯ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವೊಮ್ಮೆ ಚರ್ಚೆಗಳು, ತರ್ಕ-ವಿತರ್ಕಗಳು ಮತ್ತು ವಾದ-ವಿವಾದಗಳಾಗುತ್ತವೆ; ಆದರೆ ಯೋಗ್ಯ ನಿರ್ಣಯದವರೆಗೆ ತಲುಪುವುದು ಅವರಿಗೆ ಅನೇಕ ಬಾರಿ ಕಠಿಣವಾಗುತ್ತದೆ. ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತದೆ. ಯಾವುದಾದರೊಂದು ನಿರ್ಣಯವನ್ನು ತೆಗೆದುಕೊಳ್ಳಬೇಕಾದಂತಹ ಪರಿಸ್ಥಿತಿಯು ಉದ್ಭವಿಸಿದಾಗ ಆಗ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ.

೫೦. ಮನಸ್ಸಿನ ಅನುಕೂಲತೆ ಮತ್ತು ವಾದವಿವಾದ !

ಸದ್ಯ ಬಹಳಷ್ಟು ಜನರಲ್ಲಿ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವ ಪ್ರಮಾಣ ಹೆಚ್ಚಾಗಿದೆ. ಅಂತರ್ಮನಸ್ಸು ಮನುಷ್ಯನಿಗೆ, ‘ನಿನ್ನ ವಿಚಾರ ಯೋಗ್ಯವಾಗಿದೆ’, ಎಂದು ಹೇಳುತ್ತದೆ. ಮನುಷ್ಯನು ತನ್ನ ವಾಸನೆಗಳಿಗೆ ಸಂಬಂಧಿಸಿದ ವಿಷಯಗಳಿಗನುಸಾರ (ರೂಪ, ರಸ, ಗಂಧ, ಶ್ರವಣ, ಸ್ಪರ್ಶ) ಮತ್ತು ಜ್ಞಾನಕ್ಕನುಸಾರ ಮನಸ್ಸಿಗೆ ಅನುಕೂಲವಾದ ಭೋಗವನ್ನು ಪಡೆಯಲು ಇಚ್ಛಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ನಿರ್ಣಯ ಅಥವಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ವಾದವಿವಾದಗಳಾಗುತ್ತಿದ್ದರೆ, ಇದರಲ್ಲಿ ಆಶ್ಚರ್ಯ ಪಡುವಂತಹದ್ದೇನೂ ಇಲ್ಲ.

೫೧. ಆಧುನಿಕ ಶಿಕ್ಷಣ ಮತ್ತು ಬುದ್ಧಿಯ ಕ್ಷಮತೆ

ಈಗಂತೂ ವಿಜ್ಞಾನದಲ್ಲಿ ತುಂಬಾ ಆಶ್ಚರ್ಯಜನಕ ಪ್ರಗತಿಯಾಗಿದೆ ! ಅನೇಕ ವೈಜ್ಞಾನಿಕ ಸಿದ್ದಾಂತಗಳನ್ನು ಶೋಧಿಸಲಾಗಿದೆ, ಹಾಗೆಯೇ ಹೊಸ ಹೊಸ ಅನುಕೂಲಕರ ಉಪಕರಣಗಳ ನಿರ್ಮಿತಿಯಾಗುತ್ತಿದೆ. ಸಾಮಾನ್ಯ ಸಮಾಜ ಮತ್ತು ಆಧುನಿಕ ವಿಜ್ಞಾನಿಗಳು ಇದಕ್ಕೆಲ್ಲ ಮನುಷ್ಯನ ಬುದ್ಧಿಯ ನೈಪುಣ್ಯ ಮತ್ತು ಕೌಶಲ್ಯ ಎಂದು ತಿಳಿಯುತ್ತಾರೆ. ಒಂದು ವೇಳೆ ಬುದ್ಧಿಯು ಎಲ್ಲ ವ್ಯಾವಹಾರಿಕ ಕಾರ್ಯಗಳನ್ನು ಮಾಡುತ್ತಿದೆ ಎಂದಾದರೆ, ಶಿಕ್ಷಣಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಸಹ ಅದು ಖಂಡಿತವಾಗಿಯೂ ತೆಗೆದುಕೊಳ್ಳಬಹುದು ಎಂಬಂತಹ  ದೃಢ ನಿಷ್ಠೆಯು ಈಗ ಆಧುನಿಕ ಜನರಲ್ಲಿ ನಿರ್ಮಾಣವಾಗಿದೆ. ಬುದ್ಧಿಯು ನಿಶ್ಚಿತವಾಗಿಯೂ ಈ ಕಾರ್ಯಕ್ಕಾಗಿ ಸಕ್ಷಮವಾಗಿದೆ, ಎಂದು ಅವರಿಗೆ ಅನಿಸುತ್ತದೆ.

೫೨. ಮನುಷ್ಯನು ಸೃಷ್ಟಿಯ ಮಹತ್ವ, ಹಾಗೆಯೇ ಸೃಷ್ಟಿ ಮತ್ತು ಮನುಷ್ಯರ ಪರಸ್ಪರರ ಕಾರ್ಯದಲ್ಲಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು !

ಮೇಲಿನ ಸ್ತರದಿಂದ ನೋಡಿದಾಗ ಈ ವಿಚಾರ ಯೋಗ್ಯವೆನಿಸುತ್ತದೆ; ಆದುದರಿಂದ ಆಧುನಿಕ ಮನುಷ್ಯನಿಗೆ ಈ ಲೇಖನದ ಶೀರ್ಷಿಕೆಯು ವಿಚಿತ್ರವೆನಿಸಬಹುದು. ಶೀರ್ಷಿಕೆಯಲ್ಲಿ ಕೇಳಲಾದ ಪ್ರಶ್ನೆಯು ಅನುಚಿತವೆನಿಸಬಹುದು. ಪ್ರಶ್ನೆ ಅನುಚಿತವೆನಿಸುವುದು ಮನುಷ್ಯನ ಅಜ್ಞಾನ, ಅವಿವೇಕ ಮತ್ತು ಭೋಗವಾದಿ ಸಂಸ್ಕೃತಿಯ ಪ್ರಭಾವದ ಮೇಲೆ ಅವಲಂಬಿಸಿರುತ್ತದೆ. ಮನುಷ್ಯನು ಸೃಷ್ಟಿಯ ಮಹತ್ವ, ಹಾಗೆಯೇ ಸೃಷ್ಟಿ ಮತ್ತು ಮನುಷ್ಯನ ಪರಸ್ಪರ ಕಾರ್ಯದಲ್ಲಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಮನುಷ್ಯನ ವ್ಯಾವಹಾರಿಕ ಬುದ್ಧಿಯು ನಿಶ್ಚಯಾತ್ಮಕವಲ್ಲ ಎಂದಾದರೆ ಇನ್ನು ಬೇರೆ, ಯಾವ ಬುದ್ಧಿಯು ನಿಶ್ಚಯಾತ್ಮಕ ನಿರ್ಣಯವನ್ನು ನೀಡಲು ಸಕ್ಷಮವಿದೆ ?

೫೨ ಅ. ಸೃಷ್ಟಿ ಮತ್ತು ಅದಕ್ಕೆ ನಮಸ್ಕಾರ ಮಾಡುವುದರ ಮಹತ್ವ : ಆಧುನಿಕ ವೈಜ್ಞಾನಿಕ ಉಪಕರಣಗಳು ಸೃಷ್ಟಿಯು ನೀಡಿದ ಪದಾರ್ಥಗಳು ಅಥವಾ ಅವುಗಳ ಮಿಶ್ರಣದಿಂದಲೇ ತಯಾರಾಗಿವೆ. ಆ ಪದಾರ್ಥಗಳು ಅಥವಾ ಅವುಗಳ ಮಿಶ್ರಣದ ಗುಣಗಳನ್ನೂ ಸೃಷ್ಟಿಯೇ ನೀಡಿದೆ. ಅವು ಮನುಷ್ಯನ ಬುದ್ಧಿಯಿಂದ ನಿರ್ಮಾಣವಾಗಿಲ್ಲ. ಮನುಷ್ಯನ ಬುದ್ಧಿಯು ಕೇವಲ ಆ ಗುಣಗಳ ಉಪಯೋಗಿಸುವ ಬಗ್ಗೆ ಸಂಶೋಧನೆಯನ್ನು ಮಾಡಿದೆ. ಇದರಿಂದ ವಿಭಿನ್ನ ವೈಜ್ಞಾನಿಕ ಸಿದ್ಧಾಂತ ಮತ್ತು ಉಪಕರಣಗಳ ನಿರ್ಮಿತಿಯಾಗಿದೆ. ಯಾವ ಮಾನವ ಬುದ್ಧಿಯು ವಿಜ್ಞಾನದ ಆಶ್ಚರ್ಯಜನಕ ಪ್ರಸಾರವನ್ನು ಮಾಡಿದೆಯೋ, ಆ ಬುದ್ಧಿಯನ್ನು ಸಹ ಸೃಷ್ಟಿಯೇ ನೀಡಿದೆ, ಬುದ್ಧಿಯನ್ನು ಮನುಷ್ಯನು ನಿರ್ಮಾಣ ಮಾಡಿಲ್ಲ. ಆದುದರಿಂದ ಮೊದಲು ನಾವು ಆ ಸೃಷ್ಟಿಗೆ ನಮಸ್ಕಾರ ಮಾಡಬೇಕು. ನಮ್ಮ ಅಹಂಕಾರಕ್ಕಲ್ಲ.

(ಮುಂದುವರಿಯುವುದು : ಮುಂದಿನ ಸಂಚಿಕೆಯಲ್ಲಿ)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು (ಆಧಾರ : `ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)