Video – ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂತರು ಮತ್ತು ಮಹಾತ್ಮರು ಕಾರ್ಯ ಮಾಡಬೇಕು ! – ಪೂ. ಪರಮಾತ್ಮಾಜಿ ಮಹಾರಾಜರು, ಧಾರವಾಡ, ಕರ್ನಾಟಕ

ಪೂ. ಪರಮಾತ್ಮಾಜಿ ಮಹಾರಾಜ

ಧರ್ಮದ ಮೇಲೆ ಅಧರ್ಮದ ತಾಂಡವವಾಗುತ್ತಿರುವಾಗ, ಭಗವಾನ ಪರಶುರಾಮರು ಪರಶುವನ್ನು ಹಿಡಿದರು. ಇಂತಹ ಭಗವಾನ ಪರಶುರಾಮರನ್ನು ನಾವು ಆದರ್ಶವಾಗಿಟ್ಟುಕೊಳ್ಳಬೇಕು. ಇದು ತಪಸ್ಸಿನ ಸಮಯವಾಗಿರದೇ ಸಂಘರ್ಷದ ಸಮಯವಾಗಿದೆ. ಎಲ್ಲ ಸಂತರು ಮತ್ತು ಮಹಾತ್ಮರು ಹಿಂದೂ ರಾಷ್ಟ್ರದ ಸ್ಥಾಪನೆಗೆ ಕಾರ್ಯ ಮಾಡಬೇಕು. ಅದಕ್ಕಾಗಿ ಅವರು ರಸ್ತೆಗಿಳಿದು ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸಬೇಕು ಎಂದು ಧಾರವಾಡದ ಪೂ. ಪರಮಾತ್ಮಾಜೀ ಮಹಾರಾಜರು ಕರೆ ನೀಡಿದರು. ಅವರು ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧೀವೇಶನದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂಗಳ ಸಂಘಟನೆ’ ಈ ಪ್ರಬೋಧನಾ ಭಾಗದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅಧ್ಯಾತ್ಮಿಕ ಸಂಸ್ಥೆಗಳ ಏಕತೆಗಾಗಿ ಮಾಡಿದ ಪ್ರಯತ್ನಗಳು’ ಈ ಕುರಿತು ಮಾತನಾಡುತ್ತಿದ್ದರು. ಅಧಿವೇಶನದ ಪ್ರಬೋಧನಾ ಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ತಜ್ಞ ಡಾ. ಲಕ್ಷ್ಮೀಶ ಸೋಂದಾ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರೂ ಸಹ ತಮ್ಮ ವಿಚಾರಗಳನ್ನು ಮಂಡಿಸಿದರು.

(ಸೌಜನ್ಯ : Hindu Janajagruti Samiti)

ಪೂ. ಪರಮಾತ್ಮಾಜಿ ಮಹಾರಾಜರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದೂ ಸಂತರು ತಮ್ಮ ಹಣವನ್ನು ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಖರ್ಚು ಮಾಡುತ್ತಾರೆ. ನಮ್ಮ ಸಂತರ ಬಳಿ ಮಠ-ಮಂದಿರಗಳ ಮೂಲಕ ಇರುವ ದೊಡ್ಡ ಸಂಪತ್ತು ಧರ್ಮಕಾರ್ಯಕ್ಕೆ ಬಳಕೆಯಾಗಬೇಕು ಎಂದು ಹೇಳಿದರು. ಈ ಸಮಯದಲ್ಲಿ ಡಾ. ಲಕ್ಷ್ಮೀಶ ಸೋಂದಾ ಇವರು ಮಾತನಾಡುತ್ತಾ, ಇತಿಹಾಸವು ಒಂದು ರೀತಿಯಲ್ಲಿ ಬದುಕಿನ ಕನ್ನಡಿಯಾಗಿದೆ. ಭಾರತದ ತಕ್ಷಶಿಲಾ ಮತ್ತು ನಾಲಂದಾದ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿದರು. ಭಾರತದ ಮೇಲಿನ ಆಕ್ರಮಣಗಳು ಮತ್ತು ಲೂಟಿಗಳನ್ನು ಉದ್ದೇಶಪೂರ್ವಕವಾಗಿ ಇತಿಹಾಸದಿಂದ ಮುಚ್ಚಿಡಲಾಗಿದೆ, ಹಾಗೆಯೇ ಮೊಘಲರು ಮಾಡಿದ ದೌರ್ಜನ್ಯಗಳನ್ನು ಮುಚ್ಚಿಡಲಾಗಿದೆ. ಇತಿಹಾಸವನ್ನು ವಿದೇಶಿ ದೃಷ್ಟಿಕೋನದಿಂದ ಬರೆಯಲಾಗಿದೆ ಎಂದು ಹೇಳಿದರು.

ಶ್ರೀ. ಮೋಹನ ಗೌಡ

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ನಾವು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕರ್ನಾಟಕದಲ್ಲೂ ‘ಹಲಾಲ್’ ವಿರುದ್ಧ ಅಭಿಯಾನವನ್ನು ನಡೆಸಿದೆವು. ಹಿಂದೂ ಕಸಾಯಿ ಸಮುದಾಯಕ್ಕೆ ‘ಝಟ್ಕಾ’ ಮಾಂಸವನ್ನು ನೀಡುವಂತೆ ಉತ್ತೇಜಿಸಿದೆವು. ಹೀಗಾಗಿ ೭೦೦ ಕಡೆಗಳಲ್ಲಿ ‘ಝಟ್ಕಾ’ ಮಾಂಸದ ಅಂಗಡಿ ತೆರೆಯುವಂತೆ ಹಿಂದೂಗಳು ಒತ್ತಾಯಿಸಿದರು. ಬೆಂಗಳೂರಿನ ‘ಕ್ಲಾರೆನ್ಸ್ ಕಾನ್ವೆಂಟ್ ಹೈಯರ್ ಸೆಕೆಂಡರಿ ಶಾಲೆ’ಯಲ್ಲಿ ವಿದ್ಯಾರ್ಥಿಗಳಿಗೆ ಬೈಬಲ್ ಓದುವುದು ಕಡ್ಡಾಯ ಮಾಡಲಾಗಿತ್ತು. ನಾವು ಅದನ್ನೂ ವಿರೋಧಿಸಿದೆವು. ನಂತರ ಶಾಲೆಯ ಆಡಳಿತವು ಬೈಬಲ್ ಬೋಧನೆಯನ್ನು ನಿಷೇಧಿಸಿತು ಎಂದು ಹೇಳಿದರು.