ಸದನವೇ ಅಥವಾ ಗದ್ದಲ ಗೃಹವೇ ?

ಸಂಸತ್ತಿನ ಮುಂಗಾರು ಕಲಾಪ ನಡೆಯುತ್ತಿದೆ. ಸದ್ಯ ಕಲಾಪವೆಂದ ಕೂಡಲೇ `ಗೊಂದಲ, ಗದ್ದಲ, ಕೂಗಾಟ, ಪೇಪರ್ ಎಸೆಯುವುದು’ ಈ ಚಿತ್ರಣವೇ ಕಣ್ಮುಂದೆ ನಿಲ್ಲುತ್ತದೆ. ಸದನವನ್ನು ಸ್ಥಗಿತಗೊಳಿಸಲು ವಿಪಕ್ಷಗಳು ಯಾವುದಾದರೂ ಕಾರಣವನ್ನು ಹುಡುಕುತ್ತಲೇ ಇರುತ್ತವೆ. ಕಲಾಪದ ಕೆಲವು ದಿನಗಳ ಮೊದಲು ನಡೆದ ಕೆಲವು ದೊಡ್ಡ ಪ್ರಕರಣಗಳು ಅಥವಾ ಆ ಸಮಯದಲ್ಲಿ ನಡೆಯುತ್ತಿದ್ದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗಲಾಟೆ ಮಾಡಿ ‘ಮುಂದಿನ ಕಲಾಪಕ್ಕೆ ಅವಕಾಶ ನೀಡಬಾರದು’ ಎಂಬ ಅಲಿಖಿತ ನಿಯಮವನ್ನು ವಿರೋಧಿಗಳು ರೂಪಿಸಿರುತ್ತಾರೆ. ಕಲಾಪದ ಆರಂಭಕ್ಕೂ ಮುನ್ನವೇ ‘ಸರ್ಕಾರವನ್ನು ಯಾವ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿಸಬೇಕು’ ಎಂದು ಅವರು ಮೊದಲೇ ನಿರ್ಧರಿಸಿರುತ್ತಾರೆ ಮತ್ತು ಅವರು ಹಾಗೆ ಹೇಳಿಯೂ ಇರುತ್ತಾರೆ. ಹಾಗಾಗಿ, ಕಲಾಪ ‘ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕಾಗಿಯೋ ಅಥವಾ ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೋ’ ಎನ್ನುವ ಪ್ರಶ್ನೆ ಮೂಡುತ್ತದೆ. ಅವರ ಈ ಕೃತ್ಯದಿಂದ ಜನಪ್ರತಿನಿಧಿಗಳಿಗೆ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ ಎಂಬ ನೈತಿಕ ಪ್ರಜ್ಞೆ ಕಿಂಚಿತ್ತೂ ಇಲ್ಲದಿರುವುದು ವಿಷಾದನೀಯ. ಸಾರ್ವಜನಿಕರ ತೆರಿಗೆಯಿಂದ ಈ ಕಲಾಪವನ್ನು ನಡೆಸಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ. ಅದರ ಪ್ರತಿ ಕ್ಷಣವನ್ನು ಜನರ ಮತ್ತು ದೇಶದ ಸಮಸ್ಯೆಗಳನ್ನು ಮತ್ತು ಪ್ರಶ್ನೆಗಳನ್ನು ಬಗೆಹರಿಸಲು ಉಪಯೋಗಿಸುವುದು ಆವಶ್ಯಕವಾಗಿದೆ. ಈ ಕಲಾಪದಲ್ಲಿ ನೂರಾರು ಪ್ರಶ್ನೆಗಳು, ವಿಷಯಗಳು, ಗಮನಸೆಳೆಯುವ ಸೂಚನೆಗಳು/ ಸಲಹೆಗಳು ಚರ್ಚೆಗೆ ಬಾಕಿ ಉಳಿದಿವೆ. ಸಮಯದ ಅಭಾವದಿಂದ ಅವು ಹಾಗೆಯೇ ಇರುತ್ತವೆ. ಈ ಸದನವು ಜನರ ಹಲವಾರು ಸಮಸ್ಯೆಗಳೆಡೆಗೆ ತಲುಪಲೂ ಸಾಧ್ಯವಾಗುವುದಿಲ್ಲ. ಹೀಗಿರುವಾಗಲೂ ಕೇವಲ ಒಂದೇ ಒಂದು ವಿಷಯವನ್ನಿಟ್ಟುಕೊಂಡು ಕಲಾಪಗಳನ್ನು ಮುಂದುವರಿಸಲು ಬಿಡದಿರುವುದು ಎಂತಹ ದೇಶಪ್ರೇಮ? ತಮ್ಮನ್ನು ಚುನಾಯಿಸಿ ಕಳುಹಿಸಿರುವ ಮತದಾರರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಸಾಮಾಜಿಕ ಬದ್ಧತೆ ಸ್ವಲ್ಪವೂ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ; ಇಲ್ಲದಿದ್ದರೆ ಅವರು ಸಮಸ್ಯೆಗಳ ಮೇಲೆ ನಿರ್ದಿಷ್ಟ ವಿಷಯಗಳು, ಸಮಗ್ರ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಒತ್ತಿಹೇಳುತ್ತಿದ್ದರು. ಆದ್ದರಿಂದ, ಸಂಸತ್ತಿನ ಅಥವಾ ವಿಧಾನಸಭೆಯ ಸಭಾಗೃಹಗಳು ಇತ್ತೀಚಿನ ದಿನಗಳಲ್ಲಿ ‘ಜನತೆಯ ಕಲಾಪಗಳನ್ನು ನಿರ್ವಹಿಸುವ ಸದನ’ಗಳಿಗಿಂತ ‘ರಾಜಕೀಯ ಅಖಾಡ’ವಾಗಿ ಮಾರ್ಪಟ್ಟಿದೆಯೆಂದು ಕಂಡು ಬರುತ್ತದೆ; ಏಕೆಂದರೆ ‘ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು’ ಮೂಲ ಉದ್ದೇಶವಾಗಿದ್ದು, ‘ಜನರ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಕಡಿಮೆ ಮತ್ತು ರಾಜಕೀಯ ಮಾಡುವುದರಲ್ಲಿಯೇ ಹೆಚ್ಚಾಗಿದೆಯೇ?’ ಎನ್ನುವ ಪ್ರಶ್ನೆ ಯಾರಿಗಾದರೂ ಮೂಡುತ್ತದೆ. ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಕಳೆದ 9 ದಿನಗಳಿಂದ ಸಂಸತ್ತಿನಲ್ಲಿ ಗದ್ದಲ ನಡೆಸಿದ್ದವು. ಮಣಿಪುರದ ಪ್ರಶ್ನೆಯು ವಾಸ್ತವವಾಗಿ ಸುದೀರ್ಘ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಮಣಿಪುರದ ದಹನದ ಹಿಂದೆ ಹಲವು ಕಾರಣಗಳಿವೆ ಮತ್ತು ಸಮಸ್ಯೆಯು ಹಲವು ಅಂಶಗಳನ್ನು ಹೊಂದಿದೆ. ಇದರಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ. ಇದು ಕಳೆದ ಹಲವು ದಶಕಗಳಿಂದ ಅಲ್ಲಿನ ಹಿಂದೂ ಮೈತೇಯಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಪ್ರತಿಕ್ರಿಯೆಯಾಗಿದೆ. ಹಿಂದೂಗಳು ಯಾವುದೇ ವಿಚಾರವನ್ನು ಎತ್ತಿದರೂ ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಸರ್ಕಾರವನ್ನು ಮುತ್ತಿಗೆ ಹಾಕುತ್ತವೆ. ಏಕೆಂದರೆ ಸರ್ಕಾರ ಹಿಂದುತ್ವನಿಷ್ಠ ಎಂದು ಗುರುತಿಸಲಾಗುತ್ತಿದೆ ! ಕೊನೆಗೆ ಬೇಸತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಇವರು ‘ಸದಸ್ಯರ ನಡವಳಿಕೆ ಸುಧಾರಿಸದ ವರೆಗೆ ಲೋಕಸಭೆಯ ಕಾರ್ಯಕಲಾಪಗಳನ್ನು ನಡೆಸುವುದಿಲ್ಲ’ ಎಂದು ನಿರ್ಧರಿಸಿದರು.

ಸಾರ್ವಜನಿಕರೂ ಪ್ರಶ್ನಿಸಬೇಕು!

ಸಭಾಂಗಣದ ಕಾರ್ಯಕಲಾಪಗಳನ್ನು ದೂರದರ್ಶನ ಸುದ್ದಿ ವಾಹಿನಿಗಳಲ್ಲಿಯೂ ತೋರಿಸಲಾಗುತ್ತದೆ. ಲಕ್ಷಾಂತರ ಮತದಾರರು ಇದನ್ನು ವೀಕ್ಷಿಸುತ್ತಾರೆ. ಅವರ ಮುಂದೆ ನಾವು ಏನು ಹೇಳುತ್ತೇವೆ, ನಡೆದುಕೊಳ್ಳುತ್ತೇವೆ ಎಂಬ ಅರಿವು ಜನಪ್ರತಿನಿಧಿಗಳಿಗೆ ಇರುವುದಿಲ್ಲ. ಪ್ರಸ್ತುತ, ಮಹಾರಾಷ್ಟ್ರದ ವಿಧಾನಸಭೆಯ ಕಲಾಪಗಳನ್ನು ನೋಡಲು ಶಾಲಾ ವಿದ್ಯಾರ್ಥಿಗಳನ್ನು ಸಹ ಕರೆತರಲಾಗುತ್ತದೆ. ಈ ಮಕ್ಕಳ ಮುಂದೆ ಈ ಪ್ರತಿನಿಧಿ ಯಾವ ಆದರ್ಶವನ್ನು ಇಡುತ್ತಾರೆ? ಈ ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ “ನಾವು ಶಾಲೆಯಲ್ಲಿ ಶಿಕ್ಷಕರು ಹೇಳುವುದನ್ನು ಕೇಳುತ್ತೇವೆ, ಶಾಂತವಾಗಿ ಕುಳಿತುಕೊಳ್ಳುತ್ತೇವೆ; ಆದರೆ ಇಷ್ಟು ದೊಡ್ಡವರು ಮತ್ತು ತಮ್ಮನ್ನು ಜನಪ್ರತಿನಿಧಿಗಳೆಂದು ಕರೆದುಕೊಳ್ಳುವವರು ಏಕೆ ಹಾಗೆ ಮಾಡುವುದಿಲ್ಲ?’ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿರಬೇಕು. ಇಷ್ಟೇ ಅಲ್ಲ ‘ಒಬ್ಬರು ಮಾತನಾಡುವಾಗ ಬೇರೆಯವರು ಸುಮ್ಮನಿರಬೇಕ’’ ಎನ್ನುವ ಒಂದು ಸರಳ ನಿಯಮವೂ ಕೆಲವು ಜನಪ್ರತಿನಿಧಿಗಳು ಪಾಲಿಸುತ್ತಿರುವುದು ಕಂಡು ಬರುವುದಿಲ್ಲ. ಈ ಬಗ್ಗೆ ಸ್ಪೀಕರ್ ಅಥವಾ ಅಧ್ಯಕ್ಷರಿಗೆ ಮೇಲಿಂದಮೇಲೆ ಈ ವಿಷಯದ ಕುರಿತು ಹೇಳಬೇಕಾಗುತ್ತದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಮುಂಗಾರು ಕಲಾಪದ ವೇಳೆ ಅಧ್ಯಕ್ಷರು ಪ್ರತಿನಿಧಿಯನ್ನು ಕುಳಿತುಕೊಳ್ಳುವಂತೆ ಮೇಲಿಂದ ಮೇಲೆ ಹೇಳುತ್ತಿದ್ದರೂ ಅವರು ಕೇಳುತ್ತಿರಲಿಲ್ಲ. ಪ್ರಹಾರ್ ಜನಶಕ್ತಿ ಪಕ್ಷದ ಶಾಸಕ ಬಚ್ಚು ಕಡು ಮಾತನಾಡುತ್ತಿರುವಾಗ 2 ವಿಪಕ್ಷಗಳ ಸದಸ್ಯರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮಾತನಾಡಲು ತೊಂದರೆಯಾಗುತ್ತಿದೆ ಎಂದು ಬಚ್ಚು ಕಡು ಕೋಪಗೊಂಡರು.

ಜುಲೈ 4 ರಂದು, ರಾಜ್ಯಸಭೆಯನ್ನು ಗೊಂದಲದ ಕಾರಣದಿಂದ ಒಂದು ದಿನಕ್ಕೆ ಮುಂದೂಡಬೇಕಾಯಿತು, ಅದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸ್ಪೀಕರ್ ಜಗದೀಪ್ ಧನಖಡ್ ನಡುವೆ ಕೋಪಿಸಿಕೊಳ್ಳುವ ಬಗ್ಗೆ ಹಾಸ್ಯದ ವಾಗ್ವಾದ ನಡೆಯಿತು, ಅಂದರೆ ಸದನದಲ್ಲಿ ಇಡೀ ದೇಶವನ್ನು ಪ್ರತಿನಿಧಿಸುವ ನಾಯಕರು ಇರುವಾಗಲೇ ಸಭಾಗೃಹದ ಕಾರ್ಯಕಲಾಪಗಳನ್ನು ನಡೆಸುವ ದೃಷ್ಟಿಯಿಂದ ಪ್ರಯತ್ನಗಳು ನಡೆಯುವುದಿಲ್ಲ. ‘ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುವ ಪ್ರತಿನಿಧಿಗಳು ನಮ್ಮನ್ನು ಪ್ರತಿನಿಧಿಸುತ್ತಾರೆ’ ಎನ್ನುವುದು ಜನತೆಗೆ ಅರಿವಾಗುತ್ತದೆ; ಆದರೆ ಇನ್ನೂ ಎಲ್ಲ ಜನರು ಜಾಗರೂಕರಾಗದೇ ಇರುವುದರಿಂದ ಅವರು ಕೊಬ್ಬುತ್ತಿದ್ದಾರೆ. `ಒಂದು ದಿನ ಜನತೆಯೂ ಈ ಸಂದರ್ಭದಲ್ಲಿಯೂ ಜಾಗರೂಕರಾಗುತ್ತಾರೆ ಮತ್ತು ಜನಪ್ರತಿನಿಧಿಗಳಿಗೆ ಈ ಸಂದರ್ಭದಲ್ಲಿ ಪ್ರಶ್ನಿಸುತ್ತಾರೆ’, ಇದರಲ್ಲಿ ಯಾವುದೇ ಸಂಶಯವಿಲ್ಲ. ಮಾಧ್ಯಮಗಳೂ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಕೆಲಸ ಮಾಡುತ್ತಿಲ್ಲ. ದೇಶದಲ್ಲಿ ಕೋಟ್ಯಾವಧಿ ಜನಸಂಖ್ಯೆ ಜನತೆಯಿದ್ದಾರೆ ಮತ್ತು ಸದನಗಳಲ್ಲಿ ಕೆಲವು ನೂರು ಪ್ರತಿನಿಧಿಗಳಿದ್ದಾರೆ; ಆದರೆ ‘ಜನತೆಗೆ ಮತ ಕೇಳಲು ಬರುವ ಪಕ್ಷಗಳ ಪ್ರತಿನಿಧಿಗಳನ್ನಾಗಲಿ, ಮುಖಂಡರನ್ನಾಗಲಿ ಜನ ಪ್ರಶ್ನಿಸುವುದಿಲ್ಲ’ ಎಂಬುದೂ ಅಷ್ಟೇ ಸತ್ಯವಾಗಿದೆ. `ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಜನರ ಮತ್ತು ದೇಶದ ಸಮಸ್ಯೆಗಳನ್ನು ಪರಿಹರಿಸುವ ಬದಲು ಎಷ್ಟು ಸಹಜವಾಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎನ್ನುವ ವಿಷಯದಲ್ಲಿ ಜನರಲ್ಲಿ ಯಾವಾಗ ಗಂಭೀರತೆ ನಿರ್ಮಾಣವಾಗುವುದೋ, ಆಗ ಈ ಜನಪ್ರತಿನಿಧಿಗಳು ಈ ಸದನಕ್ಕೆ ಬರಲು ಅರ್ಹರಾಗುವುದಿಲ್ಲ. ವಾಸ್ತವವಾಗಿ, ಸಾಮ, ದಾಮ, ದಂಡ, ಭೇದ ಇವುಗಳ ಪ್ರಕಾರ ಸದನದ ಶಿಸ್ತನ್ನು ಮುರಿಯುವ ಪ್ರತಿನಿಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಒಂದೇ ಅವರನ್ನು ಅಂತರ್ಮುಖಗೊಳಿಸಲು ಒಂದು ಉತ್ತಮ ಪರ್ಯಾಯವಾಗಿದೆ. ಇಂದು, ಇಡೀ ಜಗತ್ತು ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲಿ ಆಶಾವಾದದೊಂದಿಗೆ ‘ಆದರ್ಶ’ ಎಂದು ನೋಡುತ್ತಿದೆ. ಆದ್ದರಿಂದ, ಇದು ದೇಶದ ಸಂಸತ್ತಿನಿಂದಲೇ ಅದರ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಅದಕ್ಕಾಗಿ ಸರ್ಕಾರವು ಕ್ರಮ ತೆಗೆದುಕೊಳ್ಳುವುದು ಅಪೇಕ್ಷಿತವಿದೆ.

ಸದನದ ಶಿಸ್ತು ಮುರಿಯುವ ಜನಪ್ರತಿನಿಧಿಗಳಿಗೆ ಸಾಮ, ದಾಮ, ದಂಡ ಮತ್ತು ಭೇದ ಇವುಗಳ ಅನುಸಾರ ಕಠಿಣ ಶಿಕ್ಷೆ ವಿಧಿಸುವುದು ಒಂದೇ ಉತ್ತಮ ಪರ್ಯಾಯವಾಗಿದೆ.