ಕ್ರಾಂತಿಕಾರಿಗಳು ವಾಸವಾಗಿದ್ದ ಲಂಡನ್‌ನ ‘ಇಂಡಿಯಾ ಹೌಸ್’ ಅನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾದ ಮಹಾರಾಷ್ಟ್ರ ಸರಕಾರ!

ಮುಂಬಯಿ – ಶಿಕ್ಷಣದ ನಿಮಿತ್ತ ಲಂಡನ್‌ಗೆ ಹೋಗಿ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಸ್ವಾತಂತ್ರ್ಯವೀರ ಸಾವರ್ಕರ್, ಮದನಲಾಲ್ ಧಿಂಗ್ರಾ ಅವರಂತಹ ಅನೇಕ ಕ್ರಾಂತಿಕಾರಿಗಳು ವಾಸವಾಗಿದ್ದ ಅಲ್ಲಿನ ‘ಇಂಡಿಯಾ ಹೌಸ್’ ಅನ್ನು ವಶಕ್ಕೆ ತೆಗೆದುಕೊಳ್ಳಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಮಹಾರಾಷ್ಟ್ರ ಸರಕಾರವು ‘ಇಂಡಿಯಾ ಹೌಸ್’ ಅನ್ನು ಸ್ಮಾರಕವಾಗಿ ಸಂರಕ್ಷಿಸಲಿದೆ. ರಾಜ್ಯದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೆಲಾರ್ ಈ ಮಾಹಿತಿ ನೀಡಿದ್ದಾರೆ.

ನವೆಂಬರ್ 12 ರಂದು, ಸಚಿವಾಲಯದಲ್ಲಿ ಶಾಸಕಿ ದೇವಯಾನಿ ಫರಂದೆ, ಸಾಮಾನ್ಯ ಆಡಳಿತ ವಿಭಾಗ, ಸಾಂಸ್ಕೃತಿಕ ವ್ಯವಹಾರಗಳ ವಿಭಾಗ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಆಶಿಶ್ ಶೆಲಾರ್ ಅವರು ಈ ಕುರಿತು ಸಭೆ ನಡೆಸಿದರು. ಈ ಸಭೆಯಲ್ಲಿ ‘ಮಿತ್ರಾ’ ಎಂಬ ಸರಕಾರಿ ಸಂಸ್ಥೆಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ‘ಇಂಡಿಯಾ ಹೌಸ್’ ವಶಕ್ಕೆ ತೆಗೆದುಕೊಳ್ಳುವ ಕುರಿತು ವರದಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಯಿತು.

ನಾಗ್ಪುರದ ರಘೂಜಿರಾಜೆ ಭೋಸಲೆ ಅವರ ಐತಿಹಾಸಿಕ ಕತ್ತಿಯನ್ನು ತರಲು ಲಂಡನ್ ಪ್ರವಾಸದಲ್ಲಿದ್ದಾಗ ಆಶಿಶ್ ಶೆಲಾರ್ ಅವರು ‘ಇಂಡಿಯಾ ಹೌಸ್’ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಲಂಡನ್‌ನ ಕೆಲವು ಭಾರತೀಯರು ‘ಇಂಡಿಯಾ ಹೌಸ್’ ಖರೀದಿಸುವ ವಿಷಯವನ್ನು ಅವರ ಗಮನಕ್ಕೆ ತಂದಿದ್ದರು. ನಾಶಿಕ್‌ನ ಶಾಸಕಿ ದೇವಯಾನಿ ಫರಂದೆ ಕೂಡ ‘ಇಂಡಿಯಾ ಹೌಸ್’ ಅನ್ನು ವಶಕ್ಕೆ ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು.