ಪ್ರಾಮಾಣಿಕತನ : ವಾಸ್ತವ ಮತ್ತು ಆದರ್ಶ !

ಸಚಿವ ನಿತೀನ ಗಡಕರಿ

ದೇಶದಲ್ಲಿ ಲೋಕಸಭಾ ಚುನಾವಣೆಯ ಗಾಳಿ ಬೀಸುತ್ತಿದೆ. ಅನೇಕ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಇತ್ತೀಚೆಗಷ್ಟೇ ನಡೆಯಿತು. ಇದರ ಮೂಲಕ ಭಾವೀ ನೇತಾರರಾಗಲಿರುವ ಅಭ್ಯರ್ಥಿಗಳ ಬಗ್ಗೆ ಎಲ್ಲರಿಗೂ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರೀಯ ರಸ್ತೆ ಸಾರಿಗೆ ಸಚಿವ ನಿತೀನ ಗಡಕರಿ ಇವರು ಇತ್ತೀಚೆಗೆ ಒಂದು ಮಾತನ್ನು ಹೇಳಿದರು. ಅವರು ಹೇಳಿದರು, ”ಭಾರತದಲ್ಲಿ ಹಣದ್ದಲ್ಲ, ದೇಶಕ್ಕಾಗಿ ಕಾರ್ಯ ಮಾಡುವ ನೇತಾರರ ಅಭಾವವಿದೆ.’’ ಗಡಕರಿ ಇವರ ಹೇಳಿಕೆಯು ದೇಶದ ಪ್ರತಿಯೊಬ್ಬರನ್ನೂ ಆಳವಾಗಿ ವಿಚಾರ ಮಾಡಲು ಪ್ರೇರೇಪಿಸುವಂತಹದ್ದಾಗಿದೆ. ‘ಪ್ರಾಮಾಣಿಕತನ’ವು ಎಲ್ಲಕ್ಕಿಂತ ಮಹತ್ವದ ಗುಣವಾಗಿದೆ, ಅದು ಸಾಮಾನ್ಯ ವ್ಯಕ್ತಿಗಾಗಿ ಮಾತ್ರವಲ್ಲ, ರಾಜಕಾರಣದ ನಾಯಕರಿಗೂ ಅನ್ವಯಿಸುತ್ತದೆ ! ವ್ಯಕ್ತಿಯಲ್ಲಿ ಪ್ರಾಮಾಣಿಕತನ ಇದ್ದರೆ, ನೇತೃತ್ವದ ಶಿಖರವನ್ನು ತಲುಪಬಹುದು. ಸದ್ಯ ಸ್ಥಿತಿಯಲ್ಲಿ ‘ಪ್ರಾಮಾಣಿಕತನ’ ಇರುವ ವ್ಯಕ್ತಿ ಸಮಾಜದಲ್ಲಿ ಹಾಗೂ ರಾಜಕಾರಣದಲ್ಲಿ ಬೆರಳೆಣಿಕೆಯಷ್ಟೇ ಇರಬಹುದು. ಆದ್ದರಿಂದ ಗಡಕರಿಯವರ ಹೇಳಿಕೆಯು ನಿಶ್ಚಿತವಾಗಿ ಕಾಲಕ್ಕೆ ಪೂರಕವಾಗಿದೆ. ಪ್ರಾಮಾಣಿಕತನದ ಅಭಾವವನ್ನು ನೋಡುವಾಗ ಇಂದು ಯಾರಾದರೂ ಅದರ ಬಗ್ಗೆ ವಿಶ್ಲೇಷಣೆ ಮಾಡುವ ಅವಶ್ಯಕತೆಯಿತ್ತು.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ರಾಜಪರಂಪರೆಯಿದೆ. ಅವರ ರಾಜ್ಯಾಡಳಿತದ ವ್ಯಾಪಕತೆ ಅತ್ಯಂತ ವಿಶಾಲ ವಾಗಿತ್ತು. ಕೆಲವು ರಾಜರ ಸಾಮ್ರಾಜ್ಯ ತುಂಬಾ ದೊಡ್ಡದಾಗಿತ್ತು. ಈ ಸಾಮ್ರಾಜ್ಯದ ಅಡಿಪಾಯ ಗಟ್ಟಿಮುಟ್ಟಾಗಿತ್ತು; ಏಕೆಂದರೆ ಅದರ ಅಡಿಪಾಯ ಪ್ರಾಮಾಣಿಕತನ, ನೈತಿಕತೆ ಮತ್ತು ಚಾರಿತ್ರ್ಯವನ್ನು ಆಧರಿಸಿರುತ್ತಿತ್ತು. ಒಮ್ಮೆ ರಾತ್ರಿ ತಡವಾಗಿದ್ದ ಕಾರಣ ಛತ್ರಪತಿ ಶಿವಾಜಿ ಮಹಾರಾಜರು ರಾಜಗಡಕ್ಕೆ ತಲುಪಿದ್ದರು; ಆದರೆ ಅವರದ್ದೇ ಆಜ್ಞೆ ಇದ್ದ ಕಾರಣ ಅಲ್ಲಿನ ಕಾವಲುದಾರನು ಅವರಿಗೆ ಕೋಟೆಯ ಬಾಗಿಲನ್ನು ತೆರೆಯಲಿಲ್ಲ. ಅಂದರೆ ಅವನಿಗೆ ಮಹಾರಾಜರ ಪರಿಚಯವೇ ಇರಲಿಲ್ಲ. ಆದ್ದರಿಂದ ಛತ್ರಪತಿ ಶಿವಾಜಿ ಮಹಾರಾಜರಿಗೆ ಅವರದ್ದೇ ಆದೇಶವನ್ನು ಪುನರುಚ್ಚರಿಸಿದನು. ‘ಮಹಾರಾಜರ ಹೆಸರನ್ನು ಹೇಳಿ ಶತ್ರುಗಳು ಕೋಟೆಗೆ ಬರಲು ಪ್ರಯತ್ನಿಸಿದರೆ’, ಎನ್ನುವ ವಿಚಾರ ಅವನ ಮನಸ್ಸಿನಲ್ಲಿತ್ತು. ಆದ್ದರಿಂದ ಅವನು ಬೆಳಗಾಗುವ ತನಕ ಬಾಗಿಲು ತೆರೆಯಲೇ ಇಲ್ಲ. ಮಹಾರಾಜರಿಗೂ ರಾತ್ರಿ ಇಡೀ ಕೋಟೆಯ ಹೊರಗೇ ನಿಲ್ಲಬೇಕಾಯಿತು. ಬೆಳಿಗ್ಗೆ ಕಾವಲುಗಾರನಿಗೆ ವಾಸ್ತವ ತಿಳಿದಾಗ, ಅವನು ಬೆಟ್ಟದ ಮೇಲಿಂದ ತಳ್ಳುವ ಶಿಕ್ಷೆಯನ್ನು ಸ್ಮರಿಸಿ ಭಯಭೀತನಾದನು; ಆದರೆ ಛತ್ರಪತಿ ಶಿವಾಜಿ ಮಹಾರಾಜರು ಅವನ ಪ್ರಾಮಾಣಿಕತನದ ವಿಷಯದಲ್ಲಿ ಅವನನ್ನು ಪ್ರಶಂಸೆ ಮಾಡಿ ಅವನನ್ನು ಪ್ರೋತ್ಸಾಹಿಸಿ ಹೇಳಿದರು, ‘ನಿಮ್ಮಂತಹ ಪ್ರಾಮಾಣಿಕ ಸಂಗಡಿಗರ ಜೀವದ ಮೇಲೆಯೆ ನಮ್ಮ ಸ್ವರಾಜ್ಯ ನಿಂತಿದೆ.’’ ಇಂದು ಇಂತಹ ಘಟನೆ ಎಲ್ಲಿಯಾದರೂ ಘಟಿಸಿದರೆ ಸಂಬಂಧಪಟ್ಟವರಿಗೆ ಹಣದ ಚೀಲವೇ ತಲುಪುತ್ತದೆ ಹಾಗೂ ಒಳಗಿಂದ ಒಳಗೇ ಕೆಲಸ ಆಗಿಹೋಗುತ್ತದೆ. ಇಂದು ಇಂತಹ ಘಟನೆ ಎಲ್ಲಿಯಾದರೂ ಘಟಿಸುತ್ತಿದ್ದರೆ, ಆ ಕಾವಲುಗಾರನ ನೌಕರಿಯೇ ಹೋಗುತ್ತಿತ್ತು, ಇಂದಿನ ಜನಪ್ರತಿನಿಧಿಗಳು ಅವನಿಗೆ ಯದ್ವಾತದ್ವಾ ಮಾತನಾಡುತ್ತಿದ್ದರು ಹಾಗೂ ಅವನ ಮುಖಕ್ಕೆ ಹೊಡೆಯುತ್ತಿದ್ದರು. ಮಹಾರಾಜರ ಕಾಲದ ಪ್ರಾಮಾಣಿಕ ಜನರ ಹಾಗೆ ಇಂದಿನ ಕಾಲದ ಎಷ್ಟು ನೇತಾರರಿದ್ದಾರೆ ? ಎಂಬುದನ್ನೂ ನೋಡಬೇಕು.

ಮರಾಠರ ಇತಿಹಾಸದಲ್ಲಿ ಪ್ರಾಮಾಣಿಕ ಹಾಗೂ ಪ್ರಜಾ ಹಿತದಕ್ಷರಾದ ಶಾಸಕರೆಂದು ಮಾಧವರಾವ ಪೇಶವೆಯವರ ಹೆಸರನ್ನು ಗುರುತಿಸಲಾಗುತ್ತದೆ. ಅವರ ಹಾಗೆಯೆ ರಾಮಶಾಸ್ತ್ರಿ ಪ್ರಭುಣೆ ಇವರನ್ನು ಕೂಡ ಆ ಕಾಲದಲ್ಲಿ ‘ಪ್ರಾಮಾಣಿಕ’ರೆಂದು ಗುರುತಿಸಲಾಗುತ್ತಿತ್ತು. ಒಮ್ಮೆ ನಾನಾ ಫಡ್ಣವೀಸ ಇವರು ರಾಮಶಾಸ್ತ್ರಿ ಯವರಿಗೆ ಕೇಳಿದರು, ”ನಿಮ್ಮ ಮಗನಿಗೆ ಹೆಚ್ಚಿನ ವಿದ್ಯಾಭ್ಯಾಸವಿಲ್ಲ, ಆದ್ದರಿಂದ ಅವನಿಗೆ ಯಾವ ಹುದ್ದೆಯನ್ನು ನೀಡುವುದು ?’’ ಆಗ ರಾಮಶಾಸ್ತ್ರಿ ಹೇಳಿದರು, ‘ಅವನಿಗೆ ಅರಮನೆಯಲ್ಲಿ ಬಟ್ಟೆ ತೊಳೆಯುವ ಕೆಲಸ ಕೊಡಿರಿ !’’ ಅವರು ಸುಮಾರು ೩೦ ವರ್ಷಗಳ ವರೆಗೆ ಮರಾಠರ ಸೇವೆಯಲ್ಲಿದ್ದರು. ಆದರೆ ‘ಪ್ರಾಮಾಣಿಕ ಹಾಗೂ ತತ್ತ್ವನಿಷ್ಠ ನ್ಯಾಯಾಧೀಶ’ರೆಂದು ಅವರನ್ನು ಇಂದು ಕೂಡ ಮಾನಸನ್ಮಾನದಿಂದ ಗುರುತಿಸಲಾಗುತ್ತದೆ. ಅವರ ಪ್ರಾಮಾಣಿಕ ಆಚರಣೆಯು ಎಲ್ಲರ ಸ್ಮರಣೆಯಲ್ಲಿದೆ. ಮೌರ್ಯ ಸಮ್ರಾಟ ಅಶೋಕನ ಆಡಳಿತದಲ್ಲಿಯೂ ಪ್ರಾಮಾಣಿಕತನಕ್ಕೆ ಒತ್ತುಕೊಡಲಾಗುತ್ತಿತ್ತು. ಇವರೆಲ್ಲರೂ ರಾಜಕಾರಣ ಮಾಡಿದರು, ಅಂದರೆ ಅವರು ರಾಷ್ಟ್ರಕಾರಣಕ್ಕಾಗಿಯೇ ಇದ್ದರು. ಅದು ಧರ್ಮದ ಅಧೀನದಲ್ಲಿ ನಡೆಸುವ ರಾಜಕಾರಣವಾಗಿತ್ತು. ಅಪ್ರಾಮಾಣಿಕತನ ಮಾಡಿದರೆ ಆ ಕಾಲದಲ್ಲಿ ದಂಡದ ಭಯವಿತ್ತು. ಆದ್ದರಿಂದಲೆ ಪ್ರಾಮಾಣಿಕತೆಯ ಅಡಿಪಾಯ ಶಾಶ್ವತವಾಗಿರುತ್ತಿತ್ತು. ಲೋಕಮಾನ್ಯ ತಿಲಕರು ಅಥವಾ ಸ್ವಾತಂತ್ರ್ಯವೀರ ಸಾವರಕರರು ರಾಜರಲ್ಲದಿದ್ದರೂ ಅವರು ಮಾಡಿದ ರಾಜಕಾರಣವೂ ಹಿಂದೂಕರಣಕ್ಕಾಗಿಯೆ ಇತ್ತು ಹಾಗೂ ಅವರು ಪ್ರಾಮಾಣಿಕರಾಗಿದ್ದರು. ಆದ್ದರಿಂದಲೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಗಟ್ಟಲೆ ಜನರು ಅವರ ಬೆಂಬಲಕ್ಕೆ ನಿಂತಿದ್ದರು. ರಾಜಕಾರಣದ ಈ ನೀತಿಯನ್ನು ಇಂದಿನ ನೇತಾರರು ಪಾಲಿಸುವುದಿಲ್ಲ, ಅವರು ಇದನ್ನು ಕಡೆಗಣಿಸಿ ತಮ್ಮಿಚ್ಛೆಯಂತೆ ಅನೀತಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನೀತಿಯ ಅಡಿಪಾಯ ಅಲ್ಲಾಡುತ್ತಿದೆ. ಆದ್ದರಿಂದ ಇಲ್ಲಿ ದಂಡದ ಭಯ ಇರುವುದಿಲ್ಲ. ಉದ್ಧಟತನ ಬೆಳೆಯುತ್ತದೆ. ಅಧಿಕಾರದ ಅಮಲಿನಲ್ಲಿ ನಾವು ಎಷ್ಟು ಹೀನಮಟ್ಟಕ್ಕೆ ತಲುಪಿದ್ದೇವೆ, ಎಂಬುದೂ ತಿಳಿಯುವುದಿಲ್ಲ. ಅರ್ಥಾತ್‌ ಈ ಕೆಸರಿನಲ್ಲಿಯೂ ಒಂದೆರಡು ಕಮಲ ಅರಳುತ್ತದೆ, ಎಂಬುದನ್ನೂ ದುರ್ಲಕ್ಷ ಮಾಡುವ ಹಾಗಿಲ್ಲ.

ಇಂದಿನ ನೇತಾರರ ಕೈಗಳು ಭ್ರಷ್ಟಾಚಾರ, ಬಲಾತ್ಕಾರ ಹಾಗೂ ಅಪರಾಧಗಳಿಂದ ಮಲಿನವಾಗಿವೆ. ಇಂದಿನ ನೇತಾರರ ಆದರ್ಶವನ್ನು ಕೇಳಿದರೆ ಯುವಪೀಳಿಗೆ ರಾಹುಲ ಗಾಂಧಿಯ ಹೆಸರನ್ನು ಹೇಳುತ್ತದೆ. ಅವರನ್ನು ಯಾವ ಕಾರಣಕ್ಕಾಗಿ ಆದರ್ಶವೆಂದು ಹೇಳಬೇಕು ? ಮೊದಲು ಅರವಿಂದ ಕೇಜರಿವಾಲರನ್ನು ಟೀಕಿಸುತ್ತಿದ್ದವರು ಈಗ ಬಣ್ಣ ಬದಲಾಯಿಸಿ ‘ಕೇಜರಿವಾಲರಿಗೇ ಮತ ನೀಡಿರಿ’, ಎಂದು ಕರೆ ನೀಡುತ್ತಾ ತಿರುಗುತ್ತಿದ್ದಾರೆ, ಈ ರಾಹುಲ ಗಾಂಧಿಗೆ ಮಾತು ಬದಲಾಯಿಸಲು ಚೆನ್ನಾಗಿ ತಿಳಿದಿದೆ. ಮಮತಾ ಬ್ಯಾನರ್ಜಿಯ ಆದರ್ಶವನ್ನೂ ತೆಗೆದುಕೊಳ್ಳಲಾಗುತ್ತದೆ. ನಿಜವಾಗಿ ನೋಡಿದರೆ ಮಮತಾ ಬ್ಯಾನರ್ಜಿಯ ರಾಜ್ಯದಲ್ಲಿ ಹಿಂದೂಗಳು ಅಸುರಕ್ಷಿತರಾಗಿರುವುದು ಮಾತ್ರವಲ್ಲ, ಅವರ ಸಚಿವರು ಭ್ರಷ್ಟಾಚಾರ ಮತ್ತು ಅನೈತಿಕತೆಯಲ್ಲಿ ಒಬ್ಬರಿಗಿಂತ ಒಬ್ಬರು ವಿಕ್ರಮವನ್ನು ಸಾಧಿಸಿದ್ದಾರೆ. ಇಂತಹವರ ಆದರ್ಶವನ್ನು ಮುಂದಿಟ್ಟುಕೊಂಡು ನಾವು ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದೇವೆ ? ತಮಲೋಕ್ಮ ಮಾತಿನೊಂದಿಗೂ ಪ್ರಾಮಾಣಿಕರನ್ನು ಉಳಿಸಿಕೊಳ್ಳದವರು ಎಂತಹ ನೇತಾರರು ? ದೇಶವನ್ನು ಸುರಾಜ್ಯವನ್ನಾಗಿ ಹೇಗೆ ಮಾಡುವರು ? ಇಂತಹ ವ್ಯಕ್ತಿಗಳಿಂದಲೇ ಭಾರತದ ಹೆಸರು ಕೆಡುತ್ತಿದೆ. ರಾಜಕಾರಣ ದಾರಿ ತಪ್ಪುತ್ತಿದೆ, ಅದಕ್ಕೆ ದಿಕ್ಕು ಕಾಣದಂತಾಗುತ್ತಿದೆ.

ಪ್ರಾಮಾಣಿಕತನ ಮನೆಯಿಂದಲೆ ಬರಬೇಕು !

ಮನಸ್ಸಿನಲ್ಲಿ ಪ್ರಾಮಾಣಿಕತೆಯ ಉದ್ದೇಶವಿಟ್ಟು ರಾಜ್ಯಾಡಳಿತ ನಡೆಸಿದರೆ ಜನರ ಹಿತ ಸಾಧಿಸಬಹುದು. ಪ್ರಾಮಾಣಿಕತನವನ್ನು ತ್ಯಜಿಸಿ ನಿರಾಶ್ರಿತರಾಗುವುದಲ್ಲ. ತದ್ವಿರುದ್ಧ ಪ್ರಾಮಾಣಿಕನಾಗಿದ್ದು ತನ್ನ ಸುಸಂಸ್ಕೃತ ಪರಂಪರೆಯನ್ನು ಮುಂದಕ್ಕೊಯ್ಯಬೇಕು. ಕರ್ತವ್ಯದೊಂದಿಗೆ ಪ್ರಾಮಾಣಿಕನಾಗಿರಬೇಕು. ಈ ಪ್ರಾಮಾಣಿಕತನವನ್ನು  ಖರೀದಿಸಲು ಸಾಧ್ಯವಿಲ್ಲ. ಅದು ಪ್ರತಿಯೊಬ್ಬರ ಮನೆ ಯಿಂದಲೇ ಬರಬೇಕು. ಅದಕ್ಕಾಗಿ ಚಿಕ್ಕಂದಿನಿಂದಲೇ ಸಂಸ್ಕಾರವಾಗಬೇಕು. ಶಾಲೆ-ಮಹಾವಿದ್ಯಾಲಯಗಳಿಂದ ಸದ್ಗುಣಗಳನ್ನು ಮಕ್ಕಳಿಗೆ ಕಲಿಸಬೇಕು. ಅದಕ್ಕಾಗಿ ಅಂತಹ ಪಠ್ಯಕ್ರಮವೂ ಇರ ಬೇಕು. ಇವೆಲ್ಲವನ್ನೂ ಅಂಗೀಕರಿಸಿಕೊಂಡು ಸದ್‌ಸದ್ವಿವೇಕಬುದ್ಧಿಯೊಂದಿಗೆ ಏಕನಿಷ್ಠರಾಗಿದ್ದು ವರ್ತಿಸುವುದೆಂದರೆ ಪ್ರಾಮಾಣಿಕತನ ಎಂದೆನಿಸುವುದು; ಪ್ರಾಮಾಣಿಕತನದ ಅಡಿಪಾಯದಲ್ಲಿಯೇ ರಾಷ್ಟ್ರ ನಿಂತಿರಬೇಕು. ಪ್ರಾಮಾಣಿಕತನದ ಅಡಿಪಾಯ ಗಟ್ಟಿಮುಟ್ಟಾಗಿರಲು ಪ್ರಯತ್ನಿಸಬೇಕೆಂಬುದನ್ನು ನೇತಾರರು ಗಮನದಲ್ಲಿಡಬೇಕು !