ಅಧ್ಯಾತ್ಮಸಂಪನ್ನ ಜೀವನ ಜೀವಿಸಲು ಇಚ್ಛಿಸುವವರಿಗೆ ಕಾನೂನಿನ ರಕ್ಷಣೆ !

ವಕೀಲೆ ಪ್ರೀತಿ ಪಾಟೀಲ

ಭಾರತಭೂಮಿಯು ಆಧ್ಯಾತ್ಮಿಕ ಪರಂಪರೆ ಲಭಿಸಿದ ಸಮೃದ್ಧ ಭೂಮಿಯಾಗಿದೆ. ಇಂತಹ ಸಮೃದ್ಧ ಭೂಮಿಯಲ್ಲಿ ಯಾರಾದರೊಬ್ಬರಿಗೆ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕಿದ್ದರೆ, ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನೆಯ ಮಾರ್ಗಗಳು’ ಎಂಬ ಶಿಕ್ಷಣವನ್ನು ನೀಡುವ ಸನಾತನ ಸಂಸ್ಥೆಯು ಇದೇ ಭಾರತ ಭೂಮಿಯಲ್ಲಿದೆ. ಇದು ಹಿಂದೂಗಳ ಭಾಗ್ಯವೇ ಆಗಿದೆ. ಅಧ್ಯಾತ್ಮವೂ ಇತರ ಶಾಸ್ತ್ರಗಳಂತೆ ಒಂದು ಶಾಸ್ತ್ರವಾಗಿದೆ. ಈ ಶಾಸ್ತ್ರವು ಮನುಷ್ಯನು ಒಳ್ಳೆಯ ಮತ್ತು ಕೆಟ್ಟ ಪರಿಸ್ಥಿತಿಗಳಲ್ಲಿ ಶಾಂತ, ಸ್ಥಿರ, ಸಮಾಧಾನಿ ಮತ್ತು ಆನಂದದಿಂದ ಹೇಗೆ ಇರಬೇಕು ಎಂಬುದನ್ನು ಕಲಿಸುತ್ತದೆ. ಸಾವಿರಾರು ಸಾಧಕರು ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆಯನ್ನು ಮಾಡಿ ತಮ್ಮ ವ್ಯಾವಹಾರಿಕ ಜೀವನದಲ್ಲಿನ ಅಡಚಣೆಗಳನ್ನು ದೂರಗೊಳಿಸಿ ಸಕಾರಾತ್ಮಕ ಜೀವನವನ್ನು ಜೀವಿಸುತ್ತಿದ್ದಾರೆ. ಸಾಧನೆಯನ್ನು ಮಾಡಿದ್ದರಿಂದ ಸಾಧಕರು ತಮ್ಮ ಶಾರೀರಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳು ಕಡಿಮೆಯಾಗಿರುವುದನ್ನು ಅನುಭವಿಸುತ್ತಿದ್ದಾರೆ. ಇದರಿಂದ ಅಧ್ಯಾತ್ಮದ ಮಹತ್ವವು ಗಮನಕ್ಕೆ ಬರುತ್ತದೆ; ಆದರೆ ಈ ವಿಷಯವನ್ನು ತಿಳಿದುಕೊಳ್ಳದೇ  ಅನೇಕ ಪಾಲಕರು ತಮ್ಮ ಮಕ್ಕಳು ಕೇವಲ ಹಣವನ್ನು ಸಂಪಾದಿಸುವ ಶಿಕ್ಷಣವನ್ನು ಪಡೆದು, ವಾಹನ, ಬಂಗಲೆ ಮತ್ತು ಹಣವನ್ನು ಸಂಪಾದಿಸಬೇಕು ಎಂಬ ಧ್ಯೇಯವನ್ನಿಡಬೇಕು ಎಂಬ ವಿಚಾರದವರಾಗಿದ್ದಾರೆ. ಅದರ ದುಷ್ಪರಿಣಾಮವನ್ನು ನಾವು ಇಂದು ನೋಡುತ್ತಿದ್ದೇವೆ.

೧. ಹಣವೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬುದು ಯೋಗ್ಯವಾಗಿದೆಯೇ ?

ಇದರ ಜ್ವಲಂತ ಉದಾಹರಣೆ ಎಂದರೆ ಇಂದು ಮನೆಮನೆಗಳಲ್ಲಿ ಜನರ ಮಾನಸಿಕ ಆರೋಗ್ಯ ಹದಗೆಟ್ಟು ಅವರು ನಿರಾಶರಾಗಿರುವುದು ಕಂಡು ಬರುತ್ತದೆ. ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಹೆಚ್ಚಾಗಿದೆ. ಪ್ರತಿಯೊಬ್ಬರಿಗೆ ಒಂದಲ್ಲೊಂದು ಸಮಸ್ಯೆ ಇದ್ದೇ ಇದೆ; ಆದರೆ ಅದಕ್ಕೆ ಇಂದಿನ ಈ ವಿಜ್ಞಾನವಾದಿ ಯುಗದಲ್ಲಿ ಯೋಗ್ಯ ಉಪಾಯಯೋಜನೆ ಮಾತ್ರ ದುರ್ದೈವದಿಂದ ಸಿಗುತ್ತಿಲ್ಲ. ‘ರೋಗಕ್ಕಿಂತ ಉಪಾಯ ಮಹಾ ಭಯಂಕರ’ ಎಂಬ ಸ್ಥಿತಿಯೇ ಕಂಡು ಬರುತ್ತದೆ. ಆದುದರಿಂದ ಇಂದು ನಾವು ಭೌತಿಕ ಜಗತ್ತಿನಲ್ಲಿ ಪ್ರಗತಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳುತ್ತಿದ್ದರೂ ಅದು ನಿಜವಾದ ಪ್ರಗತಿಯಾಗಿದೆಯೇ ? ಎಂಬ ಚಿಂತನೆಯನ್ನು ಪ್ರತಿಯೊಬ್ಬರೂ ಮಾಡುವುದು  ಆವಶ್ಯಕವಾಗಿದೆ. ಕೇವಲ ಹಣವಿದ್ದರೆ ಎಲ್ಲ ಅಡಚಣೆಗಳು ದೂರವಾಗುವವು, ಹಣವೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬ ಹುಚ್ಚು ಕಲ್ಪನೆಯನ್ನು ಪ್ರತಿಯೊಬ್ಬರೂ ಮಾಡಿಕೊಂಡಿದ್ದಾರೆ. ಕೊರೊನಾ ಮಹಾಮಾರಿಯಲ್ಲಿ ಆಧುನಿಕ ವೈದ್ಯರೂ ಸಹ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಕೈಚೆಲ್ಲಿರುವುದನ್ನು (ಹತಾಶರಾಗಿರುವುದನ್ನು) ನಾವೆಲ್ಲರೂ ನೋಡಿದ್ದೇವೆ. ಹಣವು ಬದುಕಲು ಬೇಕಾಗುವ ಸಾಧನವಾಗಿದ್ದರಿಂದ ಐಷಾರಾಮಿನ ಜೀವನವನ್ನು ಜೀವಿಸಲು ಪ್ರತಿಯೊಬ್ಬರು ಹಣದ ಹಿಂದೆ ಧಾವಿಸುತ್ತಿದ್ದಾರೆ ಮತ್ತು ಅದಕ್ಕೇ ಅವರು ಸುಖವೆಂದು ತಿಳಿಯುತ್ತಿದ್ದಾರೆ.

೨. ‘ಡಿಡರೋಟ್ ಇಫೆಕ್ಟ್’ ಮತ್ತು ಅದರ ಮೇಲೆ ‘ಸಾಧನೆ’ ಇದುವೇ ಉಪಾಯ !

ಮಾನಸಶಾಸ್ತ್ರದಲ್ಲಿ ಇದಕ್ಕೆ ‘ಡಿಡರೋಟ್ ಇಫೆಕ್ಟ್’ ಎಂದು ಹೇಳುತ್ತಾರೆ. ರಷ್ಯಾದಲ್ಲಿ ೧೭ ನೇ ಶತಮಾನದಲ್ಲಿ ಡೆನಿಸ್ ಡಿಡರೋಟ್ ಎಂಬ ಹೆಸರಿನ ಓರ್ವ ಪುಸ್ತಕಗಳ ಆಧ್ಯಯನಕಾರರಿದ್ದರು. ಅವರ ಇಡೀ ಜೀವನವು ಓದುವುದರಲ್ಲಿ ಮತ್ತು ಬಡತನದಲ್ಲಿಯೇ ಕಳೆಯಿತು. ಅವರ ಸ್ವಂತದ ಒಂದು ದೊಡ್ಡ ಗ್ರಂಥಾಲಯವಿತ್ತು. ರಷ್ಯಾದ ರಾಣಿ ಕ್ಯಥರಿನ್‌ರಿಗೆ ಈ ಡಿಡರೋಟ್‌ರ ಬಗ್ಗೆ ತಿಳಿದಾಗ ಅವಳು ೫೦ ಸಾವಿರ ಡಾಲರ್ಸ್ಸ್, ಅಂದರೆ ಸದ್ಯದ ಸಾಧಾರಣ ಮೂರುವರೆ ಕೋಟಿ ರೂಪಾಯಿಗಳನ್ನು ಕೊಟ್ಟು ಅವರ ಗ್ರಂಥಾಲಯವನ್ನು ಖರೀದಿಸಿದ್ದಳು. ಡಿಡರೋಟ್‌ರು ಒಂದು ದಿನದಲ್ಲಿ ಶ್ರೀಮಂತರಾದರು. ಅವರು ದೊರಕಿದ ಹಣದಿಂದ ತಮಗಾಗಿ ಒಂದು ದುಬಾರಿ ಉಡುಪನ್ನು ಖರೀದಿಸಿದರು. ಆ ಉಡುಪನ್ನು ಧರಿಸಿದ ನಂತರ ಅವರಿಗೆ ಉಡುಪಿಗೆ ಒಪ್ಪುವಂತಹ ವಸ್ತುಗಳು ಮನೆಯಲ್ಲಿಲ್ಲ ಎಂದು ಅನಿಸತೊಡಗಿತು. ಆದುದರಿಂದ ಅವರು ಒಂದೊಂದಾಗಿ ಮನೆಯಲ್ಲಿನ ಎಲ್ಲ ವಸ್ತುಗಳನ್ನು ಬದಲಾಯಿಸಿದರು. ಅವರ ಉಡುಪು ಮತ್ತು ಮನೆ ಎರಡೂ ಸುಂದರವಾಗಿ ಕಾಣಿಸುತ್ತಿದ್ದವು; ಆದರೆ ಇದೆಲ್ಲವನ್ನು ಮಾಡುತ್ತಾ ಮಾಡುತ್ತಾ ಅವರು ಪುನಃ ಒಂದು ದಿನ ಬಡವರಾದರು.

ಈಗಲೂ ನಾವು, ಒಂದು ಹೊಸ ವಸ್ತುವನ್ನು ತೆಗೆದುಕೊಂಡಾಗ ಅದರಿಂದ ಬೇರೆ ವಸ್ತುವಿನ ಸ್ಥಾನಮಾನ ತಾನಾಗಿಯೇ ಕಡಿಮೆಯಾಗುತ್ತದೆ ಎಂಬುದನ್ನು ನೋಡುತ್ತೇವೆ ಮತ್ತು ಆ ಸ್ಥಾನಮಾನವನ್ನು ಹೆಚ್ಚಿಸಲು ನಾವು ಹೆಚ್ಚು ಹಣವನ್ನು ಖರ್ಚು ಮಾಡುತ್ತೇವೆ, ಉದಾ. ಹೊಸ ಸೋಫಾ (ಸುಖಾಸನ) ಖರೀದಿಸಿದರೆ, ಕಿಟಕಿಗಳ ಪರದೆಗಳನ್ನು ಬದಲಾಯಿಸುವುದು, ನಂತರ ಸೋಫಾ ಮತ್ತು ಪರದೆಗಳಿಗಾಗಿ ಕೋಣೆಯ ಬಣ್ಣವನ್ನು ಬದಲಾಯಿಸುವುದು, ಇಂತಹ ಕೃತಿಗಳು ನಡೆಯುತ್ತಿರುತ್ತವೆ. ಒಂದು ವಸ್ತುವನ್ನು ಖರೀದಿಸುವಾಗ ಅದರೊಂದಿಗೆ ಅನೇಕ ಅನಾವಶ್ಯಕ ವಸ್ತುಗಳನ್ನೂ ಖರೀದಿಸುವುದೂ ಆಗುತ್ತದೆ. ಈ ಎಲ್ಲ ಮಾನಸಿಕ ಸಮಸ್ಯೆಗಳಿಗೆ ಸಾಧನೆಯನ್ನು ಮಾಡುವುದೇ ಉತ್ತರವಾಗಿದೆ. ನಮ್ಮ ಅಡಚಣೆಗಳ ಹಿಂದೆ ಆಧ್ಯಾತ್ಮಿಕ ಕಾರಣಗಳಿರಬಹುದು, ಎಂಬುದನ್ನೇ ಇಂದು ಜನರು ನಂಬುವುದಿಲ್ಲ, ಇಷ್ಟೇ ಅಲ್ಲ, ಅದರ ವಿಚಾರವನ್ನೇ ಯಾರೂ ಮಾಡುವುದಿಲ್ಲ. ಆದುದರಿಂದ ಮನುಷ್ಯನು ಈ ದುಷ್ಟ ಚಕ್ರದಲ್ಲಿ ಸಿಲುಕುತ್ತಾನೆ

೩. ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ದ್ವಿಮುಖ ನಿಲುವು 

ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದರೆ ಇಂದು ಸಮಾಜದಲ್ಲಿ ಹುಡುಗಿಯರು ‘ಏರ್ ಹೊಸ್ಟೆಸ್’ ಆಗುವುದು, ಯಾವುದಾದರೂ ದೊಡ್ಡ ಪಂಚತಾರಾಂಕಿತ, ಸಪ್ತತಾರಾಂಕಿತ ಉಪಾಹಾರಗೃಹಗಳಲ್ಲಿ (ಹೋಟೆಲುಗಳಲ್ಲಿ) ‘ರಿಸೆಪ್ಶನಿಷ್ಟ’ ಎಂದು ಕೆಲಸ ಮಾಡುವುದು, ಇದನ್ನು ಈಗಲೂ ಪ್ರತಿಷ್ಠೆಯದೆಂದು ತಿಳಿದುಕೊಳ್ಳಲಾಗುತ್ತದೆ. ಈ ಕೆಲಸಗಳ ಪ್ರತ್ಯಕ್ಷ ಸ್ವರೂಪವನ್ನು ನೋಡಿದರೆ ಮುಖಕ್ಕೆ ಬಣ್ಣ ಬಳಿದುಕೊಂಡು, ಸೌಂದರ್ಯದ ಪ್ರದರ್ಶನ ಮಾಡುತ್ತಾ, ಒಳ್ಳೊಳ್ಳೆಯ ಬಟ್ಟೆಗಳನ್ನು ಧರಿಸಿ ಬಂದಿರುವ ಗ್ರಾಹಕರೊಂದಿಗೆ ಸಂಭಾಷಣೆ ಮಾಡುವುದು, ಅವರಿಗೇನು ಬೇಕು, ಏನು ಬೇಡ ಎಂಬುದನ್ನು ನೋಡುವುದು ಹೀಗಿರುತ್ತದೆ; ಆದರೆ ಬರುವ ಎಲ್ಲ ಗ್ರಾಹಕರು ಸಭ್ಯ, ಸಜ್ಜನರಿರುತ್ತಾರೆಯೇ ? ಅವರು ಆ ಹುಡುಗಿಯರೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಾರೆ, ಇದೊಂದು ಬೇರೆಯೇ ವಿಷಯವಾಗಿದೆ. ಆದರೂ ಹುಡುಗಿಯರು ಇಂತಹ ಕೆಲಸವನ್ನು ಮಾಡುವುದನ್ನು ಅವರ ವ್ಯಕ್ತಿಸ್ವಾತಂತ್ರ್ಯವಾಗಿದೆ ಎಂದು ತಿಳಿಯಲಾಗುತ್ತದೆ. ಹುಡುಗರ ವಿಷಯದಲ್ಲಿಯೂ ಪರಿಸ್ಥಿತಿ ಹೀಗೆ ಇದೆ. ಅವರು ಚಿತ್ರನಟನಾಗಬೇಕು ಎಂದು ಮನೆ ಬಿಟ್ಟು ಹೋಗುತ್ತಾರೆ, ಏಕೆಂದರೆ ಅದು ಅವರ ವ್ಯಕ್ತಿಸ್ವಾತಂತ್ರ್ಯವಾಗಿದೆ !

ಕೆಲವು ವರ್ಷಗಳ ಹಿಂದೆ ‘ಎಕ ದುಜೆ ಕೆ ಲಿಯೆ’ ಎಂಬ ಸಿನೆಮಾ ಬಂದಿತ್ತು. ಅದನ್ನು ನೋಡಿ ಆ ಸಮಯದಲ್ಲಿ ಪ್ರೇಮಿಗಳಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗಿತ್ತು. ಈ ಸಮಾಜವು ಆ ಚಲನಚಿತ್ರ ನಿರ್ಮಾಪಕರಿಗೆ ಅಥವಾ ನಿರ್ದೇಶಕರಿಗೆ ತಪ್ಪು ಸಂದೇಶವನ್ನು ಸಮಾಜಕ್ಕೆ ನೀಡಿರುವಿರಿ ಎಂದು ದೂಷಿಸಲಿಲ್ಲ. ಇದು ಆ ನಿರ್ಮಾಪಕರ, ನಿರ್ದೇಶಕರ ವ್ಯಕ್ತಿಸ್ವಾತಂತ್ರ್ಯವಾಗಿತ್ತು !

ಇತ್ತೀಚೆಗೆ ಪ್ರದರ್ಶನಗೊಂಡ ಸಿನೆಮಾ ಎಂದರೆ ‘ದೃಶ್ಯಮ್’. ಈ ಚಲನಚಿತ್ರದಲ್ಲಿ ಅಪರಾಧವನ್ನು ಹೇಗೆ ಮುಚ್ಚಿಡಬೇಕು ಎಂಬುದನ್ನು ತೋರಿಸಲಾಗಿದೆ. ಈ ರೀತಿ ತೋರಿಸುವುದು, ಆ ನಿರ್ದೇಶಕರ ವ್ಯಕ್ತಿಸ್ವಾತಂತ್ರ್ಯ ! ಹಾಗೆಯೇ ‘ಮಾನಸಿಕ ಆರೋಗ್ಯ ಸೇವೆ ಕಾನೂನು ೨೦೧೭’ರಲ್ಲಿಯೂ ಚಿಕಿತ್ಸೆಯ ಸ್ವಾತಂತ್ರ್ಯವು ಸಂಬಂಧಪಟ್ಟ ರೋಗಿಗೆ ಇರುವುದು ಎಂದು ಹೇಳಲಾಗಿದೆ.

ಇಸ್ಲಾಮ್‌ನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಇಸ್ಲಾಮ್‌ನಲ್ಲಿ ಯಾರಾದರೊಬ್ಬ ವ್ಯಕ್ತಿಯು ಮೌಲವಿ ಆಗಿದ್ದರೆ, ಅವನಿಗೆ ಸಮಾಜದಲ್ಲಿ ತುಂಬಾ ಗೌರವವಿರುತ್ತದೆ. ಮೌಲವಿ ಎಂದರೆ ಕುರಾನ ಏನು ಹೇಳುತ್ತದೆ ಎಂಬ ಜ್ಞಾನವಿರುವ ವ್ಯಕ್ತಿ. ತದ್ವಿರುದ್ಧ ಇಂದಿನ ಕಾಲದಲ್ಲಿ ಒಂದು ವೇಳೆ ಯಾರಿಗಾದರೂ ಸನ್ಯಾಸ ಜೀವನವನ್ನು ಸ್ವೀಕರಿಸುವುದಿದ್ದರೆ, ಆಶ್ರಮದಲ್ಲಿದ್ದು ಆಧ್ಯಾತ್ಮಿಕ ಜೀವನವನ್ನು ಜೀವಿಸಬೇಕಾಗಿದ್ದರೆ ಅವರಿಗೆ ವಿರೋಧವನ್ನು ಮಾಡಲಾಗುತ್ತದೆ. ಒಂದು ವೇಳೆ ಸಂವಿಧಾನವು ಎಲ್ಲರಿಗೂ ಸಂವಿಧಾನಾತ್ಮಕ ಅಧಿಕಾರವನ್ನು ನೀಡಿದ್ದರೆ, ಸಮಾಜವು ಆ ಅಧಿಕಾರವನ್ನು ಇವರಿಗೇಕೆ ಕೊಡುವುದಿಲ್ಲ.

೪.  ಸನಾತನದ ಆಶ್ರಮಕ್ಕೆ ಬಂದು ಪೂರ್ಣವೇಳೆ ಸಾಧನೆಯನ್ನು ಮಾಡುವ ಇಚ್ಛೆ ಇರುವವರಿಗೆ ಅಜ್ಞಾನದಿಂದ ಪಾಲಕರಿಂದ ವಿರೋಧ

ಸನಾತನ ಸಂಸ್ಥೆಯು ಮನುಷ್ಯನ ಪ್ರಗತಿಗೆ ಅಡಚಣೆಯಾಗಿರುವ ಮತ್ತು ದುಃಖಕ್ಕೆ ಕಾರಣವಾಗಿರುವ ಅವನ ದೋಷ ಮತ್ತು ಅಹಂಕಾರದ ನಿರ್ಮೂಲನೆಯನ್ನು ಹೇಗೆ ಮಾಡಬೇಕು ಎಂಬುದರ ಪ್ರತ್ಯಕ್ಷ ಕೃತಿಯನ್ನು ಕಲಿಸುತ್ತದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಿ ಅನೇಕ ಸಾಧಕರು ಆನಂದದಿಂದ ಜೀವನವನ್ನು ನಡೆಸುತ್ತಿದ್ದಾರೆ. ಸಾಧನೆಯ ಮಹತ್ವವು ಗಮನಕ್ಕೆ ಬಂದುದರಿಂದ ವಿಶ್ವವಿದ್ಯಾಲಯದ ಶಿಕ್ಷಣವನ್ನು ಪೂರ್ಣಗೊಳಿಸಿದ ಎಷ್ಟೋ ಯುವ ಸಾಧಕ-ಸಾಧಕಿಯರಿಗೆ ವ್ಯಾವಹಾರಿಕ ಜೀವನದಲ್ಲಿ ನೌಕರಿಯನ್ನು ಮಾಡಿ ಹಣ ಗಳಿಸುವುದಕ್ಕಿಂತ ಸಾಧನೆ ಮಾಡಿ ಚಿರಂತನ ಆನಂದವನ್ನು ಪ್ರಾಪ್ತಮಾಡಿಕೊಳ್ಳಬೇಕು ಎಂದು ಅನಿಸಿದ್ದರಿಂದ ಅವರಿಗೆ ಸನಾತನದ ಆಶ್ರಮಕ್ಕೆ ಬಂದು ಪೂರ್ಣವೇಳೆ ಸಾಧನೆಯನ್ನು ಮಾಡುವ ಇಚ್ಛೆಯಿರುತ್ತದೆ; ಆದರೆ ದುರದೃಷ್ಟದಿಂದ ಅಜ್ಞಾನದಿಂದಾಗಿ ಅವರ ಪಾಲಕರಿಂದಲೇ ವಿರೋಧವಾಗುತ್ತದೆ.

ಇಲ್ಲಿ ಒಂದು ವಿಷಯವನ್ನು ಗಮನದಲ್ಲಿ ತೆಗೆದುಕೊಳ್ಳಬೇಕು, ಭಾರತದಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಸಂವಿಧಾನವು ಎಲ್ಲರಿಗೂ ಮೂಲಭೂತ ಅಧಿಕಾರವನ್ನೂ ನೀಡಿದೆ. ಸಂವಿಧಾನದ ಕಲಮ್ ೨೧ ಕ್ಕನುಸಾರ ಪ್ರತಿಯೊಬ್ಬ ವ್ಯಕ್ತಿಗೆ ಅವನ ಜೀವನವನ್ನು ಜೀವಿಸುವ ಮತ್ತು ವ್ಯಕ್ತಿಸ್ವಾತಂತ್ರ್ಯದ ಅಧಿಕಾರವಿದೆ. ಯಾವುದಾದರೊಬ್ಬ ಸಾಧಕನಿಗೆ ಸನಾತನದ ಆಶ್ರಮದಲ್ಲಿದ್ದು ಸಾಧನೆಯನ್ನು ಮಾಡಲಿಕ್ಕಿದ್ದರೆ ಕಾನೂನಿಗನುಸಾರ ಅವನ ಪಾಲಕರಿಗೆ ಅವನನ್ನು ವಿರೋಧಿಸಲು ಬರುವುದಿಲ್ಲ. ಸಾಧನೆಯ ನಿರ್ಣಯವು ಆ ಸಾಧಕನ ವೈಯಕ್ತಿಕ ನಿರ್ಣಯವಾಗಿರುತ್ತದೆ. ಅವನು ಯಾವುದೇ ಮಾರ್ಗದಿಂದ ಎಲ್ಲಿಯೂ ಇದ್ದು ಸಾಧನೆಯನ್ನು ಮಾಡಬಹುದು.

ಕೆಲವು ಸಮಾಜದಲ್ಲಿ ಅವರ ಮಕ್ಕಳು ಅವರ ಪಂಥಕ್ಕನುಸಾರ ದೀಕ್ಷೆ ಸ್ವೀಕರಿಸಿದಾಗ, ಅವರು ದೊಡ್ಡ ಸಮಾರಂಭವನ್ನು ಮಾಡುತ್ತಾರೆ; ಆದರೆ ಇಲ್ಲಿ ಮಾತ್ರ ಸಾಧನೆಯಂತಹ ಒಳ್ಳೆಯ ನಿರ್ಣಯಕ್ಕಾಗಿ ಕಾನೂನು ಮತ್ತು ಅಧಿಕಾರದ ಭಾಷೆಯನ್ನು ಮಾಡಬೇಕಾಗುತ್ತದೆ, ಇದು ದುರದೃಷ್ಟಕರವಾಗಿದೆ.

ಮಹತ್ವದ್ದೇನೆಂದರೆ ಕುಟುಂಬದಲ್ಲಿನ ಒಬ್ಬ ವ್ಯಕ್ತಿ ಸಾಧನೆಯನ್ನು ಮಾಡುತ್ತಿದ್ದರೂ, ಅವನ ಕುಟುಂಬದಲ್ಲಿನ ಎಲ್ಲ ಸದಸ್ಯರಿಗೆ ಅದರ ಲಾಭವಾಗುತ್ತದೆ; ಏಕೆಂದರೆ ಒಂದು ಸಕಾರಾತ್ಮಕ ವಿಚಾರ ಅಡಚಣೆಯನ್ನು ಜಯಿಸಲು ಕಲಿಸುತ್ತದೆ.

೫. ಸದ್ಯದ ನಕಾರಾತ್ಮಕ ವಾತಾವರಣದಲ್ಲಿ ಸಕಾರಾತ್ಮಕ ವಿಚಾರ ಮಾಡಲು ಅಧ್ಯಾತ್ಮವೇ ಮಹತ್ವದ್ದಾಗಿದೆ !

ಸದ್ಯದ ನಕಾರಾತ್ಮಕ ವಾತಾವರಣದಲ್ಲಿ ಸಕಾರಾತ್ಮಕ ವಿಚಾರ ಮಾಡಲು ಅಧ್ಯಾತ್ಮ ಮಹತ್ವದ್ದಾಗಿದೆ. ಅಧ್ಯಾತ್ಮದಿಂದಲೇ ಆತ್ಮಬಲ ಪ್ರಾಪ್ತವಾಗುತ್ತದೆ. ಆದುದರಿಂದ ಸಹಜವಾಗಿಯೇ ವಿಚಾರಗಳ ದಿಶೆ ಯೋಗ್ಯವಾಗಿದ್ದರೆ, ಜೀವನದಲ್ಲಿ ಸಲೀಸಾಗಿ ಅನೇಕ ಒಳ್ಳೆಯ ಬದಲಾವಣೆಗಳಾಗುತ್ತವೆ. ಮಾನಸಿಕ ತೊಂದರೆಗಳಿಗೆ ಯೋಗ್ಯ ನಾಮಸ್ಮರಣೆಯ ಜೊತೆಯನ್ನು ನೀಡಿದರೆ, ನಕಾರಾತ್ಮಕತೆ ಉಳಿಯುವುದಿಲ್ಲ. ಇದರ ಅನುಭವವನ್ನು ಎಷ್ಟೋ ಸಾಧಕರು ಪಡೆದಿದ್ದಾರೆ. ಸಾಧನೆಯನ್ನು ಮಾಡತೊಡಗಿದ ನಂತರ ಈ ಭೌತಿಕ ಜಗತ್ತಿನ ಮಿತಿ ಗಮನಕ್ಕೆ ಬಂದಾಗ ಸಾಧಕನಿಗೆ ತಾನು ಎಲ್ಲಿ ನಿಲ್ಲಬೇಕು ? ಎಂಬುದರ ಅರಿವಾಗುತ್ತದೆ. ಆವಶ್ಯಕತೆಗಳು ಕಡಿಮೆಯಾಗುತ್ತವೆ. ಸಾಧಕನು ಸಾಧನೆಯನ್ನು ಮಾಡಿ ಅವನು ಅಧ್ಯಾತ್ಮಿಕ ಜೀವನವನ್ನು ಜೀವಿಸಲು ಇಚ್ಛಿಸುತ್ತಿದ್ದರೆ ಕಾನೂನು ಅವನಿಗೆ ರಕ್ಷಣೆಯನ್ನು ನೀಡುತ್ತದೆ. ಸಾಧಕರಿಗೆ ಪಾಲಕರಿಂದ ವಿರೋಧವಾಗುತ್ತಿದ್ದರೆ, ಅಂತಹ ಸಾಧಕರು ಕಾನೂನಿನ ಸಹಾಯದಿಂದ ತಮಗೆ ನೀಡಿದ ಅಧಿಕಾರವನ್ನು ಬಳಸಿ ತಮ್ಮ ವೈಯಕ್ತಿಕ ನಿರ್ಣಯವನ್ನು ತೆಗೆದುಕೊಳ್ಳಬಹುದು.

– ನ್ಯಾಯವಾದಿ ಪ್ರೀತಿ ಪಾಟೀಲ, ಸಾಂಗಲಿ (೨೮.೧೦.೨೦೨೨)