ಭಾರತದ ಮಹಾನ್ ಗಣಿತಜ್ಞ ‘ಆರ್ಯಭಟ’ ಅವರ ವಿಡಂಬನೆ; ಹಿಂದೂ ಜನಜಾಗೃತಿ ಸಮಿತಿಯಿಂದ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ !

  • 48 ಗಂಟೆಗಳಲ್ಲಿ ಕ್ಷಮೆಯಾಚಿಸಿ ವಿವಾದಾತ್ಮಕ ಜಾಹೀರಾತನ್ನು ಹಿಂಪಡೆಯಲು ಆಗ್ರಹ

  • ವಾಣಿಜ್ಯ ಲಾಭಕ್ಕಾಗಿ ರಾಷ್ಟ್ರೀಯ ಪರಂಪರೆಯ ಅವಮಾನವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟೀಕರಣ

ಮುಂಬಯಿ/ನವ ದೆಹಲಿ – ಪ್ರಾಚೀನ ಭಾರತದ ಮಹಾನ್ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ‘ಆರ್ಯಭಟ’ ಅವರನ್ನು ವಾಣಿಜ್ಯ ಜಾಹೀರಾತಿನಲ್ಲಿ ಅತ್ಯಂತ ಕೀಳು ಮಟ್ಟದಲ್ಲಿ ವಿಡಂಬನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ನ್ಯಾಯವಾದಿ ಅಮಿತಾ ಸಚದೇವ ಅವರು ‘ಅಮೆಜಾನ್ ಇಂಡಿಯಾ’ ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ‘ಅಮೆಜಾನ್ ಸಂಸ್ಥೆಯು 48 ಗಂಟೆಗಳಲ್ಲಿ ಭಾರತೀಯ ಜನತೆಯ ಕ್ಷಮೆಯಾಚಿಸಿ, ಈ ವಿವಾದಾತ್ಮಕ ಜಾಹೀರಾತನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ‘ಈ ಬೇಡಿಕೆಯನ್ನು ಮಾನ್ಯ ಮಾಡದಿದ್ದರೆ ಅಮೆಜಾನ್ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂಬ ಎಚ್ಚರಿಕೆಯನ್ನೂ ಈ ನೋಟಿಸ್‌ ನಲ್ಲಿ ನೀಡಲಾಗಿದೆ.

ನ್ಯಾಯವಾದಿ ಅಮಿತಾ ಸಚದೇವ ಅವರು ಹೇಳಿದ್ದು:

1. ಜಾಹೀರಾತಿನಲ್ಲಿ ಆರ್ಯಭಟರ ವೇಷಧರಿಸಿದ ವ್ಯಕ್ತಿಯೊಬ್ಬನನ್ನು ನಿಲ್ಲಿಸಿ, ಅವರನ್ನು ‘ಶೂನ್ಯ ಡೆಲಿವರಿ ಚಾರ್ಜಸ್ ಕಂಡುಹಿಡಿದ ವಿಜ್ಞಾನಿ’ ಎಂದು ವ್ಯಂಗ್ಯ ಮತ್ತು ಹಾಸ್ಯದ ರೂಪದಲ್ಲಿ ತೋರಿಸಲಾಗಿದೆ.

2. ಯಾವ ಮಹಾನ್ ಋಷಿತುಲ್ಯ ವಿಜ್ಞಾನಿ ಜಗತ್ತಿಗೆ ‘ಶೂನ್ಯ’ದ ಅಮೂಲ್ಯ ಪರಿಕಲ್ಪನೆಯನ್ನು ನೀಡಿ ಭಾರತದ ವೈಜ್ಞಾನಿಕ ಪತಾಕೆಯನ್ನು ಜಗತ್ತಿನಾದ್ಯಂತ ಹಾರಿಸಿದರೋ, ಅವರನ್ನು ಕೇವಲ ವ್ಯಾವಸಾಯಿಕ ಲಾಭಕ್ಕಾಗಿ ಹಾಸ್ಯದ ಪಾತ್ರವನ್ನಾಗಿಸಿ ಅಪಹಾಸ್ಯ ಮಾಡುವುದು ಭಾರತದ ಮಹಾನ್ ಜ್ಞಾನ-ಪರಂಪರೆ ಮತ್ತು ರಾಷ್ಟ್ರೀಯ ಅಸ್ಮಿತೆಗೆ ಪ್ರಜ್ಞಾಪೂರ್ವಕವಾಗಿ ಮಾಡಿದ ಅವಮಾನವಾಗಿದೆ.

3. ವಾಣಿಜ್ಯ ಲಾಭಕ್ಕಾಗಿ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಪ್ರತೀಕಗಳನ್ನು ಅವಮಾನಿಸುವುದು ಅಮೆಜಾನ್ ಸಂಸ್ಥೆಗೆ ಇದು ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಈ ಸಂಸ್ಥೆಯು ಶ್ರೀ ಗಣೇಶ ಮತ್ತು ಮಾತಾ ಲಕ್ಷ್ಮಿ ಚಿತ್ರಗಳಿರುವ ಕಾಲು ಒರೆಸುವ ಚಾಪೆ (ಮ್ಯಾಟ್), ಶೌಚಾಲಯದ ಆಸನದ ಮೇಲಿನ ಹೊದಿಕೆಗಳನ್ನು ಮಾರಾಟ ಮಾಡುವುದು, ಹಾಗೆಯೇ ‘ತಾಂಡವ್’ ವೆಬ್ ಸರಣಿಯ ಮಾಧ್ಯಮದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮುಂತಾದ ಕೆಲಸಗಳನ್ನು ಮಾಡಿತ್ತು. ಆಗ ತೀವ್ರ ಪ್ರತಿರೋಧದ ನಂತರ ಅಮೆಜಾನ್ ಕ್ಷಮೆಯಾಚಿಸಿತ್ತು.

4. ವಾಣಿಜ್ಯ ಲಾಭಕ್ಕಾಗಿ ಭಾರತೀಯ ರಾಷ್ಟ್ರಪುರುಷರನ್ನು ಅಪಮಾನಿಸುವುದು ಸುಧಾರಿತ ಭಾರತೀಯ ನ್ಯಾಯ ಸಂಹಿತೆಯ ಕಲಂ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), ಕಲಂ 196 ಮತ್ತು 197 (ಸಮಾಜದಲ್ಲಿ ದ್ವೇಷವನ್ನು ಉಂಟುಮಾಡಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದು) ಹಾಗೂ ಕಲಂ 302 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ) ಅನ್ವಯ ನೇರವಾಗಿ ಕ್ರಿಮಿನಲ್ ಮತ್ತು ಸಿವಿಲ್ ಕ್ರಮಕ್ಕೆ ಅರ್ಹವಾಗಿದೆ.

5. ವಿವಾದಾತ್ಮಕ ಜಾಹೀರಾತನ್ನು ಯೂಟ್ಯೂಬ್, ಇನ್‌ ಸ್ಟಾಗ್ರಾಮ್, ಎಕ್ಸ್ ಮುಂತಾದ ಮಾಧ್ಯಮಗಳಿಂದ ಶಾಶ್ವತವಾಗಿ ತೆಗೆದು ಹಾಕಬೇಕು, ಸಂಸ್ಥೆಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ, ತನ್ನ ಜಾಲತಾಣದ ಮುಖ್ಯ ಪುಟದಲ್ಲಿ ಮತ್ತು ದೇಶದ ಪ್ರಮುಖ ವೃತ್ತಪತ್ರಿಕೆಗಳಲ್ಲಿ ಬಹಿರಂಗ ಹಾಗೂ ಬೇಷರತ್ ಕ್ಷಮೆಯಾಚಿಸಬೇಕು, ಹಾಗೆಯೇ ಭವಿಷ್ಯದಲ್ಲಿ ರಾಷ್ಟ್ರೀಯ ಪ್ರತೀಕಗಳು ಅಥವಾ ರಾಷ್ಟ್ರಪುರುಷರನ್ನು ಅವಮಾನಿಸುವುದಿಲ್ಲವೆಂದು ಲಿಖಿತ ಭರವಸೆ ನೀಡಬೇಕು ಎಂಬ ದೃಢ ಬೇಡಿಕೆಗಳನ್ನೂ ಮಾಡಲಾಗಿದೆ.

(ಮೇಲೆ ಪ್ರಕಟಿಸಿರುವ ಚಿತ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತುರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು)

‘ಅಮೆಜಾನ್’ ಬಹಿಷ್ಕರಿಸುವ ಅಭಿಯಾನ !

ಸಂಬಂಧಿತ ಜಾಹೀರಾತಿನಿಂದಾಗಿ ದೇಶಾದ್ಯಂತದ ರಾಷ್ಟ್ರಪ್ರೇಮಿ ನಾಗರಿಕರು ಆಕ್ರೋಶಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ‘ಅಮೆಜಾನ್’ ಅನ್ನು ಬಹಿಷ್ಕರಿಸುವ (#Boycott_Amazon) ಆನ್‌ ಲೈನ್ ಅಭಿಯಾನ ವೇಗವಾಗಿ ಪ್ರಸಾರವಾಗುತ್ತಿದೆ.