ಶ್ರೀಗಣೇಶ ಮೂರ್ತಿಯ ಅಲಂಕಾರ ಹೀಗಿರಲಿ !

ಇತ್ತೀಚೆಗೆ ಗಣೇಶೋತ್ಸವಕ್ಕಾಗಿ ಮಾಡಲಾಗುವ ಅಲಂಕಾರಕ್ಕಾಗಿ ವಿವಿಧ ರೀತಿಯ ಬಣ್ಣಗಳಿಂದ ಹಾಗೂ ಮಿನುಗುವ ಕಾಗದ, ಥರ್ಮಾಕೋಲ್, ಪ್ಲಾಸ್ಟಿಕ್‌ ಮುಂತಾದವು ಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೇ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ಮಾಲೆ ಯನ್ನೂ ಬಳಸಲಾಗುತ್ತದೆ. ಈ ವಸ್ತುಗಳನ್ನು ಕೃತಕ ಹಾಗೂ ರಾಸಾಯನಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ವಸ್ತುಗಳಲ್ಲಿ ರಜ-ತಮದ ಪ್ರಮಾಣವು ಹೆಚ್ಚಿರುತ್ತದೆ ಅಲ್ಲದೇ ಅಂತಹವುಗಳು ವಾತಾವರಣದಲ್ಲಿನ ರಜತಮ ವನ್ನು ಆಕರ್ಷಿಸಿ ಅಲ್ಲಿನ ಪರಿಸರವನ್ನು ರಜ-ತಮಯುಕ್ತಗೊಳಿಸುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಪ್ರತಿಯೊಂದು ದೇವತೆಯಲ್ಲಿ ಒಂದು ವಿಶಿಷ್ಟ ತತ್ತ್ವವಿರುತ್ತದೆ. ಹಾಗಾಗಿ ಗಣೇಶ ಚತುರ್ಥಿಯಂದು ಪೃಥ್ವಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಬರುವ ಗಣೇಶತತ್ತ್ವವನ್ನು ಆಕರ್ಷಿಸುವ ಸಾತ್ವಿಕ ವಸ್ತುಗಳನ್ನು ಬಳಸಬೇಕು. ಅದಕ್ಕೆ ಕೆಳಗಿನ ವಸ್ತುಗಳನ್ನು ಬಳಸಿರಿ. ನೈಸರ್ಗಿಕ ಹೂವು-ಎಲೆಗಳಿಂದ ತಯಾರಿಸಿದ ತೋರಣಗಳು ಕೆಂಪು ಬಣ್ಣದ ಹೂವು ಹಾಗೂ ದೂರ್ವೆ, ಶಮಿಯ ಎಲೆಗಳು ಶ್ರೀಗಣೇಶನತತ್ತ್ವವನ್ನು ಆಕರ್ಷಿಸುವ ರಂಗೋಲಿ ಶ್ರೀಗಣೇಶನ ಸಾತ್ತ್ವಿಕ ನಾಮಜಪದ ಪಟ್ಟಿಗಳು ಇತ್ಯಾದಿ.

ಪೂಜಾಸ್ಥಳದ ಶುದ್ಧೀಕರಣ ಮತ್ತು ಉಪಕರಣಗಳಲ್ಲಿನ ದೇವತ್ವವನ್ನು ಜಾಗೃತಗೊಳಿಸುವುದು

ಪೂಜಾಸ್ಥಳದ ಶುದ್ಧೀಕರಣ

ಅ. ಪೂಜೆ ಮಾಡುವವನು ಆ ಕೋಣೆಯ ಕಸ ಗುಡಿಸಬೇಕು. ಆದಷ್ಟು ಪೂಜೆ ಮಾಡುವ ವ್ಯಕ್ತಿಯೇ ಕಸ ಗುಡಿಸಬೇಕು.

ಆ. ಕಸ ಗುಡಿಸಿದ ನಂತರ ಕೋಣೆಯಲ್ಲಿನ ನೆಲವು ಮಣ್ಣಿನದ್ದಾಗಿದ್ದರೆ, ನೆಲವನ್ನು ಸೆಗಣಿಯಿಂದ ಸಾರಿಸಬೇಕು. ಮಣ್ಣಿನ ನೆಲವಲ್ಲದಿದ್ದರೆ ಸ್ವಚ್ಛ ನೀರಿನಿಂದ ನೆಲ ಒರೆಸಬೇಕು.

ಇ. ಮಾವಿನ ಅಥವಾ ತುಳಸೀ ಎಲೆಯಿಂದ ಕೋಣೆಯಲ್ಲಿ ಗೋಮೂತ್ರವನ್ನು ಸಿಂಪಡಿಸಬೇಕು. ಗೋಮೂತ್ರವಿಲ್ಲದಿದ್ದರೆ ನೀರಿನಲ್ಲಿ ಊದುಬತ್ತಿಯ ವಿಭೂತಿ ಹಾಕಿ ಆ ನೀರನ್ನು ಕೋಣೆಯಲ್ಲಿ ಸಿಂಪಡಿಸಬೇಕು. ಅನಂತರ ಧೂಪ ಹಾಕಬೇಕು.

ಉಪಕರಣಗಳಲ್ಲಿನ ದೇವತ್ವದ ಜಾಗೃತಿ, ದೇವರ ಪೂಜೆಯ ಉಪಕರಣಗಳನ್ನು ತಿಕ್ಕಿ ತೊಳೆದು ಒರೆಸಿ ಸ್ವಚ್ಛಗೊಳಿಸಬೇಕು. ಅನಂತರ ಅವುಗಳ ಮೇಲೆ ತುಳಸೀ ಎಲೆ ಅಥವಾ ದೂರ್ವೆ ಇವುಗಳಿಂದ ಜಲಪ್ರೋಕ್ಷಣ (ನೀರು ಸಿಂಪಡಿಸುವುದು) ಮಾಡಬೇಕು.