ಜನವರಿ ೨೨, ೨೦೨೪ ಕೇವಲ ಒಂದು ದಿನವಾಗಿರಲಿಲ್ಲ, ಬದಲಿಗೆ ಅದು ಹೊಸ ಯುಗದ ಆರಂಭವಾಗಿತ್ತು. ಈ ಐತಿಹಾಸಿಕ ಕ್ಷಣದ ಕೇಂದ್ರಬಿಂದುವಾಗಿದ್ದರು ಶಿಲ್ಪಿ ಶ್ರೀ. ಅರುಣ ಯೋಗಿರಾಜ! ಇಂತಹ ಶಿಲ್ಪಿಯು ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳಿಗೆ ಆಕಾರ ನೀಡಿದರು. ಅವರ ರಚನೆ ಕೇವಲ ಒಂದು ಮೂರ್ತಿಯಲ್ಲ, ಬದಲಿಗೆ ೫೦೦ ವರ್ಷಗಳಿಗಿಂತಲೂ ಹೆಚ್ಚು ಕಾಲದ ಅಪರಿಮಿತ ತ್ಯಾಗ, ಹೋರಾಟ ಮತ್ತು ತೀವ್ರ ಪ್ರಾರ್ಥನೆಗಳ ಸಂಗಮವಾಗಿದೆ. ಕೊನೆಗೂ ತಾತ್ಕಾಲಿಕ ಛಾವಣಿಯಿಂದ ಹೊರಬಂದು, ಭವ್ಯವಾದ ಅಯೋಧ್ಯೆ ಮಂದಿರದಲ್ಲಿ ದೈವೀ ಶ್ರೀರಾಮಲಲ್ಲಾರನ್ನು ಅವರ ಸ್ವಂತ ಸ್ಥಾನ ಅಲಂಕರಿಸುವುದನ್ನು ಸಂಪೂರ್ಣ ಭಾರತ ನೋಡಿದ ಕ್ಷಣವದು.
ವಿಶೇಷ ಮಾಲಿಕೆ
ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
೧. ಶಿಲ್ಪಿ ಕುಟುಂಬ
ಶ್ರೀ. ಅರುಣ ಯೋಗಿರಾಜ ಅವರು ಡಿಸೆಂಬರ್ ೧೫, ೧೯೮೩ ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಅವರಿಗೆ ಶಿಲ್ಪಕಲೆಯ ಸ್ಫೂರ್ತಿ ಮತ್ತು ಅದರ ಕುರಿತಾದ ಪ್ರಾಥಮಿಕ ಶಿಕ್ಷಣವು ಅವರ ಮನೆಯಿಂದಲೇ ದೊರಕಿತು, ಶಿಲ್ಪಕಲೆಯನ್ನು ಅವರು ತಮ್ಮ ಮೊದಲ ಶಾಲೆ ಎಂದು ಪರಿಗಣಿಸುತ್ತಾರೆ. ಚಿಕ್ಕಂದಿನಿಂದಲೂ, ಅವರ ತಂದೆ ಸಾಮಾನ್ಯ ಕಲ್ಲುಗಳನ್ನು ದೇವರುಗಳ ಮೂರ್ತಿಗಳಾಗಿ ಮತ್ತು ಮನೆಗಳಲ್ಲಿ ಪೂಜಿಸುವ ದೇವಾಲಯಗಳಾಗಿ ಪರಿವರ್ತಿಸುವುದನ್ನು ನೋಡಿ ಅವರು ಮಂತ್ರಮುಗ್ಧರಾದರು. ಈ ಆಕರ್ಷಣೆ ಅವರ ಮನಸ್ಸಿನಲ್ಲಿ ೮ನೇ ವಯಸ್ಸಿನಲ್ಲಿ ಬೇರೂರಿತು. ಅವರು ತಮ್ಮ ಮನೆಯ ಪಕ್ಕದಲ್ಲಿರುವ ಕೌಟುಂಬಿಕ ಸ್ಟುಡಿಯೋದಲ್ಲಿ ಗಂಟೆಗಟ್ಟಲೆ ಕಲ್ಲುಗಳೊಂದಿಗೆ ಆಟವಾಡುತ್ತಿದ್ದರು.
ಶ್ರೀ. ಅರುಣ ಯೋಗಿರಾಜ ಅವರ ಕುಟುಂಬ![]()
|
ಶಿಲ್ಪಕಲೆ ಅವರ ೫ ತಲೆಮಾರುಗಳ ಕೌಟುಂಬಿಕ ಪರಂಪರೆಯಾಗಿದೆ. ಅವರ ತಾತ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದರು ಮತ್ತು ೧೯೮೩ ರಲ್ಲಿ ಭಾರತದ ರಾಷ್ಟ್ರಪತಿಗಳು ಅವರನ್ನು ಸನ್ಮಾನಿಸಿದ್ದರು. ಅದೇ ರೀತಿ ಅವರ ತಂದೆಯವರಿಗೆ ಕಲೆ ಮತ್ತು ಶಿಲ್ಪಕಲೆಗಾಗಿ ‘ರಾಜ್ಯ ಪ್ರಶಸ್ತಿ’ಯಿಂದ ಸನ್ಮಾನಿಸಲಾಗಿದೆ. ಶ್ರೀ. ಅರುಣ ಯೋಗಿರಾಜ ಅವರು ವಿಜೇತಾ ಮೋಹನ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.
ಶ್ರೀ. ಅರುಣ ಯೋಗಿರಾಜ ಅವರು ಕೆತ್ತಿದ ಪ್ರಮುಖ ಮೂರ್ತಿಗಳು
೧. ಅಯೋಧ್ಯೆ (ಉತ್ತರಪ್ರದೇಶ) ಶ್ರೀರಾಮಲಲ್ಲಾನ ಮೂರ್ತಿ

ಶ್ರೀ. ಅರುಣ ಯೋಗಿರಾಜ ಅವರ ಜೀವನದ ಅತ್ಯಂತ ಗಮನಾರ್ಹ ಕ್ಷಣವೆಂದರೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತುವುದು. ಈ ಮಹತ್ವದ ಕಾರ್ಯವು ಸವಾಲುಗಳಿಂದ ಕೂಡಿತ್ತು. ಆದರೂ ಶ್ರೀ. ಯೋಗಿರಾಜ ಅವರ ಶ್ರದ್ಧೆ, ನಿಷ್ಠೆ, ಛಲ ಮತ್ತು ಕಲಾತ್ಮಕ ತೇಜಸ್ಸಿನಿಂದ ಒಂದು ಅತ್ಯುತ್ತಮ ದೈವಿಕ ಮೂರ್ತಿಯು ಸಾಕಾರಗೊಂಡಿತು. ಈ ಮೂರ್ತಿಯು ಭಾರತದ ಕೋಟ್ಯಂತರ ರಾಮಭಕ್ತರ ಹೃದಯವನ್ನು ಭಾವಪರವಶಗೊಳಿಸಿತು. ರಾಮಲಲ್ಲಾನ ಮೂರ್ತಿಯನ್ನು ಕೆತ್ತಲು ಶ್ರೀ. ಯೋಗಿರಾಜ ಅವರ ಆಯ್ಕೆ ಕೇವಲ ಅದೃಷ್ಟದ ಭಾಗವಾಗಿರಲಿಲ್ಲ, ಬದಲಿಗೆ ಅದು ಅವರ ಅವಿರತ ಹೋರಾಟ ಮತ್ತು ಅವರ ನಂಬಿಕೆಯ ಅಮೂರ್ತ ಕ್ಷಣವಾಗಿತ್ತು.
೨. ಕೇದಾರನಾಥ (ಉತ್ತರಾಖಂಡ) ದ ಆದಿ ಶಂಕರಾಚಾರ್ಯರ ಮೂರ್ತಿ
ಶ್ರೀ. ಅರುಣ ಯೋಗಿರಾಜ ಅವರು ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಮೂರ್ತಿಯನ್ನು ಕೆತ್ತಿದ್ದಾರೆ. ಅವರಿಗೆ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮೂರ್ತಿಯ ಸ್ವರೂಪವನ್ನು ಪ್ರಸ್ತುತಪಡಿಸುವ ಅವಕಾಶ ಸಿಕ್ಕಿತು. ಅವರು ಆದಿ ಶಂಕರಾಚಾರ್ಯರ ಮೂರ್ತಿಯನ್ನು ಮಾಡಲು ೯ ತಿಂಗಳು ಪ್ರತಿದಿನ ೧೪ ಗಂಟೆಗಳ ಕಾಲ ಕೆಲಸ ಮಾಡಿದರು. ಈ ಮೂರ್ತಿಯನ್ನು ತಯಾರಿಸುತ್ತಿರುವಾಗ ಅರುಣ ಅವರ ಮಾರ್ಗದರ್ಶಕರು ಮತ್ತು ಪ್ರಮುಖ ಆಧಾರವಾಗಿದ್ದ ಅವರ ತಂದೆ ನಿಧನರಾದರು. ಇದು ಅವರಿಗೆ ಬಹಳ ದೊಡ್ಡ ಆಘಾತವಾಗಿತ್ತು; ಆದರೆ ಅವರು ತಮ್ಮ ದುಃಖವನ್ನು ಬದಿಗಿಟ್ಟು ಒಂದು ಅತ್ಯುತ್ತಮ ಮೂರ್ತಿಯನ್ನು ಕೆತ್ತಿದರು ಮತ್ತು ಈ ಮೂಲಕ ತಮ್ಮ ತಂದೆಗೆ ಯೋಗ್ಯ ಶ್ರದ್ಧಾಂಜಲಿ ಅರ್ಪಿಸಿದರು. ಅವರು ೧೮ ಕಲ್ಲಿನ ತುಂಡುಗಳಿಂದ ಮಾಡಲ್ಪಟ್ಟ ೧೨ ಅಡಿ ಎತ್ತರದ ಆದಿ ಶಂಕರಾಚಾರ್ಯರ ಒಂದು ಅತ್ಯುತ್ತಮ ಮೂರ್ತಿಯನ್ನು ಸಿದ್ಧಪಡಿಸಿದರು. ಆ ಮೂರ್ತಿ ಸಂಪೂರ್ಣವಾಗಿ ಜೋಡಿಸಲ್ಪಟ್ಟಿದ್ದರೂ ಅದನ್ನು ಗುರುತಿಸುವುದು ಸಾಧ್ಯವಿರಲಿಲ್ಲ. ಈ ಸಾಧನೆಯಿಂದ ಅವರ ಕುಟುಂಬವು ಬಹಳ ಹೆಮ್ಮೆ ಪಟ್ಟಿತು.
೩. ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಪ್ರತಿಮೆ
ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ೧೨೫ ನೇ ಜಯಂತಿಗೂ ಮುಂಚೆ ಶ್ರೀ. ಯೋಗಿರಾಜ ಅವರ ಕೆಲಸವು ಸಾಂಸ್ಕೃತಿಕ ಸಚಿವಾಲಯದ ಗಮನ ಸೆಳೆಯಿತು. ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲು ನೇತಾಜಿಯವರ ಮೂರ್ತಿಯನ್ನು ಕೆತ್ತಲು ಅವರಿಗೆ ಸೂಚಿಸಲಾಯಿತು. ಶ್ರೀ. ಯೋಗಿರಾಜ ಅವರು ಶ್ರಮವಹಿಸಿ ಭಾರತದ ಅತಿದೊಡ್ಡ ಗ್ರಾನೈಟ್ನ ಏಕಶಿಲಾ ವಾಸ್ತವಿಕ ಪ್ರತಿಮೆಯನ್ನು ಕೆತ್ತಿದರು. ಈ ಪ್ರತಿಮೆಯು ೩೦ ಅಡಿ ಎತ್ತರವಿದ್ದು, ೨೮೦ ಟನ್ ತೂಕದ ಒಂದೇ ಕಲ್ಲಿನಿಂದ ಕೆತ್ತಲಾಗಿದೆ, ಇದನ್ನು ಪೂರ್ಣಗೊಳಿಸಲು ಎರಡೂವರೆ ತಿಂಗಳುಗಳು ಬೇಕಾದವು ಮತ್ತು ಅದರಿಂದ ೬೦ ಟನ್ ತೂಕದ ಶಿಲ್ಪವು ರೂಪುಗೊಂಡಿತು. ಮುಖ್ಯವಾಗಿ ಈ ಪ್ರತಿಮೆಯನ್ನು ವಿಶ್ವದ ಅತ್ಯಂತ ಕಠಿಣ ಗ್ರಾನೈಟ್ ಕಲ್ಲುಗಳಲ್ಲಿ ಒಂದಾದ ಒಂದು ಗ್ರಾನೈಟ್ ಅನ್ನು ಬಳಸಿ ತಯಾರಿಸಲಾಗಿರುವುದು ಅವರ ಸಾಧನೆಯನ್ನು ಇನ್ನಷ್ಟು ಗಮನಾರ್ಹವಾಗಿಸುತ್ತದೆ. ಈ ಸಾಧನೆಯ ಬಳಿಕ ಶ್ರೀ. ಯೋಗಿರಾಜ ಅವರು ರಾಷ್ಟ್ರೀಯ ಸ್ಥರದಲ್ಲಿ ಮಹತ್ವದ ಮೂರ್ತಿಗಳನ್ನು ನಿರ್ಮಿಸಿದ ದೇಶದ ‘ಅತ್ಯಂತ ಕಿರಿಯ ಶಿಲ್ಪಿ’ ಎನಿಸಿಕೊಂಡರು.
೨. ಶಿಲ್ಪಕಲೆ ಒಂದು ‘ವೃತ್ತಿ’ಯಾಗಿ
ಪ್ರಾರಂಭದಲ್ಲಿ ಅವರು ‘ಶಿಲ್ಪಶಾಸ್ತ್ರ’ ಎಂಬ ಪ್ರಾಚೀನ ಕಲೆಯನ್ನು ಅಭ್ಯಾಸ ಮಾಡಿದರು. ಈ ಸಾಂಪ್ರದಾಯಿಕ ಜ್ಞಾನವು ನಿಖರವಾದ ಅಳತೆಗಳನ್ನು ಆಧರಿಸಿದೆ, ಇದನ್ನು ಅವರ ಪದ್ಧತಿಯಲ್ಲಿ ಅನೇಕ ಬಾರಿ ‘ಥಡಂ’ ಅಥವಾ ‘ನಿಖರತೆಗಾಗಿ ಅಕ್ಕಿ ಕಾಳುಗಳನ್ನು ಬಳಸುವುದು’ ಎಂದು ಕರೆಯಲಾಗುತ್ತದೆ. ೧೧ ನೇ ವಯಸ್ಸಿನಲ್ಲಿ ತಂದೆಯೊಂದಿಗೆ ಶಿಲ್ಪಗಳನ್ನು ಕೆತ್ತುತ್ತಿರುವಾಗ ಅವರು ಮೊದಲ ಬಾರಿಗೆ ಶಿಲ್ಪಕಲೆಯ ಉಪಕರಣಗಳನ್ನು ಸ್ಪರ್ಶಿಸಿದರು ಮತ್ತು ಕೆಲವು ವರ್ಷಗಳ ನಂತರ ಅವರು ಹಿರಿಯ ಕಲಾವಿದರೊಂದಿಗೆ ಸ್ಪರ್ಧಿಸಲು ಪ್ರಾರಂಭಿಸಿದರು. ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಜನವರಿ ೧೪, ೨೦೦೫ ರಂದು ಮಕರ ಸಂಕ್ರಾಂತಿಯ ಶುಭ ಮುಹೂರ್ತದಲ್ಲಿ ಕೇವಲ ೨ ದಿನಗಳಲ್ಲಿ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಕೆತ್ತುವ ಮೂಲಕ ಅವರು ತಮ್ಮ ವೃತ್ತಿಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದರು. ಕಾಕತಾಳೀಯವೆಂದರೆ ಅಯೋಧ್ಯೆಯ ರಾಮಲಲ್ಲಾನ ಮೂರ್ತಿಗೂ ಜನವರಿ ೧೪, ೨೦೨೪ ರಂದು ಮಕರ ಸಂಕ್ರಾಂತಿಯ ದಿನದಂದು ಅಂತಿಮ ರೂಪ ನೀಡಲಾಯಿತು.
ಅನೇಕ ವರ್ಷಗಳ ಅಭ್ಯಾಸದ ನಂತರ ಅವರು ‘ಮೈಸೂರು ಶಿಲ್ಪಕಲಾ ಶೈಲಿ’ಯಲ್ಲಿ ಪರಿಣತಿ ಪಡೆದರು, ಇದು ‘ಹೊಯ್ಸಳ ವಾಸ್ತುಶಿಲ್ಪ’ದಲ್ಲಿ ಬಳಸಲಾಗುವ ಪದ್ಧತಿಗಳ ಸುಧಾರಿತ ಆವೃತ್ತಿಯಾಗಿದೆ. ಅವರು ತಮ್ಮ ಕೌಶಲ್ಯವನ್ನು ಎಷ್ಟು ನಿಪುಣರನ್ನಾಗಿಸಿಕೊಂಡಿದ್ದಾರೆಂದರೆ, ಇಂದು ಅವರು ಯಾವುದೇ ಕಲ್ಲಿನಿಂದ ಗಮನಾರ್ಹ ಮತ್ತು ವಾಸ್ತವಿಕ ಶಿಲ್ಪಗಳನ್ನು ಕೆತ್ತಬಲ್ಲರು. ಆದಾಗ್ಯೂ ಅವರ ಹಾದಿಯು ಕೇವಲ ಕಲಾತ್ಮಕ ಪ್ರಯತ್ನಗಳಿಂದ ಕೂಡಿರಲಿಲ್ಲ. ಇತರರಂತೆ ಅವರು ವೃತ್ತಿಪರ ಶಿಕ್ಷಣವನ್ನು ಪಡೆಯಬೇಕಾಯಿತು. ಅವರು ‘ಎಮ್.ಬಿ.ಎ.’ ಪದವಿಯನ್ನು ಪೂರ್ಣಗೊಳಿಸಿ ವೃತ್ತಿಪರ ಜಗತ್ತನ್ನು ಪ್ರವೇಶಿಸಿದರು. ಹೀಗಿದ್ದರೂ ಶಿಲ್ಪಕಲೆಯ ಮೇಲಿನ ಒಲವು ಅವರಲ್ಲಿ ಹಾಗೆಯೇ ಉಳಿಯಿತು. ಬಹುಶಃ ಅದು ಅವರ ಕೈಗಳಿಗಾಗುವ ಕಲ್ಲಿನ ಸ್ಪರ್ಶ, ಶಿಲ್ಪಕಲೆ ಮತ್ತು ವಸ್ತುಗಳ ನಡುವಿನ ಮೌನ ಸಂವಹನ ಅಥವಾ ಅವರ ಕುಟುಂಬದ ಪರಂಪರೆಯನ್ನು ಮುಂದುವರಿಸುವ ತೀವ್ರ ಆಸೆಯಿಂದಾಗಿ ಆ ಒಲವು ಹಾಗೆಯೇ ಉಳಿದಿರಬಹುದು. ೨೦೦೮ರಲ್ಲಿ ಅರುಣ ಅವರು ತಮ್ಮ ಜೀವನದಲ್ಲಿ ಮಹತ್ವದ ತಿರುವು ನೀಡುವ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಅವರು ಶಿಲ್ಪಿಗಳಿಗಾಗಿ ಸ್ಟುಡಿಯೋವನ್ನು ಆಯ್ಕೆ ಮಾಡಿಕೊಂಡರು. ಈ ಬದಲಾವಣೆಯು ಅನೇಕ ಸವಾಲುಗಳಿಂದ ಕೂಡಿತ್ತು. ಶಿಲ್ಪಕಲೆಯಲ್ಲಿ ಅವರು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡರು.
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಲು ಅರುಣ ಯೋಗಿರಾಜ ೬ ತಿಂಗಳು ಋಷಿಯಂತೆ ಜೀವನ ನಡೆಸಿದರು!
ಶ್ರೀ. ಅರುಣ ಯೋಗಿರಾಜ ಅವರಿಗೆ ಶ್ರೀರಾಮಲಲ್ಲಾನ ಮೂರ್ತಿಯನ್ನು ಮಾಡಲು ೬ ತಿಂಗಳು ಬೇಕಾಯಿತು. ಈ ಸಮಯದಲ್ಲಿ ಅವರು ಋಷಿಯಂತೆ ಜೀವನ ನಡೆಸಿದರು. ಅವರು ಕೇವಲ ಸಾತ್ವಿಕ ಆಹಾರ, ಅಂದರೆ ಹಣ್ಣುಗಳು ಮತ್ತು ಮೊಳಕೆ ಕಾಳುಗಳನ್ನು ಮಾತ್ರ ಸೇವಿಸಿದರು. ಶ್ರೀ. ಅರುಣ ಯೋಗಿರಾಜ ಅವರು ಸಾಧನೆಯಂತೆ ಕೆತ್ತಿದ ಶ್ರೀರಾಮಲಲ್ಲಾನ ಸುಂದರ, ಭಾವಪೂರ್ಣ ಮೂರ್ತಿಯನ್ನು ನೋಡಿದರೆ ಅದು ದೈವಿಕ ಅಸ್ತಿತ್ವವನ್ನು ತೋರಿಸುತ್ತದೆ. ‘ಶ್ರೀರಾಮಲಲ್ಲಾ ಅಯೋಧ್ಯೆಗೆ ಮರಳಿದ್ದಾರೆ’ ಎಂಬ ಸಾಕ್ಷಾತ್ಕಾರ ಮೂರ್ತಿಯನ್ನು ನೋಡಿದಾಗ ಆಗುತ್ತದೆ.
(ಚಿತ್ರದ ಮೇಲೆ ಕ್ಲಿಕ್ ಮಾಡಿ)
ಇಲ್ಲಿಯವರೆಗೆ ಅವರು ವಿವಿಧ ಆಕಾರ ಮತ್ತು ಶೈಲಿಗಳ ೧೦ ಸಾವಿರಕ್ಕೂ ಹೆಚ್ಚು ಮೂರ್ತಿಗಳನ್ನು ಕೆತ್ತಿದ್ದಾರೆ. ಮೂರ್ತಿಗಳು ಹೆಚ್ಚು ವಾಸ್ತವಿಕ ಮತ್ತು ಭಾವಪೂರ್ಣವಾಗಲು ಅವರು ೨ ವರ್ಷಗಳ ಕಾಲ ಶ್ರಮವಹಿಸಿ ಶಿಲ್ಪಗಳು ಮತ್ತು ಮಾನವ ರಚನೆಗಳನ್ನು ಅಧ್ಯಯನ ಮಾಡಿದರು.
India Today Conclave 2024: Ayodhya Ram Statue Sculptor; Meet The Man Who Sculpted Faith Of Billions |
೩. ಶಿಲ್ಪಕಲೆಯಲ್ಲಿನ ಪಯಣಕ್ಕೆ ಮಹತ್ವದ ತಿರುವು

ಶ್ರೀ. ಅರುಣ ಯೋಗಿರಾಜ ಅವರಿಗೆ ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ೧೫ ಅಡಿ ಎತ್ತರದ ಅಮೃತಶಿಲೆಯ ಮೂರ್ತಿಯನ್ನು ಕೆತ್ತುವ ಅವಕಾಶ ಸಿಕ್ಕಿತು. ಅವರ ಯೌವನದ ವಯಸ್ಸನ್ನು ಗಮನಿಸಿದ ಆಡಳಿತಾತ್ಮಕ ಆಯುಕ್ತರು, ‘ಅವರಂತಹ ಯುವಕ ಇಷ್ಟು ದೊಡ್ಡ ಕೆಲಸವನ್ನು ನಿರ್ವಹಿಸಬಲ್ಲರೇ?’ ಎಂದು ಪ್ರಶ್ನಿಸಿದರು. ಶ್ರೀ. ಅರುಣ ಯೋಗಿರಾಜ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು ಮತ್ತು ಅವರು ಮೂರ್ತಿಯನ್ನು ಕೆತ್ತುವ ಅವಕಾಶವನ್ನು ಕೇಳಿದರು. ‘ನಿಮಗೆ ಸಮಾಧಾನವಾದರೆ ಮಾತ್ರ ಸ್ವೀಕರಿಸಬಹುದು’ ಎಂದು ಅರುಣ ಹೇಳಿದರು. ನಂತರ ಅರುಣ ಅವರು ತಮ್ಮ ಎಲ್ಲಾ ಆರ್ಥಿಕ ಉಳಿತಾಯವನ್ನು ಈ ಕೆಲಸದಲ್ಲಿ ಹೂಡಿಕೆ ಮಾಡಿದರು ಮತ್ತು ಅತ್ಯಂತ ನಿಖರತೆಯಿಂದ ಮೂರ್ತಿಯನ್ನು ಕೆತ್ತಿದರು. ಕರ್ನಾಟಕದ ಮುಖ್ಯಮಂತ್ರಿಗಳು ೨೦೧೫ ರ ಒಂದು ಕಾರ್ಯಕ್ರಮದಲ್ಲಿ ‘ಹಿಂದಿನ ಮೂರ್ತಿಗಳು ಚೆನ್ನಾಗಿದ್ದರೂ ಸಹ ಶ್ರೀ. ಅರುಣ ಯೋಗಿರಾಜ ಅವರು ಕೆತ್ತಿದ ಮೂರ್ತಿ ಜೀವಂತವಾಗಿ ಕಾಣುತ್ತದೆ’ ಎಂದು ಹೇಳಿದಾಗ ಅರುಣ ಅವರಿಗೆ ತಮ್ಮ ಶ್ರಮದ ಫಲ ಸಿಕ್ಕಿತು. ಈ ಪ್ರಶಂಸೆಯು ಅವರ ಕೌಶಲ್ಯಕ್ಕೆ ಮನ್ನಣೆ ನೀಡಿತು ಮತ್ತು ಅವರಿಗೆ ಇನ್ನಷ್ಟು ಮಹತ್ವದ ಮೂರ್ತಿ ನಿರ್ಮಾಣ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಆತ್ಮವಿಶ್ವಾಸ ನೀಡಿತು.
|
೪. ಪ್ರಶಸ್ತಿಗಳು ಮತ್ತು ಗೌರವಗಳು
ಅ. ಶ್ರೀರಾಮಲಲ್ಲಾನ ಸರ್ವಾಂಗ ಸುಂದರ ಮತ್ತು ಭಾವಪೂರ್ಣ ಮೂರ್ತಿಯನ್ನು ಕೆತ್ತಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ. ಅರುಣ ಯೋಗಿರಾಜ ಅವರನ್ನು ಗೌರವಿಸಿದರು ಮತ್ತು ಪ್ರಶಂಸಿಸಿದರು.
ಆ. ಅಮರ ಶಿಲ್ಪಿ ಜಕಣಾಚಾರಿ ಟ್ರಸ್ಟ್ನಿಂದ ಸನ್ಮಾನ, ‘ಕರ್ನಾಟಕ ರಾಜ್ಯ ಪ್ರಶಸ್ತಿ’, ಕರ್ನಾಟಕ ಹಸ್ತಕಲಾ ಪರಿಷತ್ತಿನಿಂದ ‘ಗೌರವ ಸದಸ್ಯತ್ವ’ ಪ್ರದಾನ, ಮೈಸೂರು ಜಿಲ್ಲಾಡಳಿತದಿಂದ ‘ನಾಲ್ವಡಿ ಪ್ರಶಸ್ತಿ’, ಭಾರತ ಸರಕಾರದಿಂದ ದಕ್ಷಿಣ ವಲಯ ‘ಯುವ ಪ್ರತಿಭಾವಂತ ಕಲಾವಿದ ಪ್ರಶಸ್ತಿ’, ಶಿಲ್ಪಕಲಾ ಸಂಘಟನೆಯಿಂದ ಶಿಲ್ಪ ಕೌಸ್ತುಭ ಪ್ರಶಸ್ತಿ, ಮೈಸೂರು ಜಿಲ್ಲಾ ಪ್ರಾಧಿಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಮೈಸೂರು ಜಿಲ್ಲಾ ಕ್ರೀಡಾ ಅಕಾಡೆಮಿಯಿಂದ ಸನ್ಮಾನ.
ಇ. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಂದ ವೈಯಕ್ತಿಕ ಪ್ರಶಂಸೆ.