ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ ?

ಆಗಸ್ಟ್ ೨೨ ರಂದು ಗಣೇಶ ಚತುರ್ಥಿ ಇದೆ. ಅದನ್ನು ಕುಟುಂಬದಲ್ಲಿ ಯಾರು ಆಚರಿಸಬೇಕು, ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿ ಯಂದು ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಕುಟುಂಬದಲ್ಲಿ ಯಾರು ಆಚರಿಸಬೇಕು ?

ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು ‘ಸಿದ್ಧಿವಿನಾಯಕ ವ್ರತ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣ ತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ (ಒಲೆ) ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿಯು ಕಾರಣಾಂತರದಿಂದ ವಿಭಕ್ತವಾಗಿದ್ದರೆ (ಬೇರೆ ಬೇರೆ) ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶವ್ರತ ವನ್ನು ಆಚರಿಸಬೇಕು.

ಗಣೇಶಚತುರ್ಥಿಯ ಮಹತ್ವವೇನು ?

ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಗೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ಕಾಲಾವಧಿಯಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.

ಗಣೇಶ ಚತುರ್ಥಿಯಂದು ನೂತನ ಶ್ರೀ ಗಣೇಶಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು ?

ಮನೆಯಲ್ಲಿ ಪೂಜೆಗಾಗಿ ಗಣಪತಿಯನ್ನು ಇಟ್ಟಿರುವಾಗಲೂ ನೂತನ ಮೂರ್ತಿಯನ್ನು ತರುವ ಉದ್ದೇಶವು ಮುಂದಿನಂತಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ನಿತ್ಯದ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳಷ್ಟು ಶಕ್ತಿ ಬರಬಹುದು. ಇಂತಹ ಹೆಚ್ಚು ಶಕ್ತಿ ಇರುವ ಮೂರ್ತಿಯ ಎಲ್ಲ ಬಗೆಯ ಪೂಜೆ-ಅರ್ಚನೆಗಳನ್ನು ವರ್ಷಪೂರ್ತಿ ಸರಿಯಾಗಿ ಮಾಡುವುದು ಕಠಿಣವಾಗಿರುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದ ಬಹಳಷ್ಟು ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಗಣೇಶ ಲಹರಿಗಳನ್ನು ಆವಾಹನೆ ಮಾಡಲು ನೂತನ ಮೂರ್ತಿಯನ್ನು ಉಪಯೋಗಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶ ಲಹರಿಗಳಲ್ಲಿನ ಸತ್ತ್ವ, ರಜ ಮತ್ತು ತಮದ ಪ್ರಮಾಣವು ೫:೫:೫ ಹೀಗಿದ್ದರೆ ಸರ್ವಸಾಧಾರಣ ವ್ಯಕ್ತಿಯಲ್ಲಿ ಅದರ ಪ್ರಮಾಣವು ೧:೩:೫ ಹೀಗೆ ಇರುತ್ತದೆ; ಆದ್ದರಿಂದ ಸರ್ವಸಾಧಾರಣ ವ್ಯಕ್ತಿಯು ಗಣೇಶ ಲಹರಿಗಳನ್ನು ಹೆಚ್ಚು ಸಮಯದವರೆಗೆ ಗ್ರಹಣ ಮಾಡಲಾರನು.

ಶಾಸ್ತ್ರೋಕ್ತ ವಿಧಿ ಮತ್ತು ರೂಢಿ ಇವುಗಳ ಅವಧಿ

‘ಭಾದ್ರಪದ ಶುಕ್ಲ ಚತುರ್ಥಿಯ ದಿನ ಮಣ್ಣಿನ ಗಣಪತಿಯನ್ನು ತಯಾರಿಸಿ, ಅದನ್ನು ಎಡಗೈ ಮೇಲಿಟ್ಟು ಅಲ್ಲಿಯೇ ಸಿದ್ಧಿವಿನಾಯಕ ಹೆಸರಿನಿಂದ ಪ್ರಾಣಪ್ರತಿಷ್ಠೆ ಮತ್ತು ಪೂಜೆಯನ್ನು ಮಾಡಿ ಕೂಡಲೇ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಆದರೆ ಮಾನವರು ಉತ್ಸವಪ್ರಿಯರಾಗಿರುವುದರಿಂದ ಇಷ್ಟರಿಂದಲೇ ಅವರಿಗೆ ಸಮಾಧಾನವಾಗಲಿಲ್ಲ. ಆದುದರಿಂದ ಒಂದೂವರೆ, ಐದು, ಏಳು ಅಥವಾ ಹತ್ತು ದಿನ ಗಣಪತಿಯ ಮೂರ್ತಿಯನ್ನು ಇಟ್ಟು ಉತ್ಸವ ಮಾಡತೊಡಗಿದರು. ಕೆಲವರು ಗಣಪತಿಯ ವಿಸರ್ಜನೆಯನ್ನು ಗೌರಿಯ ಜೊತೆಗೆ ಮಾಡುತ್ತಾರೆ. ಯಾರಾದರೊಬ್ಬರ ಕುಲದಲ್ಲಿ ಗಣಪತಿಯನ್ನು ಐದು ದಿನ ಇಡುವ ಪದ್ಧತಿ ಇದ್ದು ಅವರು ಅದನ್ನು ಒಂದೂವರೆ ಅಥವಾ ಏಳು ದಿನ ಇಡಬೇಕಾಗಿದ್ದರೆ ಅವರು ಹಾಗೆ ಮಾಡಬಹುದು. ಇದಕ್ಕೆ ಯಾವುದೇ ಅಧಿಕಾರಯುತ ವ್ಯಕ್ತಿಯನ್ನು ಕೇಳುವ ಆವಶ್ಯಕತೆಯಿಲ್ಲ. ತಮ್ಮ ತಮ್ಮ ರೂಢಿಗನುಸಾರ ಮೊದಲನೆಯ, ಎರಡನೆಯ, ಮೂರನೆಯ, ಆರನೆಯ, ಏಳನೆಯ ಅಥವಾ ಹತ್ತನೆಯ ದಿನ ಗಣೇಶಮೂರ್ತಿಯ ವಿಸರ್ಜನೆಯನ್ನು ಮಾಡಬೇಕು.

ಮೂರ್ತಿಯು ಭಗ್ನವಾದರೆ ಏನು ಮಾಡಬೇಕು ?

ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡುವುದ ಕ್ಕಿಂತ ಮೊದಲು ಯಾವುದಾದರೊಂದು ಅವಯವಕ್ಕೆ ಏಟಾದರೆ ಅಥವಾ ಭಿನ್ನವಾದರೆ ಚಿಂತಿಸುವ ಕಾರಣವಿಲ್ಲ, ಅದರ ಬದಲು ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ವಿಸರ್ಜನೆಗಾಗಿ ಅಕ್ಷತೆ ಹಾಕಿದ ನಂತರ (ದೇವತ್ತ್ವವು ಹೋದ ನಂತರ) ಅವಯವಗಳಿಗೆ ಏಟಾದರೆ ಅಥವಾ ಭಿನ್ನವಾದರೆ ಆ ಮೂರ್ತಿಯನ್ನು ನಿತ್ಯದಂತೆ ವಿಸರ್ಜನೆ ಮಾಡಬೇಕು. ಪ್ರಾಣಪ್ರತಿಷ್ಠೆಯಾದ ನಂತರ ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಆ ಮೂರ್ತಿಗೆ ಅಕ್ಷತೆಯನ್ನು ಅರ್ಪಿಸಿ ವಿಸರ್ಜಿಸಬೇಕು. ಈ ಘಟನೆಯು ಗಣೇಶ ಚತುರ್ಥಿಯ ದಿನವೇ ನಡೆದರೆ ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ಎರಡನೆಯ ಅಥವಾ ಮೂರನೆಯ ದಿನ ನಡೆದರೆ ಹೊಸ ಮೂರ್ತಿಯನ್ನು ತಂದು ಪೂಜಿಸಬೇಕಾಗಿಲ್ಲ. ಮೂರ್ತಿಯು ಸಂಪೂರ್ಣ ಭಗ್ನವಾದರೆ ಕುಲಪುರೋಹಿತರ ಸಲಹೆಯಂತೆ ಯಥಾವಕಾಶ ‘ಅದ್ಭುತ ದರ್ಶನ ಶಾಂತಿಯನ್ನು ಮಾಡಿಸಬೇಕು. ಗಣೇಶಚತುರ್ಥಿಯಂದು ದೀಪಪತನ (ದೀಪ ಆರಿ ಹೋಗುವುದು), ಅರೆಯುವ ಕಲ್ಲು, ಬೀಸುವ ಕಲ್ಲು ಅಥವಾ ಸಾಣೆಕಲ್ಲು ಒಡೆದು ಹೋಗುವುದು, ಕೆಸುವಿನ ಎಲೆಗೆ ಹೂವು ಬರುವುದು, ಮೂರ್ತಿಭಗ್ನ ಇತ್ಯಾದಿ ಘಟನೆಗಳಾದರೆ ಆ ಕುಟುಂಬದಲ್ಲಿ ದ್ರವ್ಯ ಹಾನಿ, ಗಂಭೀರ ರೋಗ ಅಥವಾ ಅಪಮೃತ್ಯು ಆಗುವ ಸಾಧ್ಯತೆಯಿರುತ್ತದೆ; ಅದಕ್ಕಾಗಿ ಮೇಲೆ ಕೊಟ್ಟಿರುವ ಪರಿಹಾರಗಳನ್ನು ಶ್ರದ್ಧೆಯಿಂದ ಮಾಡಬೇಕು.

ಪೂಜೆಯ ವಿಷಯದಲ್ಲಿ ಕೆಲವು ಸೂಚನೆಗಳು

ಅ. ಪೂಜೆಯ ಮೊದಲು ಮಡಿವಸ್ತ್ರ ಅಥವಾ ಪೀತಾಂಬರ ಅಥವಾ ಮಡಿವಸ್ತ್ರ (ಧೋತರ) ಮತ್ತು ಉತ್ತರೀಯವನ್ನು ಧರಿಸಿರಬೇಕು.

ಆ. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ಮತ್ತು ಪುರೋಹಿತರಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು.

ಇ. ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತುಕೊಂಡು ಭೂಮಿ ಮತ್ತು ದೇವತೆಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ ಎಂದು ಪ್ರಾರ್ಥನೆ ಮಾಡಬೇಕು.

ಈ. ಪೂಜೆ ಮಾಡುವಾಗ ‘ದೇವತೆಯು ತಮ್ಮೆದುರಿಗೆ ಪ್ರತ್ಯಕ್ಷ ಪ್ರಕಟವಾಗಿ ಆಸೀನಳಾಗಿದ್ದಾಳೆ ಮತ್ತು ನಾವು ಅನನ್ಯ ಶರಣಾಗತ ಭಾವದಿಂದ ಮಾಡುತ್ತಿರುವ ಪೂಜೆಯನ್ನು ಅವಳು ಸ್ವೀಕರಿಸುತ್ತಿದ್ದಾಳೆ, ಎಂಬ ಭಾವವನ್ನಿಡಬೇಕು ಮತ್ತು ಈ ಭಾವದಿಂದ ಪ್ರತಿಯೊಂದು ಉಪಚಾರವನ್ನು ದೇವತೆಯ ಚರಣಗಳಲ್ಲಿ ಅರ್ಪಿಸಬೇಕು.

ಉ. ಪ್ರತಿದಿನ ಬೆಳಗ್ಗೆ ಮೂರ್ತಿಯ ಮೇಲಿನ ನೈರ್ಮಾಲ್ಯವನ್ನು ತೆಗೆದು ಶೋಡಷೋಪಚಾರ ಪೂಜೆಯನ್ನು ಮಾಡಬೇಕು. ಸಾಯಂಕಾಲ ಶೋಡಷೋಪಚಾರ ಪೂಜೆ ಅಥವಾ ಪಂಚೋಪಚಾರ ಪೂಜೆ ಮಾಡಬೇಕು.

ಊ. ಪೂಜೆಯಲ್ಲಿನ ಶ್ಲೋಕ ಅಥವಾ ಮಂತ್ರವನ್ನು ಉಚ್ಚರಿಸಲು ಬರದವರು ಕೇವಲ ನಾಮಮಂತ್ರ ಉಚ್ಚರಿಸಿ ದೇವತೆಗೆ ಉಪಚಾರ ಸಮರ್ಪಿಸಬೇಕು, ಉದಾ. (ಆಸನಕ್ಕಾಗಿ ಅಕ್ಷತೆ ಅರ್ಪಿಸುವಾಗ) ‘ಶ್ರೀ ಮಹಾಗಣಪತಯೇ ನಮಃ| ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||, ಎಂದು ಹೇಳಬೇಕು.

ಋ. ಪಾದ್ಯ, ಅರ್ಘ್ಯ, ಪಂಚಾಮೃತ ಇತ್ಯಾದಿ ಉಪಚಾರಗಳನ್ನು ಎರಡೆರಡು ದೂರ್ವೆಯೊಂದಿಗೆ ಮಾಡಬೇಕು. ಒಂದು ಉಪಚಾರ ಮುಗಿದ ಮೇಲೆ ಕೈಯಲ್ಲಿರುವ ದೂರ್ವೆಯನ್ನು ತಟ್ಟೆಯಲ್ಲಿ ವಿಸರ್ಜಿಸಿ ಮುಂದಿನ ಉಪಚಾರಕ್ಕಾಗಿ ಹೊಸ ದೂರ್ವೆಯನ್ನು ತೆಗೆದುಕೊಳ್ಳಿ.

ಎ. ಮಣ್ಣಿನ ಮೂರ್ತಿಗೆ ಪಾದ್ಯ, ಅರ್ಘ್ಯ, ಅಭಿಷೇಕ ಇತ್ಯಾದಿ ಉಪಚಾರಗಳನ್ನು ಮಾಡುವಾಗ ದೂರ್ವೆಯಿಂದ ಪ್ರೋಕ್ಷಣೆ ಮಾಡಬೇಕು. ಧಾತುವಿನ ಮೂರ್ತಿಯಿದ್ದಲ್ಲಿ ಮೂರ್ತಿಯ ಮೇಲೆ ಉಪಚಾರಗಳನ್ನು ಮಾಡಬಹುದು.