ಬಾಂಗ್ಲಾದೇಶದಲ್ಲಿನ ದೀಪು ಚಂದ್ರ ದಾಸ್ ಹತ್ಯೆ ಪ್ರಕರಣ: ದೇಶಾದ್ಯಂತ ಹಿಂದೂಗಳಿಂದ ಬೃಹತ್ ಪ್ರತಿಭಟನೆ! : All India Protest

ನವ ದೆಹಲಿ – ಬಾಂಗ್ಲಾದೇಶದ ದೀಪು ಚಂದ್ರ ದಾಸ್ ಅವರ ಭೀಕರ ಹತ್ಯೆಯನ್ನು ಖಂಡಿಸಿ ಈಗ ಭಾರತದಲ್ಲೂ ಪ್ರತಿಭಟನೆಯ ಕಿಚ್ಚು ಹತ್ತಿಕೊಂಡಿದೆ. ಡಿಸೆಂಬರ್ 23 ರಂದು ಬೆಳಿಗ್ಗೆಯಿಂದಲೇ ರಾಜಧಾನಿ ದೆಹಲಿ ಸೇರಿದಂತೆ ಜಮ್ಮು, ಪಾಟಲಿಪುತ್ರ, ಕೋಲಕಾತಾ, ಭೋಪಾಲ, ಸೂರತ, ಭಾಗ್ಯನಗರ ಮುಂತಾದ ಅನೇಕ ನಗರಗಳಲ್ಲಿ ಬಾಂಗ್ಲಾದೇಶದ ರಾಯಭಾರ ಕಚೇರಿ ಮತ್ತು ಹೈಕಮಿಷನ್ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಹಮ್ಮದ್ ಯೂನಸ್ ಅವರ ಪ್ರತಿಕೃತಿಯನ್ನು ದಹಿಸಲಾಯಿತು. ಕೆಲವು ಸ್ಥಳಗಳಲ್ಲಿ ಹೈಕಮಿಷನ್ ಕಚೇರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಆಂದೋಲನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಭಾಗವಹಿಸಿದ್ದರು. ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಶಿವಸೇನೆ, ಹಿಂದೂ ವಾಹಿನಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಂತ್ರಸ್ತ ದೀಪು ಚಂದ್ರ ದಾಸ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಈ ಸ್ಥಳಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕೋಲಕಾತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾಧು-ಸಂತರು ಮತ್ತು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ!

ಕೋಲಕಾತಾದಲ್ಲಿ ದೀಪು ಚಂದ್ರ ದಾಸ್ ಹತ್ಯೆಯ ವಿರುದ್ಧ ಹಿಂದೂತ್ವನಿಷ್ಠರು ಪ್ರತಿಭಟನೆ ನಡೆಸುತ್ತಿದ್ದರು. ಇದರಲ್ಲಿ ಸಾಧು-ಸಂತರು ಮತ್ತು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರ ಮೇಲೆ ನಿರ್ದಯವಾಗಿ ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಈ ವೇಳೆ ಸಾಧು-ಸಂತರೂ ಕೂಡ ಏಟು ತಿಂದಿದ್ದು, ಹಲವರು ಗಾಯಗೊಂಡಿದ್ದಾರೆ. (ಮಮತಾ ಬ್ಯಾನರ್ಜಿ ಅವರ ಹಿಂದೂದ್ವೇಷಿ ಆಡಳಿತದಲ್ಲಿ ಇದಕ್ಕಿಂತ ಬೇರೇನು ನಿರೀಕ್ಷಿಸಲು ಸಾಧ್ಯ? ಇಂತಹ ಸರಕಾರವನ್ನು ವಿಸರ್ಜಿಸುವುದರಲ್ಲಿಯೇ ದೇಶದ ಹಿತ ಅಡಗಿದೆ! – ಸಂಪಾದಕರು)

ಬಾಂಗ್ಲಾದೇಶದಲ್ಲಿ ಕಲಿಯುತ್ತಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ರಕ್ಷಿಸಿ! – ಪ್ರಧಾನಿ ಮೋದಿಯವರಿಗೆ ‘ಆಲ್ ಇಂಡಿಯಾ ಮೆಡಿಕಲ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ಮನವಿ

ಬಾಂಗ್ಲಾದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ‘ಆಲ್ ಇಂಡಿಯಾ ಮೆಡಿಕಲ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿದೆ.

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯು ಅತ್ಯಂತ ಅಸ್ಥಿರವಾಗಿದ್ದು, ವಿದ್ಯಾರ್ಥಿಗಳು ಭಯ ಮತ್ತು ಅಸುರಕ್ಷಿತ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಸಂಘಟನೆಯು ಹೇಳಿದೆ. ಕೇಂದ್ರ ಸರಕಾರವು ರಾಜತಾಂತ್ರಿಕ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ರಾಯಭಾರ ಕಚೇರಿಗಳು ಸಕ್ರಿಯ ಪಾತ್ರ ಹಾಗೂ ವಿದ್ಯಾರ್ಥಿ ಮತ್ತು ಅವರ ಕುಟುಂಬದೊಂದಿಗೆ ಪಾರದರ್ಶಕತೆಯ ಸಂವಾದ ನಡೆಸಬೇಕು ಎಂದು ಒತ್ತಾಯಿಸಿದೆ.

ಜಮ್ಮು ಉಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್‌ನಿಂದ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ಜಮ್ಮು ಉಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್ ತೀವ್ರ ಪ್ರತಿಭಟನೆ ನಡೆಸಿತು. ಈ ವೇಳೆ ನ್ಯಾಯವಾದಿಗಳು ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯನ್ನು ಖಾತರಿ ಪಡಿಸುವಂತೆ ಘೋಷಣೆಗಳನ್ನು ಕೂಗಿದರು. ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ನಿರ್ಮಲ ಕೊತವಾಲ ಮಾತನಾಡಿ, ಜಮ್ಮುವಿನ ನಾಗರಿಕರು ಬಾಂಗ್ಲಾದೇಶದ ಹಿಂದೂಗಳ ಬೆಂಬಲಕ್ಕೆ ದೃಢವಾಗಿ ನಿಂತಿದ್ದಾರೆ. ಕೇಂದ್ರ ಸರಕಾರವು ಬಾಂಗ್ಲಾ ಸರಕಾರದ ವಿರುದ್ಧ ಕಠಿಣ ನಿಲುವು ತಳೆಯಬೇಕು ಎಂದರು. ಅಲ್ಲದೆ, ಯಾವುದೇ ರೀತಿಯ ಭದ್ರತಾ ಲೋಪ ಆಗದಂತೆ ಜಮ್ಮುವಿನಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶಿ ನಾಗರಿಕರು ಮತ್ತು ರೋಹಿಂಗ್ಯಾಗಳ ಬಗ್ಗೆ ಆಳವಾದ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು. ಬಾರ್ ಅಸೋಶಿಯೆಶನ್ ನಿಂದ ಈ ವಿಷಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಲು ಒತ್ತು ನೀಡಿದರು.

ಬಾಂಗ್ಲಾದೇಶದಿಂದ ವೀಸಾ ಸೇವೆಗಳು ತಾತ್ಕಾಲಿಕ ಸ್ಥಗಿತ

ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಬಾಂಗ್ಲಾದೇಶವು ನವ ದೆಹಲಿಯಲ್ಲಿರುವ ತನ್ನ ಹೈಕಮಿಷನ್ ಕಚೇರಿ ಹಾಗೂ ತ್ರಿಪುರಾದಲ್ಲಿನ ಸಹಾಯಕ ಕಚೇರಿಗಳಲ್ಲಿ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅನಿವಾರ್ಯ ಪರಿಸ್ಥಿತಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಬಂಗಾಳದ ಸಿಲಿಗುರಿಯಲ್ಲಿ ವೀಸಾ ಅರ್ಜಿ ಪ್ರಕ್ರಿಯೆ ನಡೆಸುತ್ತಿದ್ದ ಖಾಸಗಿ ಸಂಸ್ಥೆಯೂ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

ಸಂಪಾದಕೀಯ ನಿಲುವು

ಹಿಂದೂಗಳು ದೇಶಾದ್ಯಂತ ಪ್ರತಿಭಟನೆ ನಡೆಸಿರುವುದು ಶ್ಲಾಘನೀಯ; ಆದರೆ ಇದು ಕೇವಲ ಒಂದು ದಿನಕ್ಕೆ ಅಥವಾ ಕೆಲವು ಗಂಟೆಗಳಿಗೆ ಸೀಮಿತವಾಗಬಾರದು. ಬಾಂಗ್ಲಾದೇಶದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲಿ ಹಿಂದೂಗಳು ಸುರಕ್ಷಿತವಾಗುವವರೆಗೆ ಈ ಆಕ್ರೋಶವು ವ್ಯಕ್ತವಾಗುತ್ತಲೇ ಇರಬೇಕು!