ಗರ್ಭನಿರೋಧಕ ಗುಳಿಗೆಗಳು : ತಪ್ಪು ತಿಳುವಳಿಕೆ ಮತ್ತು ಸತ್ಯ

‘ಡಾಕ್ಟರ್. ನಮ್ಮದು ಈಗಷ್ಟೇ ಮದುವೆಯಾಗಿದೆ. ವಾಸ್ತವದಲ್ಲಿ ನಮಗೆ ಕನಿಷ್ಟ ೧ ವರ್ಷ ಮಗು ಬೇಡ; ಆದರೆ ಮನೆಯವರು ನಮಗೆ ಯಾವ ಗರ್ಭನಿರೋಧಕಗಳನ್ನೂ ಬಳಸಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ! ಏನು ಮಾಡಬೇಕು ಗೊತ್ತಾಗುತ್ತಿಲ್ಲ.’ ಚಿಕಿತ್ಸಾಲಯದಲ್ಲಿ ಇಂತಹ ಸಮಸ್ಯೆಗಳನ್ನು ನಾನು ಯಾವಾಗಲೂ ಕೇಳುತ್ತಿರುತ್ತೇನೆ. ವಿಶೇಷವೆಂದರೆ ಈ ಸಮಸ್ಯೆಯು ಸಮಾಜದ ಎಲ್ಲ ಯುವಕ-ಯುವತಿಯರಲ್ಲಿದೆ. ಮದುವೆ ಆದ ಕೂಡಲೇ, ‘ನೋಡು, ಮಾತ್ರೆಗಳನ್ನು ತೆಗೆದುಕೊಳ್ಳಬೇಡ ! ಅವಳಿದ್ದಾಳಲ್ಲ ಅವಳು ಹಿರಿಯರ ಮಾತನ್ನು ಕೇಳದೆ ಗುಳಿಗೆಗಳನ್ನು ತೆಗೆದುಕೊಂಡಳು. ಈಗ ೩ ವರ್ಷಗಳಾದವು ಗರ್ಭಧಾರಣೆ ಆಗುತ್ತಿಲ್ಲ !’, ಇಂತಹ ಒಂದು ಮಾತೂ ಇರುತ್ತದೆ. ಹೊಸದಾಗಿ ಮದುವೆಯಾದ ಹುಡುಗಿಗೆ ಮೊದಲೇ ಏನು ತೋಚುವುದಿಲ್ಲ ಅಂತಹದರಲ್ಲಿ ಇದು ಒಂದು ರೀತಿ ಬೆದರಿಕೆ ಹಾಕಿದಂತೆ ಆಗುತ್ತದೆ.

೧. ಗರ್ಭನಿರೋಧಕ ಮಾತ್ರೆಗಳ ಬಗ್ಗೆ ತಪ್ಪು ತಿಳುವಳಿಕೆಗಳು ಮತ್ತು ಅದರ ಕೆಲವು ಲಾಭಗಳು

ನಿಜವಾಗಿಯೂ ವಂಶಸಾತತ್ಯ (continuation of species) ಇದು ಮನುಷ್ಯನ ಎಲ್ಲಕ್ಕಿಂತ ಪ್ರಬಲ ಭಾವನೆ ಯಾಗಿದೆ. ಮಗನ ಅಥವಾ ಮಗಳ ಮದುವೆ ಮಾಡುವಾಗ ಎಲ್ಲ ಪಾಲಕರು ಮೊಮ್ಮಗ ಅಥವಾ ಮೊಮ್ಮಗಳಿಗಾಗಿ ಕಾಯುತ್ತಿರುತ್ತಾರೆ. ಅದರಿಂದಲೇ ಹೊಸ ಪೀಳಿಗೆಯ ಮೇಲೆ ಬೇಗನೆ ಗರ್ಭಧಾರಣೆಗಾಗಿ ಒತ್ತಾಯ ಮಾಡಲಾಗುತ್ತದೆ. ಅಸುರಕ್ಷಿತವಾದ ಕೊನೆಯ ಘಳಿಗೆಯಲ್ಲಿ ತೆಗೆದುಕೊಳ್ಳುವ ಗುಳಿಗೆಗಳಿಗಿಂತ ಗರ್ಭನಿರೋಧಕ ಗುಳಿಗೆಗಳು ಬಹಳ ಸುರಕ್ಷಿತವಾಗಿರುತ್ತವೆ. ನಾವು ಎಲ್ಲ ನವವಿವಾಹಿತ ದಂಪತಿಗಳಿಗೆ ಈ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತೇವೆ. ಈ ಗುಳಿಗೆಗಳನ್ನು ಕೇವಲ ಚಿಕ್ಕಪ್ರಾಯದಲ್ಲಿನ ಮಧುಮೇಹ, ಅಧಿಕ ರಕ್ತದೊತ್ತಡ, ಅತೀ ಸ್ಥೂಲಕಾಯ (ಬೊಜ್ಜು) ಇಂತಹ ಕೆಲವು ಪ್ರಕಾರಗಳಲ್ಲಿ ಕೊಡಲು ಬರುವುದಿಲ್ಲ; ಆದರೆ ಈ ಗರ್ಭನಿರೋಧಕ ಗುಳಿಗೆಗಳ ಬಗ್ಗೆ ಜನರಲ್ಲಿ ಬಹಳಷ್ಟು ತಪ್ಪುತಿಳುವಳಿಕೆಗಳಿವೆ ಮತ್ತು ಕಾರಣವಿಲ್ಲದೇ ನವವಿವಾಹಿತ ದಂಪತಿಗಳ ಮನಸ್ಸಿನಲ್ಲಿ ಭೀತಿಯನ್ನು ಹುಟ್ಟಿಸಲಾಗುತ್ತದೆ.

ಮಹಿಳೆಯ ಋತುಸ್ರಾವ ಅನಿಯಮಿತವಾಗಿದ್ದರೆ, ಈ ಮಾತ್ರೆಗಳಿಂದ ಅದು ನಿಯಮಿತವಾಗುತ್ತದೆ. ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಧಾರಣೆಯಾಗುವ ಸಾಧ್ಯತೆಯು ಹೆಚ್ಚುಕಡಿಮೆ ಇರುವುದಿಲ್ಲ. ಆದುದರಿಂದ ದಂಪತಿಗಳ ಲೈಂಗಿಕ ಆಯುಷ್ಯವೂ ಹೆಚ್ಚು ಆರೋಗ್ಯಕರವಾಗಿರುತ್ತದೆ. ನಿಯಮಿತ ಋತುಚಕ್ರವು ಆಗುವುದರಿಂದ ಗುಳಿಗೆ ನಿಲ್ಲಿಸಿದ ಕೂಡಲೆ ಗರ್ಭಧಾರಣೆಯಾಗುತ್ತದೆ. ಕೆಲವು ಮಹಿಳೆಯರ ಮುಖದ ಮೇಲೆ ಬಹಳಷ್ಟು ಮೊಡವೆಗಳು ಅಥವಾ ಗುಳ್ಳೆಗಳು ಬರುತ್ತಿದ್ದರೆ, ಈ ಗುಳಿಗೆಗಳಿಂದ ಅವು ಬಹಳ ಕಡಿಮೆಯಾಗುತ್ತವೆ. ನಿಜವಾಗಿಯೂ ಇದು ಬಹುಗುಣಿ ಗುಳಿಗೆಯಾಗಿದೆ.

೨. ಗರ್ಭನಿರೋಧಕ ಗುಳಿಗೆಗಳನ್ನು ವೈದ್ಯರ ಸಲಹೆಯಿಂದ ತೆಗೆದುಕೊಳ್ಳುವುದು ಮಹತ್ವದ್ದಾಗಿದೆ !

ಹಿಂದಿನ ಕಾಲದಲ್ಲಿ ಕೆಲವು ಸ್ತ್ರಿಯರು ‘ಮಾಲಾ ಡೀ’, ‘ಮಾಲಾ ಎನ್’ ಎಂಬ ಹೆಸರಿನ ಸರಕಾರದಿಂದ ಸಿಗುವ ಉಚಿತ ಗುಳಿಗೆಗಳನ್ನು ಯಾವುದೇ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳದೆ, ಯಾವುದೇ ವಯಸ್ಸಿನಲ್ಲಿ, ಯಾವುದೇ ಪ್ರಮಾಣದಲ್ಲಿ (ಡೋಸ್‌ನಲ್ಲಿ) ಸೇವಿಸಿದರು. ಸಹಜವಾಗಿ ಕೆಲವು ಮಹಿಳೆಯರಿಗೆ ತೊಂದರೆಯಾಯಿತು. ಅನಂತರ ಈ ಸುದ್ದಿಯನ್ನು ಎಲ್ಲೆಡೆ ಹರಡಿ ಈ ಗುಳಿಗೆಗಳ ಅಪಕೀರ್ತಿ ಮಾಡಲಾಯಿತು. ಈಗ ಸರಕಾರದಿಂದ ಬಹಳಷ್ಟು ಕಡಿಮೆ ಡೋಸೆಜ್‌ನ ಮತ್ತು ಉತ್ತಮ ಗುಣಮಟ್ಟದ ಗುಳಿಗೆಗಳು ಸಿಗುತ್ತವೆ. ಆದರೆ ಅವುಗಳನ್ನು ಸೇವಿಸುವ ಮೊದಲು ಒಮ್ಮೆ ಸ್ತ್ರೀರೋಗತಜ್ಞರನ್ನು ಅಗತ್ಯವಾಗಿ ಭೇಟಿಯಾಗಬೇಕು. ಭಾರತೀಯ ಸ್ತ್ರೀಯರ ತಳಿಶಾಸ್ತ್ರವನ್ನು (ಜೀನ್ಸ) ಪರಿಗಣಿಸಿ ಹಲವು ವರ್ಷಗಳ ಕಾಲ ಈ ಗುಳಿಗೆಗಳನ್ನು ಸೇವಿಸುವ ಸಲಹೆಯನ್ನು ನಾವು ಕೊಡುವುದಿಲ್ಲ.

೩. ಯುವ ಪೀಳಿಗೆಯೂ ತಾರತಮ್ಯದಿಂದ ಗರ್ಭಧಾರಣೆಗಾಗಿ ಸುವರ್ಣ ಸಮನ್ವಯವನ್ನು ಸಾಧಿಸಬೇಕು !

ಈಗಿನ ಕಾಲದಲ್ಲಿ ಗಂಡ-ಹೆಂಡತಿ ಇಬ್ಬರೂ ತಮ್ಮ ಕರಿಯರ್‌ಗಾಗಿ ಬಹಳ ಕಷ್ಟಪಟ್ಟಿರುತ್ತಾರೆ. ಕೆಲವೊಮ್ಮೆ ವಿದೇಶಕ್ಕೆ ಹೋಗುವ ಅವಕಾಶ ಇರುತ್ತದೆ ಅಥವಾ ಕೆಲವೊಮ್ಮೆ ಹೆಚ್ಚಿನ ಸಂಬಳ (ಪ್ರಮೋಶನ್) ಸಿಗುವುದಿರುತ್ತದೆ. ಇಂತಹ ಸಮಯದಲ್ಲಿ ಅನಿಯೋಜಿತ ಗರ್ಭಧಾರಣೆಯಿಂದ (unplanned pregnancy) ಅವರ ಜೀವನವು ಅಸ್ತವ್ಯಸ್ಥವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಇದಕ್ಕೆ ಒಳ್ಳೆಯ ಮಾರ್ಗವೆಂದರೆ ಪರಿಣಾಮಕಾರಿ ಗರ್ಭನಿರೋಧಕ ಗುಳಿಗೆಗಳನ್ನು ತೆಗೆದು ಕೊಳ್ಳುವುದು, ಏಕೆಂದರೆ ‘ಕಂಡೋಮ್‌’ಗಿಂತ ಇದು ಹೆಚ್ಚು ಒಳ್ಳೆಯದು ಮತ್ತು ಸುರಕ್ಷಿತವಾಗಿದೆ ಹಾಗೂ ವ್ಯವಸ್ಥಿತ ನಿಯೋಜನೆ ಮಾಡಿ ಯಾವಾಗ ಬೇಕೋ ಆಗ ಗರ್ಭಧಾರಣೆ ಮಾಡಲು ಬರುತ್ತದೆ. ಇವುಗಳ ಜೊತೆಗೆ ಯುವ ಪೀಳಿಗೆಯು ತಾರತಮ್ಯವಿರಿಸಿ ಯೋಗ್ಯವಿಚಾರ ಮಾಡುವುದು ಆವಶ್ಯಕವಾಗಿದೆ. ವಯಸ್ಸು ಹೆಚ್ಚಾಗದೆ ಸೂಕ್ತ ವಯಸ್ಸಿನಲ್ಲಿ ಮಗು ಆಗುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ. ವಿದೇಶಿ ಸಂಸ್ಕೃತಿಯಂತೆ ೩೦ ವರ್ಷಗಳ ನಂತರ ಮಗುವಿನ ಬಗ್ಗೆ ಯೋಚಿಸುವುದು ಭಾರತೀಯ ಮನಸ್ಸಿಗೆ ಮತ್ತು ಶರೀರಕ್ಕೆ ಒಳ್ಳೆಯದಲ್ಲ, ಹೀಗೆ ಮಾಡುವುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ತೊಡಕುಗಳು ಬರಬಹುದು. ಆದುದರಿಂದ ಯುವ ಮತ್ತು ಹಳೆ ತಲೆಮಾರಿನವರ ‘ವಂಶದ ಹೂವು ಅರಳುವಾಗ’ ಸುವರ್ಣ ಸೌಹಾರ್ದವನ್ನು ಸಾಧಿಸಿದರೆ ಮಾತ್ರ ಈ ವಿಷಯದ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗುತ್ತದೆ, ಎಂದು ನನಗನಿಸುತ್ತದೆ.

– ಡಾ. ಶಿಲ್ಪಾ ಚಿಟಣೀಸ-ಜೋಶಿ, ಸ್ತ್ರಿರೋಗ ಮತ್ತು ಬಂಜೆ ತನ ನಿವಾರಣಾತಜ್ಞರು, ಕೋಥರೂಡ, ಪೂನಾ. (೧.೬.೨೦೨೩)