ಗಣೇಶೋತ್ಸವದಲ್ಲಿ ಶ್ರೀ ಗಣೇಶನ ಉಪಾಸನೆ ಹೇಗೆ ಮಾಡಬೇಕು ?

೧. ‘ಮನೆಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ದಿನದಿಂದ ಮೂರ್ತಿಯ ವಿಸರ್ಜನೆ ಮಾಡುವ ದಿನದ ವರೆಗೂ ಪ್ರತಿದಿನ ಮೂರ್ತಿಯ ಪೂಜೆ ಮತ್ತು ಆರತಿ ಮಾಡಬೇಕು. ಮನೆಯವರೆಲ್ಲರೂ ಆರತಿಯ ಸಮಯದಲ್ಲಿ ಉಪಸ್ಥಿತರಿರಬೇಕು.
೨. ಶ್ರೀ ಗಣೇಶನ ೨೧ ಹೆಸರುಗಳನ್ನು ಹೇಳುತ್ತಾ ೨೧ ಗರಿಕೆಗಳನ್ನು ಅರ್ಪಿಸಬೇಕು. ಗರಿಕೆ ಸಿಗದಿದ್ದರೆ ಗಣೇಶನ ೨೧ ಹೆಸರುಗಳನ್ನು ದೊಡ್ಡ ಧ್ವನಿಯಲ್ಲಿ ಉಚ್ಚರಿಸಬೇಕು.
೩. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಹೀಗೆ
ಮೂರು ಬಾರಿ ಒಂದಾದರೂ ಗಣಪತಿಯ ಸ್ತೋತ್ರ ಪಠಿಸಬೇಕು
೪. ದೇವರಿಗೆ ಗರಿಕೆ, ಶಮಿ, ಮಂದಾರದ ಹೂವು ಅಥವಾ ಕೆಂಪು ಹೂವು ಅರ್ಪಿಸಬೇಕು.
೫. ರೆಕಾರ್ಡೆಡ್‌ ಆರತಿ ಹಚ್ಚದೆ ಎಲ್ಲರೂ ಸೇರಿ ಆರತಿಯನ್ನು ಹಾಡಬೇಕು. ಆರತಿ ಬಾಯಿಪಾಠ ಇಲ್ಲದಿದ್ದರೆ ಪುಸ್ತಕದಲ್ಲಿ ನೋಡಿ ಆರತಿ ಹಾಡಬೇಕು.
೬. ಆರತಿಯ ನಂತರ ಎಲ್ಲರೂ ಸಂಕಟನಾಶನ ಸ್ತೋತ್ರವನ್ನು ಮೂರು ಬಾರಿ ಹೇಳಬೇಕು.
೭. ‘ಶ್ರೀ ಗಜಾನನ ಜಯ ಗಜಾನನ | ಶ್ರೀ ಗಜಾನನ ಜಯ ಗಜಾನನ |’ ಈ
ನಾಮಸ್ಮರಣೆಯನ್ನು ಕನಿಷ್ಠ ೨೧ ಬಾರಿ ಮಾಡಬೇಕು.
೮. ಗಣಪತಿ ಹಬ್ಬದ ದಿನದಂದು (ಶ್ರೀ ಗಣೇಶ ಚತುರ್ಥಿಯ ದಿನದಂದು) ಶ್ರೀ ಗಣೇಶನ ಮುಂದೆ ಕಣ್ಣು ಮುಚ್ಚಿ ‘ಹೇ ಶ್ರೀ ಗಣೇಶನೇ, ನನಗೆ ನಿಮ್ಮ ದರ್ಶನವಾಗಲಿ’, ಎಂದು ಹೇಳಿ ಪ್ರಾರ್ಥನೆ ಮಾಡಬೇಕು. ನಿಜವಾಗಿಯೂ ನಮಗೆ ಶ್ರೀ ಗಣೇಶನ ಅಸ್ತಿತ್ವದ ಅರಿವಾಗುವುದು.
೯. ಶ್ರೀ ಗಣೇಶನ ಯಾವುದಾದರೊಂದು ಮಂತ್ರದ ಅನುಷ್ಠಾನ ಮಾಡಬೇಕು.
೧೦ ಶ್ರೀ ಗಣೇಶ ಪುರಾಣದ ಕಥೆಗಳನ್ನು ಓದಬೇಕು.
೧೧. ಪ್ರತಿದಿನ ಗಣಪತಿಯ ೨೧ ಮೂರ್ತಿಗಳ ದರ್ಶನ ಪಡೆಯಬೇಕು.
೧೨. ಗಣೇಶೋತ್ಸವ ಕಾಲದಲ್ಲಿ ಶ್ರೀ ಗಣೇಶನ ವಿಚಾರ ಮತ್ತು ಚಿಂತನೆ ಮಾಡುವುದರಿಂದ ನಾವು ಧನ್ಯರಾಗಿ ಮನೆಯ ವಾತಾವರಣವು ಮಂಗಳಮಯ ಆಗುವುದು. ನಂತರ ಆನಂದವೇ ಆನಂದ !’

(ಆಧಾರ : ವಾರ್ತಾಪತ್ರಿಕೆ, ‘ಮಯೂರೇಶ’, ಸಪ್ಟೆಂಬರ್‌ ೨೦೧೬)