ಬಾರಾಬಂಕಿ (ಉತ್ತರ ಪ್ರದೇಶ)ಯ ಶ್ರೀ ಹನುಮಾನ ದೇವಾಲಯದ ಪ್ರದೇಶದಲ್ಲಿ ಹರಿತವಾದ ಶಸ್ತ್ರಗಳಿಂದ ೭೦ ವರ್ಷದ ಅರ್ಚಕನ ಹತ್ಯೆ !

ದೇವಾಲಯದ ಬಳಿ ಮದ್ಯದ ಬಾಟಲಿಗಳು ಮತ್ತು ೩ ಲೋಟಗಳು ಪತ್ತೆ !

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರಂತಹ ಪ್ರಖರ ಹಿಂದುತ್ವನಿಷ್ಠರು ಅಧಿಕಾರದಲ್ಲಿರುವಾಗ ಅಲ್ಲಿ ಸಾಧುಗಳು, ಸಂತ-ಮಹಂತ ಮತ್ತು ಪುರೋಹಿತರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಎಲ್ಲರ ಸುರಕ್ಷತೆಗಾಗಿ ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಪೇಕ್ಷಿತವಿದೆ !

ಬಾರಾಬಂಕಿ (ಉತ್ತರ ಪ್ರದೇಶ) – ಇಲ್ಲಿಯ ಖಮೌಲಿ ಗ್ರಾಮದ ಶ್ರೀ ಹನುಮಾನ ದೇವಾಲಯದ ಅರ್ಚಕನನ್ನು ದೇವಾಲಯದ ಆವರಣದಲ್ಲಿ ಹರಿತವಾದ ಆಯುಧದಿಂದ ಹತ್ಯೆ ಮಾಡಲಾಗಿದೆ. ಅರ್ಚಕನ ಹೆಸರು ಸುರೇಶಚಂದ್ರ ಚೌಹಾಣ (ವಯಸ್ಸು ೭೦) ಎಂದಾಗಿದೆ.

ಬೆಳಿಗ್ಗೆ ಎಂದಿನಂತೆ ಜನರು ದರ್ಶನಕ್ಕಾಗಿ ಶ್ರೀ ಹನುಮಾನ ದೇವಾಲಯಕ್ಕೆ ಹೋದಾಗ, ಅವರಿಗೆ ಅರ್ಚಕ ಸುರೇಶಚಂದ್ರ ಚೌಹಾಣರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತು. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಚೌಹಾಣ್ ಅವರ ಶವವನ್ನು ಶವಪರೀಕ್ಷೆಗಾಗಿ ಕಳುಹಿಸಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿಗನುಸಾರ, ಅರ್ಚಕ ಸುರೇಶಚಂದ್ರ ಚೌಹಾಣ ಅವರು ನಿಯಾಮತಿಯಾಪುರದಲ್ಲಿ ಪರಮಾತ್ಮ ಎಂಬವರ ಬಳಿಗೆ ಹೋಗಿದ್ದರು. ರಾತ್ರಿ ೮ ರ ಸುಮಾರಿಗೆ ಅಲ್ಲಿಂದ ಮರಳಿದರು. ಅದರ ನಂತರ ಅವರು ಹನುಮಂತನ ಪೂಜೆಯನ್ನು ಮಾಡಿದರು ನಂತರ ದೇವಾಲಯದ ಹೊರಗೆ ಹಾಸಿಗೆಯ ಮೇಲೆ ಮಲಗಿದರು.

ಅರ್ಚಕ ಸುರೇಶಚಂದ್ರ ಚೌಹಾಣ ಅವರು ಮಲಗಿದ್ದಾಗ ಅವರ ತಲೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿದರು. ಆ ಸಮಯದಲ್ಲಿ ಪೊಲೀಸರಿಗೆ ದೇವಾಲಯದ ಬಳಿ ಮದ್ಯದ ಬಾಟಲಿಗಳು ಮತ್ತು ೩ ಲೋಟಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರುಮಂದಿ ಕೊಲೆಗಾರರು ಇದ್ದಿರಬಹುದು ಎಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ! – ಪೊಲೀಸ್ ವರಿಷ್ಠಾಧಿಕಾರಿ

ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ ಅವರು, ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.