ಯುದ್ಧದ ಸಮಯದಲ್ಲಿ ಪರಸ್ಪರ ಸಹಾಯ ಮಾಡಲು ಎರಡೂ ದೇಶಗಳ ನಡುವೆ ಒಪ್ಪಂದ!

ನವದೆಹಲಿ – ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಕೆಲವು ತಿಂಗಳ ಹಿಂದೆಯಷ್ಟೇ ಯುದ್ಧದ ಸಮಯದಲ್ಲಿ ಪರಸ್ಪರ ಸಹಾಯ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದವು. “ಸೌದಿ ಅರೇಬಿಯಾದ ರಕ್ಷಣೆಗಾಗಿ ಪಾಕಿಸ್ತಾನದ ಪರಮಾಣು ಬಾಂಬ್ಗಳು ಸದಾ ಸಿದ್ಧವಿರುತ್ತವೆ” ಎಂದು ಪಾಕಿಸ್ತಾನಿ ನಾಯಕರು ಈ ಹಿಂದೆ ಹೇಳಿಕೆ ನೀಡಿದ್ದರು. ಹಾಗೆಯೇ “ಸೌದಿ ಅರೇಬಿಯಾ ಕೂಡ ಪಾಕಿಸ್ತಾನದ ನೆರವಿಗೆ ಧಾವಿಸಲಿದೆ” ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ಇರಾನ್ನಿಂದ ಸೌದಿ ಅರೇಬಿಯಾದ ಮೇಲೆ ಸತತವಾಗಿ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ, “ಒಪ್ಪಂದದ ಪ್ರಕಾರ ಪಾಕಿಸ್ತಾನವು ನಮಗೆ ಸಹಾಯ ಮಾಡಬೇಕು ಹಾಗೂ ತನ್ನ ಸೈನ್ಯ ಮತ್ತು ಮಿಲಿಟರಿ ವ್ಯವಸ್ಥೆಯನ್ನು ಕಳುಹಿಸಿಕೊಡಬೇಕು” ಎಂದು ಸೌದಿ ಅರೇಬಿಯಾ ಒತ್ತಾಯಿಸಿದೆ. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಯುದ್ಧದಿಂದ ದೂರವಿರಲು ಪಾಕಿಸ್ತಾನಕ್ಕೆ ಇರಾನ್ ಎಚ್ಚರಿಕೆ!
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ ‘ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದ’ (Strategic Mutual Defense Agreement) ನಡೆದಿತ್ತು. ಈ ಒಪ್ಪಂದದ ಪ್ರಕಾರ, ಸೌದಿ ಅರೇಬಿಯಾದ ಮೇಲಿನ ದಾಳಿಯನ್ನು ಪಾಕಿಸ್ತಾನದ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ. ಇದೇ ಒಪ್ಪಂದವನ್ನು ಮುಂದಿಟ್ಟುಕೊಂಡು, ಪಾಕಿಸ್ತಾನವು ಈಗ ತನ್ನ ಮಿಲಿಟರಿ ಶಕ್ತಿಯನ್ನು ಸೌದಿ ಅರೇಬಿಯಾದ ರಕ್ಷಣೆಗೆ ಬಳಸಬೇಕೆಂದು ಒತ್ತಾಯಿಸಲಾಗುತ್ತಿದೆ. ಇನ್ನೊಂದೆಡೆ, ಪಾಕಿಸ್ತಾನವು ಈ ಯುದ್ಧದಲ್ಲಿ ಭಾಗಿಯಾಗಲು ತೀವ್ರವಾಗಿ ಹಿಂಜರಿಯುತ್ತಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಈ ಯುದ್ಧದಿಂದ ದೂರವಿರುವಂತೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ಪಾಕಿಸ್ತಾನವು ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ; ಆದರೆ ಸೌದಿ ಅರೇಬಿಯಾದ ತೀವ್ರ ಒತ್ತಡದಿಂದಾಗಿ ಪಾಕಿಸ್ತಾನವು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದೆ.
ಇರಾನಿಗಳನ್ನು ಕೊಲ್ಲುವುದು ನನಗೆ ದೊಡ್ಡ ಗೌರವ! – ಡೊನಾಲ್ಡ್ ಟ್ರಂಪ್
“ನಮ್ಮಲ್ಲಿ ಅಪಾರ ಶಕ್ತಿ, ಮಿತಿಯಿಲ್ಲದ ಮದ್ದುಗುಂಡುಗಳು ಮತ್ತು ಸಾಕಷ್ಟು ಸಮಯವಿದೆ. ಇಂದು ಈ ನೀಚ ಜನರಿಗೆ ಏನಾಗುತ್ತದೆ ಎಂದು ಕಾದು ನೋಡಿ. ಅವರು 47 ವರ್ಷಗಳಿಂದ ಪ್ರಪಂಚದಾದ್ಯಂತ ಅಮಾಯಕರನ್ನು ಕೊಂದಿದ್ದಾರೆ. ಈಗ ನಾನು ಅಮೆರಿಕದ 47ನೇ ರಾಷ್ಟ್ರಾಧ್ಯಕ್ಷನಾಗಿ ಅವರನ್ನು ಮಟ್ಟಹಾಕುತ್ತಿದ್ದೇನೆ. ಇದನ್ನು ಮಾಡುವುದು ನನಗೆ ದೊಡ್ಡ ಗೌರವ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ತಮ್ಮ ಪೋಸ್ಟ್ನಲ್ಲಿ, “ನಾವು ಇರಾನ್ನ ಭಯೋತ್ಪಾದಕ ಆಡಳಿತವನ್ನು ಮಿಲಿಟರಿ, ಆರ್ಥಿಕ ಮತ್ತು ಇತರ ಎಲ್ಲಾ ಮಾರ್ಗಗಳ ಮೂಲಕ ಸಂಪೂರ್ಣವಾಗಿ ನಾಶಪಡಿಸುತ್ತಿದ್ದೇವೆ; ಆದರೆ ನೀವು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯನ್ನು ಓದಿದರೆ, ನಾವು ಗೆಲ್ಲುತ್ತಿಲ್ಲ ಎಂದು ನಿಮಗೆ ತಪ್ಪಾಗಿ ಅನಿಸಬಹುದು. ಇರಾನ್ ನೌಕಾಪಡೆ ಅಂತ್ಯಗೊಂಡಿದೆ. ಅವರ ವಾಯುಪಡೆ ಈಗ ಉಳಿದಿಲ್ಲ. ಅವರ ಕ್ಷಿಪಣಿಗಳು, ಡ್ರೋನ್ಗಳು ಮತ್ತು ಉಳಿದೆಲ್ಲವೂ ಧ್ವಂಸವಾಗುತ್ತಿವೆ, ಹಾಗೆಯೇ ಅವರ ನಾಯಕರು ಈ ಭೂಮಿಯಿಂದ ಸಂಪೂರ್ಣವಾಗಿ ನಿರ್ನಾಮವಾಗಿದ್ದಾರೆ” ಎಂದು ಟ್ರಂಪ್ ವಿವರಿಸಿದ್ದಾರೆ.
ಹೋರ್ಮುಜ್ ಜಲಸಂಧಿಯ ಮೂಲಕ ನೌಕೆಗಳನ್ನು ಕೊಂಡೊಯ್ಯಬೇಕು! – ಟ್ರಂಪ್ ಕರೆ
ಸಂಬಂಧಪಟ್ಟ ಎಲ್ಲಾ ದೇಶಗಳು ಹೋರ್ಮುಜ್ ಜಲಸಂಧಿಯ ಮೂಲಕ ನೌಕೆಗಳನ್ನು ಚಲಾಯಿಸಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ. “ಸ್ವಲ್ಪ ಧೈರ್ಯ ತೋರಿಸಬೇಕು, ಇದರಲ್ಲಿ ಹೆದರುವಂತಹದ್ದು ಏನೂ ಇಲ್ಲ. ಇರಾನ್ ಬಳಿ ಯಾವುದೇ ನೌಕಾಪಡೆ ಉಳಿದಿಲ್ಲ, ಅವರ ಎಲ್ಲಾ ಯುದ್ಧನೌಕೆಗಳನ್ನು ನಾವು ಮುಳುಗಿಸಿದ್ದೇವೆ” ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ‘ಇಂಟರ್ನ್ಯಾಷನಲ್ ಮೆರಿಟೈಮ್ ಆರ್ಗನೈಸೇಶನ್’ (IMO) ಮಾರ್ಚ್ 18 ಮತ್ತು 19 ರಂದು ಲಂಡನ್ನಲ್ಲಿ ನೌಕೆಗಳ ಸುರಕ್ಷತೆಯ ಬಗ್ಗೆ ಚರ್ಚಿಸಲು ಮಹತ್ವದ ಸಭೆ ಕರೆದಿದೆ.
ಆಯತೊಲ್ಲಾ ಮೊಜ್ತಬಾ ಖಮೇನಿ ಬಹುಶಃ ಬದುಕಿದ್ದಾರೆ! – ಟ್ರಂಪ್

ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, “ಆಯತೊಲ್ಲಾ ಮೊಜ್ತಬಾ ಖಮೇನಿ (ಆಯತೊಲ್ಲಾ ಅವರ ಪುತ್ರ ಮತ್ತು ಹೊಸ ಸರ್ವೋಚ್ಚ ಧಾರ್ಮಿಕ ನಾಯಕ) ಬಹುಶಃ ಬದುಕಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ಗಾಯಗೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ; ಆದರೆ ಅವರು ಯಾವುದೋ ಒಂದು ಸ್ಥಿತಿಯಲ್ಲಿ ಬದುಕಿದ್ದಾರೆ” ಎಂದಿದ್ದಾರೆ.
ಮೊಜ್ತಬಾ ಖಮೇನಿ ಕೋಮಾದಲ್ಲಿದ್ದಾರೆ ಎಂಬ ವಾದ!
ಇರಾನ್ನ ಹೊಸ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕೋಮಾದಲ್ಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಬ್ರಿಟಿಷ್ ದೈನಿಕ ‘ದಿ ಸನ್’ ವರದಿಯ ಪ್ರಕಾರ, ದಾಳಿಯಲ್ಲಿ ಗಾಯಗೊಂಡ ನಂತರ ಮೊಜ್ತಬಾ ಅವರನ್ನು ಟೆಹ್ರಾನ್ನ ‘ಸಿನಾ ಯೂನಿವರ್ಸಿಟಿ’ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಅವರ ಗಾಯವು ಎಷ್ಟು ಆಳವಾಗಿತ್ತೆಂದರೆ ಅವರ ಒಂದು ಕಾಲನ್ನು ಕತ್ತರಿಸಬೇಕಾಯಿತು. ಅವರ ಯಕೃತ್ತಿಗೂ (Liver) ತೀವ್ರ ಹಾನಿಯಾಗಿದೆ ಎನ್ನಲಾಗಿದೆ.
ಅಮೆರಿಕದ ನೆಲೆಗಳ ಮೇಲೆ ದಾಳಿ ಮುಂದುವರಿಯಲಿದೆ! – ಇರಾನ್
ಇರಾನ್ನ ಹೊಸ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಮೆರಿಕವು ಮಧ್ಯಪ್ರಾಚ್ಯದಲ್ಲಿನ ತನ್ನ ಮಿಲಿಟರಿ ನೆಲೆಗಳನ್ನು ಮುಚ್ಚಬೇಕು, ಇಲ್ಲದಿದ್ದರೆ ಅವುಗಳ ಮೇಲೆ ದಾಳಿಗಳು ಮುಂದುವರಿಯುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ಇರಾನ್ ಮೇಲಿನ ದಾಳಿಗೆ ಅಮೆರಿಕ ಪರಿಹಾರ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಹೋರ್ಮುಜ್ ಜಲಸಂಧಿಯನ್ನು ತೆರೆಯಲಾಗುವುದಿಲ್ಲ ಎಂದು ಖಮೇನಿ ಕಡ್ಡಿಮುರಿದಂತೆ ಹೇಳಿದ್ದಾರೆ.
ಈಗ ಕೊಲ್ಲಿ ರಾಷ್ಟ್ರಗಳ ಬ್ಯಾಂಕ್ಗಳ ಮೇಲೆ ದಾಳಿ ಮಾಡುತ್ತೇವೆ! – ಇರಾನ್ ಬೆದರಿಕೆ
ಇರಾನ್ ಸೇನೆಯು, “ಈಗ ನಾವು ಅಮೆರಿಕ ಮತ್ತು ಇಸ್ರೇಲ್ನ ಬ್ಯಾಂಕ್ಗಳನ್ನು ಗುರಿಯಾಗಿಸಲಿದ್ದೇವೆ. ಜನರು ಬ್ಯಾಂಕ್ಗಳ ಒಂದು ಕಿಲೋಮೀಟರ್ ವ್ಯಾಪ್ತಿಯಿಂದ ದೂರವಿರಬೇಕು” ಎಂದು ಬೆದರಿಕೆ ಹಾಕಿದೆ. ಇದರಿಂದಾಗಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಗೋಲ್ಡ್ಮನ್ ಸ್ಯಾಕ್ಸ್ ಬ್ಯಾಂಕ್ಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು (Work from home) ಸೂಚಿಸಿವೆ. ಸಿಟಿಬ್ಯಾಂಕ್ ಯುನೈಟೆಡ್ ಅರಬ್ ಎಮಿರೇಟ್ಸ್ನ ಹಲವು ಶಾಖೆಗಳನ್ನು ಮುಚ್ಚಿದೆ ಮತ್ತು ಎಚ್ಎಸ್ಬಿಸಿ ಬ್ಯಾಂಕ್ ಕತಾರ್ನಲ್ಲಿನ ತನ್ನ ಎಲ್ಲಾ ಶಾಖೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಕಳೆದ ವಾರವಷ್ಟೇ ಇರಾನ್, ಕೊಲ್ಲಿ ಪ್ರದೇಶದ ಪಾಶ್ಚಿಮಾತ್ಯ ಸಂಸ್ಥೆಗಳ ‘ಡೇಟಾ ಸೆಂಟರ್’ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.
ಸುನ್ನಿ ಮತ್ತು ಶಿಯಾ ಇಬ್ಬರೂ ಭಯೋತ್ಪಾದಕರು, ಅವರಿಂದ ಜಗತ್ತಿಗೆ ಅಪಾಯ! – ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಪತ್ರಿಕಾಗೋಷ್ಠಿ ನಡೆಸಿ, “ಸುನ್ನಿ ಮತ್ತು ಶಿಯಾ ಇಬ್ಬರೂ ಭಯೋತ್ಪಾದಕರು ಮತ್ತು ಅವರಿಂದ ಇಡೀ ಜಗತ್ತಿಗೆ ಅಪಾಯವಿದೆ. ಈ ಸಮಸ್ಯೆ ಬಗೆಹರಿಯುವವರೆಗೂ ನಾವು ಹೋರಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು. ಇರಾನಿ ಜನರ ಪ್ರಯತ್ನವಿಲ್ಲದೆ ಅಲ್ಲಿನ ಆಡಳಿತ ಉರುಳಿಸಲು ಸಾಧ್ಯವಿಲ್ಲ!ಮಾತು ಮುಂದುವರಿಸಿದ ನೆತನ್ಯಾಹು, “ಇರಾನಿನ ಜನರ ಪ್ರಯತ್ನವಿಲ್ಲದೆ ಅಲ್ಲಿನ ಆಡಳಿತವನ್ನು ಉರುಳಿಸಲು ಸಾಧ್ಯವಿಲ್ಲ ಎಂದು ನಾನು ಪೂರ್ಣ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಸಹಾಯ ಬರುತ್ತಿದೆ ಎಂದು ನಾವು ಅವರಿಗೆ ತಿಳಿಸಿದ್ದೇವೆ” ಎಂದರು. |
ಹಾರಾಟದ ನಡುವೆಯೇ ಮತ್ತೊಂದು ವಿಮಾನಕ್ಕೆ ಇಂಧನ ತುಂಬಿಸುತ್ತಿದ್ದ ಅಮೆರಿಕದ ವಿಮಾನ ಪತನ!
ಗಾಳಿಯಲ್ಲಿಯೇ (ಹಾರಾಟದ ನಡುವೆ) ಮತ್ತೊಂದು ವಿಮಾನಕ್ಕೆ ಇಂಧನ ತುಂಬಿಸುತ್ತಿದ್ದ ಅಮೆರಿಕದ ವಿಮಾನವೊಂದು ಇರಾಕ್ನಲ್ಲಿ ಅಪಘಾತಕ್ಕೀಡಾಗಿದೆ. ಅಮೆರಿಕದ ‘ಸೆಂಟ್ರಲ್ ಕಮಾಂಡ್’ ಈ ಬಗ್ಗೆ ಮಾಹಿತಿ ನೀಡಿದೆ. ಅಮೆರಿಕದ ‘ಕೆಸಿ-135’ ಎಂಬ ಇಂಧನ ತುಂಬಿಸುವ (Refueling) ವಿಮಾನ ಪತನಗೊಂಡಿದ್ದು, ಅಪಘಾತದ ವೇಳೆ ಈ ವಿಮಾನದಲ್ಲಿ 5 ಜನರಿದ್ದರು.
ಪ್ರಧಾನಿ ಮೋದಿ ಅವರಿಂದ ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿ ಚರ್ಚೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಈ ಸಂಭಾಷಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಭಾರತೀಯ ನಾಗರಿಕರ ಸುರಕ್ಷತೆ ಹಾಗೂ ಸರಕು ಮತ್ತು ಇಂಧನದ ಅಡೆತಡೆಯಿಲ್ಲದ ಸಾಗಣೆಯು ಈ ಪರಿಸ್ಥಿತಿಯಲ್ಲಿ ಭಾರತದ ಮೊದಲ ಆದ್ಯತೆಯಾಗಿದೆ ಎಂದು ಮೋದಿ ಹೇಳಿದರು. ಶಾಂತಿ ಮತ್ತು ಸ್ಥಿರತೆಗಾಗಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿಯವರು, ಎಲ್ಲಾ ಪಕ್ಷಗಳು ಮಾತುಕತೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದರು. ಕಳೆದ ಕೆಲವು ದಿನಗಳಲ್ಲಿ ಭಾರತ ಮತ್ತು ಇರಾನ್ ವಿದೇಶಾಂಗ ಸಚಿವರ ನಡುವೆ 3 ಬಾರಿ ಮಾತುಕತೆ ನಡೆದಿದೆ.
ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್: ಗ್ರಾಮೀಣ ಭಾಗಗಳಲ್ಲಿ 45 ದಿನಗಳ ಬಳಿಕವಷ್ಟೇ ಬುಕ್ಕಿಂಗ್ಗೆ ಅವಕಾಶ!
ಎಲ್ಪಿಜಿ ಸಿಲಿಂಡರ್ ಪೂರೈಕೆಯನ್ನು ಸುಗಮವಾಗಿರಿಸಲು ಕೇಂದ್ರ ಸರಕಾರವು ಎರಡು ಬುಕ್ಕಿಂಗ್ಗಳ ನಡುವಿನ ಅಂತರವನ್ನು ಹೆಚ್ಚಿಸಲು ನಿರ್ಧರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಪೂರೈಕೆಯನ್ನು ಯೋಜಿಸಲು ಎರಡು ಬುಕ್ಕಿಂಗ್ಗಳ ನಡುವಿನ ಅಂತರವನ್ನು 20 ದಿನಗಳಿಂದ ನೇರವಾಗಿ 45 ದಿನಗಳಿಗೆ ಹೆಚ್ಚಿಸಲಾಗಿದೆ.
‘ಇಂಡಕ್ಷನ್ ಒಲೆ’ಗಳ ಮಾರಾಟದಲ್ಲಿ ದಾಖಲೆಯ ಏರಿಕೆ!
ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಜನರು ಈಗ ‘ಎಲೆಕ್ಟ್ರಿಕ್ ಇಂಡಕ್ಷನ್ ಕುಕ್ಟಾಪ್’ಗಳ (ವಿದ್ಯುತ್ ಕಾಂತೀಯ ಪ್ರಕ್ರಿಯೆ ಮೂಲಕ ನೇರವಾಗಿ ಪಾತ್ರೆ ಬಿಸಿ ಮಾಡುವ ಒಲೆಗಳು) ಕಡೆಗೆ ಮುಖ ಮಾಡಿದ್ದಾರೆ. ಆನ್ಲೈನ್ ಶಾಪಿಂಗ್ ತಾಣ ‘ಅಮೆಜಾನ್’ನಲ್ಲಿ ಸಾಮಾನ್ಯವಾಗಿ ತಿಂಗಳಿಗೆ 1 ಲಕ್ಷದ 80 ಸಾವಿರ ಇಂಡಕ್ಷನ್ಗಳು ಮಾರಾಟವಾಗುತ್ತವೆ; ಆದರೆ ಈಗ ಒಂದೇ ದಿನದಲ್ಲಿ 1 ಲಕ್ಷದ 34 ಸಾವಿರ ಇಂಡಕ್ಷನ್ಗಳು ಮಾರಾಟವಾಗಿವೆ. ಕಳೆದ 4 ದಿನಗಳಲ್ಲಿ ಒಟ್ಟು 5 ಲಕ್ಷ ಇಂಡಕ್ಷನ್ಗಳು ಮಾರಾಟವಾಗಿದ್ದು, ಶೇ. 70ರಷ್ಟು ಕಂಪನಿಗಳ ಸ್ಟಾಕ್ ಖಾಲಿಯಾಗಿದೆ. ಬೇಡಿಕೆ ಹೆಚ್ಚಾದ ಕಾರಣ ಹಲವೆಡೆ ಇಂಡಕ್ಷನ್ ಬೆಲೆಗಳು ದುಪ್ಪಟ್ಟಾಗಿವೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ