ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ, ಏಡ್ಸ ಮತ್ತು ಕುಷ್ಠರೋಗದೊಂದಿಗೆ ತುಲನೆ ಮಾಡುವುದು ಅಕ್ಷಮ್ಯ – ಹಿಂದೂ ಜನಜಾಗೃತಿ ಸಮಿತಿ

ಉದಯನಿಧಿ ಸ್ಟಾಲಿನ, ಪ್ರಿಯಾಂಕ ಖರ್ಗೆ ಮತ್ತು ಎ. ರಾಜಾ ಇವರನ್ನು ಬಂಧಿಸದಿದ್ದರೆ ದೇಶಾದ್ಯಂತ ಪ್ರತಿಭಟನೆ – ಹಿಂದೂ ಜನಜಾಗೃತಿ ಸಮಿತಿ

ವಿಶ್ವಬಂಧುತ್ವದ ಶಿಕ್ಷಣ ನೀಡಿ, ಎಲ್ಲರನ್ನು ಸಮಾವೇಶಗೊಳಿಸಿಕೊಳ್ಳುವ `ಸನಾತನ ಧರ್ಮ’ವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ ಏಡ್ಸ ಮತ್ತು ಕುಷ್ಠರೋಗ ಮುಂತಾದ ರೋಗಗಳೊಂದಿಗೆ ತುಲನೆ ಮಾಡಿ `ಸನಾತನ ಧರ್ಮ’ವನ್ನು ನಾಶಗೊಳಿಸುವ ಭಾಷೆಯನ್ನು ಆಡುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ತಮಿಳುನಾಡು ದ್ರಮುಕ ಸಂಸದ ಎ. ರಾಜಾ ದೇಶಾದ್ಯಂತ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ. ಆದರೆ ಅವರೆಲ್ಲರೂ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ.

ಇದರಿಂದಾಗಿ ದೇಶಾದ್ಯಂತವಿರುವ ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿದೆ. ಆದುದರಿಂದ ಅವರ ಮೇಲೆ ಭಾರತೀಯ ದಂಡ ಸಂಹಿತೆ ಕಲಂ 153(ಎ), 153(ಬಿ),295(A), 298, 505 ಮತ್ತು `ಐ.ಟಿ.ಕಾಯಿದೆ’ ಅಡಿಯಲ್ಲಿ ತಕ್ಷಣವೇ ಅಪರಾಧವನ್ನು ದಾಖಲಿಸಬೇಕು. ಇವರೆಲ್ಲರ ಮೇಲೆ `ರಾಷ್ಟ್ರೀಯ ಭದ್ರತಾ ಕಾಯಿದೆ(ಎನ್.ಎಸ್.ಎ)’ ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಕೇಂದ್ರ ಗೃಹಸಚಿವ ಸನ್ಮಾನ್ಯ ಅಮಿತ ಶಹಾ ಇವರಲ್ಲಿ ಮನವಿ ಮಾಡಿದೆ. ಹಾಗೆಯೇ ಅವರ ಮೇಲೆ ಕ್ರಮ ಕೈಕೊಳ್ಳದಿದ್ದರೆ, ದೇಶಾದ್ಯಂತ ಉಗ್ರ ಪ್ರತಿಭಟನೆಯನ್ನು ಕೈಕೊಳ್ಳಲಾಗುವುದು ಎಂದು ಸಮಿತಿಯು ಎಚ್ಚರಿಕೆಯನ್ನು ನೀಡಿದೆ. ಈ ಸಂದರ್ಭದ ಕೋರಿಕೆಯ ಮನವಿಯನ್ನು ಕೇಂದ್ರ ಗೃಹಮಂತ್ರಿ ಸನ್ಮಾನ್ಯ ಅಮಿತ ಶಹಾ ಇವರಿಗೆ ಕಳುಹಿಸಿದೆ.

ಮುಂಬಯಿಯಲ್ಲಿ ದೇಶದ ವಿರೋಧಿ ಪಕ್ಷಗಳ ಸಮಾವೇಶವಿರುವ `ಇಂಡಿಯಾ’ ಮೈತ್ರಿ ಕೂಟದ ಸಭೆ ನಡೆದ ಬಳಿಕ ಅದರಲ್ಲಿ ಭಾಗವಹಿಸಿರುವ ಕೆಲವು ಪಕ್ಷದವರಿಂದ ಸನಾತನ ಧರ್ಮವನ್ನು ಟೀಕಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂಚೂಣಿಯಲ್ಲಿದ್ದಾರೆ. ಕೋಟ್ಯಾವಧಿ ಹಿಂದೂಗಳ ಶ್ರದ್ಧೆಯ ಮೇಲೆ ದಾಳಿ ಮಾಡಿ ದೇಶದ ಐಕ್ಯತೆ, ಅಖಂಡತೆ ಮತ್ತು ಶಾಂತಿಯನ್ನು ಅಪಾಯಕ್ಕೆ ದೂಡುತ್ತಿದ್ದಾರೆ. ಹಾಗೆಯೇ ಸಚಿವರು ಮತ್ತು ಸಂಸದರು ಸಾಂವಿಧಾನಿಕ ಹುದ್ದೆಗಳಲ್ಲಿರುವ ವಿವಿಧ ಜವಾಬ್ದಾರಿಯುತ ವ್ಯಕ್ತಿಗಳೂ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಸೋಲಾಗಿದೆ. ಈ ರೀತಿ ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಧರ್ಮದ ವಿಷಯದಲ್ಲಿ ಹೇಳಿಕೆಗಳನ್ನು ನೀಡುವ ಧೈರ್ಯ ಈ ರಾಜಕೀಯ ಪಕ್ಷಗಳಲ್ಲಿ ಅಥವಾ ಅವರ ನಾಯಕರಲ್ಲಿ ಇದೆಯೇ? ಪದೇ ಪದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಹಿಂದೂಗಳನ್ನು ಗುರಿ ಮಾಡುವ ಇಂತಹ ಕಾನೂನುದ್ರೋಹಿ ಪ್ರತಿನಿಧಿಗಳನ್ನು ಸಂಪುಟದಿಂದ ಮಾತ್ರವಲ್ಲ ಶಾಸಕಾಂಗ ಮತ್ತು ಸಂಸತ್ತಿನಿಂದಲೂ ವಜಾಗೊಳಿಸಬೇಕು. ಇತರ ಸಮಯಗಳಲ್ಲಿ ಹಿಂದೂಗಳ ವಿರುದ್ಧ ತ್ವರಿತವಾಗಿ ‘ದ್ವೇಷ ಭಾಷಣ’ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗುತ್ತದೆ; ಆದರೆ, ಹಲವು ದಿನಗಳಿಂದ ಸನಾತನ ಧರ್ಮದ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಹೇಳಿಕೆಗಳು ನಡೆಯುತ್ತಿದ್ದರೂ ಸರ್ವೋಚ್ಚ ನ್ಯಾಯಾಲಯವೂ ಈ ವಿಷಯದಲ್ಲಿ ‘ಸುಮೋಟೋ’ ಕ್ರಮ ಕೈಗೊಳ್ಳದಿರುವುದು ದುರ್ದೈವವಾಗಿದೆ.

ಇಂತಹ ಧಾರ್ಮಿಕ ವೈಷಮ್ಯವನ್ನು ನಿರ್ಮಾಣ ಮಾಡುವ ನಾಯಕರ ವಿರುದ್ಧ ದೂರು ದಾಖಲಿಸಿ, ಅವರಿಗೆ ಶಿಕ್ಷೆ ನೀಡದಿದ್ದರೆ ದೇಶದ ಶಾಂತಿ, ಐಕ್ಯತೆ, ಸಮಗ್ರತೆಗೆ ಧಕ್ಕೆ ಬರಲಿದೆ. ಹಾಗೆಯೇ, ದೇಶದಲ್ಲಿ ಗಲಭೆ ಸೃಷ್ಟಿಸಿ ಅರಾಜಕತೆಯನ್ನುಂಟು ಮಾಡುವ ಈ ಆರೋಪಿಗಳ ಉದ್ದೇಶ ಸಫಲವಾಗಲಿದೆ. ಒಂದು ವೇಳೆ ಇದು ಸಂಭವಿಸಿದರೆ, ಪೊಲೀಸರು ಮತ್ತು ಆಡಳಿತ ಇದಕ್ಕೆ ಹೊಣೆಯಾಗುತ್ತದೆ ಎಂದು ಸಮಿತಿಯು ಹೇಳಿದೆ.