ಭಕ್ತಿಯ ಬಗ್ಗೆ ಸ್ವಾಮಿ ವಿವೇಕಾನಂದ ಇವರು ಹೇಳಿದ ಅಂಶಗಳು

ಮಹಾನ್‌ ಆಚಾರ್ಯರು ಭಕ್ತಿಯ ಕುರಿತು ಹೇಳಿದ್ದಾರೆ,

೧. ಭಕ್ತಿಯು ಜ್ಞಾನ, ಕರ್ಮ ಮತ್ತು ಯೋಗ (ರಾಜಯೋಗ) ಈ ಮೂರಕ್ಕಿಂತಲೂ ಶ್ರೇಷ್ಠವಾಗಿದೆ; ಏಕೆಂದರೆ ಭಕ್ತಿಯೇ ಅದರ ಫಲವಾಗಿದೆ. ಭಕ್ತಿಯು ಸಾಧನ ಮತ್ತು ಸಾಧ್ಯ ಎರಡೂ ಆಗಿದೆ.

೨. ಮನುಷ್ಯನು ಕೇವಲ ಅನ್ನವನ್ನು ನೋಡಿ ಅಥವಾ ಅನ್ನದ ಬಗ್ಗೆ ಮಾಹಿತಿಯನ್ನು ಪಡೆದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ, ಈಶ್ವರನ ಬಗೆಗಿನ ಜ್ಞಾನದಿಂದ ಅಥವಾ ಈಶ್ವರನ ದರ್ಶನವಾದರೂ ಎಲ್ಲಿಯವರೆಗೆ ಅವನಿಗೆ ಭಕ್ತಿ ಲಭಿಸುವುದಿಲ್ಲವೋ, ಅಲ್ಲಿಯವರೆಗೆ ಸಮಾಧಾನವಾಗುವುದಿಲ್ಲ; ಆದ್ದರಿಂದ ಭಕ್ತಿಯೇ ಸರ್ವಶ್ರೇಷ್ಠವಾಗಿದೆ.

೩. ಯಾರಿಗೆ ಭಕ್ತಿ ಬೇಕಾಗಿದೆಯೋ, ಅವನು ಇಂದ್ರಿಯ ಸುಖಗಳನ್ನು ತ್ಯಜಿಸಬೇಕು ಮತ್ತು ಜನರ ಸಂಪರ್ಕವನ್ನು ಸಹ ತಪ್ಪಿಸಬೇಕು.

೪. ಅವನು ಹಗಲಿರುಳು ಭಕ್ತಿಯ ಧ್ಯಾನದಲ್ಲಿರಬೇಕು, ಬೇರೆ ಯಾವುದರಲ್ಲೂ ಅಲ್ಲ.

೫. ಈಶ್ವರನ ಭಜನೆ ಅಥವಾ ಕೀರ್ತನೆ ಎಲ್ಲಿ ನಡೆಯುತ್ತದೆಯೋ, ಅಲ್ಲಿ ಅವರು ಹೋಗಬೇಕು.

೬. ಭಕ್ತಿಯ ಮುಖ್ಯ ಸಾಧನವೆಂದರೆ ಮುಕ್ತರಾದ ಮಹಾಪುರುಷರ ಕೃಪೆಯಾಗಿದೆ.

೭. ಮಹಾಪುರುಷರ ಸಹವಾಸ ಸಿಗುವುದು ದುರ್ಲಭವಾಗಿದೆ. ಅದರಿಂದ ಜೀವದ ಉದ್ಧಾರವಾಗುವುದು ಖಚಿತ.

೮. ಈಶ್ವರನ ಕೃಪೆಯಿಂದಲೇ ಇಂತಹ ಗುರುಗಳು ಲಭಿಸುತ್ತಾರೆ.

೯. ಈಶ್ವರ ಮತ್ತು ಅವನ ಭಕ್ತರಲ್ಲಿ ಭೇದವಿಲ್ಲ; ಆದ್ದರಿಂದ ಮಹಾಪುರುಷರ ಸತ್ಸಂಗದಲ್ಲಿರಲು ಪ್ರಯತ್ನಶೀಲರಾಗಿರಿ.

೧೦. ದುರ್ಜನರ ಸಹವಾಸವನ್ನು ಯಾವಾಗಲೂ ತಪ್ಪಿಸಬೇಕು; ಏಕೆಂದರೆ ಅದರಿಂದ ಕಾಮ, ಕ್ರೋಧ, ಮೋಹಗಳು ಉಂಟಾಗುತ್ತವೆ. ಧ್ಯೇಯದ ಮರೆವು ಆಗುತ್ತದೆ, ಇಚ್ಛಾಶಕ್ತಿಯ ನಾಶವಾಗುತ್ತದೆ ಹಾಗೂ ಜಿಗುಟುತನ ಸಹಿತ ಎಲ್ಲವೂ ಇಲ್ಲದಂತಾಗುತ್ತದೆ.

೧೧. ಈ ವಿಕಾರಗಳು ಮೊದಲು ಅಲೆಗಳಂತೆ ಚಿಕ್ಕದಾಗಿರುತ್ತವೆ; ಆದರೆ ನಂತರ ಕೆಟ್ಟ ಸಹವಾಸದಿಂದ ಅವು ಸಮುದ್ರದಂತೆ ದೊಡ್ಡ ರೂಪವನ್ನು ತಾಳುತ್ತವೆ.

೧೨. ಯಾರು ಅನಾಸಕ್ತನಾಗಿ ಇರುತ್ತಾರೋ, ಯಾರು ಮಹಾಪುರುಷರ ಸೇವೆ ಮಾಡುತ್ತಾರೋ, ಯಾರು ಏಕಾಂಗಿ ಇರುತ್ತಾರೋ, ಯಾರು ಜಗತ್ತಿನ ಎಲ್ಲ ಬಂಧನಗಳನ್ನು ಕಡಿದು ಹಾಕುತ್ತಾರೋ, ಯಾರು ತ್ರಿಗುಣಾತೀತನಾಗಿರುತ್ತಾರೋ, ಯಾರು ಜೀವನೋಪಾಯಕ್ಕಾಗಿಯೂ ದೇವರನ್ನೇ ಅವಲಂಬಿಸಿರು ತ್ತಾರೋ, ಅವರೇ ಮಾಯೆಯನ್ನು ದಾಟಿ ಹೋಗುತ್ತಾರೆ.

೧೩. ಯಾರು ಎಲ್ಲ ಕರ್ಮಫಲಗಳನ್ನು ತ್ಯಜಿಸುತ್ತಾರೋ, ಯಾರು ಎಲ್ಲ ಕರ್ಮಗಳನ್ನು ಮತ್ತು ಸುಖ-ದುಃಖ ಮುಂತಾದ ದ್ವಂದ್ವಗಳನ್ನು ತ್ಯಜಿಸುತ್ತಾರೋ, ಯಾರು ಶಾಸ್ತ್ರಗಳನ್ನು ಸಹ ತ್ಯಜಿಸುತ್ತಾರೋ, ಅವರಿಗೆ ಅಖಂಡ ಭಕ್ತಿ ಲಭಿಸುತ್ತದೆ. ಅವರು ಈ ಭವಸಾಗರವನ್ನು ದಾಟುತ್ತಾರೆ ಮತ್ತು ಇತರರಿಗೆ ದಾಟಲು ಸಹಾಯ ಮಾಡುತ್ತಾರೆ. – ಸ್ವಾಮಿ ವಿವೇಕಾನಂದರು

(ಸೌಜನ್ಯ : ಗ್ರಂಥ ‘ಧರ್ಮದ ಸ್ವರೂಪ ಮತ್ತು ಸಾಧನ’)