ಶಿವೋಪಾಸನೆಯ ವೈಶಿಷ್ಟ್ಯಗಳು ಮತ್ತು ಶಾಸ್ತ್ರ

ಮಹಾಶಿವರಾತ್ರಿ

ಶಿವಭಕ್ತರು ಮಹಾಶಿವರಾತ್ರಿಯಂದು ಶಿನವ ಉಪಾಸನೆಯನ್ನು ಶ್ರದ್ಧೆಯಿಂದ ಮಾಡುತ್ತಾರೆ. ಶಾಸ್ತ್ರವನ್ನರಿತು ಶಿವೋಪಾಸನೆ ಮಾಡಿದರೆ ಉಪಾಸಕನ ಭಾವಭಕ್ತಿ ಹೆಚ್ಚಾಗಿ ಅವನಿಗೆ ಅಧಿಕಾಧಿಕ ಲಾಭವಾಗುತ್ತದೆ. ಶಿವೋಪಾಸನೆಯಲ್ಲಿ ಪ್ರತ್ಯಕ್ಷ ದೇವಸ್ಥಾನದಲ್ಲಿ ದರ್ಶನ ಪಡೆಯುವುದರಿಂದ ಹಿಡಿದು ಶಿವಪೂಜೆಯ ತನಕ ಅನೇಕ ಕೃತಿಗಳಿರುತ್ತವೆ. ಶಿವರಾತ್ರಿಯ ನಿಮಿತ್ತ ಶಿವನ ಉಪಾಸನೆಯ ವೈಶಿಷ್ಟ್ಯ ಮತ್ತು ಶಾಸ್ತ್ರಗಳನ್ನು ತಿಳಿದುಕೊಳ್ಳೋಣ.

ಶಿವಲಿಂಗದ ದರ್ಶನ ಪಡೆಯುವ ಮೊದಲು ನಂದಿಯ ದರ್ಶನ ಪಡೆಯುವುದು

ಶಿವನ ದೇವಸ್ಥಾನದಲ್ಲಿರುವ ನಂದಿಯು ಶಿವನ ವಾಹನ ವಾಗಿದೆ. ಶಿವಲಿಂಗದ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯಬೇಕು. ನಂದಿಯ ದರ್ಶನ ಪಡೆದರೆ ಸಾತ್ತ್ವಿಕತೆಯ ಪ್ರಮಾಣ ಹೆಚ್ಚಾಗಲು ಸಹಾಯವಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ.  ಇದರಿಂದ ಅನಂತರ ಶಿವಲಿಂಗದ ದರ್ಶನವನ್ನು ಪಡೆಯುವಾಗ ಭಕ್ತನಿಗೆ ಶಿವನಿಂದ ಬರುವ ಶಕ್ತಿಶಾಲಿ ಲಹರಿಗಳನ್ನು ಸಹಿಸುವ ಕ್ಷಮತೆ ಪ್ರಾಪ್ತವಾಗುತ್ತದೆ, ಶಿವಲಿಂಗದ ದರ್ಶನವನ್ನು ಪಡೆಯುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಶಿವಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.

ಶಿವಾಲಯದಲ್ಲಿ ಲಿಂಗದ ಪೂಜೆಯನ್ನು ಮಾಡುವುದು

ಶಿವಾಲಯದಲ್ಲಿ ಶಿವಲಿಂಗದ ಪೂಜೆಯನ್ನು ಮಾಡುವಾಗ ಹರಿನಾಳದ ಸ್ರೋತದ ಎದುರಿಗೆ ಕುಳಿತುಕೊಳ್ಳಬಾರದು. ಇದರ ಕಾರಣವೆಂದರೆ ಶಿವನ ಲಹರಿಗಳು ಹರಿನಾಳದಿಂದ ಅಧಿಕ ಪ್ರಮಾಣದಲ್ಲಿ ಹೊರಸೂಸುತ್ತವೆ. ಹರಿನಾಳದ ಎದುರಿಗೆ ಕುಳಿತುಕೊಂಡರೆ ಶಿವನ ಶಕ್ತಿಶಾಲಿ ಲಹರಿಗಳು ನೇರವಾಗಿ ಮೈಮೇಲೆ ಬರುವುದರಿಂದ ಉಪಾಸಕನಿಗೆ ಆ ಲಹರಿಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ಲಿಂಗದ ಪೂಜೆಯನ್ನು ಮಾಡುವಾಗ ಲಿಂಗದ ಹತ್ತಿರ ಇತರ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಶಂಕರನ ಲಿಂಗಕ್ಕೆ ತಣ್ಣೀರು, ಹಾಲು ಅಥವಾ ಪಂಚಾಮೃತದಿಂದ ಸ್ನಾನ ಹಾಕುತ್ತಾರೆ.

ಶಿವನಿಗೆ ಹಾಲಿನ ಅಭಿಷೇಕ ಮಾಡುವುದು

ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು. ಇದರ ಕಾರಣವೆಂದರೆ ಹಾಲಿನಲ್ಲಿ ಶಿವನ ತತ್ತ್ವವನ್ನು ಆಕರ್ಷಿಸುವ ಕ್ಷಮತೆ ಹೆಚ್ಚಿರುತ್ತದೆ. ಆದುದರಿಂದ ಹಾಲಿನ ಅಭಿಷೇಕದ ಮಾಧ್ಯಮದಿಂದ ಶಿವನ ತತ್ತ್ವವು ಬೇಗನೆ ಜಾಗೃತಗೊಳ್ಳುತ್ತದೆ. ತದನಂತರ ಆ ಹಾಲನ್ನು ತೀರ್ಥವೆಂದು ಸೇವಿಸುವುದರಿಂದ ಶಿವತತ್ತ್ವದ ಅಧಿಕ ಲಾಭವಾಗುತ್ತದೆ.

ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದು

ಯಾವ ವಸ್ತುವಿನಲ್ಲಿ ವಿಶಿಷ್ಟ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆ ಇತರ ವಸ್ತುಗಳಿಗಿಂತ ಅಧಿಕ ಪ್ರಮಾಣದಲ್ಲಿರುತ್ತದೆಯೋ ಅಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸಿದಲ್ಲಿ, ಆಯಾ ದೇವತೆಗಳ ತತ್ತ್ವ ಮೂರ್ತಿಯಲ್ಲಿ ಬಂದು ದೇವತೆಯ ಮೂರ್ತಿಯ ಚೈತನ್ಯದ ಲಾಭವಾಗುತ್ತದೆ. ಇದಕ್ಕಾಗಿ ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕು.

ಶಿವನಿಗೆ ಬಿಳಿ ಬಣ್ಣದ ಪುಷ್ಪಗಳನ್ನು ಅರ್ಪಿಸಬೇಕು

ವಿಶಿಷ್ಟ ಪುಷ್ಪಗಳಲ್ಲಿ ವಿಶಿಷ್ಟ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಕ್ಷಮತೆಯು ಇತರ ಪುಷ್ಪಗಳ ತುಲನೆಯಲ್ಲಿ ಅಧಿಕ ಇರುತ್ತದೆ. ದತ್ತೂರಿ, ಶ್ವೇತಕಮಲ, ಬಿಳಿ ಕಣಗಿಲೆ, ಚಮೇಲಿ, ಮಂದಾರ, ನಾಗಸಂಪಿಗೆ, ಪುನ್ನಾಗ, ನಾಗಕೇಶರ, ರಾತ್ರಿರಾಣಿ, ದುಂಡುಮಲ್ಲಿಗೆ, ಜಾಜಿಮಲ್ಲಿಗೆ ಹಾಗೂ ಬಿಳಿ ಹೂವುಗಳನ್ನು ಅರ್ಪಿಸಬೇಕು. ಈ ಹೂವುಗಳ ಗಂಧದಿಂದ ಶಿವನ ತತ್ತ್ವ ಶಿವಲಿಂಗದಲ್ಲಿ ಅಧಿಕ ಪ್ರಮಾಣದಲ್ಲಿ ಆಕರ್ಷಿತಗೊಳ್ಳುತ್ತದೆ ಹಾಗೂ ನಮಗೆ ದೇವತೆಯ ತತ್ತ್ವದ ಲಾಭವಾಗುತ್ತದೆ. ದೇವತೆಯ ಚರಣಗಳಿಗೆ ಹೂವುಗಳನ್ನು ವಿಶಿಷ್ಟ ಸಂಖ್ಯೆಯಲ್ಲಿ ಅರ್ಪಿಸಿದಲ್ಲಿ, ಹೂವುಗಳೆಡೆಗೆ ಆಯಾ ದೇವತೆಯ ತತ್ತ್ವ ಶೀಘ್ರವಾಗಿ ಆಕರ್ಷಿಸಲ್ಪಡುತ್ತದೆ. ಈ ತತ್ತ್ವಕ್ಕನುಸಾರ ಶಿವನಿಗೆ ಹತ್ತು ಹೂವುಗಳನ್ನು ಅರ್ಪಿಸಬೇಕು. ಹೂವುಗಳ ಬಳಿಕ ತೊಟ್ಟು ನಮ್ಮೆಡೆಗೆ ಮುಖಮಾಡಿಟ್ಟು ಬಿಲ್ವಪತ್ರೆಗಳನ್ನು ಅರ್ಪಿಸಬೇಕು. (ದಿನನಿತ್ಯದ ಪೂಜೆಯಲ್ಲಿ ಎಲೆಗಳನ್ನು ಮೊದಲು ಮತ್ತು ಪುಷ್ಪಗಳನ್ನು ಬಳಿಕ ಅರ್ಪಿಸುತ್ತಾರೆ)

ಶಿವನ ತಾರಕ ಮತ್ತು ಮಾರಕ ತತ್ತ್ವಕ್ಕಾಗಿ ಉಪಯೋಗಿಸುವ ಊದುಬತ್ತಿ !

ಶಿವನ ಪೂಜೆಯನ್ನು ಮಾಡುವಾಗ ಅವನ ತಾರಕ ತತ್ತ್ವ ಅಧಿಕ ಪ್ರಮಾಣದಲ್ಲಿ ಆಕರ್ಷಿಸಲು ಕೇದಗೆ ಅಥವಾ ಚಮೇಲಿ, ಇದರಲ್ಲಿ ಯಾವುದಾದರೂ ಗಂಧದ ಊದುಬತ್ತಿಯನ್ನು ಉಪಯೋಗಿಸಬೇಕು, ಹಾಗೆಯೇ ಶಿವನ ಮಾರಕ ತತ್ತ್ವವನ್ನು ಅಧಿಕ ಪ್ರಮಾಣದಲ್ಲಿ ಆಕರ್ಷಿಸಲು ಹಿನಾ ಅಥವಾ ದರಬಾರ ಈ ಗಂಧದ ಊದುಬತ್ತಿಗಳನ್ನು ಉಪಯೋಗಿಸಬೇಕು.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ ?

ಶಿವನಿಗೆ ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿ ಪ್ರದಕ್ಷಿಣೆ ಇರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದ ವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರ ಎನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ ಆರಂಭವಾಗುತ್ತದೆ. ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯ ವರೆಗೆ ಹೋಗಬೇಕು. ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯ ವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು. ಈ ನಿಯಮವು ಶಿವಲಿಂಗವು ಮಾನವ ಸ್ಥಾಪಿತ ಅಥವಾ ಮಾನವನಿರ್ಮಿತ ವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ. ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿ ಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ.(ಬುದ್ಧಿಪ್ರಾಮಾಣ್ಯವಾದಿಗಳಿಗೆ, ಹರಿನಾಳವನ್ನು ದಾಟುವಾಗ ನಮ್ಮ ಕಾಲುಗಳಲ್ಲಿನ ಕೊಳೆಯು ಅದರಲ್ಲಿ ಬಿದ್ದರೆ, ಆ ನೀರನ್ನು ತೀರ್ಥವೆಂದು ಸೇವಿಸುವ ಭಕ್ತರಿಗೆ ರೋಗಗಳು ಬರುತ್ತವೆ, ಆದುದರಿಂದ ಅದನ್ನು ದಾಟುವುದಿಲ್ಲವೆಂದು ಅನಿಸುತ್ತದೆ !)