ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon

  • ಜಾರ್ಖಂಡ್‌ ನ ಭಾರತೀಯ ಕಂದಾಯ ಸೇವೆ ಅಧಿಕಾರಿ ನಿಶಾ ಉರಾವ್ ಅವರ ಹೇಳಿಕೆ

  • ಕ್ರಿಶ್ಚಿಯನ್ (ಕಾನ್ವೆಂಟ್) ಶಾಲೆಗಳಲ್ಲಿ ಯೇಸುವಿನ ಪ್ರಾರ್ಥನೆ ಮತ್ತು ಮಂತ್ರಗಳ ವಿವಾದದ ಪ್ರಕರಣ

ರಾಂಚಿ (ಜಾರ್ಖಂಡ್) – ಆಂಶಿಕವಾಗಿ ಸರಕಾರದ ಸಹಾಯ ಪಡೆಯುವ ಅಲ್ಪಸಂಖ್ಯಾತರ ಶಾಲೆಯಲ್ಲಿ ಇಂತಹ ಯಾವುದೇ ಧಾರ್ಮಿಕ ಪ್ರಾರ್ಥನೆ ನಡೆಯುತ್ತಿದ್ದರೆ, ಸಂವಿಧಾನದ ಕಲಂ 28(3) ರ ಪ್ರಕಾರ ಯಾವುದೇ ವಿದ್ಯಾರ್ಥಿಯನ್ನು ಭಾಗವಹಿಸುವಂತೆ ಒತ್ತಾಯಿಸುವಂತಿಲ್ಲ. ಒಂದು ವೇಳೆ ವಿದ್ಯಾರ್ಥಿಯು ಅಪ್ರಾಪ್ತನಾಗಿದ್ದರೆ, ಆತನ ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಭಾರತೀಯ ಕಂದಾಯ ಸೇವೆ ಅಧಿಕಾರಿ ನಿಶಾ ಉರಾವ್ ಅವರು ಮಾಹಿತಿ ನೀಡಿದ್ದಾರೆ. ಕಾನ್ವೆಂಟ್ ಶಾಲೆಗಳಲ್ಲಿ ಕ್ರೈಸ್ತ ಪ್ರಾರ್ಥನೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಮಾತನಾಡುತ್ತಿದ್ದರು.

ಸರಕಾರಿ ಅನುದಾನ ಪಡೆಯುವ ಶಾಲೆಗಳಲ್ಲಿ ಧಾರ್ಮಿಕ ಪ್ರಾರ್ಥನೆಗಳನ್ನು ಆಯೋಜಿಸುವಂತಿಲ್ಲ!

ಹೆಚ್ಚಿನ ಅಲ್ಪಸಂಖ್ಯಾತ ಶಾಲೆಗಳು ಸರಕಾರದಿಂದ ನಿಧಿ ಪಡೆಯುತ್ತವೆ ಅಥವಾ ಆ ಶಾಲೆಗಳು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್.-ಸಿ.ಬಿ.ಎಸ್.ಇ.), ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ (ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜ್ಯುಕೇಶನ್.-ಐ.ಸಿ.ಎಸ್.ಇ.) ಮತ್ತು ರಾಜ್ಯ ಶಿಕ್ಷಣ ಮಂಡಳಿಗಳ ಮಾನ್ಯತೆ ಹೊಂದಿರುತ್ತವೆ ಎಂದು ಉರಾವ್ ತಿಳಿಸಿದರು. ಇಂತಹ ಅಲ್ಪಸಂಖ್ಯಾತರ ಶಾಲೆಗಳು ಕಲಂ 28 ಅನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಯಾವುದೇ ಅಲ್ಪಸಂಖ್ಯಾತ ಶಾಲೆಯು ಶೇ. 100% ರಷ್ಟು ಸರಕಾರಿ ನಿಧಿ ಪಡೆಯುತ್ತಿದ್ದರೆ, ಕಲಂ 28(1) ರ ಅನ್ವಯ ಅಲ್ಲಿ ಯಾವುದೇ ರೀತಿಯ ಧಾರ್ಮಿಕ ಶಿಕ್ಷಣ ಅಥವಾ ಧಾರ್ಮಿಕ ಪ್ರಾರ್ಥನೆ ಆಯೋಜಿಸುವಂತಿಲ್ಲ.

ಕ್ರೈಸ್ತ ಪ್ರಾರ್ಥನೆ ಹೇಳಲು ನನ್ನ ಪೋಷಕರಿಂದ ಅನುಮತಿ ಪಡೆದಿರಲಿಲ್ಲ!

​ನಾನು ಮಿಷನರಿ ಶಾಲೆಯಲ್ಲಿ ಕಲಿಯುತ್ತಿದ್ದೆ ಎಂದು ನಿಶಾ ಉರಾವ್ ಹೇಳಿದರು. ನನ್ನ ಕುಟುಂಬದಿಂದ ಅಥವಾ ಯಾವುದೇ ಸನಾತನಿ ಪೋಷಕರಿಂದ ಕ್ರೈಸ್ತ ಪ್ರಾರ್ಥನೆಗಾಗಿ ಅನುಮತಿ ಪಡೆದಿರಲಿಲ್ಲ; ಆದರೆ ನಮ್ಮ ಯಾವುದೇ ಆಕ್ಷೇಪಣೆಯೂ ಇರಲಿಲ್ಲ ಮತ್ತು ಆಕ್ಷೇಪಣೆ ಎತ್ತದ ಕುಟುಂಬಗಳು ನಿಜವಾಗಿಯೂ ಜಾತ್ಯತೀತವಾಗಿವೆ. ಸಂಪೂರ್ಣವಾಗಿ ಖಾಸಗಿಯಾಗಿರುವ ಅಲ್ಪಸಂಖ್ಯಾತರ ಶಾಲೆಯಲ್ಲೂ ಪ್ರಾರ್ಥನೆಗಾಗಿ ಒತ್ತಾಯಿಸುವಂತಿಲ್ಲ. ಯಾರಾದರೂ ವಿದ್ಯಾರ್ಥಿ ಅಥವಾ ಅವರ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರೆ, ಶಾಲೆ ಅವರನ್ನು ಭಾಗವಹಿಸಲು ಅಥವಾ ಪ್ರಾರ್ಥನೆ ಹೇಳಲು ಒತ್ತಾಯಿಸುವಂತಿಲ್ಲ. ಸಂಪೂರ್ಣವಾಗಿ ಸರಕಾರದ ಆಧೀನದಲ್ಲಿರುವ ಶಾಲೆಗಳಲ್ಲೂ ಒಂದು ವೇಳೆ ಇಂತಹ ಮಂತ್ರಗಳನ್ನು ಪಠಿಸಲಾಗುತ್ತಿದ್ದರೆ, ಅವು ಯಾವುದೇ ನಿರ್ದಿಷ್ಟ ಧರ್ಮದ ಪೂಜೆಯಾಗಿರದೆ ಜ್ಞಾನ ಮತ್ತು ಶಾಂತಿಯ ಜಾಗತಿಕ ಹಾರೈಕೆಯಾಗಿದ್ದರೆ, ಅದನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ ಈ ವಿಷಯ ಪ್ರಸ್ತುತ ನ್ಯಾಯಾಲಯದ ಅಧೀನದಲ್ಲಿದೆ. ಕಲಂ 25 ರ ಅಡಿಯಲ್ಲಿ ಧರ್ಮದ ಪ್ರಚಾರ ಮತ್ತು ಧರ್ಮದ ರಕ್ಷಣೆಯ ಸ್ವಾತಂತ್ರ್ಯವಿದೆ; ಆದರೆ ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಈ ಹಕ್ಕು ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಇತರ ಧರ್ಮ ಮತ್ತು ನಂಬಿಕೆ ಹೊಂದಿರುವವರಿಗೂ ಸಿಕ್ಕಿದೆ.

ಹಿಂದೂಗಳು ತಮ್ಮ ಧರ್ಮ ರಕ್ಷಣೆಯ ಬಗ್ಗೆ ಮಾತನಾಡಿದಾಗ ಅವರನ್ನು ಮತಾಂಧ ಅಥವಾ ಅಸಹಿಷ್ಣು ಎಂದು ಯಾಕೆ ಕರೆಯಲಾಗುತ್ತದೆ?

ಕ್ರಿಶ್ಚಿಯನ್​ ಶಾಲೆಗಳಲ್ಲಿ ಸನಾತನ ಪ್ರಾರ್ಥನೆ ಯಾಕೆ ಮಾಡುತ್ತಿಲ್ಲ?, ಎಂಬುದು ಇಲ್ಲಿ ಮುಖ್ಯ ವಿಷಯವೇ ಅಲ್ಲ ಎಂದು ನಿಶಾ ಉರಾವ್ ಹೇಳಿದರು. ಪ್ರತಿಯೊಂದು ಅಲ್ಪಸಂಖ್ಯಾತ ಸಂಸ್ಥೆಗೆ ತನ್ನದೇ ಆದ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಆದರೆ ವಿಷಯವೇನೆಂದರೆ, ಛತ್ತೀಸಗಢದ ‘ಮಸೀಹ ಸಮಾಜ’ ಸನಾತನ ಮಂತ್ರಗಳ ಬಗ್ಗೆ ಯಾಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ? ಯಾವುದೇ ಸನಾತನಿ ವ್ಯಕ್ತಿ ಕೂಡ ಶಾಲೆಯ ಕ್ರೈಸ್ತ ಪ್ರಾರ್ಥನೆಯ ಬಗ್ಗೆ ಆಕ್ಷೇಪ ಎತ್ತಿಲ್ಲ. ಜಾತ್ಯತೀತತೆ ಎಂಬುದು ಎಲ್ಲಾ ವರ್ಗ ಮತ್ತು ಧರ್ಮಗಳ ಜವಾಬ್ದಾರಿಯಲ್ಲವೇ? ಎಂಬುದು ಕೂಡ ಇಲ್ಲಿ ಮುಖ್ಯ ವಿಷಯವಾಗಿದೆ. ಯಾವಾಗ ಬಹುಸಂಖ್ಯಾತರು (ಹಿಂದೂಗಳು) ಕಲಂ 25 ರ ಅಡಿಯಲ್ಲಿ ತಮ್ಮ ಧರ್ಮ ರಕ್ಷಣೆಯ ಬಗ್ಗೆ ಮಾತನಾಡುತ್ತಾರೋ, ಆಗ ಅವರನ್ನು ಮತಾಂಧರು ಅಥವಾ ಅಸಹಿಷ್ಣುಗಳು ಎಂದು ಯಾಕೆ ಕರೆಯಲಾಗುತ್ತದೆ? ಸಾಂವಿಧಾನಿಕ ಹಕ್ಕುಗಳು ಎಲ್ಲರಿಗೂ ಸಮಾನವಾಗಿವೆ. ಎಲ್ಲಾ ಧರ್ಮಗಳು ಮತ್ತು ವರ್ಗಗಳು ಸಮಾನವಾಗಿ ನಿಜವಾದ ಧರ್ಮನಿರಪೇಕ್ಷತೆಯನ್ನು ಪ್ರದರ್ಶಿಸಬೇಕು.