ಸ್ವಾತಂತ್ರ್ಯವೀರ ಸಾವರಕರರ ಮೇಲೆ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರಿಂದಾದ ಆರೋಪವು ರಾಹುಲರ ಬುದ್ಧಿಭ್ರಷ್ಟವಾಗಿರುವುದರ ಲಕ್ಷಣ !

ಸ್ವಾತಂತ್ರ್ಯವೀರ ಸಾವರಕರರ ಬಿಡುಗಡೆಗಾಗಿ ಆಗಿನ ವಿವಿಧ ರಾಜಕೀಯ ಮುಖಂಡರು ಮಾಡಿದ ಪ್ರಯತ್ನ !

ಶ್ರೀ. ದುರ್ಗೇಶ ಜಯವಂತ ಪರೂಳಕರ

ಸ್ವಾತಂತ್ರ್ಯವೀರ ಸಾವರಕರರು ಕಾಂಗ್ರೆಸ್ಸಿನ ವಿರುದ್ಧ ಆಂಗ್ಲರಿಗಾಗಿ ಕಾರ್ಯವನ್ನು ಮಾಡುತ್ತಿದ್ದರು. ಸ್ವಾತಂತ್ರ್ಯವೀರ ಸಾವರಕರರು ಆಂಗ್ಲರಿಗೆ ಕ್ಷಮಾಪಣಾಪತ್ರವನ್ನು ಬರೆದಿದ್ದರು, ಎಂದು ಸಾವರಕರದ್ವೇಷಿ ಕಾಂಗ್ರೆಸ್ಸಿನ ಮುಖಂಡ ಮತ್ತು ಸಂಸದ ರಾಹುಲ ಗಾಂಧಿ ಇವರು ವಾಶಿಮ್‌ನಲ್ಲಿ ‘ಭಾರತ ಜೋಡೋ ಯಾತ್ರೆಯ ಸಮಯದಲ್ಲಿ ಹೇಳಿದರು. ನಿಜವಾಗಿ ನೋಡಿದರೆ ಸ್ವಾತಂತ್ರ್ಯವೀರ ಸಾವರಕರರು ತಮ್ಮ ಬಿಡುಗಡೆಗಾಗಿ ತಾವು ಸ್ವತಃ ಪ್ರಯತ್ನಿಸಲಿಲ್ಲ. ಲೋಕಮಾನ್ಯ ಟಿಳಕ, ಮೋಹನದಾಸ ಗಾಂಧಿ ಮತ್ತು ಆಗಿನ ಸ್ವಾತಂತ್ರ್ಯವೀರರು ಪ್ರಯತ್ನಿಸಿದ್ದರು. ಈ ಪ್ರಯತ್ನಗಳ ಸಂಕ್ಷಿಪ್ತ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಿಂದ ರಾಹುಲ ಗಾಂಧಿ ಸುಳ್ಳು ಹೇಳುವುದರೊಂದಿಗೆ ತಮ್ಮ ಬುದ್ಧಿಭ್ರಷ್ಟತನ ಮತ್ತು ಸಾವರಕರ ದ್ವೇಷವನ್ನು ಹೇಗೆ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬರುವುದು.

೧. ಲೋಕಮಾನ್ಯ ಟಿಳಕರು ಸಾವರಕರರ ಬಿಡುಗಡೆಗಾಗಿ ಮಾಡಿರುವ ಬೇಡಿಕೆ

‘ಸಾವರಕರರ ಆರೋಗ್ಯ ಅನಿರೀಕ್ಷಿತವಾಗಿ ಹದಗೆಟ್ಟು ಅವರ ಸ್ಥಿತಿ ಚಿಂತಾಜನಕವಾಗಿದೆ, ಎಂಬ ವಾರ್ತೆ ಲೋಕಮಾನ್ಯ ಟಿಳಕರಿಗೆ ತಿಳಿಯಿತು. ೧೯ ಸಪ್ಟೆಂಬರ್ ೧೯೧೮ ರಂದು ಲೋಕಮಾನ್ಯ ಟಿಳಕರು ಚಿರೋಲ ಖಟ್ಲೆಯ ಕೆಲಸಕ್ಕಾಗಿ ವಿದೇಶಕ್ಕೆ ಹೊರಟಿದ್ದರು. ಖಟ್ಲೆಯ ಕಾಗದಪತ್ರಗಳಲ್ಲಿ ಸಾವರಕರರ ಖಟ್ಲೆಯ ಕಾಗದಪತ್ರಗಳೂ ಇದ್ದವು. ಅವುಗಳನ್ನು ನೋಡಿ ಲೋಕಮಾನ್ಯ ಟಿಳಕರಿಗೆ ಸಾವರಕರರ ದುರ್ದಶೆಯ ನೆನಪಾಯಿತು. ಅವರ ಮುಖದಿಂದ ಸಹಜವಾಗಿಯೇ ಮುಂದಿನಂತೆ ಉದ್ಗಾರ ಹೊರಟಿತು, “ಕೇವಲ ರಾಷ್ಟ್ರದ ಕಲ್ಯಾಣವಾಗಬೇಕು”, ಎಂಬ ಉದ್ದೇಶದಿಂದ ಪ್ರಯತ್ನಿಸುವಾಗ ಜೀವಾವಧಿ ಶಿಕ್ಷೆಯನ್ನು ವಿಧಿಸುವುದಕ್ಕಿಂತ ಇಂತಹ ಜನರನ್ನು ಸಾಯಿಸಿದರೆ ಚೆನ್ನಾಗಿರುವುದು. ಸೆರೆಮನೆಯಲ್ಲಿ ತಮ್ಮ ಆಯುಷ್ಯವನ್ನು ಸವೆಸುತ್ತಿರುವಾಗ ಪಾಪ ಅವರಿಗೆ ಎಷ್ಟು ಮಾನಸಿಕ ಯಾತನೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ !

ಲೋಕಮಾನ್ಯ ತಿಲಕರು ವಿದೇಶದಲ್ಲಿನ ಭಾರತದ ಮಂತ್ರಿ ಮಾಂಟೆಗ್ಯು ಇವರ ತನಕ ರಾಜಕೈದಿಗಳ ಬಿಡುಗಡೆಯ ಬೇಡಿಕೆಯನ್ನು ಮಾಡಿದ್ದರು, ಅದು ಸಾವರಕರರ ಬಗ್ಗೆಯೇ ಇತ್ತು. (‘ಗ.ಮ. ನಾಮಜೋಶಿ ಇವರ ನೆನಪುಗಳು, ಲೋಕಮಾನ್ಯ ಟಿಳಕರ ನೆನಪುಗಳು ಮತ್ತು ವದಂತಿಗಳು (ಮರಾಠಿ), ಸಂಪಾದಕರು ಸ. ವಿ. ಬಾಪಟ್, ಖಂಡ-ಒಂದು, ಪುಟ ೯೧) (‘ಕ್ರಾಂತಿಕಲ್ಲೋಳ, ಲೇಖಕ – ವಿ. ಶ್ರೀ. ಜೋಶಿ, ಪುಟ ೫೨೫)

೨. ಮೋಹನದಾಸ ಗಾಂಧಿ ಇವರು ಸಾವರಕರರ ಬಿಡುಗಡೆಗಾಗಿ ಬ್ರಿಟಿಷ ಸರಕಾರದ ಮುಂದೆ ತಮ್ಮ ಪಕ್ಷವನ್ನು ಮಂಡಿಸುವುದು

ಮೋಹನದಾಸ ಗಾಂಧಿಯವರು ಸ್ವಾತಂತ್ರ್ಯವೀರ ಸಾವರಕರ ಇವರು ಸೆರೆಮನೆಯಿಂದ ಬಿಡುಗಡೆಯಾಗಬೇಕೆಂದು ೨೬ ಮೇ ೧೯೨೦ ರ ಯಂಗ್ ಇಂಡಿಯಾದಲ್ಲಿ ‘ಸಾವರಕರ ಬಂಧು ಈ ಲೇಖನವನ್ನು ಬರೆದು ಅವರ ಬಿಡುಗಡೆಗಾಗಿ ಬ್ರಿಟಿಷ ಸರಕಾರದ ಮುಂದೆ ತಮ್ಮ ಪಕ್ಷವನ್ನು ಮಂಡಿಸಿದ್ದರು. ಅದು ಹೀಗಿತ್ತು …

‘ಭಾರತದ ಕೇಂದ್ರ ಮತ್ತು ಪ್ರಾಂತೀಯ ಸರಕಾರಗಳಿಂದ ರಾಜಕ್ಷಮೆಯ ಲಾಭ ದೊರಕಿ ಶಿಕ್ಷೆಯನ್ನು ಭೋಗಿಸುತ್ತಿದ್ದ ಅನೇಕರು ಮುಕ್ತರಾಗಿದ್ದಾರೆ; ಆದರೆ ಅನೇಕ ಪ್ರಮುಖ ರಾಜಕೈದಿಗಳು ಈಗಲೂ ಬಿಡುಗಡೆಯಾಗಿಲ್ಲ. ಇದರಲ್ಲಿ ನಾನು ಸಾವರಕರ ಬಂಧುಗಳನ್ನೂ ಸಮಾವೇಶಗೊಳಿಸುತ್ತೇನೆ. ಅವರು ಪಂಜಾಬ್‌ನಲ್ಲಿನ ಬಿಡುಗಡೆಯಾದ ರಾಜಕೈದಿಗಳ ಹಾಗೆಯೆ ರಾಜಕೀಯ ಅಪರಾಧಿಗಳಾಗಿದ್ದಾರೆ. ಆದರೂ ರಾಜಘೋಷಣೆಯ ನಂತರ ೫ ತಿಂಗಳಾದರೂ ಈ ಸಹೋದರರ ಬಿಡುಗಡೆಯಾಗಿಲ್ಲ… ಇದು ಸ್ಪಷ್ಟವಾಗಿದೆ… ಸಾವರಕರರ (ಅಣ್ಣ ಅಂದರೆ, ಬಾಬಾರಾವ ಸಾವರಕರರ) ವಿರುದ್ಧ ಇರುವ ಆರೋಪವು ಸಾರ್ವಜನಿಕ ಸ್ವರೂಪದ್ದಾಗಿದೆ. ಅವರು ಯಾವುದೇ ಹಿಂಸಾಚಾರಿ ಕೃತಿಯನ್ನು ಮಾಡಿಲ್ಲ. ಅವರು ವಿವಾಹಿತರಾಗಿದ್ದು ಅವರ ಇಬ್ಬರು ಹೆಣ್ಣು ಮಕ್ಕಳು ಈ ಮೊದಲೇ ನಿಧನರಾಗಿದ್ದಾರೆ ಮತ್ತು ಈಗ ೧೮ ತಿಂಗಳ ಹಿಂದೆ ಅವರ ಪತ್ನಿಯ ನಿಧನವೂ ಆಗಿದೆ. ಲಂಡನ್‌ನಲ್ಲಿನ ಕಾರ್ಯಕ್ಕಾಗಿ ಪ್ರಸಿದ್ಧರಾಗಿರುವ ಅವರ ಎರಡನೇಯ ಸಹೋದರ…  ಅವರ ವಿರುದ್ಧ ಅವರು ಹತ್ಯೆಗೆ ಸಹಾಯ ಮಾಡಿದ ಪ್ರಕರಣದಲ್ಲಿ ೧೯೧೧ ರಲ್ಲಿ ದೋಷಾರೋಪ ಸಲ್ಲಿಕೆಯಾಗಿತ್ತು, ಆದರೆ ಅವರ ವಿರುದ್ಧ ಹಿಂಸೆಯ ಯಾವುದೇ ಕೃತ್ಯ ಸಿದ್ಧವಾಗಿಲ್ಲ.

ಪಂಜಾಬ್ ಸರಕಾರ ಭಾಯಿ ಪರಮಾನಂದರನ್ನು ಹೇಗೆ ಮುಕ್ತಗೊಳಿಸಿತೋ, ಹಾಗೆಯೇ ಈ ಸಹೋದರರ ಪ್ರಕರಣವಿದೆ. ಭಾಯಿ ಪರಮಾನಂದರು ತಾವು ದೋಷಿ ಆಗಿದ್ದೇವೆ ಎಂದು ಬಹಿರಂಗವಾಗಿ ಹೇಳಿದ್ದರೂ, ಅವರ ಪ್ರಕರಣವು ಸಾವರಕರರ ಸಹೋದರರಿಗಿಂತ ಭಿನ್ನವಾಗಿಲ್ಲ. ರಾಜಘೋಷಣೆ ಆಗಿದ್ದರೂ ಸಾವರಕರರನ್ನು ಯಾವ ಕಾರಣಕ್ಕಾಗಿ ಮುಕ್ತಗೊಳಿಸಿಲ್ಲ, ಎಂಬುದನ್ನು ತಿಳಿದುಕೊಳ್ಳುವ ಅಧಿಕಾರ ಜನರಿಗಿದೆ.  (ಸಾವರಕರರ ವಿಸ್ಮೃತಿಯ ಪರಿಣಾಮ, (ಮರಾಠಿ) ೧೮೮೩-೧೯೨೪ ಲೇಖಕರು ವಿಕ್ರಮ ಸಂಪತ್, ಅನುವಾದ ರಣಜಿತ ಸಾವರಕರ್, ‘ಮಂಜಿರಿ ಮರಾಠಿ, ಪುಟ ೩೨೩-೩೨೩)

೩. ದಾದಾಸಾಹೇಬ ಖಾಪರ್ಡೆ ಇವರು ಮಾಡಿದ ಪ್ರಯತ್ನ

ವರ್ಷ ೧೯೨೦ ರ ಫೆಬ್ರವರಿ ತಿಂಗಳಲ್ಲಿ ದಾದಾಸಾಹೇಬ ಖಾಪರ್ಡೆ ಇವರು ‘ಕೌನ್ಸಿಲ್ ಆಫ್ ಸ್ಟೇಟ್ಸ್’ನಲ್ಲಿ ಸಾವರಕರರನ್ನು ಬಿಡುಗಡೆಗೊಳಿಸಬೇಕು ಎಂದು ಕೇಳಿಕೊಂಡರು. ಈ ಪ್ರಸ್ತಾವನೆ (ಠರಾವ್) ವಿಠ್ಠಲಭಾಯಿ ಪಟೇಲರದ್ದಾಗಿತ್ತು. ಸರಕಾರ ಇದರ ಬಗ್ಗೆ ಏನೂ ಮಾಡಲಿಲ್ಲ. ಇದೇ ತಿಂಗಳಲ್ಲಿ ಲೋಕಮಾನ್ಯ ತಿಲಕರು ಮಾಂಟೇಗ್ಯು ಇವರಿಗೆ ನೇರವಾಗಿ ಪತ್ರ ಬರೆದು ಸಾವರಕರರ ಬಿಡುಗಡೆಗಾಗಿ ವಿನಂತಿಸಿದ್ದರು. (ಇದನ್ನು ಮೇಲೆ ಉಲ್ಲೇಖಿಸಲಾಗಿದೆ.) ‘ಹಿಂದುಸ್ಥಾನ ಸರಕಾರದ ಗೃಹಮಂತ್ರಿಗಳು ನಾವು ವೈಯಕ್ತಿಕ ರಾಜಕೈದಿಗಳ ಬಿಡುಗಡೆಯ ವಿಚಾರ ಮಾಡಲು ಸಿದ್ಧರಿದ್ದೆವು’, ಎಂದು ಆ ಸಮಯದಲ್ಲಿ ಹೇಳಿದ್ದರು. ಅದರ ಸಂದರ್ಭದಲ್ಲಿ ಸಾವರಕರರು ೩೦ ಮಾರ್ಚ್ ೧೯೨೦ ರಂದು ಒಂದು ಮನವಿಯನ್ನು ಸರಕಾರಕ್ಕೆ ಕಳುಹಿಸಿದರು.

೪. ಸುರೇಂದ್ರನಾಥ ಬ್ಯಾನರ್ಜಿ ಇವರು ಸಾವರಕರರ ಬಿಡುಗಡೆಗಾಗಿ ಬ್ರಿಟಿಷರಲ್ಲಿ ಮನವಿ ಮಾಡುವುದು

ಸಾವರಕರರ ಬಿಡುಗಡೆ ಆಗಲಿಲ್ಲವೆಂದು ಸುರೇಂದ್ರನಾಥರಿಗೆ ದುಃಖವಾಯಿತು. ವಿನಾಯಕ ದಾಮೋದರ ಸಾವರಕರರ ಪರವಾಗಿ ಸರಕಾರಕ್ಕೆ ಮಾಡಿದ ಮನವಿಯಲ್ಲಿ ಅವರು ನಮ್ಮಂತೆಯೇ ಭಾವನೆಯನ್ನು ವ್ಯಕ್ತಪಡಿಸಿದ್ದರು. ‘ಸರಕಾರ ನಮ್ಮನ್ನು ಬಿಟ್ಟಿತು; ಆದರೆ ಸಾವರಕರರನ್ನು ಏಕೆ ಬಿಟ್ಟಿಲ್ಲ ?’, ಎಂದು ಸುರೇಂದ್ರನಾಥರು ವೀರೇಂದ್ರನಾಥ ಚಟ್ಟೋಪಾಧ್ಯಾಯರಲ್ಲಿ ಪ್ರಶ್ನಿಸಿದರು. ಬ್ರಿಟಿಷ ಸರಕಾರ ಸಾವರಕರರನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಇದರ ಹಿಂದಿನ ಕಾರಣವನ್ನು ಹೇಳುವಾಗ ಸುರೇಂದ್ರನಾಥರ ಅಳಿಯ ಬ್ಯಾರಿಸ್ಟರ್ ವಿಜಯಚಂದ ಚಟರ್ಜಿ ಇವರು , “ಸತ್ಯಸಂಗತಿ ಏನೆಂದರೆ, ಬಂಗಾಲದ ಜನರು ಏನು ಹೇಳುತ್ತಾರೆಯೋ, ಹಾಗೆ ನಡೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಬ್ರಿಟಿಷ ಸರಕಾರಕ್ಕೆ ವಿಶ್ವಾಸವಿದೆ; ಆದರೆ ಸರಕಾರವು ಮರಾಠರ ಮೇಲೆ ಹಾಗೆ ವಿಶ್ವಾಸವಿಡುವುದಿಲ್ಲ ಎಂದು ಹೇಳಿದರು. (ಕ್ರಾಂತಿಕಲ್ಲೋಳ, ಲೇಖಕ – ವಿ. ಶ್ರೀ. ಜೋಶಿ, ಪುಟ ೫೩೩) ಇದರಿಂದ ಬ್ರಿಟಿಷ ಸರಕಾರದ ಮನಸ್ಸಿನಲ್ಲಿ ಸಾವರಕರರ ಬಗ್ಗೆ ಎಂತಹ ಭಾವನೆ ಇತ್ತು ಎಂಬುದು ಗಮನಕ್ಕೆ ಬರುತ್ತದೆ.

೫. ರಾಹುಲ ಗಾಂಧಿ ತಲೆ ಸರಿಯಿಲ್ಲದ ಮನುಷ್ಯ !

ಸ್ವಾತಂತ್ರ್ಯವೀರ ಸಾವರಕರರು ಬ್ರಿಟಿಷ ಸರಕಾರದ ಸೇವೆ ಅಥವಾ ಚಾಕರಿಯನ್ನು ಮಾಡುತ್ತಿದ್ದರೆ ಮತ್ತು ಸರಕಾರಕ್ಕೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದರೆ, ಈ ಮೇಲೆ ಉಲ್ಲೇಖಿಸಿದ ರಾಜಕೀಯ ನೇತಾರರು ಸಾವರಕರರ ಬಿಡುಗಡೆಗಾಗಿ ಪ್ರಯತ್ನಿಸುತ್ತಿದ್ದರೇನು ? ತಲೆ ಸರಿಯಿಲ್ಲದ ಮನುಷ್ಯನು ಏನು ಬೇಕಾದರೂ ಮಾತನಾಡುತ್ತಾನೆ ಮತ್ತು ಅವನ ಮಾತುಗಳ ಮೇಲೆ ವಿಶ್ವಾಸವನ್ನಿಟ್ಟು ಸಾವರಕರರಂತಹ ತೇಜಸ್ವಿ ಪುರುಷರ ಮೇಲೆ ಕೆಸರೆರೆಚಲಾಗುತ್ತದೆ. ಇದು ಬುದ್ಧಿಭ್ರಷ್ಟವಾಗಿರುವುದರ ಲಕ್ಷಣವಾಗಿದೆ, ಇದುವೇ ಇದರಿಂದ ಸಿದ್ಧವಾಗುತ್ತದೆ.

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಿಲಿ (೧೭.೧೧.೨೦೨೨)