ಪೂ. ರಮಾನಂದಣ್ಣ ಇವರು ಮೋಕ್ಷಗುರುಗಳ ಬಗ್ಗೆ ವ್ಯಕ್ತಪಡಿಸಿದ ಭಾವಪೂರ್ಣ ಕೃತಜ್ಞತೆ !

ಪೂ. ರಮಾನಂದ ಗೌಡ

೧. ಹೇ ದಯಾಸಾಗರ, ಹೇ ಕೃಪಾಸಿಂಧು-ಗುರುದೇವ ಅನೇಕ ಜನ್ಮಗಳಲ್ಲಿ ನಾನು ಮಾಡಿದ ಕರ್ಮಗಳಿಂದ ‘ಪುನರಪಿ ಜನನಂ, ಪುನರಪಿ ಮರಣಂ ಈ ಚಕ್ರದಲ್ಲಿ ಸಿಲುಕಿದ ಈ ಅನಾಥನಿಗೆ ದಿಕ್ಕು ಕಾಣದಾಗಿತ್ತು. ನೀವು ಈ ಜನ್ಮದಲ್ಲಿ ಬಂದು ಕೈಹಿಡಿದು, ನಾನು ಮಾಡಿದ ಅನೇಕ ಜನ್ಮಗಳ ಪಾಪವನ್ನು ಮನ್ನಿಸಿ, ನನಗೆ ಗುರುಕೃಪಾಯೋಗಾನುಸಾರ ಸಾಧನೆಯ ಮಾರ್ಗವನ್ನು ನೀಡಿ, ಈ ಜೀವಕ್ಕೆ ಆಶ್ರಯವನ್ನು ನೀಡಿದಿರಿ, ನಿಮ್ಮ ಅಪಾರ ಕೃಪೆಯಿಂದಲೇ ನನ್ನನ್ನು ಈ ಜನ್ಮ-ಮೃತ್ಯು ಚಕ್ರದಿಂದ ಮುಕ್ತನನ್ನಾಗಿ ಮಾಡಿದಿರಿ.

೨. ಸದ್ಗುರುಗಳು ಜನ್ಮವಿಲ್ಲದಂತೆ ಮಾಡುವರು. ಆದರೆ ಇವತ್ತು ನಮ್ಮ ಜೀವನದಲ್ಲಿ ಪರಾತ್ಪರ ಗುರುಗಳಾಗಿ ನೀವೇ ಲಭಿಸಿದ್ದೀರಿ. ನೀವೇ ಈ ಜೀವನೋದ್ಧಾರಕರಾಗಿದ್ದೀರಿ?. ನೀವು ನೀಡಿದಂತಹ ಪ್ರೀತಿಯನ್ನು ಹೇಗೆ ಬಣ್ಣಿಸಲಿ. ನಿಮ್ಮ ಲೀಲೆಯನ್ನು ಹೇಗೆ ವರ್ಣಿಸಲಿ ?

. ನಾನು ಅದೆಷ್ಟೋ ಬಾರಿ ಜೀವನದುದ್ದಕ್ಕೂ ಅನುಭವವನ್ನು ಮಾಡಿದ್ದೇನೆ. ನನ್ನೊಳಗೆ ಮಾಯೆ, ಮೋಹ, ಕ್ರೋಧ, ಲೋಭ, ವಾಸನೆಗಳು ತುಂಬಿ ಹೋಗಿವೆ. ಇದನ್ನು ದೂರ ಮಾಡುವವರು ಕೇವಲ ನೀವು ಮಾತ್ರ ಗುರುದೇವಾ. ನೀವೇ ತಮ್ಮ ದಿವ್ಯ ದೃಷ್ಟಿಯಿಂದಲೇ ಇದನ್ನು ನಷ್ಟ ಮಾಡಬೇಕಾಗಬಹುದು. ನನ್ನಲ್ಲಿ ಅದನ್ನು ಕಡಿಮೆ ಮಾಡಲು ತೃಣಮಾತ್ರವೂ ಶಕ್ತಿ ಇಲ್ಲ.

೪. ನೀವು ಮಾಡಿದ ಕೃಪೆಗಾಗಿ ನಾನು ಇನ್ನೆಷ್ಟೋ ಜನ್ಮ ತೆಗೆದುಕೊಂಡು ಬಂದರೂ, ನಿಮ್ಮ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ. ಈ ಕಲಿಯುಗದ ಘೋರ ಅಂಧಕಾರದ ಸುಳಿವಿನಲ್ಲಿ ಈ ಜೀವ ಸಿಲುಕಿ ಹಾಕಿಕೊಂಡಿತು. ಅಜ್ಞಾನದ ತುತ್ತ ತುದಿಯಲ್ಲಿ ಇದ್ದಂತಹ ಈ ಪಾಪಿ ಜೀವವನ್ನು, ಅನಂತ ಅಪರಾಧಗಳನ್ನು ಮಾಡಿದ ನನ್ನನ್ನು ಇದೆಲ್ಲದರಿಂದ ಹೊರತೆಗೆದು, ಅಷ್ಟು ಮಾತ್ರವಲ್ಲ ಅವೆಲ್ಲವನ್ನು ಕ್ಷಮಿಸಿ, ಜನ್ಮ-ಮೃತ್ಯು ಚಕ್ರದಿಂದ ಕೇವಲ ನೀವೇ ಪಾರು ಮಾಡಿದ್ದೀರಿ. ಇದೆಲ್ಲವೂ ನಿಮ್ಮ ಕೃಪಾದೃಷ್ಟಿಯಿಂದ ಮಾತ್ರ ಸಾಧ್ಯವಾಯಿತು. ಇದರಲ್ಲಿ ನನ್ನದೇನೂ ಪಾತ್ರವೇ ಇಲ್ಲ. ನನ್ನ ಮನಸ್ಸು, ಬುದ್ಧಿಯಲ್ಲಿ ಜನ್ಮಜನ್ಮದ ಕಲ್ಮಶಗಳು ತುಂಬಿದ್ದನ್ನು ನೀವೇ ದೂರ ಮಾಡಿದ್ದೀರಿ. ಅಷ್ಟು ಮಾತ್ರವಲ್ಲದೇ, ನನ್ನ ಅಂತರ್ಮನಸ್ಸನ್ನು ಶುದ್ಧ ಮಾಡಿ, ಅಲ್ಲಿ ಸಾಧನೆಯ ಸಂಸ್ಕಾರವನ್ನು ನಿರ್ಮಾಣ ಮಾಡಿದ್ದೀರಿ. ಮತ್ತು ಹೃದಯದಲ್ಲಿ ಸಾಧನೆಯನ್ನು ಸ್ಥಿರಗೊಳಿಸಿದ್ದೀರಿ. ಅದಕ್ಕಾಗಿ ನಿಮ್ಮ ಚರಣದಲ್ಲಿ ಅನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

೫. ನನಗೆ ಎಂತಹ ಜ್ಞಾನವನ್ನು ನೀಡಿದ್ದೀರಿ.. ಜನಸಾಮಾನ್ಯರು ಅರ್ಥ ಮಾಡಿಕೊಳ್ಳಲಾಗದಂತಹ, ಗ್ರಹಣ ಮಾಡಿಕೊಳ್ಳಲಾಗದಂತಹ ಸ್ಥಿತಿಯಲ್ಲಿರುವರು. ಆದರೆ ನೀವೆಷ್ಟು ಕೃಪಾಳು ಇದ್ದೀರಿ. ನನ್ನ ಮನಸ್ಸು, ಬುದ್ಧಿಯ ಅಜ್ಞಾನವನ್ನು ದೂರ ಮಾಡಿ, ನನಗೆ ಯೋಗ್ಯತೆ ನೀಡಿ, ನಿಮ್ಮ ಜ್ಞಾನವನ್ನು ಗ್ರಹಣ ಮಾಡುವ ಕ್ಷಮತೆಯನ್ನು ವೃದ್ಧಿಸಿ, ನನ್ನಲ್ಲಿ ಈ ಸ್ಥಿತಿಯನ್ನು ನೀವೇ ನಿರ್ಮಾಣ ಮಾಡಿದ್ದೀರಿ. ಈ ನಿಮ್ಮ ಕೃಪೆಗಾಗಿ ಇನ್ನು ಜೀವನಪೂರ್ತಿ ಆಯುಷ್ಯವನ್ನು ಸಾಧನೆಗಾಗಿಯೇ ಮುಡಿಪಾಗಿಡುವೆನು. ಜೀವನ್ಮುಕ್ತ ಮತ್ತು ಬಂಧನ್ಮುಕ್ತಕ್ಕಾಗಿ ನೀವು ತೋರಿಸಿದ, ಈ ಮೋಕ್ಷದ ಮಾರ್ಗದಲ್ಲಿ ಅನೇಕ ಸಾಧಕರು, ಜನ್ಮ ಮೃತ್ಯುವಿನ ಚಕ್ರದಿಂದ ಬಿಡುಗಡೆಯಾದರೆ, ಇನ್ನೂ ಕೆಲವರು ಸಂತರಾದರು, ಸದ್ಗುರುಗಳಾದರು, ಪರಾತ್ಪರ ಗುರುಗಳ ಪದವಿಯನ್ನು ತಲುಪಿದರು. ಈ ಶ್ರೇಷ್ಠ ಪದವಿಯನ್ನು ತಲುಪಲು ಸಚ್ಚಿದಾನಂದ ಸ್ವರೂಪಿ ಸರ್ವಶಕ್ತ (ಪ.ಪೂ. ಡಾಕ್ಟರರ) ಕೃಪೆಯಿಂದಲೇ ಸಾಧ್ಯವಾಯಿತು. ಇದೇ ಮಾರ್ಗದಲ್ಲಿ ನೀವೇ ನಮ್ಮನ್ನು ಮುಂದೆ ಕರೆದುಕೊಂಡು ಹೋಗುವಿರೆಂದು ಸಮರ್ಪಣಾಭಾವದಿಂದ ಬೇಡುತ್ತಿದ್ದೇನೆ ಗುರುದೇವಾ.

. ನನ್ನ ಜೀವನದಲ್ಲಿ ನೀವು ಬಂದ ನಂತರ, ನನ್ನ ಅನೇಕ ಜನ್ಮದ ಪ್ರಾರಬ್ಧಗಳನ್ನು, ಅಂದರೆ ಶಾರೀರಿಕ ತೊಂದರೆ (ದೇಹ ಪ್ರಾರಬ್ಧ), ಮಾನಸಿಕ ತೊಂದರೆ (ಮನೋಪ್ರಾರಬ್ಧ,) ಅನೇಕ ರೀತಿಯ ಕೌಟುಂಬಿಕ ಅಡಚಣೆ, ಆರ್ಥಿಕ ಅಡಚಣೆ (ಕೊಡುಕೊಳ್ಳುವ ಲೆಕ್ಕಾಚಾರ) ಮತ್ತು ಆಧ್ಯಾತ್ಮಿಕ ತೊಂದರೆಗಳು, ಇಷ್ಟು ಮಾತ್ರವಲ್ಲದೇ ಈ ಶರೀರದಿಂದ ಈ ಪ್ರಾಣ ಹೋಗುವಂತಹ ಮೃತ್ಯುಯೋಗವು ಅನೇಕ ಬಾರಿ ಬಂದಿರಬಹುದು. ಅಂತಹ ಸ್ಥಿತಿಯಲ್ಲಿ ನನಗೆ ನೀವೇ ಪ್ರಾಣದಾನವನ್ನು ನೀಡಿದ್ದೀರಿ.

ನಿಮ್ಮ ಪಾದ ಪದ್ಮಗಳ ಆಸರೆ ಬಯಸಿ ಬಂದಿದ್ದೇನೆ. ನನಗೆ ದಯೆ ತೋರುವವರು ನೀವೊಬ್ಬರೇ ಶ್ರೀಹರಿ ? ನನ್ನ ಹೃದಯ ನಿಮಗಾಗಿ ವ್ಯಾಕುಲಗೊಳ್ಳುತ್ತಿದೆ. ಇನ್ನು ನನಗೆ ಉಳಿದದ್ದು ಒಂದೇ ಧ್ಯೇಯ. ನಿಮ್ಮ ಚರಣ ಸೇರುವುದು. ಅದಕ್ಕಾಗಿ ನನ್ನಲ್ಲಿ ತೀವ್ರ ತಳಮಳ, ಅಖಂಡ ಭಾವಾವಸ್ಥೆ, ಅಚಲವಾದ ಶ್ರದ್ಧೆ, ನೀವೇ ನಿರ್ಮಾಣ ಮಾಡಿರೆಂದು ನಿಮ್ಮ ಚರಣದಲ್ಲಿ ಪರಿಪರಿಯಾಗಿ ಪ್ರಾರ್ಥಿಸಿ ಬೇಡಿಕೊಳ್ಳುತ್ತಿದ್ದೇನೆ.

– ಪೂ. ರಮಾನಂದ ಗೌಡ, ಮಂಗಳೂರು. (೨೭.೮.೨೦೨೦)