‘ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ತೊಂದರೆಯಾಗಬಾರದೆಂದು’, ಸಾಧಕರು ಈ ಮುಂದಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು !

ಕು. ಮಧುರಾ ಭೋಸಲೆ

‘ಕೆಲವು ಸಾಧಕರಿಗೆ ಸ್ಮಶಾನಕ್ಕೆ ಅಥವಾ ಇತರ ರಜ-ತಮ ಪ್ರಧಾನ ಸ್ಥಳಗಳಿಗೆ ವೈಯಕ್ತಿಕ ಕಾರಣಗಳಿಗಾಗಿ ಅಥವಾ ಸಮಷ್ಟಿಸೇವೆಗಾಗಿ ಹೋಗಬೇಕಾಗುತ್ತದೆ. ಇಂತಹ ಸ್ಥಳಗಳು ರಜ-ತಮಪ್ರಧಾನವಾಗಿರುವುದರಿಂದ ಈ ಸ್ಥಳಕ್ಕೆ ಹೋದಾಗ ಸಾಧಕರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆದಾಯಕ (ಕಪ್ಪು) ಆವರಣ ಬರುತ್ತದೆ ಹಾಗೂ ಅದರಿಂದಾಗಿ ಅವರಿಗೆ ವಿವಿಧ ಪ್ರಕಾರದ ಶಾರೀರಿಕ, ಮಾನಸಿಕ, ಬೌದ್ಧಿಕ ಅಥವಾ ಆಧ್ಯಾತ್ಮಿಕ ಸ್ವರೂಪದ ತೊಂದರೆಯಾಗಿ ಸಾಧನೆಯನ್ನೂ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ‘ಸಾಧಕರಿಗೆ ಈ ಮೇಲಿನಂತೆ ತೊಂದರೆಯಾಗಬಾರದೆಂದು’, ಅವರು ಈ ಮುಂದಿನ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು.

೧. ಸಾಧಕರು ರಜ-ತಮ ಪ್ರಧಾನ ಸ್ಥಳಗಳಿಗೆ ಹೋಗುವ ಮೊದಲು ಮಾಡಬೇಕಾದ ಉಪಾಯಗಳು

೧ ಅ. ಸಾಧಕರು ಧರಿಸುವ ವಸ್ತ್ರಗಳನ್ನು ಚೈತನ್ಯಮಯಗೊಳಿಸುವುದು : ಸಾಧಕರು ರಜ-ತಮ ಪ್ರಧಾನ ಸ್ಥಳಕ್ಕೆ ಹೋಗುವಾಗ ಅವರು ಧರಿಸುವ ವಸ್ತ್ರಗಳನ್ನು ಚೈತನ್ಯಮಯಗೊಳಿಸಬೇಕು. ವಸ್ತ್ರಗಳನ್ನು ಚೈತನ್ಯಮಯಗೊಳಿಸಲು ಒಗೆದಿರುವ ವಸ್ತ್ರಗಳನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿಡಬೇಕು. ಅನಂತರ ಈ ವಸ್ತ್ರಗಳಲ್ಲಿ ಸನಾತನ ಪ್ರಭಾತ, ದೇವತೆಗಳ ಸಾತ್ತ್ವಿಕ ಚಿತ್ರಗಳು, ನಾಮಪಟ್ಟಿಗಳು ಅಥವಾ ಕರ್ಪೂರದ ತುಂಡನ್ನು ಹಾಕಿ ಆ ವಸ್ತ್ರಗಳನ್ನು ಖಾಲಿ ಪೆಟ್ಟಿಗೆಯಲ್ಲಿಡಬೇಕು. ಹೀಗೆ ಚೈತನ್ಯಮಯಗೊಳಿಸಿದ ವಸ್ತ್ರಗಳನ್ನು ಧರಿಸುವುದರಿಂದ ಸಾಧಕರ ಸ್ಥೂಲ ಹಾಗೂ ಸೂಕ್ಷ್ಮ ದೇಹದ ಸುತ್ತಲೂ ಸಾತ್ತ್ವಿಕತೆ ಮತ್ತು ಚೈತನ್ಯದ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ.

೧ ಆ. ೧ ಆ. ಸಾಧಕರು ದೇವತೆಗಳ ಚಿತ್ರಗಳನ್ನು ಅಥವಾ ನಾಮಪಟ್ಟಿಗಳನ್ನು ಬಟ್ಟೆಯ ಚೀಲದಲ್ಲಿ ಹಾಕಿ ಅದನ್ನು ವಸ್ತ್ರದ ಒಳಗಡೆ ಅನಾಹತಚಕ್ರ ಹಾಗೂ ಮಣಿಪುರಚಕ್ರದ ಸ್ಥಾನದಲ್ಲಿ ಶರೀರದ ಮುಂದೆ ಹಾಗೂ ಹಿಂದೆ ಹಚ್ಚಿಕೊಳ್ಳುವುದು : ಸಾಧಕರು ದೇವತೆಗಳ ಚಿತ್ರಗಳನ್ನು ಅಥವಾ ನಾಮಪಟ್ಟಿಗಳನ್ನು ಬಟ್ಟೆಯ ಚೀಲದಲ್ಲಿ ಹಾಕಿ ಅದನ್ನು ವಸ್ತ್ರದ ಒಳಗಡೆ ಅನಾಹತಚಕ್ರ ಹಾಗೂ ಮಣಿಪುರಚಕ್ರದ ಸ್ಥಾನದಲ್ಲಿ ಶರೀರದ ಮುಂದೆ ಹಾಗೂ ಹಿಂದೆ ಹಚ್ಚಿಕೊಳ್ಳಬೇಕು. ಅದರಿಂದ ದೇಹದ ಸುತ್ತಲೂ ಸಂರಕ್ಷಣಾಕವಚ ನಿರ್ಮಾಣವಾಗಿ ರಜ-ತಮ ಪ್ರಧಾನ ಸ್ಥಳಗಳಲ್ಲಿರುವ ತೊಂದರೆದಾಯಕ ಶಕ್ತಿಯ ಆಕ್ರಮಣದಿಂದ ಸಾಧಕರ ರಕ್ಷಣೆಯಾಗಲು ಸಹಾಯವಾಗುತ್ತದೆ.

೧ ಇ. ಸಾಧಕರು ಪ್ರಾಣಶಕ್ತಿವಹನ ಪದ್ಧತಿಗನುಸಾರ ನಾಮಜಪವನ್ನು ಹುಡುಕಿ ಜಪ ಮಾಡುವುದು : ರಜ-ತಮ ಪ್ರಧಾನ ಸ್ಥಳಗಳಿಗೆ ಹೋಗುವ ಮೊದಲು ಪ್ರಾಣಶಕ್ತಿವಹನ ಪದ್ಧತಿಗನುಸಾರ ನಾಮಜಪವನ್ನು ಹುಡುಕಿ ಅದನ್ನು ಮನಸ್ಸಿನಲ್ಲಿಯೇ ಜಪಿಸುತ್ತಿರಬೇಕು ಅಥವಾ ಸಂಚಾರಿವಾಣಿಯಲ್ಲಿ ಧ್ವನಿಮುದ್ರಿಸಿ ಅದನ್ನು ಕೇಳುತ್ತಾ ಇರಬೇಕು.

೨. ಸಾಧಕರು ರಜ-ತಮ ಪ್ರಧಾನ ಸ್ಥಳಗಳಿಗೆ ಹೋದಾಗ ಮಾಡಬೇಕಾದ ಉಪಾಯಗಳು

೨ ಅ. ಸಾಧಕರು ಸಂತರ ಧ್ವನಿಯಲ್ಲಿನ ಭಜನೆ ಅಥವಾ ದೈವೀ ನಾದವನ್ನು ಕೇಳಬೇಕು : ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಅಥವಾ ದೈವೀ ನಾದವನ್ನು ಸಂಚಾರಿವಾಣಿಯಲ್ಲಿ ಸಣ್ಣ ಧ್ವನಿಯಲ್ಲಿ ಹಚ್ಚಿಕೊಂಡು ತಮ್ಮೊಂದಿಗಿರುವ ಚೀಲದಲ್ಲಿಟ್ಟುಕೊಳ್ಳಬೇಕು. ಭಜನೆ ಅಥವಾ ದೈವೀ ನಾದದಲ್ಲಿನ ಚೈತನ್ಯಮಯ ನಾದಲಹರಿಗಳಿಂದಾಗಿ ಸಾಧಕರ ಸುತ್ತಲಿನ ವಾತಾವರಣ ಶುದ್ಧೀಕರಣವಾಗಿ ಸಾಧಕರ ಸುತ್ತಲೂ ಸಾತ್ತ್ವಿಕ ನಾದಲಹರಿಗಳ ಸಂರಕ್ಷಣಾಕವಚ ನಿರ್ಮಾಣವಾಗಲು ಸಹಾಯವಾಗುತ್ತದೆ.

೨ ಆ. ಸಾಧಕರು ಪ್ರಾಣಶಕ್ತಿವಹನ ಪದ್ಧತಿಯಿಂದ ಕಂಡುಹಿಡಿದ ನಾಮಜಪವನ್ನು ಜಪಿಸುವುದು ಅಥವಾ ಹೊಸ ನಾಮಜಪವನ್ನು ಹುಡುಕಿ ಜಪಿಸುವುದು : ಇಂತಹ ಸ್ಥಳಗಳಿಗೆ ಹೋಗುವ ಮೊದಲು ಪ್ರಾಣಶಕ್ತಿವಹನ ಪದ್ಧತಿಯಿಂದ ಕಂಡುಹಿಡಿದ ನಾಮಜಪವನ್ನು ಮಾಡಬೇಕು. ಈ ನಾಮಜಪದಿಂದ ಸೂಕ್ಷ್ಮದಿಂದಾಗುವ ತೊಂದರೆ ಕಡಿಮೆಯಾಗದಿದ್ದರೆ, ಪುನಃ ಪ್ರಾಣಶಕ್ತಿವಹನ ಪದ್ಧತಿಯಿಂದ ನಾಮಜಪವನ್ನು ಹುಡುಕಿ ಅದನ್ನು ಕೇಳಬೇಕು ಅಥವಾ ಮನಸ್ಸಿನಲ್ಲಿ ಜಪಿಸಬೇಕು. ಅದರಿಂದ ಸಾಧಕರ ಕಡೆಗೆ ದೇವತೆಯ ತತ್ತ್ವ ಹಾಗೂ ಚೈತನ್ಯವು ಆಕರ್ಷಿಸಲ್ಪಟ್ಟು ಸಾಧಕರ ಸುತ್ತಲೂ ದೈವೀ ಶಕ್ತಿಯ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ. ಆದ್ದರಿಂದ ಸಾಧಕರಿಗೆ ರಜ-ತಮ ಪ್ರಧಾನ ಸ್ಥಳಗಳಲ್ಲಾಗುವ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತವೆ.

೨ ಇ. ಸಾಧಕರು ಮುಖಪಟ್ಟಿ (ಮಾಸ್ಕ್) ಧರಿಸುವ ಮೊದಲು ಮಾಡಬೇಕಾದ ಉಪಾಯ : ಸಾಧಕರು ಧರಿಸುವ ಮುಖಪಟ್ಟಿಯನ್ನು ಸ್ವಚ್ಛವಾಗಿ ತೊಳೆದು ಬಿಸಿಲಿನಲ್ಲಿಡಬೇಕು. ಅದು ಒಣಗಿದ ನಂತರ ಅದರ ಒಳಭಾಗಕ್ಕೆ ಅತ್ತರ್ ಅಥವಾ ಕರ್ಪೂರದ ಹುಡಿಯನ್ನು ಹಚ್ಚಿ ಅದನ್ನು ಧರಿಸಬೇಕು. ಅದರಿಂದ ಶ್ವಾಸದ ಮೂಲಕ ಚೈತನ್ಯಮಯ ಸುಗಂಧ ದೇಹದೊಳಗೆ ಹೋಗಿ ಶ್ವಸನಮಾರ್ಗ ಸ್ವಚ್ಛವಾಗಿ ದೇಹದ ಒಳಗೆ ಕೂಡ ಚೈತನ್ಯ ಹರಡುತ್ತದೆ. ಈ ರೀತಿಯಲ್ಲಿ ಮುಖಪಟ್ಟಿಯನ್ನು ಹಾಕಿಕೊಂಡಾಗ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಗಿ ಅವರಿಗಾಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಸ್ವರೂಪದ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ. ಇತರ ವೇಳೆಯಲ್ಲಿಯೂ ಸಾಧಕರು ಮುಖಪಟ್ಟಿಯನ್ನು(ಮಾಸ್ಕ್) ಧರಿಸಬೇಕಾಗುತ್ತದೆ. ಆದ್ದರಿಂದ ಸಾಧಕರು ಇತರ ವೇಳೆಯಲ್ಲಿಯೂ ಮುಖಪಟ್ಟಿಯನ್ನು ಧರಿಸುವಾಗ ಈ ಉಪಾಯವನ್ನು ಮಾಡಬಹುದು.

೩. ಸಾಧಕರು ರಜ-ತಮ ಪ್ರಧಾನ ಸ್ಥಳದಿಂದ ಹಿಂತಿರುಗಿ ಬಂದ ನಂತರ ಮಾಡಬೇಕಾದ ಉಪಾಯಗಳು

೩ ಅ. ಸಾಧಕರು ಗೋಮೂತ್ರ, ವಿಭೂತಿ ಅಥವಾ ಕರ್ಪೂರ ಹಾಕಿದ ನೀರಿನಿಂದ ತಲೆಗೆ ಸ್ನಾನ ಮಾಡಬೇಕು : ಇಂತಹ ಸ್ಥಳಗಳಿಗೆ ಹೋಗಿ ಬಂದನಂತರ ಸಾಧಕರು ಮನೆಯಲ್ಲಿ ಅಥವಾ ಆಶ್ರಮದಲ್ಲಿ ಗೋಮೂತ್ರ, ವಿಭೂತಿ ಅಥವಾ ಕರ್ಪೂರ ಹಾಕಿದ ನೀರಿನಿಂದ ತಲೆಗೆ ಸ್ನಾನ ಮಾಡಬೇಕು. ಆದರಿಂದ ಸಾಧಕರ ದೇಹದಲ್ಲಿನ ಸಪ್ತ ಕುಂಡಲಿನಿಚಕ್ರಗಳು, ನವದ್ವಾರಗಳು, ಸ್ಥೂಲದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ತೊಂದರೆದಾಯಕ ಆವರಣವು ಆಪಮಯ ಚೈತನ್ಯಲಹರಿಗಳ ಸ್ಪರ್ಶದಿಂದ ದೂರವಾಗುತ್ತದೆ. ಆದ್ದರಿಂದ ಸಾಧಕರಿಗೆ ಸ್ಥೂಲ ಅಥವಾ ಸೂಕ್ಷ್ಮ ಸ್ತರದಲ್ಲಿ ಅರಿವಾಗುವ ಜಡತ್ವ ಅಥವಾ ದಣಿವು ಅಥವಾ ನಿರುತ್ಸಾಹವು ದೂರವಾಗಿ ಹಗುರವೆನಿಸುವುದು.

೩ ಆ. ಸಾಧಕರು ಸ್ನಾನದ ನಂತರ ಒಗೆದಿರುವ ಹಾಗೂ ದೇವತೆಗಳ ಸಾತ್ತ್ವಿಕ ನಾಮಪಟ್ಟಿ ಮತ್ತು ಕರ್ಪೂರದಿಂದ ಚೈತನ್ಯಮಯಗೊಳಿಸಿದ ವಸ್ತ್ರವನ್ನು ಧರಿಸಬೇಕು : ಒಗೆದ ವಸ್ತ್ರದ ಸಾತ್ತ್ವಿಕತೆಯು ಉಪಯೋಗಿಸಿದ ವಸ್ತ್ರಕ್ಕಿಂತ ಹೆಚ್ಚು ಇರುವುದರಿಂದ ಸಾಧಕರು ಸ್ನಾನ ಮಾಡಿದ ನಂತರ ಒಗೆದಿರುವ ಹಾಗೂ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳು ಮತ್ತು ಕರ್ಪೂರದಿಂದ ಚೈತನ್ಯಮಯಗೊಳಿಸಿದ ವಸ್ತ್ರವನ್ನು ಧರಿಸಬೇಕು. ಅದರಿಂದ ವಸ್ತ್ರದಲ್ಲಿನ ಸಾತ್ತ್ವಿಕ ಲಹರಿಗಳು ದೇಹದೊಳಗೆ ಪ್ರವೇಶವಾಗುವುದರಿಂದ ಸಾಧಕರ ದೇಹದಲ್ಲಿನ ರಜ-ತಮ ಲಹರಿಗಳ ಪ್ರಭಾವ ಕಡಿಮೆಯಾಗಿ ಸಾಧಕರಿಗಾಗುವ ತೊಂದರೆ ಕಡಿಮೆಯಾಗುತ್ತದೆ.

೩ ಇ. ಸಾಧಕರು ಬಿಸಿಲಿನ ಉಪಾಯ ಮಾಡಬೇಕು : ಅನಂತರ ಸಾಧಕರು ೧೫-೨೦ ನಿಮಿಷ ಸಹಿಸಲು ಸಾಧ್ಯವಿರುವಷ್ಟು ತಾಪಮಾನವಿರುವ ಬಿಸಿಲಿನಲ್ಲಿ ಕುಳಿತು ನಾಮಜಪ ಮಾಡಬೇಕು. ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ಸಾಧಕರ ಸ್ಥೂಲ ಮತ್ತು ಸೂಕ್ಷ್ಮ ದೇಹದ ಮೇಲೆ ಸೌರ ಶಕ್ತಿಯಲ್ಲಿನ ಸಾತ್ತ್ವಿಕತೆ, ಮಾರಕ ಶಕ್ತಿ ಮತ್ತು ಚೈತನ್ಯದ ಲಾಭವಾಗಿ ಅವರ ಸುತ್ತಲಿರುವ ಸೂಕ್ಷ್ಮ ಸ್ತರದಲ್ಲಿನ ತೊಂದರೆದಾಯಕ ಶಕ್ತಿಯ ಆವರಣ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತದೆ ಮತ್ತು ದೇಹದಲ್ಲಿ ಸಾತ್ತ್ವಿಕ ಶಕ್ತಿ ಕಾರ್ಯನಿರತವಾಗುತ್ತದೆ. ಆದ್ದರಿಂದ ಸಾಧಕರಿಗಾಗುವ ವಿವಿಧ ಪ್ರಕಾರದ ತೊಂದರೆಗಳು ದೂರವಾಗುತ್ತವೆ.

೪. ಇಷ್ಟು ಉಪಾಯ ಮಾಡಿಯೂ ಸಾಧಕರ ತೊಂದರೆ ಕಡಿಮೆಯಾಗದಿದ್ದರೆ ಅವರು ಈ ಮುಂದಿನ ಆಧ್ಯಾತ್ಮಿಕ ಉಪಾಯ ಮಾಡಬೇಕು.

೪ ಅ. ಉಪ್ಪುನೀರಿನ ಉಪಾಯ ಮಾಡುವುದು : ಕಲ್ಲುಪ್ಪು ಹಾಕಿದ ನೀರಿನಲ್ಲಿ ೧೫-೨೦ ನಿಮಿಷ ಕಾಲುಗಳನ್ನಿಟ್ಟು ಕುಳಿತುಕೊಳ್ಳಬೇಕು.

೪ ಆ. ಪೆಟ್ಟಿಗೆಗಳ ಉಪಾಯ ಮಾಡುವುದು : ದೊಡ್ಡ ಗಾತ್ರದ ಖಾಲಿ ಪೆಟ್ಟಿಗೆಯಲ್ಲಿ ಕಾಲುಗಳನ್ನಿಟ್ಟು ೧೫-೨೦ ನಿಮಿಷ ಕುಳಿತುಕೊಳ್ಳಬೇಕು. ಅದರಿಂದ ಪೆಟ್ಟಿಗೆಯ ಟೊಳ್ಳಿನಲ್ಲಿ ಕಾಲಿನ ತೊಂದರೆದಾಯಕ ಶಕ್ತಿ ಸೆಳೆಯಲ್ಪಟ್ಟು ಕಾಲು ಅಥವಾ ಮೈ ಭಾರವಾಗುವುದು ಅಥವಾ ನೋಯುವಂತಹ ತೊಂದರೆ ಕಡಿಮೆಯಾಗುತ್ತದೆ.

೪ ಇ. ಊದುಬತ್ತಿಯಿಂದ ಆವರಣ ತೆಗೆಯುವುದು : ಈ ಮೇಲಿನ ಉಪಾಯಗಳ ಹೊರತು ಸಾಧಕರು ನವಿಲುಗರಿ ಅಥವಾ ಊದುಬತ್ತಿಯನ್ನು ತಮ್ಮ ಸುತ್ತಲೂ ತಿರುಗಿಸಿ ದೇಹ ಮತ್ತು ಕುಂಡಲಿನಿಚಕ್ರ ಗಳಲ್ಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯಬೇಕು.

೪ ಈ. ಕರ್ಪೂರ, ಪಟಕಾರ (ಸ್ಪಟಿಕ) ಅಥವಾ ತೆಂಗಿನಕಾಯಿಯಿಂದ ಪ್ರತ್ಯಕ್ಷ ಅಥವಾ ಮಾನಸ ದೃಷ್ಟಿ ತೆಗೆಯುವುದು : ಸಾಧಕರು ಕರ್ಪೂರದ ತುಂಡಿನಿಂದ ತನ್ನ ಶರೀರದ ಮುಂದಿನ ಮತ್ತು ಹಿಂದಿನ ಭಾಗದಲ್ಲಿ ನಿವಾಳಿಸಿ ನಂತರ ಅದನ್ನು ತೆಂಗಿನ ಗೆರಟೆಯಲ್ಲಿಟ್ಟು ಸುಡಬೇಕು ಅಥವಾ ಸಾಧಕರು ಇತರ ಸಾಧಕರಿಗೆ ಅಥವಾ ಸಂಬಂಧಿಕರಿಗೆ ಗೆರಟೆಯಲ್ಲಿಟ್ಟಿರುವ ಕರ್ಪೂರದಿಂದ ತನ್ನ ದೃಷ್ಟಿ ತೆಗೆಯಲು ಹೇಳಬೇಕು. ಸಾಧಕರು ತಮ್ಮ ಕುಟುಂಬದವರಿಗೆ ಅಥವಾ ಇತರ ಸಾಧಕರಿಗೆ ಹೀಗೆ ದೃಷ್ಟಿ ತೆಗೆಯಲು ಹೇಳಬಹುದು. ಪ್ರತ್ಯಕ್ಷ ದೃಷ್ಟಿ ತೆಗೆಯಲು ಸಾಧ್ಯವಾಗದಿದ್ದರೆ ಸಾಧಕರು ಹನುಮಂತನಲ್ಲಿ ಪ್ರಾರ್ಥನೆ ಮಾಡಿ ಮಾನಸ ದೃಷ್ಟಿ ತೆಗೆಯಲು ಹೇಳಬೇಕು.

೪ ಉ. ಪ್ರಾಣಶಕ್ತಿವಹನ ಪದ್ಧತಿಯಲ್ಲಿ ಹುಡುಕಿದ ನಾಮಜಪ ಮಾಡುವುದು ಅಥವಾ ಹೊಸ ನಾಮಜಪ ಮಾಡುವುದು : ಮೊದಲಿನ ನಾಮಜಪದಿಂದ ಲಾಭವಾಗದಿದ್ದರೆ, ಪುನಃ ಹೊಸ ನಾಮಜಪವನ್ನು ಹುಡುಕಿ ಅದನ್ನು ಕೇಳಬೇಕು ಅಥವಾ ಮನಸ್ಸಿನಲ್ಲಿಯೇ ಜಪಿಸಬೇಕು. ಈ ಮೇಲಿನ ಉಪಾಯದ ಹೊರತು ಸಾಧಕರು ಅತ್ತರ್ ಹಚ್ಚಿ ಅದರ ಸುಗಂಧವನ್ನು ಅಥವಾ ಕರ್ಪೂರವನ್ನು ಪುಡಿ ಮಾಡಿ ಅದರ ಸುಗಂಧವನ್ನು ಆಘ್ರಾಣಿಸಬೇಕು. ಈ ಎಲ್ಲ ಉಪಾಯಗಳನ್ನು ಮಾಡಿಯೂ ಪರಿಣಾಮವಾಗದಿದ್ದರೆ, ಸಾಧಕರು ಪ್ರಮುಖ ಸಾಧಕರಲ್ಲಿ ಅಥವಾ ಸಂತರಲ್ಲಿ ಸೂಕ್ಷ್ಮದಲ್ಲಿನ ತೊಂದರೆ ಕಡಿಮೆಗೊಳಿಸುವ ನಾಮಜಪಾದಿ ಉಪಾಯವನ್ನು ಕೇಳಿಕೊಳ್ಳಬೇಕು.

ಕೃತಜ್ಞತೆ

‘ಹೇ ಭಗವಂತ, ನಿನ್ನ ಕೃಪೆಯಿಂದ ನನಗೆ ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ಆಗುವ ಸೂಕ್ಷ್ಮ ಸ್ತರದ ತೊಂದರೆಗಳಿಂದ ರಕ್ಷಣೆಯಾಗಲು ಯಾವ ಆಧ್ಯಾತ್ಮಿಕ ಉಪಾಯ ಮಾಡಬೇಕೆಂದು ತಿಳಿಯಿತು, ಅದಕ್ಕಾಗಿ ನಾನು ನಿನ್ನ ಪಾವನ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ),  ಸನಾತನ ಆಶ್ರಮ, ರಾಮನಾಥಿ ಗೋವಾ. (೨೧.೧೨.೨೦೨೧)