ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು !

ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಮಾಲೆ : ಲೇಖನ ಕ್ರಮಾಂಕ ೭

ದಿಕ್ಕುಗಳು ಮತ್ತು ವಾಸ್ತುಶಾಸ್ತ್ರ – ಭಾಗ ೨

ಅಷ್ಟದಿಕ್ಕುಗಳು

ಈಶ್ವರನು ಸೃಷ್ಟಿಯನ್ನು ನಿರ್ಮಿಸಿದಾಗ, ಅದರಲ್ಲಿ ಯಾವುದೇ ವಸ್ತುವಿನ ಸ್ಥಾನವನ್ನು ನಿಶ್ಚಿತಗೊಳಿಸಲು ಭಗವಂತನು ದಿಕ್ಕುಗಳನ್ನು ನಿರ್ಮಿಸಿದನು. ದಿಕ್ಕುಗಳಿಂದಾಗಿ ಯಾವುದೇ ವಸ್ತುವು ನಿಖರವಾಗಿ ಎಲ್ಲಿದೆ ಎಂದು ನಾವು ಹೇಳಬಹುದು, ಉದಾ. ನಾನು ಗೋವಾದಲ್ಲಿ ಇರುತ್ತೇನೆ; ಆದರೆ ‘ಗೋವಾದಲ್ಲಿ ಯಾವ ದಿಕ್ಕಿನಲ್ಲಿ ? ಉತ್ತರವೇ ಅಥವಾ ದಕ್ಷಿಣವೇ ?’, ಎಂದು ನಿಖರವಾಗಿ ಹೇಳಿದರೆ ಮಾತ್ರ ನಾವು ನಿಖರವಾಗಿ ಆ ಸ್ಥಾನವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ‘ದಿಕ್ಕು’ ಎಂಬ ವಿಷಯವು ವಾಸ್ತುಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ; ಏಕೆಂದರೆ ದಿಕ್ಕುಗಳ ಜ್ಞಾನವಾದರೆ ಮಾತ್ರ ನಾವು ವಾಸ್ತುಶಾಸ್ತ್ರದ ನಿಯಮಗಳ ಬಗ್ಗೆ ವಿಚಾರ ಮಾಡಬಹುದು. ವಾಸ್ತುಶಾಸ್ತ್ರವಾಗಿರಲಿ, ಸಾಧನೆಯಾಗಿರಲಿ ಅಥವಾ ಜೀವನವಾಗಿರಲಿ, ಈ ಎಲ್ಲಾ ಕಡೆಗಳಲ್ಲಿ ದಿಕ್ಕು ಸ್ಪಷ್ಟವಾಗಿರುವುದು ಮಹತ್ವದ್ದಾಗಿದೆ. ಪ್ರತಿಯೊಂದು ದಿಕ್ಕಿನ ಕಾರಕತ್ವವನ್ನು ಶಾಸ್ತ್ರವು ನಿಶ್ಚಿತಗೊಳಿಸಿ ಕೊಟ್ಟಿದೆ. (ಮನುಷ್ಯನ ಜೀವನದ ಯಾವ ವಿಷಯದ ಮೇಲೆ ದಿಕ್ಕು ಪರಿಣಾಮ ಬೀರುತ್ತದೆಯೋ, ಅದನ್ನು ಆ ದಿಕ್ಕಿನ ‘ಕಾರಕತ್ವ’ ಎಂದು ಹೇಳುತ್ತಾರೆ.) ದಿಕ್ಕಿನ ಶುಭಾಶುಭಗಳಿಗನುಸಾರ ಮನುಷ್ಯನು ಫಲವನ್ನು ಅನುಭವಿಸುತ್ತಾನೆ. ಪ್ರತಿಯೊಂದು ದಿಕ್ಕಿಗೆ ಒಬ್ಬ ಪಾಲಕನಿದ್ದಾನೆ, ಅವನನ್ನು ನಾವು ‘ದಿಕ್ಪಾಲ’ ಎಂದು ಕರೆಯುತ್ತೇವೆ. ಈ ದಿಕ್ಪಾಲಕ ಆ ದಿಕ್ಕಿನ ಅಧಿಪತಿಯಾಗಿರುತ್ತಾನೆ ಮತ್ತು ದಿಕ್ಕಿನ ಕಾರಕತ್ವಕ್ಕೆ ಅನುಗುಣವಾಗಿ ಫಲ ನೀಡುವ ಕಾರ್ಯ ಮಾಡುತ್ತಾನೆ. ವಾಸ್ತುಶಾಸ್ತ್ರದ ದೃಷ್ಟಿಯಿಂದ ಎಲ್ಲಿ ಏನಿರಬೇಕು ಅಥವಾ ಏನಿರಬಾರದು ? ಎಂಬುದನ್ನು ತಿಳಿಯುವ ಮೊದಲು ಪ್ರತಿಯೊಂದು ದಿಕ್ಕಿನ ವೈಶಿಷ್ಟ್ಯ ಮತ್ತು ಕಾರಕತ್ವವನ್ನು ತಿಳಿದರೆ ವಾಸ್ತುವಿನ ನಿಯಮಗಳು ಹೇಗೆ ಸಿದ್ಧವಾದವು ? ಎಂಬುದು ತಿಳಿಯುವುದು.

೧. ಪೂರ್ವ ದಿಕ್ಕು

ಅ. ದೇವತೆ : ಇದು ಪ್ರಥಮ ದಿಕ್ಕಾಗಿದ್ದು ಇದೇ ದಿಕ್ಕಿನಲ್ಲಿ ಪ್ರಾತಃಕಾಲದಲ್ಲಿ ಸೂರ್ಯೋದಯವಾಗುತ್ತದೆ. ಈ ದಿಕ್ಕಿನ ದೇವತೆ ಸೂರ್ಯನಾಗಿದ್ದಾನೆ. ಸೂರ್ಯನಿಂದಲೇ ನಮಗೆ ಆತ್ಮಿಕ ಶಕ್ತಿ ಸಿಗುತ್ತದೆ.

ಆ. ಪಾಲಕ, ವಾಹನ, ನಗರ, ಆಯುಧ : ಈ ದಿಕ್ಕಿನ ಪಾಲಕ ಇಂದ್ರನಾಗಿದ್ದು ಶಚಿ (ಸುಖ ನೀಡುವವಳು) ಅವನ ಪತ್ನಿಯಾಗಿದ್ದಾಳೆ; ಆದ್ದರಿಂದ ಎಲ್ಲಾ ರೀತಿಯ ಸೌಖ್ಯಗಳು ಈ ದಿಕ್ಕಿನಿಂದ ಸಿಗುತ್ತವೆ. ಐರಾವತ (ಅತಿಯಾದ ಶ್ರೀಮಂತಿಕೆ) ಅವನ ವಾಹನವಾಗಿದೆ ಮತ್ತು ಅಮರಾವತಿ ಅವನ ನಗರವಾಗಿರುವುದರಿಂದ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ನಮಗೆ ಪೂರ್ವ ದಿಕ್ಕಿನಿಂದ ಸಿಗುತ್ತವೆ. ಅವನ ಆಯುಧ ವಜ್ರ, ಅಂದರೆ ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ !

ಇ. ಲಾಭ : ಈ ದಿಕ್ಕಿನಲ್ಲಿ ಐಶ್ವರ್ಯಲಕ್ಷ್ಮಿಯ ಸ್ಥಾನವಿದೆ; ಆದ್ದರಿಂದ ವಾಸ್ತುವಿನ ಎಲ್ಲಾ ಗ್ರಂಥಗಳಲ್ಲಿ ಮನೆಯು ಪೂರ್ವಾಭಿಮುಖವಾಗಿರ ಬೇಕು ಎಂಬ ಆಗ್ರಹಿಸಲಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಈ ದಿಕ್ಕು ಮಹತ್ವದ್ದಾಗಿದ್ದು ಇದು ಪ್ರಸಿದ್ಧಿಯನ್ನು ತಂದುಕೊಡುವ ದಿಕ್ಕಾಗಿದೆ. ಅದೇ ರೀತಿ ಸಂತಾನಪ್ರಾಪ್ತಿಗಾಗಿ ಈ ದಿಕ್ಕು ನಿರ್ದೋಷ ವಾಗಿರುವುದು ಆವಶ್ಯಕವಾಗಿರುತ್ತದೆ. ಪೂರ್ವ ದಿಕ್ಕು ಮನುಷ್ಯನ ಜೀವನದಲ್ಲಿ ಪ್ರಸಿದ್ಧಿ, ಆರೋಗ್ಯ ಮತ್ತು ವಿದ್ಯೆಯ ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕು ಯಾವಾಗಲೂ ತೆರೆದಿದ್ದರೆ ಮನೆಯವರಿಗೆ ಸಕಾರಾತ್ಮಕ ಶಕ್ತಿಯ ಲಾಭವಾಗುತ್ತದೆ.

ಶ್ರೀ. ಶ್ರೇಯಸ್ ಪಿಸೋಳಕರ

೨. ಆಗ್ನೇಯ ದಿಕ್ಕು

ಅ. ದೇವತೆ : ಶುಕ್ರನು ದಿಕ್ಕಿನ ದೇವತೆಯಾಗಿದ್ದಾನೆ. ಪ್ರಣಯ, ವಿಲಾಸಿ ವಸ್ತುಗಳು, ಸಂತಾನಸೌಖ್ಯ, ಶಕ್ತಿ, ಅಗ್ನಿ ಇತ್ಯಾದಿ ಸಂಗತಿಗಳು ನಮಗೆ ಆಗ್ನೇಯ ದಿಕ್ಕಿನಿಂದ ಸಿಗುತ್ತವೆ.

ಆ. ಪಾಲಕ, ವಾಹನ, ನಗರ, ಆಯುಧ: ಅಗ್ನಿಯು ಈ ದಿಕ್ಕಿನ ಪಾಲಕನಾಗಿದ್ದಾನೆ. ಸದಾ ಕಾರ್ಯನಿರತ ಮತ್ತು ಶಕ್ತಿಶಾಲಿಯಾಗಿರಲು ಈ ದಿಕ್ಕು ನಮಗೆ ಸಹಾಯ ಮಾಡುತ್ತದೆ. ಅತೀ ಹೆಚ್ಚಿನ ಅಗ್ನಿ ಮನುಷ್ಯನಿಗೆ ತೊಂದರೆದಾಯಕ ಹಾಗೂ ಮತ್ತು ಕಡಿಮೆ ಅಗ್ನಿ ನಿರುಪಯುಕ್ತವಾಗಿದೆ. ಅದೇ ರೀತಿ ಈ ದಿಕ್ಕು ಸಮತೋಲನದಲ್ಲಿದ್ದರೆ ಮಾತ್ರ ವಾಸ್ತುವು ಶಕ್ತಿಯುತವಾಗಿರುತ್ತದೆ. ತೇಜೋವತಿ (ತೇಜಸ್ಸನ್ನು ಪ್ರದಾನಿಸುವ ನಗರ) ಅಗ್ನಿಯ ನಗರ ಹಾಗೂ ಟಗರು ಅಗ್ನಿಯ ವಾಹನವಾಗಿದೆ. ಟಗರು ಎಂದರೆ ಕಾರ್ಯಮಗ್ನತೆ !

ಕೋಪ ಮತ್ತು ಕ್ರೋಧ ಇವು ದಿಕ್ಪಾಲಕನ ಶಸ್ತ್ರ ಗಳಾಗಿರುವುದರಿಂದ ಈ ದಿಕ್ಕು ನಕಾರಾತ್ಮಕವಾಗಿದ್ದರೆ ಮನೆಯಲ್ಲಿ ಕ್ರೋಧದ ವಾತಾವರಣವಿರುತ್ತದೆ. ಆಗ್ನೇಯ ದಿಕ್ಕು ದೋಷಪೂರ್ಣವಾಗಿದ್ದರೆ ಕುಟುಂಬ ದಲ್ಲಿ ವಾಗ್ವಾದ ಮತ್ತು ಜಗಳಗಳಾಗುತ್ತವೆ.

ಇ. ಪತ್ನಿ : ಸ್ವಾಹಾ ಈ ದಿಕ್ಪಾಲಕನ ಪತ್ನಿ ಆಗಿದ್ದಾಳೆ, ಅಂದರೆ ಇಲ್ಲಿನ ಶಕ್ತಿಯ ಸಹಾಯದಿಂದ ವಾಸ್ತುವಿನಲ್ಲಿನ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಅದಕ್ಕಾಗಿ ಈ ದಿಕ್ಕು ಮಹತ್ವದ್ದಾಗಿದೆ.

ಈ. ಲಾಭ : ಧಾನ್ಯಲಕ್ಷ್ಮಿಯ ಸ್ಥಾನ ಆಗ್ನೇಯ ದಿಕ್ಕಿಗೆ ಇರುತ್ತದೆ; ಆದ್ದರಿಂದ ಜೀವನಾವಶ್ಯಕ ಪ್ರಾಣಶಕ್ತಿಯು ಇಲ್ಲಿಂದ ಸಿಗುತ್ತದೆ. ಶುಕ್ರಗ್ರಹವು ವಿಲಾಸ ಮತ್ತು ವ್ಯಸನಗಳಿಗೆ ಕಾರಕವಾಗಿದೆ. ಆದ್ದರಿಂದ ಈ ದಿಕ್ಕು ಹದಗೆಟ್ಟರೆ ವ್ಯಕ್ತಿಯನ್ನೂ ಅದೇ ದಿಕ್ಕಿಗೆ ಕರೆದೊಯ್ಯುತ್ತದೆ. ಶುಕ್ರ ಗ್ರಹವು ಸ್ತ್ರೀ ಗ್ರಹವಾಗಿರುವುದರಿಂದ ಮನೆಯ ಸ್ತ್ರೀಯರ ಆರೋಗ್ಯವನ್ನು ಪರಿಪೂರ್ಣವಾಗಿಡುತ್ತದೆ. ದಿಕ್ಕು ಹದಗೆಟ್ಟರೆ ಸ್ತ್ರೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚಿಕ್ಕ ಮಕ್ಕಳಿಗೆ ಈ ದಿಕ್ಕು ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ವ್ಯಾಯಾಮಶಾಲೆ ಅಥವಾ ಕಠಿಣ ಪರಿಶ್ರಮದ ಸಾಧನಗಳು ಈ ದಿಕ್ಕಿನಲ್ಲಿರುವುದು ಒಳ್ಳೆಯದು !

೩. ದಕ್ಷಿಣ ದಿಕ್ಕು

ಅ. ದೇವತೆ : ಮಂಗಳನು ಈ ದಿಕ್ಕಿನ ದೇವತೆಯಾಗಿದ್ದಾನೆ.

ಆ. ಮಹತ್ವ : ‘ಈ ದಿಕ್ಕು ನಕಾರಾತ್ಮಕವಾಗಿದೆ’, ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ; ಆದರೆ ವಾಸ್ತುಶಾಸ್ತ್ರದ ಪ್ರಕಾರ ಈ ದಿಕ್ಕನ್ನು ನಕಾರಾತ್ಮಕ ಎಂದಿಲ್ಲ. ಯಮನು ಈ ದಿಕ್ಕಿನ ಪಾಲಕನಾಗಿದ್ದಾನೆ. ಯಮನು ಮೃತ್ಯುವಿನ ದೇವತೆಯಾಗಿರುವುದರಿಂದ ಅಂತಿಮ ಸತ್ಯವನ್ನು ಹೇಳುವ ದಿಕ್ಕಾಗಿದೆ. ಆದ್ದರಿಂದ ಭೌತಿಕ ವಿಷಯಗಳಲ್ಲಿ ಮುಳುಗಿದವರಿಗೆ ಇದು ಬೇಡವೆನಿಸುತ್ತದೆ; ಆದರೆ ಈ ದಿಕ್ಕಿನಲ್ಲಿ ‘ಮೋಕ್ಷ’ ಎಂಬ ಪುರುಷಾರ್ಥವಿದೆ. ಭೌತಿಕ ಸುಖವನ್ನು ತ್ಯಾಗ ಮಾಡಿದವರಿಗೆ ಈ ದಿಕ್ಕು ಬಹಳಷ್ಟು ಶಕ್ತಿಯನ್ನು ಪ್ರದಾನಿಸುತ್ತದೆ.

ಇ. ಪತ್ನಿ : ದಿಕ್ಪಾಲಕನ ಪತ್ನಿ ಶ್ಯಾಮಲಾ ಇವಳು ದೇವಿಯಾಗಿದ್ದಾಳೆ. ಇವಳು ರೂಪ-ಬಣ್ಣಕ್ಕಿಂತ ಗುಣಕರ್ಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾಳೆ. ಇಂದಿನ ಕಾಲದಲ್ಲಿ ಗುಣಕರ್ಮಗಳು ಯಾರಿಗೂ ಬೇಡವಾಗಿದ್ದು, ಈ ದಿಕ್ಕು ನಕಾರಾತ್ಮಕವಾಗಿದೆ ಅನಿಸುತ್ತದೆ.

ಈ. ನಗರ, ವಾಹನ, ಆಯುಧ : ಈ ದಿಕ್ಪಾಲಕನ ನಗರ ಸಂಯಮನೀ, ಅಂದರೆ ಬುದ್ಧಿ ಮತ್ತು ಸಂಯಮಾಚರಣಿಗಳಿಗೆ ಇದು ಲಾಭ ನೀಡುತ್ತದೆ. ಈ ದಿಕ್ಕು ಹದಗೆಟ್ಟರೆ ನೀತಿ-ನಿಯಮ, ಸಂಯಮ ಮುಂತಾದ ವಿಷಯಗಳು ಪಾಲನೆಯಾಗುವುದಿಲ್ಲ. ಮಹಿಷ (ಎಮ್ಮೆ) ಈ ದಿಕ್ಕಿನ ವಾಹನವಾಗಿದೆ, ಅಂದರೆ ಆಲಸ್ಯ ಮತ್ತು ತನ್ನಲ್ಲೇ ಮಗ್ನರಾಗಿರುವವರ ಮೇಲೆ ಈ ದಿಕ್ಕು ಪರಿಣಾಮ ಬೀರುತ್ತದೆ.

ಕಾಲಪಾಶ  ದಿಕ್ಪಾಲಕನ ಆಯುಧವಾಗಿದೆ,  ಅಂದರೆ ವಾಸ್ತುವಿನಲ್ಲಿ ದಕ್ಷಿಣ ದಿಕ್ಕು ಸರಿಯಾಗಿದ್ದರೆ ಅನುಕೂಲಕರ ಕಾಲದ ಲಾಭ ನಮಗೆ ಪಡೆಯಲು ಸಾಧ್ಯವಾಗುತ್ತದೆ.

ಉ.ಲಾಭ : ಆದಿಲಕ್ಷ್ಮಿಯ ಸ್ಥಾನ ಈ ದಿಕ್ಕಿನಲ್ಲಿರುತ್ತದೆ. ಈ ದಿಕ್ಕು ಮಂಗಳ ಗ್ರಹದ್ದಾಗಿರುವುದರಿಂದ ಈ ದಿಕ್ಕಿನಿಂದ ಧೈರ್ಯ ಸಿಗುತ್ತದೆ. ಮಂಗಳನು ಸೇನಾಪತಿಯಾಗಿರುವುದರಿಂದ ಬುದ್ಧಿ ಮತ್ತು ಸಾಮರ್ಥ್ಯದ ಬಳಕೆ ಮಾಡಲು ಈ ದಿಕ್ಕು ಪ್ರೇರೇಪಿಸುತ್ತದೆ. ಈ ದಿಕ್ಕು ಲಯದತ್ತ ಒಯ್ಯುವ ವ್ಯವಹಾರಗಳನ್ನು, ಉದಾ. ಜೂಜು, ಮದ್ಯಪಾನ ಇತ್ಯಾದಿ ವಿಷಯಗಳಿಗೆ ಪ್ರೇರೇಪಿಸುತ್ತದೆ. ಇದನ್ನು ‘ಸಂಕಷ್ಟಗಳ ದಿಕ್ಕು’ ಎಂದೂ ನಂಬಲಾಗುತ್ತದೆ. ಈ ದಿಕ್ಕನ್ನು ಆದಷ್ಟು ಮುಚ್ಚಿಟ್ಟರೆ ಒಳ್ಳೆಯದು!

೪. ನೈಋತ್ಯ ದಿಕ್ಕು

ಅ. ದೇವತೆ : ಈ ದಿಕ್ಕಿನ ದೇವತೆ ರಾಹು. ಇದು ಪೃಥ್ವಿತತ್ವದ ದಿಕ್ಕಾಗಿದ್ದು ಸ್ಥಿರತೆಯನ್ನು ಪ್ರದಾನಿಸುತ್ತದೆ; ಆದರೆ ದಿಕ್ಪಾಲಕನಾದ ನಿಋತಿಯು ಅಸುರ ಕುಲದವನಾಗಿರುವುದರಿಂದ ಜಡತ್ವ, ಕಷ್ಟ, ರೋಗ, ಸಂಕಟಗಳು ಸಹ ಈ ದಿಕ್ಕಿನ ಕಾರಕತ್ವಗಳಾಗಿವೆ.

ಆ. ವಾಹನ : ದಿಕ್ಪಾಲಕನಾದ ನಿಋತಿಯು ಮನುಷ್ಯನನ್ನೇ ತನ್ನ ವಾಹನವೆಂದು ತಿಳಿದು ವ್ಯಕ್ತಿಯ ಮನಸ್ಸಿನ ಮೇಲೆ ಆರೂಢನಾಗಿ ಅವನ ಬುದ್ಧಿಯನ್ನು ಮುಗಿಸುವ ಕಾರ್ಯವನ್ನು ಮಾಡುತ್ತಾನೆ.

ಇ.ಲಾಭ : ಇದು ಭೂತ, ಪ್ರೇತ,ಪಿಶಾಚ, ರಾಕ್ಷಸ ಇಂತಹ ಕೆಟ್ಟ ಶಕ್ತಿಗಳ ದಿಕ್ಕಾಗಿದೆ. ಆದ್ದರಿಂದ ಈ ದಿಕ್ಕು ಹದಗೆಟ್ಟರೆ ಕೆಟ್ಟ ಶಕ್ತಿಗಳ ಕಾಟ ವಾಸ್ತುವಿನಲ್ಲಿ ಹೆಚ್ಚಾಗಬಹುದು. ಈ ದಿಕ್ಕನ್ನು ಒಂದು ವೇಳೆ ನಾವು ಅನುಕೂಲಕರವಾಗಿಸಿದರೆ, ಮನುಷ್ಯನ ಮೇಲೆ ಆರೂಢನಾಗಿ ನಿಋತಿಯು ಮನೆ ಮಾಲೀಕನಿಗೆ ಅಧಿಪತ್ಯವನ್ನೂ ಪ್ರದಾನಿಸುತ್ತಾನೆ; ಆದ್ದರಿಂದ ‘ಈ ದಿಕ್ಕಿನಲ್ಲಿ ಮಾಲೀಕನ ಕೊಠಡಿ ಇರಬೇಕು’, ಎಂದು ಶಾಸ್ತ್ರಕಾರರು ಹೇಳಿದ್ದಾರೆ.

ಈ. ಪತ್ನಿ,ನಗರ : ದೀರ್ಘಾದೇವಿಯು ಈ ದಿಕ್ಪಾಲಕನ ಪತ್ನಿಯಾಗಿದ್ದು ಈ ದಿಕ್ಕಿನಿಂದ ಸಿಗುವ ಪರಿಣಾಮಗಳು ದೀರ್ಘ ಕಾಲ ಉಳಿಯುತ್ತವೆ. ಕೃಷ್ಣಾಂಗವು ನಗರವಾಗಿದೆ, ಅಂದರೆ ಕೃಷ್ಣಕೃತ್ಯಗಳನ್ನು ಮಾಡಲು ಪ್ರವೃತ್ತರನ್ನಾಗಿಸುವ ದಿಕ್ಕು ಇದಾಗಿದೆ, ಆದ್ದರಿಂದ ಇದನ್ನು ಯೋಗ್ಯ ಮತ್ತು ಸಕಾರಾತ್ಮಕವಾಗಿ ಇಟ್ಟರೆ ಮಾತ್ರ ವಾಸ್ತುವಿನಲ್ಲಿ ನೈತಿಕತೆ ಉಳಿಯುತ್ತದೆ.

ಉ. ಆಯುಧ :ಕುಂತ  ಅಂದರೆಪಾಶ, ಇದು ಇವನ ಆಯುಧವಾಗಿದೆ, ಅಂದರೆ ಮೋಹಪಾಶದಲ್ಲಿ ಸಿಲುಕಿಸುವಂತದ್ದಾಗಿದೆ. ಇದು ಧೈರ್ಯಲಕ್ಷ್ಮಿಯ ದಿಕ್ಕಾಗಿರುವುದರಿಂದ ಅದು ಸರಿಯಾಗಿದ್ದರೆ ವಾಸ್ತುವಿನಲ್ಲಿರುವ ಜನರಿಗೆ ಧೈರ್ಯವನ್ನು ಪ್ರದಾನಿಸುತ್ತದೆ.

ಈ ದಿಕ್ಕಿನಲ್ಲಿ ದೊಡ್ಡ ದೋಷಗಳು ಉಂಟಾದರೆ ವೈಫಲ್ಯ, ಅಪಘಾತ, ನಿರಾಶೆ, ಆತ್ಮಹತ್ಯೆಯಂತಹ ಪರಿಣಾಮಗಳು ಉಂಟಾಗಬಹುದು. ಈ ದಿಕ್ಕು ಎಷ್ಟರ ಮಟ್ಟಿಗೆ ಮುಚ್ಚಿರುತ್ತದೆಯೋ ಅಷ್ಟು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಈ ದಿಕ್ಕು ಅಶುಭ ಪರಿಣಾಮವನ್ನು ನೀಡುತ್ತದೆ.

– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಗೋವಾ. (೨೩.೧೨.೨೦೨೫)