ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ

‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ತಯಾರಿಸಿದ ಮೂರ್ತಿಗಳನ್ನು ಖರೀದಿಸದಂತೆ ಮನವಿ

ನವದೆಹಲಿ – ಮುಂಬರುವ ಗಣೇಶೋತ್ಸವದಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ ಬದಲು ನೈಸರ್ಗಿಕ ಜೇಡಿಮಣ್ಣು ಅಥವಾ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಶ್ರೀಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ‘ಮನ್ ಕಿ ಬಾತ್’ ಮಾಸಿಕ ಕಾರ್ಯಕ್ರಮದಲ್ಲಿ ಜನತೆಗೆ ಕರೆ ನೀಡಿದರು. ‘ಗಣೇಶೋತ್ಸವಕ್ಕೆ ಇನ್ನೂ ಕೆಲವು ತಿಂಗಳುಗಳೇ ಬಾಕಿ ಇದ್ದರೂ, ಮೂರ್ತಿಗಳನ್ನು ತಯಾರಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ’, ಎಂದು ಅವರು ಉಲ್ಲೇಖಿಸಿದರು.

ಪ್ರಧಾನಿ ಮೋದಿ ಅವರು, ‘‘ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ, ನಿಮ್ಮ ಮನೆ, ಸಮುಚ್ಚಯ ಅಥವಾ ಆವರಣದಲ್ಲಿ ಪ್ರತಿಷ್ಠಾಪಿಸುವ ಗಣಪತಿ ಬಪ್ಪನ ಮೂರ್ತಿಯು ನಮ್ಮ ದೇಶದ ಮಣ್ಣಿನಿಂದಲೇ ತಯಾರಾಗಿರಬೇಕು ಮತ್ತು ಅದು ನಮ್ಮ ದೇಶದ ಕುಂಬಾರರು ಹಾಗೂ ಸ್ಥಳೀಯ ಕುಶಲಕರ್ಮಿಗಳ ಕೈಯಿಂದ ಸಿದ್ಧವಾಗಿರಬೇಕು.’’ ಎಂದು ಹೇಳಿದರು.

ಮೂರ್ತಿಕಾರರು ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಆದ್ಯತೆ ನೀಡಬೇಕು!

ಪ್ರಧಾನಿ ಮೋದಿ ಮಾತು ಮುಂದುವರಿಯುತ್ತಾ, ‘‘ನಾನು ಶ್ರೀಗಣೇಶ ಮೂರ್ತಿಗಳನ್ನು ತಯಾರಿಸುವವರಿಗೆ ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಆದ್ಯತೆ ನೀಡುವಂತೆ ಮನವಿ ಮಾಡುತ್ತೇನೆ. ಹಾಗೂ ಖರೀದಿದಾರರಿಗೂ ವಿನಂತಿಸುತ್ತೇನೆ, ಅವರು ಮೂರ್ತಿಯು ಯಾವುದರಿಂದ ತಯಾರಾಗಿದೆ? ಮತ್ತು ಅದು ಯಾವ ದೇಶದಲ್ಲಿ ತಯಾರಾಗಿದೆ?, ಎಂಬುದನ್ನು ಖಚಿತವಾಗಿ ಪರಿಶೀಲಿಸಬೇಕು. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ತಯಾರಿಸಿದ ಮೂರ್ತಿಗಳನ್ನು ಅಪ್ಪಿತಪ್ಪಿಯೂ ಖರೀದಿಸಬೇಡಿ. ಈ ಗಣೇಶೋತ್ಸವದಲ್ಲಿ ಮತ್ತು ತದನಂತರದ ಪ್ರತಿ ಹಬ್ಬದಲ್ಲೂ ನೀವು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತೀರಿ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತೀರಿ ಎಂಬ ನಂಬಿಕೆ ನನಗಿದೆ.’’, ಎಂದು ಹೇಳಿದರು.

ಮಣ್ಣಿನ ಮೂರ್ತಿಗಳು ನೀರಿನಲ್ಲಿ ನೈಸರ್ಗಿಕವಾಗಿ ಕರಗಿ ಜಲಸಂಪನ್ಮೂಲಗಳನ್ನು ರಕ್ಷಿಸುತ್ತವೆ!

ಪ್ರಧಾನಿ ಮಾತು ಮುಂದುವರಿಯುತ್ತಾ, ‘‘ಶ್ರೀಗಣೇಶ ಮೂರ್ತಿಗಳ ವಿಸರ್ಜನೆಯ ನಂತರ ಈ ಮೂರ್ತಿಗಳು ನೀರಿನಲ್ಲಿ ನೈಸರ್ಗಿಕವಾಗಿ ಕರಗುತ್ತವೆ. ಇದರಿಂದ ನದಿಗಳು, ಕೆರೆಗಳು ಮತ್ತು ಒಟ್ಟಾರೆ ಜಲ ಪರಿಸರ ವ್ಯವಸ್ಥೆಯ (‘ಇಕೋ ಸಿಸ್ಟಮ್’) ರಕ್ಷಣೆಯಾಗುತ್ತದೆ.’’, ಎಂದು ಹೇಳಿದರು.