ಧೂರ್ತ ತಾಲಿಬಾನ್ !

ವಿದೇಶಾಂಗ ಮಂತ್ರಿ ಎಸ್. ಜಯಶಂಕರ ಇವರು ತಾಲಿಬಾನಿನ ಸಮಸ್ಯೆ ವಿಷಯದಲ್ಲಿ ಆಗಸ್ಟ್ ೨೬ ರಂದು ಎರಡನೇ ಬಾರಿ ಸರ್ವಪಕ್ಷಗಳ ಸಭೆಯನ್ನು ಕರೆದರು ಹಾಗೂ ತಾಲಿಬಾನನ ಸಂದರ್ಭದಲ್ಲಿ ಭಾರತದ ‘ಕಾದು ನೋಡುವ ನಿಲುವನ್ನು ಪುನರುಚ್ಚರಿಸಿದರು. ವಿಪಕ್ಷಗಳೂ ಅದಕ್ಕೆ ಬೆಂಬಲ ನೀಡಿವೆ. ‘ನಿಜ ಹೇಳಬೇಕೆಂದರೆ ಭಾರತವು ಈ ಪ್ರಕರಣದಲ್ಲಿ ಆಕ್ರಮಕ ಹಾಗೂ ಬಲಿಷ್ಠ ನಿಲುವು ತಾಳುವುದು ಅಪೇಕ್ಷಿತವಾಗಿದೆ, ಎಂದು ಇಲ್ಲಿನ ದೇಶಪ್ರೇಮಿಗಳಿಗೆ ಅನಿಸುತ್ತದೆ ಹಾಗೂ ಅದು ತಪ್ಪಲ್ಲ; ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳನ್ನು ನಿಭಾಯಿಸುವಾಗ ಹಲವಾರು ಆಯಾಮಗಳಿಂದ ವಿಚಾರ ಮಾಡಿ ಅತ್ಯಂತ ಎಚ್ಚರದಿಂದ ನಿರ್ವಹಿಸಬೇಕಾಗುತ್ತದೆ. ಅಫ್ಘಾನ ಸಮಸ್ಯೆಯಲ್ಲಿ ಭಾರತವು ಇತರ ದೇಶಗಳ ಸಂಪರ್ಕದಲ್ಲಿದೆ ಹಾಗೂ ಭಾರತದ ಬಳಿ ಸಕ್ಷಮ ಸೈನ್ಯ ಕೂಡ ಇದೆ; ಆದರೆ ಉಗ್ರರೊಂದಿಗೆ ಹೋರಾಡುವಾಗ ‘ಯುದ್ಧ ಹಾಗೂ ಜನಸಾಮಾನ್ಯರ ಜೀವಹಾನಿಯನ್ನು ತಡೆಗಟ್ಟಿ ಅದನ್ನು ನಿರ್ವಹಿಸುವುದು ಈ ನಿಟ್ಟಿನಲ್ಲಿ ಭಾರತದ ಪ್ರಯತ್ನವಿರುತ್ತದೆ. ತಾಲಿಬಾನ್ ಹಿಂದಿನಷ್ಟೇ ಆಕ್ರಮಕ ಹಾಗೂ ಹಿಂಸಕವಾಗಿದೆ; ಆದರೆ ಈ ಸಲ ಅದು ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಅಂತಹ ಧೂರ್ತ ತಾಲಿಬಾನಿನ ವಿರುದ್ಧ ಭಾರತವು ಎಚ್ಚರದಿಂದಿರುವುದು ಅಗತ್ಯ !

ತಾಲಿಬಾನಿಗಳ ರಣನೀತಿ!

‘ದಿನದಿಂದ ದಿನ ಪ್ರಬಲವಾಗುತ್ತಿರುವ ಭಾರತೀಯ ಸೈನ್ಯವನ್ನು ನೇರವಾಗಿ ಎದುರಿಸುವುದು ಸಾಧ್ಯವಿಲ್ಲ, ಎಂಬುದು ಪಾಕ್‌ನಂತೆ ತಾಲಿಬಾನ್‌ಗೂ ತಿಳಿದಿದೆ. ಆದ್ದರಿಂದ ಪಾಕ್‌ನಂತೆ ಶೀತಲ ಸಮರ ಸಾರುವುದು, ಭಾರತದೊಳಗೆ ಉಗ್ರರನ್ನು ನುಗ್ಗಿಸಿ ಭಾರತವನ್ನು ಅಸ್ಥಿರಗೊಳಿಸುವುದು, ‘ತಾಲಿಬಾನನ ವಿಚಾರಶೈಲಿಯ ಪ್ರವೃತ್ತಿಯನ್ನು ಭಾರತದಲ್ಲಿ ಹೇಗೆ ಹೆಚ್ಚಿಸುವುದು, ಎಂಬುದನ್ನು ನೋಡಿ ಅದನ್ನು ಬೆಳೆಸುವುದು, ಬಾಂಬ್‌ಸ್ಫೋಟ ನಡೆಸುವುದು ಇವುಗಳತ್ತ ತಾಲಿಬಾನ್ ವಿಚಾರ ಮಾಡುತ್ತಿದೆ. ‘ಭಾರತದಲ್ಲಿ ತಾಲಿಬಾನಿನ ಪ್ರವೃತ್ತಿ ಹೆಚ್ಚಿಸುವುದು, ಇದುವೇ ತಾಲಿಬಾನಿನ ಈಗಿನ ಮುಖ್ಯ ಶಸ್ತ್ರವಾಗಿದೆ. ತಾಲಿಬಾನಿನ ವಕ್ತಾರ ಜಬೀಉಲ್ಲಾಹ ಮುಜಾಹಿದನು ‘ಭಾರತವು ಒಂದು ಮಹತ್ವದ ದೇಶವಾಗಿದೆ ಎಂದು ಇತ್ತೀಚೆಗೆ ನೀಡಿದ ಹೇಳಿಕೆಯು ಬಹಳಷ್ಟನ್ನು ಹೇಳುತ್ತದೆ. ‘ಭಾರತವು ಹಿಂದಿನಂತೆ ಅಫ್ಘಾನಿಸ್ತಾನದೊಂದಿಗೆ ರಾಜಕೀಯ ಸಂಬಂಧವಿಟ್ಟುಕೊಳ್ಳಲಿ, ಎಂದು ಕೂಡ ತಾಲಿಬಾನಿನ ವಕ್ತಾರನು ಹೇಳಿದ್ದಾನೆ. ಭಾರತವು ಅಫ್ಘಾನಿಸ್ತಾನದ ಯೋಜನೆಗಳಿಗಾಗಿ ಇಲ್ಲಿಯವರೆಗೆ ೩ ಶತಕೋಟಿ ಡಾಲರ್‌ಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿದೆ. ತಾಲಿಬಾನಿಗಳಿಗೆ ಭಾರತದ ಆ ಹಣ ಹಾಗೂ ಸೌಲಭ್ಯಗಳು ಬೇಕಾಗಿವೆ. ಕ್ರೂರ ತಾಲಿಬಾನಿಗಳು ಅಫ್ಘಾನವನ್ನು ವಶಪಡಿಸಿಕೊಂಡ ಬಳಿಕ ‘ಈಗಲೂ ಭಾರತವು ಅದೇ ನಿಲುವು ವಹಿಸಲಿ, ಎಂದು ಬಹಿರಂಗವಾಗಿ ಹೇಳಲು ತಾಲಿಬಾನಿಗೆ ಏನೂ ಅನಿಸುತ್ತಿಲ್ಲ. ತಾಲಿಬಾನಿಗಳು ‘ಅಲ್-ಖೈದಾ ಈಗ ಅಸ್ತಿತ್ವದಲ್ಲಿಲ್ಲ, ಎಂದು ಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. ಒಂದು ವೇಳೆ ‘ಅಲ್- ಖೈದಾ ಮುಗಿಯುತ್ತಾ ಬಂದಿದ್ದರೂ ಅಫ್ಘಾನ ಹಾಗೂ ಪಾಕ್‌ನಲ್ಲಿ ನೂರಾರು ಉಗ್ರವಾದಿ ಸಂಘಟನೆಗಳು ಸಕ್ರಿಯವಾಗಿವೆ, ಎಂಬುದನ್ನು ತಾಲಿಬಾನ್ ಏಕೆ ಹೇಳುತ್ತಿಲ್ಲ ?

‘ಐ.ಎಸ್.ಐ.ಎಸ್.-ಖುರಾಸಾನ್ ಎಂಬ ಸಂಘಟನೆಯು ಕಾಬೂಲ್‌ನ ವಿಮಾನ ನಿಲ್ದಾಣದಲ್ಲಾದ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ ಹಾಗೂ ‘ಖುರಾಸಾನ್ನ ನಿರ್ಮಾಣವೇ ಅದರ ಧ್ಯೇಯವಾಗಿದೆ. ಈ ಖುರಾಸಾನ್ ಭೂಪ್ರದೇಶದಲ್ಲಿ ರಾಜಸ್ಥಾನ, ಗುಜರಾತಿನ ವರೆಗಿನ ಭೂಪ್ರದೇಶವು ಒಳಗೊಂಡಿದೆ. ತಾಲಿಬಾನ ಅಧಿಕಾರಕ್ಕೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಸುಧಾರಿಸುವುದಕ್ಕಾಗಿ ‘ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದೆ. ಅದು ಎಷ್ಟು ಅಪ್ಪಟ ಸುಳ್ಳೆಂಬುದು ಅನೇಕ ‘ವಿಡಿಯೋಗಳಿಂದ ಬೆಳಕಿಗೆ ಬಂದಿದೆ. ಅವರು ಈಗ ‘ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಾಲಿಬಾನಿಗಳಿಗೆ ಕಲಿಸಲಾಗುವುದು, ಎಂಬಂತಹ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ತಾಲಿಬಾನಿನ ವಕ್ತಾರ ಜಬೀಉಲ್ಲಾಹ ಮುಜಾಹಿದನು ‘ಭಾರತವು ಕಾಶ್ಮೀರ ಸಮಸ್ಯೆಯಲ್ಲಿ ಸಕಾರಾತ್ಮಕ ನಿಲುವನ್ನು ಇಟ್ಟುಕೊಳ್ಳಬೇಕು, ಎಂದು ಹೇಳಿ ಒಂದು ರೀತಿ ಭಾರತಕ್ಕೆ ಬೆದರಿಕೆಯೊಡ್ಡಿದ್ದಾನೆ. ಹೇಗೆ ಒಂದೊಂದೇ ಮಾಡಿ ಅಫ್ಘಾನಿಸ್ತಾನವನ್ನು ಕಬಳಿಸಿದಂತೆ ‘ಖುರಾಸಾನನ ಧ್ಯೇಯದಿಂದ ಹುಚ್ಚರಾಗಿರುವ ತಾಲಿಬಾನಿಗಳು ಮುಂದೆ ಬರಲು ಸಮಯ ತಗಲುವುದಿಲ್ಲ. ಅಮೇರಿಕಾದ ರಾಷ್ಟ್ರಾಧ್ಯಕ್ಷರಾದ ಬಾಯಡೆನರು ‘ಪಾಕ್‌ನ ಭೂಮಿಯಿಂದ ತಾಲಿಬಾನನನ್ನು ದೂರವಿಡಿ; ಏಕೆಂದರೆ ಪಾಕನ ಅಣ್ವಸ್ತ್ರಗಳು ತಾಲಿಬಾನಿನ ವಶವಾಗಬಹುದು, ಎಂದು ಹೇಳಿದ್ದಾರೆ; ಆದರೆ ಪಾಕ್ ಹಾಗೂ ಅದರ ಪ್ರಧಾನಮಂತ್ರಿಯ ಈಗಿನ ನಿಲುವನ್ನು ನೋಡಿದರೆ ‘ಪಾಕ್ ಸ್ವತಃ ಆ ಅಣ್ವಸ್ತ್ರಗಳನ್ನು ತಾಲಿಬಾನಿಗೆ ನೀಡಲು ಹಿಂದು-ಮುಂದು ನೋಡುವುದಿಲ್ಲ, ಎಂದು ಯಾರಿಗಾದರೂ ಅನಿಸಿದರೆ ಅದು ಅತಿಶಯೋಕ್ತಿಯಾಗುವುದಿಲ್ಲ. ಅಮೇರಿಕಾವು ಅಫ್ಘಾನದಿಂದ ಸೈನ್ಯವನ್ನು ಹಿಂಪಡೆಯುವ ಮೊದಲು ನಡೆದ ಶಾಂತಿ ಒಪ್ಪಂದವು ಅಫ್ಘಾನಿಸ್ತಾನಕ್ಕೆ ಇಷ್ಟವಿಲ್ಲದಿದ್ದರೂ ಅಮೇರಿಕಾದ ಒತ್ತಡದಿಂದ ತಾಲಿಬಾನಿನ ೫೦೦ ಅತ್ಯಂತ ಕ್ರೂರ ಉಗ್ರರನ್ನು ಕಾರಾಗೃಹದಿಂದ ಬಿಡುಗಡೆ ಮಾಡಬೇಕಾಯಿತು. ಇದು ಒಂದು ರೀತಿಯಲ್ಲಿ ತಾಲಿಬಾನಿನ ವಿಜಯವಾಗಿತ್ತು. ಕಳೆದ ವರ್ಷ ಅಂದರೆ ೨೦೨೦ ರಲ್ಲಿ ತಾಲಿಬಾನಿನೊಂದಿಗೆ ರಾಜಿ ಮಾಡಲು ಒಂದು ಅಂತರರಾಷ್ಟ್ರೀಯ ಸಭೆಯನ್ನು ಕರೆಯಲಾಯಿತು. ಅದರಿಂದಾಗಿ ತಾಲಿಬಾನಿಗೆ ಮತ್ತೊಮ್ಮೆ ಅಂತರರಾಷ್ಟ್ರೀಯ ಸ್ಥಾನ ಸಿಕ್ಕಿತು. ‘ತಾಲಿಬಾನಿನ ಮಾತುಗಳನ್ನು ಯಾರೋ ಜಗತ್ತಿನ ದೇಶಗಳು ಕೇಳಿಸಿಕೊಳ್ಳುತ್ತಿವೆ, ಎಂಬ ಚಿತ್ರಣ ನಿರ್ಮಾಣವಾಯಿತು. ಇದು ಕೂಡ ತಾಲಿಬಾನಿನ ಧೂರ್ತ ರಣನೀತಿಯ ಒಂದು ಭಾಗವೆಂದು ಹೇಳಬಹುದು.

ಭಾರತದ ಮುಂದಿರುವ ಸವಾಲುಗಳು

ನಾಳೆ ತಾಲಿಬಾನಿನ ಪ್ರಭಾವದಿಂದ ಕಾಶ್ಮೀರದಲ್ಲಿ ಉಗ್ರವಾದಿ ಚಟುವಟಿಕೆಗಳು ಹೆಚ್ಚಾಗಿ ಅವರೇನಾದರೂ ಚರ್ಚೆಗೆ ಆಹ್ವಾನಿಸಿದರೆ, ಆಗ ‘ಭಾರತವು ಇಲ್ಲಿಯವರೆಗೆ ಹೇಗೆ ಪಾಕ್‌ನೊಂದಿಗೆ ಚರ್ಚೆ ನಡೆಸುತ್ತಿರುವಂತೆ ತಾಲಿಬಾನ್ ವಿಷಯದಲ್ಲಿಯೂ ಹಾಗೆ ಆಗುವುದು ಬೇಡ, ಎಂಬ ಅಪೇಕ್ಷೆಯಿದೆ. ಭಾರತವು ಈಗ ವಹಿಸಿದ ಎಚ್ಚರಿಕೆಯ ನಿಲುವು ಎಲ್ಲ ದೃಷ್ಟಿಯಿಂದಲೂ ಸರಿಯೇ ಆಗಿದೆ. ಅಫ್ಘಾನಿಸ್ತಾನದಿಂದ ಭಾರತೀಯ ವಂಶದ ನಾಗರಿಕರನ್ನು ಕರೆತರಲು ಭಾರತವು ತೋರಿಸಿದ ತತ್ಪರತೆಯು ಚೆನ್ನಾಗಿದೆ; ಆದರೆ ತಾಲಿಬಾನಿನ ಸಂಕಟ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ‘ತಾಲಿಬಾನಿನ ಈಗಿನ ವಿಜಯದಿಂದ ಉಗ್ರವಾದಿ ಸಂಘಟನೆಗಳ ಉತ್ಸಾಹ ಹೆಚ್ಚಾಗಿದೆ, ಎಂಬುದು ಮಹತ್ವದ್ದಾಗಿದೆ ಹಾಗೂ ಭಾರತದ ದೃಷ್ಟಿಯಲ್ಲಿ ಅದು ದೊಡ್ಡ ಅಪಾಯವೇ ಸರಿ. ಅದರಲ್ಲಿ ಪಾಕ್ ಹಾಗೂ ಚೀನಾ ತಾಲಿಬಾನಿಗೆ ನೀಡುವ ಕುಮ್ಮಕ್ಕು ಭಾರತಕ್ಕಾಗಿ ದೊಡ್ಡ ತಲೆನೋವಿನ ವಿಷಯವಾಗಿದೆ. ಆದ್ದರಿಂದ ಭಾರತದ ಕಾರ್ಯದಕ್ಷತೆಗೆ ನಿಜವಾದ ಸತ್ತ್ವಪರೀಕ್ಷೆಯಾಗಲಿದೆ. ‘ಅಫ್ಘಾನಿಗಳಿಗೆ ಆಶ್ರಯ ಬೇಕೋ ಬೇಡವೋ ?, ‘ಇಲ್ಲಿ ಒಳನುಸುಳಿರುವ ಅಫ್ಘಾನಿಗಳು ಭಾರತವಿರೋಧಿ ಕಾರ್ಯಾಚರಣೆ ಮಾಡುತ್ತಿದ್ದಾರೆಯೇ ಇಲ್ಲವೇ, ಎಂಬುದರ ಮೇಲೆ ಗಮನವಿಡುವುದು, ಈ ನಿಮಿತ್ತ ವಿಷಕಕ್ಕುವ ಮತಾಂಧ ಕಾಶ್ಮೀರಿ, ಸಾಮ್ಯವಾದಿ, ಮಾನವತಾವಾದಿ ಹಾಗೂ ದೇಶದ್ರೋಹಿಗಳನ್ನು ಹದ್ದುಬಸ್ತಿನಲ್ಲಿಡುವುದು, ಪಾಕ್ ಹಾಗೂ ಚೀನಾದ ಜೊತೆಗೆ ತಾಲಿಬಾನಿನ ಚಟುವಟಿಕೆಗಳ ಮೇಲೆ ಕಣ್ಣಿಡುವುದು, ಇಲ್ಲಿನ ಉಗ್ರಗಾಮಿ ಕಾರ್ಯಾಚರಣೆಗಳನ್ನು ಶಾಶ್ವತವಾಗಿ ನಾಶ ಮಾಡುವುದು, ಈ ರೀತಿ ಅನೇಕ ಸವಾಲುಗಳು ಭಾರತದ ಮುಂದಿದೆ. ಭಾರತದ ಮೇಲೆ ಈಶ್ವರನ ಕೃಪೆಯಿದೆ. ಭಾರತವು ಈ ಸವಾಲುಗಳನ್ನು ಲೀಲಾಜಾಲವಾಗಿ ಎದುರಿಸಲಿದೆ ಎಂದು ಆಶಿಸೋಣ !