ಚೀನಾ ಸೈನ್ಯದಿಂದ ಅರುಣಾಚಲ ಪ್ರದೇಶಕ್ಕೆ ನುಸುಳಿ ಭೂಮಿ ಕಬಳಿಕೆ ! – ಆದಿವಾಸಿ ಸಮುದಾಯದ ದಾವೆ

ಭಾರತ ಸರಕಾರದ ಮೌನ

ಇಟಾನಗರ (ಅರುಣಾಚಲ ಪ್ರದೇಶ) – ರಾಜ್ಯದ ‘ನಾಹ’ ಆದಿವಾಸಿ ಸಮುದಾಯವು ಅಪ್ಪರ್ ಸುಬನಸಿರಿ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಸಮೀಪ ಚೀನಾ ಅತಿಕ್ರಮಣ ಮಾಡಿದೆ ಎಂದು ದಾವೆ ಮಾಡಿದೆ. ಕಳೆದ 6 ವರ್ಷಗಳಲ್ಲಿ ಚೀನಿ ಸೈನ್ಯವು ತಮ್ಮ ಜಾನುವಾರು ಮೇಯಿಸುವ, ಬೇಟೆಯಾಡುವ ಮತ್ತು ಕೃಷಿ ಮಾಡುವ ಪೂರ್ವಜರ ಭೂಮಿಯ ಬಹುದೊಡ್ಡ ಭಾಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಈ ಸಮುದಾಯವು ಹೇಳಿದೆ. ಈ ಕುರಿತು ಇತ್ತೀಚೆಗಷ್ಟೇ ಅಪ್ಪರ್ ಸುಬನಸಿರಿಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಭಾರತ ಸರಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

​‘ನಾಹ ವೆಲ್ ಫೇರ್ ಸೊಸೈಟಿ’ಯ ಅಧ್ಯಕ್ಷ ಕೇರು ಚಾಡರ್ ಅವರು 5 ಸ್ಥಳಗಳಲ್ಲಿ ಚೀನಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಸಂಘಟನೆಯ ಪ್ರಕಾರ, ಈ ಎಲ್ಲಾ ಪ್ರದೇಶಗಳು ಅಪ್ಪರ್ ಸುಬನಸಿರಿ ಜಿಲ್ಲೆಯ ಕಂದಾಯ ಮಂಡಳಿಯ ಅಡಿಯಲ್ಲಿ ಬರುತ್ತವೆ. ಚೀನಾ ಸರಕಾರವು ವ್ಯೂಹಾತ್ಮಕವಾಗಿ ಮಹತ್ವದ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಅಂತರರಾಷ್ಟ್ರೀಯ ಗಡಿಯಲ್ಲಿ ತನ್ನ ನಿಯಂತ್ರಣವನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಇಡೀ ವಿಷಯದ ಕುರಿತು ನಾಚೋದ ಶಾಸಕ ನಾಕಾಪ ನಾಲೋ ಮಾತನಾಡಿ, ಈ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ, ಆದ್ದರಿಂದ ಇದಕ್ಕೆ ಅಧಿಕೃತ ದೃಢೀಕರಣ ಸಿಗುವುದು ಅಗತ್ಯವಾಗಿದೆ. ಆಡಳಿತ ಮಂಡಳಿಯು ಈ ಆರೋಪಗಳ ಅಧಿಕೃತ ಪರಿಶೀಲನೆ ನಡೆಸಬೇಕು. ಇದು ರಾಷ್ಟ್ರೀಯ ಮಹತ್ವದ ವಿಷಯವಾಗಿರುವುದರಿಂದ ಸಹಜವಾಗಿಯೇ ಇದರ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.

ಚೀನಾದಿಂದ ಭಾರತೀಯ ಗಡಿಯಲ್ಲಿ ರಸ್ತೆ ಮತ್ತು ಸೇನಾ ನೆಲೆಗಳ ನಿರ್ಮಾಣ!

ಚೀನಿ ಸೈನ್ಯವು ಭಾರತೀಯ ಗಡಿಯೊಳಗೆ ರಸ್ತೆಗಳನ್ನು ಮತ್ತು ಸೇನಾ ನೆಲೆಗಳನ್ನೂ ನಿರ್ಮಿಸಿದೆ ಎಂದು ಈ ಮನವಿಯಲ್ಲಿ ಆರೋಪಿಸಲಾಗಿದೆ. ಕೇರು ಚಾಡರ ಮಾತನಾಡಿ, ನಮಗೆ ನಮ್ಮ ಸೈನ್ಯದ ಮೇಲೆ ಪೂರ್ಣ ವಿಶ್ವಾಸವಿದೆ. ನಮ್ಮ ಸೈನಿಕರು ವರ್ಷಗಳಿಂದ ನಮ್ಮ ಭೂಮಿಯನ್ನು ರಕ್ಷಿಸುತ್ತಿದ್ದಾರೆ; ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರ ಪ್ರಯತ್ನಗಳು ಸಾಕಾಗುತ್ತಿಲ್ಲ ಎಂದು ತೋರುತ್ತಿದೆ. ಕಂದಾಯ ಪ್ರದೇಶದಲ್ಲಿ ಚೀನಿ ಸೈನ್ಯದ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಅವರ ಉದ್ದೇಶ ಅತ್ಯಂತ ಆತಂಕಕಾರಿಯಾಗಿದೆ. ‘ನಮ್ಮ ಪೂರ್ವಜರ ಭೂಮಿ ನಿಧಾನವಾಗಿ ನಮ್ಮ ಕೈಯಿಂದ ಜಾರುತ್ತಿದೆ’ ಎಂಬ ಭೀತಿ ನಮಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಸರಕಾರವು ಈ ದಾವೆಯ ಬಗ್ಗೆ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ವಸ್ತುಸ್ಥಿತಿಯನ್ನು ಮಂಡಿಸಬೇಕು!