ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯಾಗಲು ಮಹತ್ವಪೂರ್ಣ ಯೋಗದಾನ ನೀಡುವ ‘ಭಾರತೀಯ ಕೌಟುಂಬಿಕ ವ್ಯವಸ್ಥೆ’ !

ಸದ್ಗುರು ಶ್ರೀ. ರಾಜೇಂದ್ರ ಶಿಂದೆ

‘ಸನಾತನ ಸಂಸ್ಥೆಯಲ್ಲಿ ‘ಅಜ್ಜಿ’ ಎಂದು ಕರೆಯಲ್ಪಡುವ ಅನೇಕ ವಯಸ್ಸಾದ, ವೃದ್ಧ ಸಾಧಕಿಯರು ಸಂತಪದವಿಯನ್ನು ತಲುಪಿದ್ದಾರೆ. ಇವರಲ್ಲಿ ಎಷ್ಟೋ ವಯಸ್ಸಾದ ಸಾಧಕಿಯರ (ಅಜ್ಜಿಯರ) ಹೆಸರನ್ನು ಪ್ರಸಾರದಲ್ಲಿ ಸೇವೆ ಮಾಡುವ ಸಾಧಕರು ಕೇಳಿಯೂ ಇರುವುದಿಲ್ಲ. ವಯಸ್ಸಾದ ಸಾಧಕಿಯರಿಗೆ ವಯೋಮಾನಕ್ಕನುಸಾರ ಸಮಷ್ಟಿಸಾಧನೆ ಮಾಡಲು ಸಾಧ್ಯವಿರುವುದಿಲ್ಲ. ‘ಅವರು ಹೇಗೆ ಸಾಧನೆ ಮಾಡಿ ಸಂತಪದವಿ ತಲುಪಿದರು ?’ ಎಂಬುದನ್ನು ವಿಚಾರ ಮಾಡಿದಾಗ ಸಚ್ಚಿದಾನಂದ ಪರಬ್ರಹ್ಮ ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಕೃಪೆಯಿಂದ ಮುಂದಿನ ವಿಷಯಗಳು ಗಮನಕ್ಕೆ ಬಂದವು.

೧. ವೃದ್ಧ ಸಾಧಕಿಯರು (ಅಜ್ಜಿ) ಸಾಧನೆಗೆ ಬರುವ ಮೊದಲು ಅವರ ಮನೆಯಲ್ಲಿನ ಧಾರ್ಮಿಕ ವಾತಾವರಣವು ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುವುದು

೧ ಅ. ಮನೆಯ ಸದಸ್ಯರು ಧರ್ಮಪರಾಯಣರಾಗಿದ್ದುದರಿಂದ ಈಗಿನ ವೃದ್ಧ ಸಾಧಕಿಯರಲ್ಲಿ ಬಾಲ್ಯದಿಂದಲೇ ದೇವರ ಕುರಿತು ಗೌರವ, ಭಾವ, ಶ್ರದ್ಧೆ ನಿರ್ಮಾಣವಾಗುವುದು

೧ ಅ ೧. ಪ್ರತಿದಿನ ಮನೆಯಲ್ಲಿ ದೇವರ ಪೂಜೆ ಮಾಡುವುದು ಮತ್ತು ಸ್ತೋತ್ರ ಪಠಿಸುವುದು ಇವುಗಳಿಂದ ಸಾಧಕಿಯರಲ್ಲಿ ಸಾಧನೆಯ ಸಂಸ್ಕಾರವಾಗುವುದು : ಪ್ರಸ್ತುತ ಇಂತಹ ವೃದ್ಧ ಸಾಧಕಿಯರ ಮೂರನೆಯ ಪೀಳಿಗೆ ನಡೆಯುತ್ತಿದೆ. ಈ ಸಾಧಕಿಯರ ಜನ್ಮವಾದಾಗ, ಅಂದರೆ ಅಂದಾಜು ೬೦ ರಿಂದ ೬೫ ವರ್ಷಗಳ ಹಿಂದೆ ಮನೆಯ ವಾತಾವರಣ ಧಾರ್ಮಿಕವಾಗಿರುತ್ತಿತ್ತು. ಆ ಕಾಲದಲ್ಲಿ ಪ್ರತಿದಿನ ಬೆಳಗ್ಗೆ ಮನೆಯಲ್ಲಿ ದೇವರ ಪೂಜೆ ಮತ್ತು ಆರತಿ ನಡೆಯುತ್ತಿತ್ತು. ಮನೆಯ ಸದಸ್ಯರೂ ಬೆಳಗ್ಗೆ ಸ್ನಾನ ಮಾಡುವಾಗ ಮತ್ತು ಮಾಡಿದ ನಂತರ ಶ್ರೀರಾಮರಕ್ಷಾ, ವಿಷ್ಣುಸಹಸ್ರನಾಮದಂತಹ ಸ್ತೋತ್ರಗಳನ್ನು ಪಠಿಸುತ್ತಿದ್ದರು. ಮನೆಯ ಸದಸ್ಯರಲ್ಲೂ ಸಾಯಂಕಾಲ ‘ಪ್ರಾರ್ಥನೆ, ಶ್ಲೋಕ, ಸ್ತೋತ್ರಗಳು ಮತ್ತು ಭಜನೆ ಹೇಳುವುದು’ ಇಂತಹ ದಿನಕ್ರಮವಿರುತ್ತಿತ್ತು ಮತ್ತು ಅದನ್ನು ಮಾಡದಿದ್ದರೆ ಮಕ್ಕಳಿಗೆ ಶಿಕ್ಷೆ ನೀಡಲಾಗುತ್ತಿತ್ತು. ಆದ್ದರಿಂದ ಈಗಿನ ವೃದ್ಧ ಸಾಧಕಿಯರಲ್ಲಿ ಚಿಕ್ಕವರಿದ್ದಾಗಿನಿಂದಲೇ ಅರಿಯದೇ ಸಾಧನೆಯ ಸಂಸ್ಕಾರವಾಗಿದೆ.

೧ ಅ ೨. ಮನೆಯ ಸದಸ್ಯರಿಂದ ಕುಲಾಚಾರದ ಪಾಲನೆ, ವ್ರತಗಳು ಮತ್ತು ತೀರ್ಥಯಾತ್ರೆ ಮಾಡುವುದು ಇಂತಹವುಗಳಿಂದ ಧರ್ಮಾಚರಣೆಯಾಗುವುದು : ಆ ಸಮಯದಲ್ಲಿ ಮನೆಮನೆಗಳಲ್ಲಿ ಕುಲಾಚಾರದ ಪಾಲನೆ ಮಾಡಲಾಗುತ್ತಿತ್ತು. ಮನೆಯ ಸದಸ್ಯರು ಅನೇಕ ವ್ರತಗಳನ್ನು ಮಾಡುತ್ತಿದ್ದರು. ಮನೆಯ ಸದಸ್ಯರು ಪ್ರತಿ ತಿಂಗಳು ಏಕಾದಶಿ, ಸಂಕಷ್ಟಹರ ಚತುರ್ಥಿ ಮತ್ತು ಇಂತಹ ರೀತಿಯ ಉಪವಾಸಗಳನ್ನು ಮಾಡುತ್ತಿದ್ದರು. ಮನೆಮನೆಗಳಲ್ಲಿ ರಾಮನವಮಿ, ಹನುಮಂತ ಜಯಂತಿ, ಜನ್ಮಾಷ್ಟಮಿ, ಗಣೇಶೋತ್ಸವ, ನವರಾತ್ರ್ಯುತ್ಸವ, ದೀಪಾವಳಿ ಇವುಗಳಂತಹ ಧಾರ್ಮಿಕ ಹಬ್ಬ ಮತ್ತು ಉತ್ಸವಗಳನ್ನು ಶಾಸ್ತ್ರಕ್ಕನುಸಾರ ಆಚರಿಸಲಾಗುತ್ತಿತ್ತು. ಆ ಕಾಲದಲ್ಲಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದರು. ಮನೆಯ ಸದಸ್ಯರು ಸಮೀಪದ ದೇವಾಲಯಗಳಿಗೆ ನಿಯಮಿತವಾಗಿ ಹೋಗುತ್ತಿದ್ದರು.

೧ ಅ ೩. ಮಕ್ಕಳ ತಾಯಿತಂದೆಯರು ಮತ್ತು ಅಜ್ಜಾಜ್ಜಿಯರು ಧರ್ಮಪರಾಯಣರಾಗಿದ್ದರಿಂದ ಮಕ್ಕಳ ಮೇಲೆ ಧಾರ್ಮಿಕತೆಯ ಸಂಸ್ಕಾರವಾಗುವುದು : ಮಕ್ಕಳ ತಾಯಿತಂದೆಯರು ಧರ್ಮಾಚರಣಿಗಳು ಮತ್ತು ಧರ್ಮಪರಾಯಣರಾಗಿದ್ದುದರಿಂದ ಮಕ್ಕಳ ಮನಸ್ಸಿನ ಮೇಲೆ ಧಾರ್ಮಿಕತೆಯ ಸಂಸ್ಕಾರ ತುಂಬಾ ಉತ್ತಮ ರೀತಿಯಲ್ಲಿ ಬಿಂಬಿತವಾಗುತ್ತಿತ್ತು. ಸಮೀಪದಲ್ಲಿರುವ ದೇವಸ್ಥಾನಗಳಲ್ಲಿ ಅಥವಾ ಹತ್ತಿರದಲ್ಲೆಲ್ಲಾದರೂ ಭಜನೆ-ಪ್ರವಚನಗಳಿರುತ್ತಿದ್ದಲ್ಲಿ, ಅಜ್ಜಾಜ್ಜಿಯರು ಮೊಮ್ಮಕ್ಕಳನ್ನು ಅವಶ್ಯವಾಗಿ ಕರೆದುಕೊಂಡು ಹೋಗುತ್ತಿದ್ದರು, ಹಾಗೆಯೇ ದೇವಸ್ಥಾನಗಳಿಗೂ ಕರೆದೊಯ್ಯುತ್ತಿದ್ದರು. ಆದ್ದರಿಂದ ಮಕ್ಕಳಲ್ಲಿ ದೇವತೆಗಳ ಬಗ್ಗೆ ತುಂಬಾ ಗೌರವಾದರ, ಭಾವ ಮತ್ತು ಶ್ರದ್ಧೆ ನಿರ್ಮಾಣವಾಗುತ್ತಿತ್ತು.

೧ ಆ. ಹೆಣ್ಣುಮಕ್ಕಳಿಗೆ ನೀಡುವ ಸಂಸ್ಕಾರ ಮತ್ತು ಅದರಿಂದ ಅವರಿಗಾದ ಲಾಭ

೧ ಆ ೧. ಹೆಣ್ಣುಮಕ್ಕಳಿಗೆ ಸಂಸಾರಕ್ಕೆ ಉಪಯುಕ್ತ ಶಿಕ್ಷಣದೊಂದಿಗೆ ಯೋಗ್ಯ ರೀತಿಯಲ್ಲಿ ಆಚರಣೆ ಮಾಡುವುದನ್ನು ಕಲಿಸುವುದು : ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಆವಶ್ಯಕವಿರುವಷ್ಟು ಶಿಕ್ಷಣ ನೀಡಲಾಗುತ್ತಿತ್ತು. ಹೆಣ್ಣುಮಕ್ಕಳಿಗೆ ಸಂಸಾರಕ್ಕೆ ಉಪಯುಕ್ತವಾದ ಅಡುಗೆಕಲೆ, ಹೊಲಿಗೆ, ಕಸೂತಿ ಇವುಗಳ ಶಿಕ್ಷಣ ಕೊಡಲಾಗುತ್ತಿತ್ತು, ಹಾಗೆಯೇ ಹೆಣ್ಣುಮಕ್ಕಳಿಗೆ ‘ಸಂಸಾರ ಹೇಗೆ ಮಾಡಬೇಕು ? ಅತ್ತೆ ಮನೆಗೆ ಹೋದ ನಂತರ ಅಲ್ಲಿ ಹೇಗೆ ವರ್ತಿಸಬೇಕು ? ಪತಿಯೊಂದಿಗೆ ಹೇಗೆ ವರ್ತಿಸಬೇಕು ? ಪತಿಯನ್ನು ಗೌರವಾದರಗಳಿಂದ ಹೇಗೆ ಕಾಣಬೇಕು ? ಅತ್ತೆಯನ್ನು ಹೇಗೆ ಗೌರವಿಸಬೇಕು ? ಮನೆಯ ಹಿರಿಯರೊಂದಿಗೆ ಹೇಗೆ ವರ್ತಿಸಬೇಕು ?’ ಎಂಬುದನ್ನು ತಪ್ಪದೇ ಕಲಿಸಲಾಗುತ್ತಿತ್ತು. ‘ಜೀವನದಲ್ಲಿ ಸಮಾಧಾನಿಯಾಗಿರುವುದು ಎಷ್ಟು ಆವಶ್ಯಕ ಮತ್ತು ಹೇಗಿರಬೇಕು ?’ ಎಂಬುದನ್ನು ಹೇಗೆ ತಾಯಿಯು ಮಗಳ ಮನಸ್ಸಿನಲ್ಲಿ ಬಿಂಬಿಸುತ್ತಿದ್ದಳೋ, ಅದೇ ರೀತಿ ಅತ್ತೆಯು ಸೊಸೆಯ ಮನಸ್ಸಿನಲ್ಲಿ ಬಿಂಬಿಸುತ್ತಿದ್ದಳು.

೧ ಆ ೨. ಇತರರ ವಿಚಾರ ಮಾಡುವಾಗ ಹೆಣ್ಣುಮಕ್ಕಳಲ್ಲಿ ಪ್ರೇಮಭಾವ ಹೆಚ್ಚಾಗುವುದು ಮತ್ತು ಅವರು ಮದುವೆಯಾಗಿ ಅತ್ತೆಮನೆಗೆ ಹೋದಾಗ ಪರೇಚ್ಛೆಯಿಂದ ವರ್ತಿಸುವುದರಿಂದ ಅವರ ಅಹಂ ಕಡಿಮೆಯಾಗುವುದು : ‘ಸತತವಾಗಿ ಮನೆಯ ಸದಸ್ಯರ ವಿಚಾರ ಮಾಡುವುದು, ಅವರಿಗೆ ಇಷ್ಟವಾಗುವಂತೆ ವರ್ತಿಸುವುದು, ಮದುವೆಯ ನಂತರ ಪತಿಗಾಗಿ ಮತ್ತು ಮಕ್ಕಳಾದ ಮೇಲೆ ಅವರಿಗಾಗಿ ಸತತವಾಗಿ ಶ್ರಮಿಸುವುದು ಹಾಗೂ ಅದನ್ನೂ ಕರ್ತವ್ಯವೆಂದು ಪ್ರೇಮದಿಂದ ಮತ್ತು ನಿರಪೇಕ್ಷವಾಗಿ ಮಾಡುವುದು, ಎಲ್ಲರನ್ನೂ ಪ್ರೀತಿಸುವುದು’ ಇವೆಲ್ಲದರ ಮಹತ್ವವನ್ನು ಹೆಣ್ಣುಮಕ್ಕಳ ಮನಸ್ಸಿನಲ್ಲಿ ಬಿಂಬಿಸಲಾಗುತ್ತಿತ್ತು. ಆದ್ದರಿಂದ ಆ ಕಾಲದ ಹೆಣ್ಣುಮಕ್ಕಳಲ್ಲಿ ಪ್ರೇಮಭಾವವು ತುಂಬಾ ಹೆಚ್ಚಾಯಿತು ಮತ್ತು ಅವರು ಸಾಧನೆಗೆ ಬಂದ ನಂತರ ಅವರಿಗೆ ಪ್ರೇಮಭಾವವನ್ನು ಪ್ರೀತಿಯಲ್ಲಿ ರೂಪಾಂತರಿಸುವುದು ತುಂಬಾ ಸುಲಭವಾಯಿತು. ಆ ಕಾಲದಲ್ಲಿನ ಹೆಣ್ಣುಮಕ್ಕಳ ಮನಸ್ಸಿನ ಮೇಲೆ ಚಿಕ್ಕವರಿದ್ದಾಗಿನಿಂದಲೇ ಇತರರ ಇಚ್ಛೆಯಿಂದ, ಅಂದರೆ ಪರೇಚ್ಛೆಯಿಂದ ವರ್ತಿಸುವುದರ ಮಹತ್ವವನ್ನು ದೊಡ್ಡ ಪ್ರಮಾಣದಲ್ಲಿ ಬಿಂಬಿಸಲಾಗುತ್ತಿತ್ತು. ಆ ಕಾಲದಲ್ಲಿನ ಹೆಣ್ಣುಮಕ್ಕಳು ಮದುವೆಯ ನಂತರ ಈ ರೀತಿ ವರ್ತಿಸಿದುದರಿಂದ ತಮಗೆ ಅರಿವಿಲ್ಲದೇ ಅವರ ಅಹಂ ಕಡಿಮೆಯಾಗಲು ಸಹಾಯವಾಗುತ್ತಿತ್ತು.

೧ ಆ ೩. ಮನೆಕೆಲಸಗಳಲ್ಲಿ ನಿರತರಾಗಿದ್ದುದರಿಂದ ಮಹಿಳೆಯರು ಅನಾವಶ್ಯಕ ಕೃತಿಗಳು ತಡೆಗಟ್ಟಲ್ಪಡುವುದು : ಆ ಕಾಲದಲ್ಲಿನ ಮಹಿಳೆಯು ಮುಂಜಾನೆ ಎದ್ದ ನಂತರ ಬೀಸುವ ಕಲ್ಲಿನಲ್ಲಿ ಧಾನ್ಯ ಬೀಸುವುದು, ಮನೆಯ ಸ್ವಚ್ಛತೆ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಅಡುಗೆ ಮಾಡುವುದು, ರುಬ್ಬುವ ಕಲ್ಲಿನಲ್ಲಿ ರುಬ್ಬುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದುದರಿಂದ ಅವರು ದಿನವಿಡೀ ಸಕ್ರಿಯರಾಗಿದ್ದು ಅವರ ಆರೋಗ್ಯವು ಚೆನ್ನಾಗಿರುತ್ತಿತ್ತು. ಅವರು ಕೆಲಸಗಳಲ್ಲಿ ನಿರತರಾದುದರಿಂದ ಅನಾವಶ್ಯಕ ಕೃತಿಗಳಾಗುವುದು ತಾನಾಗಿಯೇ ತಡೆಗಟ್ಟಲ್ಪಡುತ್ತಿತ್ತು. ಅದರಲ್ಲೂ ಸಮಯ ಸಿಕ್ಕಿದರೆ ಅವರು ಧಾರ್ಮಿಕ ಗ್ರಂಥಗಳ ವಾಚನ ಮಾಡುತ್ತಿದ್ದರು. ಈಗಿನ ಪೀಳಿಗೆಯ ಮಹಿಳೆಯರು ಸಂಚಾರವಾಣಿ ಮತ್ತು ದೂರದರ್ಶನವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೋಡುವುದು, ಸಾಮಾಜಿಕ ಪ್ರಸಾರ ಮಾಧ್ಯಮಗಳನ್ನು ಬಳಸುವುದು ಇತ್ಯಾದಿ ಅನೇಕ ಕೃತಿ ಮಾಡುವಲ್ಲಿ ಬಹಳ ಸಮಯ ವ್ಯರ್ಥ ಮಾಡುತ್ತಾರೆ, ಹೀಗೆ ಹಿಂದಿನ ಕಾಲದಲ್ಲಾಗುತ್ತಿರಲಿಲ್ಲ.

೧ ಆ ೪. ಮಹಿಳೆಯು ಧರ್ಮಾಚರಣೆ ಮಾಡುತ್ತಿದ್ದುದರಿಂದ ಅವರಲ್ಲಿನ ಸಾತ್ತ್ವಿಕತೆ ಹೆಚ್ಚಾಗುವುದು ಮತ್ತು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಅವರ ರಕ್ಷಣೆಯಾಗುವುದು : ಆ ಕಾಲದಲ್ಲಿ ಮಹಿಳೆಯರ ಜೀವನಶೈಲಿ ಸರಳವಾಗಿರುತ್ತಿತ್ತು. ಅವರು ಧರ್ಮಾಚರಣೆಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ‘ಸಾತ್ತ್ವಿಕ ಉಡುಪು ಧರಿಸುವುದು, ಉದಾ. ಸೀರೆ, ಕಚ್ಚೆ ಸೀರೆ (೯ ಗಜ) ಧರಿಸುವುದು, ಕೂದಲುಗಳನ್ನು ಹಾಗೇ ಬಿಡದಿರುವುದು, ಕುಂಕುಮ ಹಚ್ಚಿಕೊಳ್ಳುವುದು, ಕಾಲುಂಗುರ ಮತ್ತು ಕಾಲುಗಳಲ್ಲಿ ಗೆಜ್ಜೆ ಧರಿಸುವುದು, ಕಿವಿ-ಮೂಗು ಚುಚ್ಚಿಸುವುದು, ಪರಿಸ್ಥಿತಿಗನುಸಾರ ಚಿನ್ನಬೆಳ್ಳಿಯ ಆಭರಣ ಧರಿಸುವುದು’ ಇತ್ಯಾದಿ ಅನೇಕ ಕೃತಿಗಳಿಂದ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಅವರ ರಕ್ಷಣೆಯಾಗುತ್ತಿತ್ತು ಮತ್ತು ಅವರಲ್ಲಿನ ಸಾತ್ತ್ವಿಕತೆ ಹೆಚ್ಚಾಗುತ್ತಿತ್ತು.

೧ ಆ ೫. ದೇವರ ಅನುಸಂಧಾನದಲ್ಲಿದ್ದು ಪರಿಸ್ಥಿತಿ ಸ್ವೀಕರಿಸುವುದು : ಹಿಂದಿನ ಕಾಲದಲ್ಲಿ ದೂರವಾಣಿಗಳಿರಲಿಲ್ಲ. ಆದ್ದರಿಂದ ವಿವಾಹದ ನಂತರ ತವರು ಮನೆಯೊಂದಿಗೆ ಹೆಚ್ಚು ಸಂಬಂಧವಿರುತ್ತಿರಲಿಲ್ಲ. ಯಾವಾಗಲಾದರೊಮ್ಮೆ ಪತ್ರ ಕಳುಹಿಸುವುದು ಅಥವಾ ವರ್ಷಕ್ಕೊಂದು ಸಲ ಮನೆಗೆ ಹೋಗುವುದು, ಇದರ ಹೊರತು ತವರುಮನೆಯೊಂದಿಗೆ ಅವರ ಸಂಪರ್ಕವಿರುತ್ತಿರಲಿಲ್ಲ. ಆದ್ದರಿಂದ ಅವರ ದಿನನಿತ್ಯದ ಅಡಚಣೆ ಅಥವಾ ದುಃಖಗಳನ್ನು ದೇವರಿಗೆ ಹೇಳುವ ಅಭ್ಯಾಸವಾದುದರಿಂದ ದೇವರೊಂದಿಗೆ ಅವರ ಅನುಸಂಧಾನ ತಾನಾಗಿಯೇ ಆಗುತ್ತಿತ್ತು. ಮನೆಯಲ್ಲಿ ಉದ್ಭವಿಸುವ ಪರಿಸ್ಥಿತಿಯನ್ನು ಅವರು ಸಂಪೂರ್ಣವಾಗಿ ಸ್ವೀಕರಿಸುತ್ತಿದ್ದರು. ಅತ್ತೆಯೊಂದಿಗೆ ಹೊಂದಾಣಿಕೆಯಾಗದಿದ್ದರೂ ಎಂದಿಗೂ ಎದುರುತ್ತರ ಕೊಡುತ್ತಿರಲಿಲ್ಲ. ಪತಿಯು ಹೇಗೆಯೇ ಇದ್ದರೂ ಅವನನ್ನು ದೇವರೆಂದು ತಿಳಿದು ಪ್ರೀತಿಸುತ್ತಿದ್ದರು.

೧ ಆ ೬. ಪ್ರತಿಯೊಂದು ಪರಿಸ್ಥಿತಿಯಲ್ಲಿ ಆನಂದಿತಳಾಗಿರುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ”ಪ್ರಾರಬ್ಧವನ್ನು ಸ್ವೀಕರಿಸುವುದು ಶ್ರೇಷ್ಠವಾದ ಸಾಧನೆಯಾಗಿದೆ’’ ಎಂದು ಹೇಳುತ್ತಾರೆ. ಎಲ್ಲ ಪ್ರಸಂಗಗಳಲ್ಲಿ ಆ ಕಾಲದಲ್ಲಿನ ಹೆಣ್ಣುಮಕ್ಕಳ (ಅಂದರೆ ಈಗಿನ ವಯಸ್ಸಾದ ಸಾಧಕಿಯರ) ಸಾಧನೆಯೇ ಆಗುತ್ತಿತ್ತು. ಅವರು ‘ಇದ್ದ ಪರಿಸ್ಥಿತಿಯಲ್ಲಿ ಆನಂದದಿಂದ ಹೇಗೆ ಇರಬಹುದು ?’ ಎಂದು ನೋಡುತ್ತಿದ್ದರು.

೨. ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆಯನ್ನು ಆರಂಭಿಸಿದ ನಂತರ ಆ ಕಾಲದಲ್ಲಿನ ಹೆಣ್ಣುಮಕ್ಕಳ (ಈಗಿನ ವಯಸ್ಸಾದ ಸಾಧಕಿಯರ (ಅಜ್ಜಿಯರ)) ಆಧ್ಯಾತ್ಮಿಕ ಉನ್ನತಿ ಶೀಘ್ರವಾಗಿ ಆಗುವುದು

೨ ಅ. ಹೆಣ್ಣುಮಕ್ಕಳಿಗೆ ಮೊದಲಿನಿಂದಲೇ ಧಾರ್ಮಿಕತೆಯ ಸಂಸ್ಕಾರಗಳಾಗಿರುವುದರಿಂದ ಅವರಿಗೆ ಸಾಧನೆ ಮಾಡುವುದು ಸುಲಭವಾಗುವುದು : ಆ ಕಾಲದಲ್ಲಿನ ಹೆಣ್ಣುಮಕ್ಕಳಿಗೆ ಸನಾತನ ಸಂಸ್ಥೆಯ ಮಾಧ್ಯಮದಿಂದ ಯೋಗ್ಯ ಸಾಧನೆಯ ಬಗ್ಗೆ ತಿಳಿದಾಗ, ಅವರ ಮೇಲೆ ಮೊದಲಿನಿಂದಲೇ ಆಗಿರುವ ಧಾರ್ಮಿಕತೆಯ ಸಂಸ್ಕಾರಗಳಿಂದ ಸಾಧನೆ ಮಾಡಲು ಸುಲಭವಾಯಿತು. ಅವರಿಗೆ ಈಶ್ವರನ ಬಗ್ಗೆ ಇರುವ ಒಲವಿನಿಂದಾಗಿ ಭಾವಜಾಗೃತಿಗೆ ಪ್ರಯತ್ನಿಸುವುದು ಅತ್ಯಂತ ಸುಲಭವಾಯಿತು. ‘ಇತರರ ವಿಚಾರ ಮಾಡುವುದು, ಪ್ರೇಮಭಾವದಿಂದ ವರ್ತಿಸುವುದು, ಪತಿಯು ಹೇಳುವುದನ್ನು ಸಂಪೂರ್ಣವಾಗಿ ಕೇಳುವುದು, ಅತ್ತೆಮನೆಯ ಕಡೆಯವರ ಮನಸ್ಸಿನಂತೆ (ಒಪ್ಪುವಂತೆ) ವರ್ತಿಸುವುದು ಅಂದರೆ ಪರೇಚ್ಛೆಯಿಂದ ವರ್ತಿಸುವುದು’ ಇವೆಲ್ಲ ಗುಣಗಳಿಂದ ಅವರಲ್ಲಿನ ಅಹಂ ತುಂಬಾ ಪ್ರಮಾಣದಲ್ಲಿ ಕಡಿಮೆಯಾಯಿತು. ಆದ್ದರಿಂದ ಅವರಲ್ಲಿ ಸಾಧನೆಗೆ ಆವಶ್ಯಕ ಗುಣಗಳು ಉತ್ತಮ ರೀತಿಯಲ್ಲಿ ನಿರ್ಮಾಣವಾದವು. ಅವರ ಮೇಲಾದ ಇಂತಹ ಸಂಸ್ಕಾರಗಳಿಂದಾಗಿ ಸಾಧನೆ ಮಾಡುವಾಗ ಅವರಿಗೆ ಹೇಳುವುದನ್ನು ಶ್ರದ್ಧೆಯಿಂದ ಮಾಡಿದರು. ಅವರಿಗೆ ಅಷ್ಟಾಂಗ ಸಾಧನೆಯಲ್ಲಿನ ‘೧. ಸ್ವಭಾವದೋಷ ನಿರ್ಮೂಲನೆ ಮತ್ತು ಗುಣ ಸಂವರ್ಧನೆ, ೨. ಅಹಂ ನಿರ್ಮೂಲನೆ, ೩. ನಾಮಜಪ, ೪. ಭಾವಜಾಗೃತಿಗೆ ಮಾಡಬೇಕಾದ ಪ್ರಯತ್ನ, ೫. ಸತ್ಸಂಗ, ೬. ಸತ್ಸೇವೆ, ೭. ಸತ್‌ಗಾಗಿ ತ್ಯಾಗ ಮತ್ತು 8. ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೇಮ)’ ಇವೆಲ್ಲ ಹಂತಗಳು ವ್ಯಷ್ಟಿ ಸಾಧನೆಯ ಅಡಿಯಲ್ಲಿ ಸಹಜವಾಗಿ ಸಾಧ್ಯವಾಗತೊಡಗಿದವು. ಅವರು ಅವಿಭಕ್ತ ಕುಟುಂಬದಲ್ಲಿದ್ದುದರಿಂದ, ಹಾಗೆಯೇ ಅವರ ಮೇಲಾದ ಸಂಸ್ಕಾರಗಳಿಂದ ಅವರಲ್ಲಿನ ಸ್ವಭಾವದೋಷ ಮತ್ತು ಅಹಂ ಕಡಿಮೆಯಾಗಲು ಸಹಾಯವಾಯಿತು.

ಅವರಲ್ಲಿ ಸ್ವೀಕರಿಸುವ ವೃತ್ತಿ ಚೆನ್ನಾಗಿರುವುದರಿಂದ ‘ಕುಲದೇವತೆಯ ನಾಮಜಪ ಮಾಡುವುದು, ಕಾಲಾನುಸಾರ ಹೇಳಿದ ದತ್ತ, ಶ್ರೀಕೃಷ್ಣ ಅಥವಾ ಸಪ್ತದೇವತೆಗಳ ಪೈಕಿ ಆವಶ್ಯಕವಿರುವ ನಾಮಜಪ ಮಾಡುವುದು’ ಇತ್ಯಾದಿಗಳನ್ನು ಅವರು ಸಹಜವಾಗಿ ಸ್ವೀಕರಿಸಿದುದರಿಂದ ಅವರಿಗೆ ಸಾಧನೆಯ ಮುಂದಿನ ಹಂತವನ್ನು ಬೇಗನೇ ತಲುಪಲು ಸಹಾಯವಾಯಿತು.

೨ ಆ. ಸಮಷ್ಟಿ ಸಾಧನೆ ಮಾಡಿದ್ದರಿಂದ ವ್ಯಾಪಕತೆ ನಿರ್ಮಾಣವಾಗುವುದು : ‘ಸತ್ಸಂಗಕ್ಕೆ ಹೋಗುವುದು, ಸಂಪರ್ಕಕ್ಕೆ ಬರುವವರೆಲ್ಲರಿಗೂ ಗುರುಕೃಪಾಯೋಗಾನುಸಾರ ಸಾಧನೆ ಹೇಳುವುದು, ಅವರಿಗೆ ಸಾತ್ತ್ವಿಕ ಉತ್ಪನ್ನಗಳ ಮಹತ್ವ ತಿಳಿಸಿ ಹೇಳುವುದು ಮತ್ತು ಸಮಷ್ಟಿಗಾಗಿ ಪ್ರಾರ್ಥನೆ ಹಾಗೂ ನಾಮಜಪ ಮಾಡುವುದು’ ಇತ್ಯಾದಿ ಕೃತಿಗಳಿಂದ ವೃದ್ಧ ಸಾಧಕಿಯರಲ್ಲಿ ವ್ಯಾಪಕತೆ ನಿರ್ಮಾಣವಾಗಿ ಅವರ ಸಮಷ್ಟಿ ಸಾಧನೆಯಾಗುತ್ತಾ ಹೋಯಿತು.

೩. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಬೇರೂರಿರುವ ಮೌಲ್ಯಗಳಿಂದ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯು ಸಹಜವಾಗಿ ಆಗುವುದು

ಇವೆಲ್ಲ ಘಟಕಗಳಿಂದ ಅವರ ಸಾಧನೆ ತುಂಬಾ ಚೆನ್ನಾಗಿ ಆಗುತ್ತಾ ಹೋಯಿತು ಮತ್ತು ಅವರು ಸಂತಪದವಿಯಲ್ಲಿ ವಿರಾಜಮಾನರಾದರು. ‘ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಬೇರೂರಿರುವ ಮೌಲ್ಯಗಳಿಂದ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯು ಹೇಗೆ ಸಹಜವಾಗಿ ಆಗುತ್ತದೆ’ ಎಂಬುದೂ ಗಮನಕ್ಕೆ ಬರುತ್ತದೆ.

‘ಹಿಂದೂ ಧರ್ಮದಲ್ಲಿ ಹೇಳಿದಂತೆ ಧರ್ಮಾಚರಣೆ ಮಾಡಿದಲ್ಲಿ ಅದರಿಂದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ ಮತ್ತು ಈ ವೃದ್ಧ ಸಾಧಕಿಯರಿಗೆ (ಅಜ್ಜಿಯರಿಗೆ) ಇದರಿಂದಲೇ ಲಾಭವಾಯಿತು’ ಎಂಬುದು ಗಮನಕ್ಕೆ ಬರುತ್ತದೆ.’

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೦.೪.೨೦೨೨)

ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆ ಮಾಡಿ ಸಂತಪದವಿಯಲ್ಲಿ ವಿರಾಜಮಾನರಾದ ವೃದ್ಧ ಸಾಧಕಿಯರು (ಸಂತ ಅಜ್ಜಿ) !

ಧರ್ಮಾಚರಣೆ ಮತ್ತು ಸಾಧನೆ ಮಾಡಿ ಸಂತರಾದ ಪೂ. (ಶ್ರೀಮತಿ) ಆನಂದಿ ಪಾಟೀಲ (೧೦೦ ವರ್ಷ)

ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆ ಮಾಡಿ ೧.೧೧.೨೦೨೨ ರವರೆಗೆ ೧೧೭ ಸಾಧಕರು ಸಂತಪದವಿ ಪಡೆದಿದ್ದಾರೆ. ಅವರಲ್ಲಿ ೫೩ ವಯಸ್ಸಾದ ಸಾಧಕಿಯರು (ಅಜ್ಜಿ) ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.

೧. ಒಟ್ಟು ಸಂತರು – ೧೧೭

೧ ಅ. ಒಟ್ಟು ಸಂತ ಅಜ್ಜಿಯಂದಿರು (ವಯಸ್ಸಾದ ಸಾಧಕಿಯರು) – ೫೩

೧ ಅ ೧. ವ್ಯಷ್ಟಿ ಸಂತ ಅಜ್ಜಿಯಂದಿರು (ವಯಸ್ಸಾದ ಸಾಧಕಿಯರು) – ೪೧

೧ ಅ ೨. ಸಮಷ್ಟಿ ಸಂತ ಅಜ್ಜಿಯಂದಿರು (ವಯಸ್ಸಾದ ಸಾಧಕಿಯರು) – ೧೨

೧ ಆ. ಒಟ್ಟು ಅಜ್ಜಂದಿರು (ವಯಸ್ಸಾದ ಸಾಧಕರು) – ೪೧

೧ ಆ ೧. ವ್ಯಷ್ಟಿ ಸಂತ ಅಜ್ಜಂದಿರು (ವಯಸ್ಸಾದ ಸಾಧಕರು) – ೨೪

೧ ಆ ೨. ಸಮಷ್ಟಿ ಸಂತ ಅಜ್ಜಂದಿರು (ವಯಸ್ಸಾದ ಸಾಧಕರು) – ೧೭

‘ಹಿಂದೂ ಧರ್ಮದಲ್ಲಿ ಹೇಳಿದಂತೆ ಧರ್ಮಾಚರಣೆ ಮಾಡಿದರೆ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’ ಎಂಬುದು ಮೇಲಿನ ಸಂತ ಅಜ್ಜಿಯಂದಿರ (ವಯಸ್ಸಾದ ಸಾಧಕಿಯರ) ಸಂಖ್ಯೆಗಳಿಂದ ದೃಢ ಪಡುತ್ತದೆ.