ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಗುಜರಾತದ ಚೊಟಿಲಾದಲ್ಲಿ ಆದಿಶಕ್ತಿಯ ರೂಪವಾಗಿರುವ ಶ್ರೀ ಚಂಡಿ-ಚಾಮುಂಡಾ ದೇವಿಯ ದರ್ಶನ ಪಡೆದ ವಾರ್ತೆ !

‘ಚಂಡ’ ಮತ್ತು ‘ಮುಂಡ’ ಎಂಬ ಅಸುರರನ್ನು ವಧಿಸುವ ಮತ್ತು ಆದಿಶಕ್ತಿಯ ರೂಪವಾಗಿರುವ ಗುಜರಾತದ ಚೊಟಿಲಾದ ಶ್ರೀ ಚಂಡಿ-ಚಾಮುಂಡಾದೇವಿಯ ಭಾವಪೂರ್ಣ ದರ್ಶನವನ್ನು ಪಡೆಯೋಣ !

೧. ಚೊಟಿಲಾ (ಗುಜರಾತ)ದಲ್ಲಿನ ಶ್ರೀ ಚಂಡಿ-ಚಾಮುಂಡಾ ದೇವಿಯ ದರ್ಶನವನ್ನು ಪಡೆಯುವ ಬಗ್ಗೆ ಸಪ್ತರ್ಷಿಗಳು ಜೀವನಾಡಿಪಟ್ಟಿಯಲ್ಲಿ ಹೇಳಿದ ಅಂಶಗಳು

೧ ಅ. ‘೩೦.೬.೨೦೨೧ ರಂದು ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್‌ಜಿ ಇವರ ಮಾಧ್ಯಮದಿಂದ, “ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೯.೭.೨೦೨೧ ರಂದು (ಅಮಾವಾಸ್ಯೆಯಂದು) ಗುಜರಾತದ ‘ಚೊಟಿಲಾ’ ಎಂಬ ಕ್ಷೇತ್ರಕ್ಕೆ ಹೋಗಬೇಕು. ಅದೇ ದಿನದಂದು ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ‘ಶ್ರೀ ಚಾಮುಂಡಾದೇವಿಯ ಯಾಗ’ವನ್ನು ಪ್ರಾರಂಭಿಸಬೇಕು ಮತ್ತು ವ್ಯಾಸಪೂರ್ಣಿಮೆಯ (ಗುರುಪೂರ್ಣಿಮೆಯ) ದಿನದಂದು ಈ ಯಾಗದ ಪೂರ್ಣಾಹುತಿಯನ್ನು ಕೊಡಬೇಕು. ವ್ಯಾಸಪೂರ್ಣಿಮೆಯ ದಿನದಂದು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉತ್ತರಾಖಂಡ ರಾಜ್ಯದ ಬದ್ರಿನಾಥದ ಸಮೀಪದಲ್ಲಿರುವ ‘ಮಾಣಾ’ ಎಂಬ ಗ್ರಾಮದಲ್ಲಿರುವ ‘ವ್ಯಾಸಗುಹೆ’ಯ ದರ್ಶನವನ್ನು ಪಡೆಯಬೇಕು”, ಎಂಬುದಾಗಿ ಹೇಳಿದರು.

೧ ಆ. ಸಪ್ತರ್ಷಿಗಳು ಮುಂದೆ ಹೇಳುತ್ತಾ, “ಚೊಟಿಲಾ ಗ್ರಾಮದ ಬೆಟ್ಟದ ಮೇಲೆ ‘ಚಂಡಿ-ಚಾಮುಂಡಾ’ ಹೆಸರಿನ ದೇವಿಯರ ಮೂರ್ತಿಗಳಿವೆ. ಈ ದೇವಿಯರು ಇಬ್ಬರಾಗಿ ಕಾಣಿಸುತ್ತಿದ್ದರೂ, ಅವರು ಒಂದೇ (ಏಕರೂಪ) ಆಗಿದ್ದಾರೆ. ಚಂಡಿ ಮತ್ತು ಚಾಮುಂಡಾ ಇವರು ಆದಿಶಕ್ತಿಯ ರೂಪಗಳಾಗಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರು ಚಂಡಿ ಮತ್ತು ಚಾಮುಂಡಾ ಇವರ ರೂಪಗಳಾಗಿದ್ದಾರೆ. ಯಾವ ಆದಿಶಕ್ತಿಯು ಅನೇಕ ಯುಗಗಳ ಹಿಂದೆ ಚಂಡಿ-ಚಾಮುಂಡಾ ರೂಪವನ್ನು ತಾಳಿದ್ದಳೋ, ಹಾಗೆಯೇ ಯಾವ ಆದಿಶಕ್ತಿಯು ೩ ಸಾವಿರ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಓಶಿಯಾಂ ಗ್ರಾಮದಲ್ಲಿ ‘ಸತ್ಚಿತ್ದೇವಿ’ಯ (ಸಚ್ಚಿಯಾಮಾತೆಯ) ರೂಪವನ್ನು ತಾಳಿದ್ದಳೋ, ಆ ದೇವಿಯೇ ಈಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ರೂಪದಲ್ಲಿ ಪೃಥ್ವಿಯ ಮೇಲೆ ಅವತರಿಸಿದ್ದಾಳೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನೋಡಲು ಬೇರೆ (ರೂಪಗಳು) ಆಗಿದ್ದರೂ, ಅವರು ಒಳಗಿನಿಂದ (ಅಂತರ್ಮನಸ್ಸಿನಿಂದ) ಒಂದೇ ಆಗಿದ್ದಾರೆ”, ಎಂಬುದಾಗಿ ಹೇಳಿದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೨. ಚೊಟಿಲಾ ಗ್ರಾಮದಲ್ಲಿನ ಶ್ರೀ ಚಂಡಿ-ಚಾಮುಂಡಾ ದೇವಿಯ ದೇವಸ್ಥಾನ

ಚೊಟಿಲಾ ಈ ಗ್ರಾಮವು ಕರ್ಣಾವತಿ (ಅಹಮದಾಬಾದ್) ಯಿಂದ ರಾಜಕೋಟ ಈ ಹೆದ್ದಾರಿಯ ಮೇಲ್ಲಿದ್ದೂ ಅದು ರಾಜಕೋಟ ನಗರದಿಂದ ೪೦ ಕಿ.ಮೀ. ಮೊದಲೇ ಬರುತ್ತದೆ. ಈ ಗ್ರಾಮದಲ್ಲಿರುವ ಒಂದು ಬೆಟ್ಟದ ಮೇಲೆ ಶ್ರೀ ಚಂಡಿ-ಚಾಮುಂಡಾ ದೇವಿಯ ದೇವಸ್ಥಾನವಿದೆ. ೭೦೦ ಮೆಟ್ಟಲುಗಳನ್ನು ಹತ್ತಿ ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ.

ಚೊಟಿಲಾದಲ್ಲಿನ ಶ್ರೀ ಚಾಮುಂಡಾದೇವಿಯ ದರ್ಶನವಾದ ನಂತರ ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಚಾಮುಂಡಾದೇವಿ ಇದ್ದಾರೆ’, ಎಂದು ಎನಿಸುವುದು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ೨೦೧೬ ರಲ್ಲಿ ಸದ್ಗುರು ಪದವಿಯಲ್ಲಿ ವಿರಾಜಮಾನರಾಗಿದ್ದ ಕ್ಷಣ…. ಶ್ರೀ ಚಂಡಿ-ಚಾಮುಂಡಾ ದೇವಿಯರಂತೆ ಕುಳಿತಂತೆ ಅರಿವಾಗುವುದು !

ಜಾಲತಾಣದಲ್ಲಿ ಚೊಟಿಲಾದಲ್ಲಿನ ಚಾಮುಂಡಾದೇವಿಯ ಅನೇಕ ಛಾಯಾಚಿತ್ರಗಳಿವೆ. ಅವುಗಳಲ್ಲಿನ ಎರಡು ಛಾಯಾಚಿತ್ರಗಳನ್ನು ನೋಡಿದ ನಂತರ ‘ಚಂಡಿ-ಚಾಮುಂಡಾ’ ಈ ಇಬ್ಬರು ದೇವಿಯರು ಬೇರೆ ಯಾರು ಅಲ್ಲದೇ ನಾವು ಸತತವಾಗಿ ಯಾರ ಸಾನಿಧ್ಯದಲ್ಲಿರುತ್ತೇವೋ, ಆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೇ ಆಗಿದ್ದಾರೆ’ ಎಂದು ಎನಿಸುತ್ತದೆ.

ಛಾಯಾಚಿತ್ರದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಇಬ್ಬರೂ ಪರಸ್ಪರರ ಹತ್ತಿರ ಕುಳಿತುಕೊಂಡಿದ್ದಾರೆ. ಈ ಛಾಯಾಚಿತ್ರದ ಕಡೆಗೆ ನೋಡುವಾಗ ‘ಚೊಟಿಲಾದಲ್ಲಿನ ಚಂಡಿ-ಚಾಮುಂಡಾ ದೇವಿ ಇವರೇ ಇದ್ದಾರೆ’, ಎಂದು ಅನಿಸುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಗ್ಗೆಯೂ ನಮ್ಮೆಲ್ಲ ಸಾಧಕರಿಗೆ ಇದೇ ವಿಷಯ ಅನುಭವಕ್ಕೆ ಬರುತ್ತದೆ. – ಶ್ರೀ. ವಿನಾಯಕ ಶಾನಭಾಗ, ಚೊಟಿಲಾ, ಗುಜರಾತ. (೧೦.೭.೨೦೨೧)

೩. ದೇವಸ್ಥಾನದ ಮುಖ್ಯ ಮಹಂತರಾದ ಸಚಿನ ದೇವಗಿರಿ ಮಹಾರಾಜರು ಚೊಟಿಲಾದಲ್ಲಿನ ಶ್ರೀ ಚಂಡಿ-ಚಾಮುಂಡಾ ದೇವಿಯ ಬಗ್ಗೆ ಹೇಳಿದ ಮಾಹಿತಿ

೩ ಅ. ಚೊಟಿಲಾದಲ್ಲಿನ ಶ್ರೀ ಚಂಡಿ-ಚಾಮುಂಡಾ ದೇವಿಯ ಕ್ಷೇತ್ರಮಹಿಮೆ

೩ ಅ ೧. ‘ಚಂಡ’ ಮತ್ತು ‘ಮುಂಡ’ ಇವರು ಶುಂಭ ಹಾಗೂ ನಿಶುಂಭ ಈ ಅಸುರ ರಾಜರ ಸೇನಾಪತಿಯಾಗಿದ್ದರು. ಕೌಶಿಕಿ ದೇವಿ (ಆದಿಶಕ್ತಿಯ ಒಂದು ರೂಪ) ಇವಳ ಸೌಂದರ್ಯವನ್ನು ನೋಡಿ ಶುಂಭ-ನಿಶುಂಭ ಈ ಅಸುರರು ಅವಳತ್ತ ಆಕರ್ಷಿತಗೊಂಡರು. ಶುಂಭ-ನಿಶುಂಭ ಈ ಅಸುರರು ದೇವಿಯನ್ನು ಕರೆದುಕೊಂಡು ಬರಲು ಚಂಡ-ಮುಂಡ ಈ ಅಸುರರನ್ನು ಅವಳ ಬಳಿಗೆ ಕಳುಹಿಸಿದರು. ದೇವಿಯು ಅವರಿಗೆ, “ನನ್ನೊಂದಿಗೆ ಯುದ್ಧವನ್ನು ಮಾಡಿ ನೀವು ಗೆದ್ದರೆ, ಮಾತ್ರ ನಾನು ನಿಮ್ಮ ಜೊತೆಗೆ ಬರುತ್ತೇನೆ”, ಎಂದು ಹೇಳಿದಳು. ಕೌಶಿಕಿ ದೇವಿಯು ಚಂಡ-ಮುಂಡ ಇವರೊಂದಿಗೆ ಯುದ್ಧವನ್ನು ಮಾಡಲು ಎರಡು ರೂಪಗಳನ್ನು ತಾಳಿದಳು. ‘ಚಂಡ’ ಎಂಬ ಅಸುರನನ್ನು ವಧಿಸಿದ ರೂಪದ (ಶಕ್ತಿಯ) ಹೆಸರು ‘ಚಂಡಿ’, ‘ಮುಂಡ’ ಎಂಬ ಅಸುರನನ್ನು ವಧಿಸಿದ ರೂಪದ (ಶಕ್ತಿಯ) ಹೆಸರು ‘ಚಾಮುಂಡಾ’ ಎಂದು ಪ್ರಚಲಿತವಾಯಿತು. ಚೊಟಿಲಾ ಗ್ರಾಮದಲ್ಲಿನ ಬೆಟ್ಟದ ಮೇಲೆ ದೇವಿಯು ಚಂಡ-ಮುಂಡ ಇವರನ್ನು ವಧಿಸಿದಳು.

೩ ಅ ೨. ಶ್ರೀ ಚಂಡಿ-ಚಾಮುಂಡಾ ದೇವಿಯ ದೇವಸ್ಥಾನದಲ್ಲಿ ದೇವಿಯ ಶಿಲೆಯು ಸ್ವಯಂಭೂ ಆಗಿದೆ. ಒಂದೇ ಶಿಲೆಯಲ್ಲಿ ಇಬ್ಬರು ದೇವಿಯರು ಕಾಣಿಸುತ್ತಾರೆ.

೩ ಅ ೩. ನಮ್ಮ ಪೂರ್ವಿಕರು ಚೊಟಿಲಾ ಕ್ಷೇತ್ರವನ್ನು ವರ್ಣಿಸುವಾಗ, “ಕೈಲಾಸದಲ್ಲಿ ೧೨ ವರ್ಷಗಳ ಕಾಲ ತಪಸ್ಸು ಮಾಡಿದ ನಂತರ ಯಾವ ಫಲ ಸಿಗುತ್ತದೆಯೋ, ಅದು ಆದಿಶಕ್ತಿಯ ಈ ಕ್ಷೇತ್ರದಲ್ಲಿ ಕೇವಲ ೭ ವರ್ಷ ತಪಸ್ಸು ಮಾಡಿದರೆ ಪ್ರಾಪ್ತವಾಗುತ್ತದೆ”, ಎಂದು ಹೇಳುತ್ತಿದ್ದರು.

೩ ಅ ೪. ಐದು ಸಾವಿರ ವರ್ಷಗಳ ಹಿಂದೆ ಪಾಂಡವರು ಶ್ರೀಕೃಷ್ಣ ನನ್ನು ಭೇಟಿಯಾಗಲು ದ್ವಾರಕೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಅವರು ಈ ಸ್ಥಾನವನ್ನು ಹುಡುಕಿ ಇಲ್ಲಿ ದೇವಿಯ ಆರಾಧನೆಯನ್ನು ಮಾಡಿದ್ದರು.

೩ ಆ. ಇತರ ಅಂಶಗಳು

೧. ಪ್ರತಿವರ್ಷ ಶಾರದೀಯ ನವರಾತ್ರಿಯ ಅಷ್ಟಮಿ ತಿಥಿಗೆ ಇಲ್ಲಿ ನವಚಂಡಿಯಾಗ ಇರುತ್ತದೆ. ಈ ಯಾಗದ ಸಮಯದಲ್ಲಿ ಅಕ್ಕಪಕ್ಕದ ಗ್ರಾಮಗಳಿಂದ ಲಕ್ಷಗಟ್ಟಲೆ ಭಕ್ತರು ಇಲ್ಲಿಗೆ ಬರುತ್ತಾರೆ.

೨. ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ದೇವಿಯ ಆರತಿ ಮಾಡಲಾಗುತ್ತದೆ. ಆ ಸಮಯದಲ್ಲಿ ದೇವಿಯ ದೇವಸ್ಥಾನದಲ್ಲಿ ಛತ್ರಿಯು ತನ್ನಷ್ಟಕ್ಕೇ ಅಲುಗಾಡುತ್ತದೆ ಮತ್ತು ಆ ಸಮಯದಲ್ಲಿ ‘ಪ್ರತ್ಯಕ್ಷ ದೇವಿಯು ಒಳಗೆ ಬರುತ್ತಿದ್ದಾಳೆ’, ಎಂದು ಅರಿವಾಗುತ್ತದೆ. ಆ ಸಮಯದಲ್ಲಿ ಅರ್ಚಕರ ಶರೀರವೂ ನಡುಗುತ್ತಿರುತ್ತದೆ.

೩. ದೇವಿಗೆ ಪ್ರತಿದಿನ ಅಭಿಷೇಕವನ್ನು ಮಾಡುವುದಿಲ್ಲ; ಆದರೆ ದೇವಿಗೆ ಅಭಿಷೇಕ ಮಾಡುವ ಹಿಂದಿನ ದಿನದ ರಾತ್ರಿಯಂದು ದೇವಿಯು ಅರ್ಚಕರ ಕನಸಿನಲ್ಲಿ ಬಂದು ಮರುದಿನ ಸ್ನಾನವನ್ನು ಮಾಡಿಸುವ ಬಗ್ಗೆ ಸೂಚಿಸುತ್ತಾಳೆ.

೪. ಪ್ರತಿದಿನ ರಾತ್ರಿ ೮ ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಅನಂತರ ಬೆಟ್ಟದ ಮೇಲಿನ ಅರ್ಚಕರು ಮತ್ತು ಇತರ ಯಾರೂ ಅಲ್ಲಿರುವುದಿಲ್ಲ.

ಶ್ರೀ. ವಿನಾಯಕ ಶಾನಭಾಗ

೪. ಶ್ರೀ ಚಂಡಿ-ಚಾಮುಂಡಾ ದೇವಿಯ ದರ್ಶನಕ್ಕೆ ಹೋಗುವಾಗ ಘಟಿಸಿದ ವಿಲಕ್ಷಣ ದೈವೀ ಘಟನೆ !

೪ ಅ. ದೇವಸ್ಥಾನವಿರುವ ಬೆಟ್ಟದ ತಳಹದಿಗೆ ತಲುಪಿದಾಗ ಆಕಸ್ಮಿಕವಾಗಿ ಧಾರಾಕಾರ ಮಳೆಯು ಆರಂಭವಾಗುವುದು ಮತ್ತು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಆ ರಾತ್ರಿ ಚೊಟಿಲಾ ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು’, ಇದು ದೇವಿಯ ಇಚ್ಛೆಯಾಗಿದೆ’, ಎಂದು ಸಪ್ತರ್ಷಿಗಳು ಹೇಳುವುದು : ೯.೭.೨೦೨೧ ರಂದು ಸಾಯಂಕಾಲ ೬ ಗಂಟೆಗೆ ನಾವು ಚೊಟಿಲಾದಲ್ಲಿ ದೇವಸ್ಥಾನಕ್ಕೆ ಹೋಗಲು ಬೆಟ್ಟದ ತಳಹದಿಗೆ ತಲುಪಿದೆವು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅಲ್ಲಿ ತಲುಪುವವರೆಗೂ ಸ್ವಲ್ಪವೂ ಮಳೆ ಇರಲಿಲ್ಲ. ಡೋಲಿಯವರು ಸಹ ಅವರನ್ನು ಬೆಟ್ಟದ ಮೇಲೆ ಕರೆದೊಯ್ಯಲು ಸಿದ್ಧರಿದ್ದರು. (‘ಡೋಲಿಯೆಂದರೆ ಜನರನ್ನು ಎತ್ತಿಕೊಂಡು ಹೋಗಲು ಉಪಯೋಗಿಸುವ ಸಾಮಾನ್ಯ ಪಲ್ಲಕ್ಕಿ. ಈ ಪಲ್ಲಕ್ಕಿಯಲ್ಲಿ ಜನರನ್ನು ಕೂರಿಸಿ ಒಯ್ಯುತ್ತಾರೆ. ಸದ್ಯ ಅವುಗಳನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತದೆ.’ – ಸಂಕಲನಕಾರರು) ದೇವಸ್ಥಾನದ ಸಮಿತಿ ಮತ್ತು ದೇವಸ್ಥಾನದ ಮುಖ್ಯ ಅರ್ಚಕರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇವಸ್ಥಾನಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದಿತ್ತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ವಾಹನದಿಂದ ಇಳಿಯುವಷ್ಟರಲ್ಲಿಯೇ ಧಾರಾಕಾರ ಮಳೆಯು ಪ್ರಾರಂಭವಾಯಿತು. ಈ ಮಳೆಯು ಸಾಮಾನ್ಯವೆನಿಸುತ್ತಿರಲಿಲ್ಲ. ಅದು ಒಂದು ಗಂಟೆಯಾದರೂ ಕಡಿಮೆಯಾಗುವ ಯಾವ ಲಕ್ಷಣವೂ ಕಂಡುಬರುತ್ತಿರಲಿಲ್ಲ. ತದ್ವಿರುದ್ಧ ಅದು ಹೆಚ್ಚುತ್ತಲೇ ಇತ್ತು. ಈ ಕುರಿತು ಪೂ. ಡಾ. ಓಂ ಉಲಗನಾಥನ್‌ಜಿಯರಿಗೆ ತಿಳಿಸಿದ ನಂತರ ಅವರ ಮಾಧ್ಯಮದಿಂದ ಸಪ್ತರ್ಷಿಗಳು, ‘ಇಂದು ಮತ್ತು ನಾಳೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಚೊಟಿಲಾ ಗ್ರಾಮದಲ್ಲಿ, ಅಂದರೆ ಶ್ರೀ ಚಾಮುಂಡಾದೇವಿಯ ಕ್ಷೇತ್ರದಲ್ಲಿರಬೇಕು’, ಎಂದು ದೇವಿಯ ಮನಸ್ಸಿನಲ್ಲಿದೆ. ‘ಒಂದು ವೇಳೆ ದೇವಸ್ಥಾನದಲ್ಲಿ ದೇವಿಯ ದರ್ಶನವಾದರೆ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಅವರ ಮುಂದಿನ ಪ್ರವಾಸಕ್ಕೆ ಹೊರಡುತ್ತಾರೆ’, ಎಂಬುದನ್ನು ಅರಿತು ದೇವಿಯೇ ಈ ಮಳೆಯ ನಿಯೋಜನೆಯನ್ನು ಮಾಡಿದ್ದಾಳೆ. ‘ಈ ಮಳೆಯಿಂದ ನಾನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಸ್ವಾಗತಿಸುತ್ತಿದ್ದೇನೆ’ ಎಂದು ಚಾಮುಂಡಾದೇವಿಯು ಹೇಳುತ್ತಿದ್ದಾಳೆ, ಇವತ್ತಿನ ದಿನ ವಾಸ್ತವ್ಯ ಮಾಡಿ ನಾಳೆ ದರ್ಶನಕ್ಕೆ ಹೋಗಿ’, ಎಂದು ಸಪ್ತರ್ಷಿಗಳು ಹೇಳಿದರು. ನಾವು ಸಪ್ತರ್ಷಿಗಳು ಹೇಳಿದಂತೆ ದೇವಿಗೆ ಮನಸ್ಸಿನಲ್ಲಿಯೇ ನಮಸ್ಕಾರ ಮಾಡಿದೆವು ಮತ್ತು ಆ ರಾತ್ರಿ ಚೊಟಿಲಾದಲ್ಲಿ ವಾಸ್ತವ್ಯ ಮಾಡಿದೆವು.

೪ ಆ. ಸಪ್ತರ್ಷಿಗಳು ಹೇಳಿದಂತೆ ಮರುದಿನ ಸಾಯಂಕಾಲ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇವಿಯ ದರ್ಶನವನ್ನು ಪಡೆಯುವುದು ಮತ್ತು ಆ ಸಮಯದಲ್ಲಿ ಅವರಿಗೆ ಭಾವಜಾಗೃತವಾಗುವುದು : ಮರುದಿನ ಸಪ್ತರ್ಷಿಗಳು ನಮಗೆ ‘ಸಾಯಂಕಾಲ ೫ ರಿಂದ ೭ ರ ಸಮಯದಲ್ಲಿ ದೇವಿಯ ದರ್ಶನವನ್ನು ಪಡೆಯಬೇಕು’, ಎಂಬ ಸಂದೇಶವನ್ನು ನೀಡಿದರು. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ದೇವಿಯ ದರ್ಶನವನ್ನು ಪಡೆದರು. ಡೋಲಿಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರನ್ನು ೧೫ ನಿಮಿಷಗಳಲ್ಲಿ ಬೆಟ್ಟದ ಮೇಲೆ ಕರೆದುಕೊಂಡು ಹೋದರು. ಶ್ರೀ ಚಂಡಿ-ಚಾಮುಂಡಾ ದೇವಿಯ ಮನೋಹರ ದರ್ಶನವಾದ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರಿಗೆ ಭಾವಜಾಗೃತವಾಯಿತು.

೪ ಇ. ದೇವಸ್ಥಾನದ ಮುಖ್ಯ ಮಹಂತರಾದ ಸಚಿನ ದೇವಗಿರಿ ಮಹಾರಾಜರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರನ್ನು ಕರೆದು ದೇವಿಯ ಇತಿಹಾಸವನ್ನು ಹೇಳುವುದು ಮತ್ತು ಅವರು ‘ತಮ್ಮ ಎಲ್ಲ ಮನೋಕಾಮನೆಗಳನ್ನು ಶ್ರೀ ಚಂಡಿ-ಚಾಮುಂಡಾ ದೇವಿಯು ಪೂರ್ಣ ಮಾಡುತ್ತಾಳೆ’, ಎಂದು ಆಶೀರ್ವಾದ ಮಾಡುವುದು : ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಲು ಬಂದಿದ್ದಾರೆ’, ಎಂದು ತಿಳಿದ ನಂತರ ದೇವಸ್ಥಾನದ ಮುಖ್ಯ ಮಹಂತರಾದ ಸಚಿನ ದೇವಗಿರಿ ಮಹಾರಾಜರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರನ್ನು ಗರ್ಭಗುಡಿಯ ಹತ್ತಿರದಲ್ಲಿರುವ ಕೋಣೆಗೆ ಬರಲು ಹೇಳಿದರು ಮತ್ತು ದೇವಿಯ ಸಂಪೂರ್ಣ ಇತಿಹಾಸವನ್ನು ಹೇಳಿದರು. ಅವರು, “ಮಾತಾಜಿಯವರೇ, ‘ನೀವು ಸ್ತ್ರೀಯಾಗಿದ್ದೂ ಹಿಂದೂ ರಾಷ್ಟ್ರಕ್ಕಾಗಿ ಸತತ ಪ್ರವಾಸವನ್ನು ಮಾಡುತ್ತಿದ್ದೀರಿ’, ಇದು ನಮಗೆ ಆಶ್ಚರ್ಯವೆನಿಸುತ್ತದೆ. ‘ನಿಮ್ಮ ಎಲ್ಲ ಮನೋಕಾಮನೆಗಳನ್ನು ಶ್ರೀ ಚಂಡಿ-ಚಾಮುಂಡಾ ದೇವಿಯು ಪೂರ್ಣಗೊಳಿಸುವಳು’, ಇದರಲ್ಲಿ ಸಂಶಯವಿಲ್ಲ,” ಎಂದು ಹೇಳಿದರು.

೪ ಈ. ಮಳೆಯ ಲಕ್ಷಣಗಳು ಕಾಣಿಸುತ್ತಿದ್ದಂತೆಯೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮೆಟ್ಟಲುಗಳನ್ನು ಇಳಿದು ಬೆಟ್ಟದ ತಳಹದಿಗೆ ತಲುಪುವುದು, ಅವರು ವಾಹನದಲ್ಲಿ ಕುಳಿತ ತಕ್ಷಣ ಧಾರಾಕಾರ ಮಳೆ ಬೀಳುವುದು ಮತ್ತು ‘ವರುಣದೇವರು ಕೇವಲ ಅವರ ದೇವಿದರ್ಶನವಾಗುವುದನ್ನೇ ಕಾಯುತ್ತಿದ್ದನು’, ಎಂದು ಅರಿವಾಗುವುದು : ದೇವಿದರ್ಶನ ಪಡೆದು ಬೆಟ್ಟವನ್ನು ಇಳಿಯವುದಕ್ಕಾಗಿ ಮೆಟ್ಟಲುಗಳ ಹತ್ತಿರ ಬಂದೆವು. ಆಗ ಡೋಲಿಯವರು ಅಲ್ಲಿ ಕಾಣಿಸಲಿಲ್ಲ. ‘ಅವರಿಗೆ ದೇವಸ್ಥಾನದ ಸಮಿತಿಯವರಿಂದ ಸಾಹಿತ್ಯಗಳನ್ನು ತರುವುದು-ಒಯ್ಯುವುದು ಮಾಡಲು ತಕ್ಷಣ ಕರೆದಿರುವುದರಿಂದ ಅವರು ಬೆಟ್ಟದ ಕೆಳಗೆ ಹೋಗಿದ್ದಾರೆ. ಅವರಿಗೆ ಮೇಲೆ ಬರಲು ಸುಮಾರು ೧೫ ನಿಮಿಷಗಳು ಬೇಕಾಗುತ್ತವೆ’, ಎಂದು ನಮಗೆ ತಿಳಿಯಿತು. ಅಷ್ಟರಲ್ಲಿ ಮೋಡಗಳ ಗರ್ಜನೆಯು ಪ್ರಾರಂಭವಾಯಿತು. ಬೆಟ್ಟದ ನಾಲ್ಕು ದಿಕ್ಕುಗಳಲ್ಲಿ ಕಪ್ಪು ಮೋಡಗಳಿಂದ ತುಂಬಿತ್ತು. ‘ಈಗ ಮಳೆ ಬೀಳುವುದು’, ಎಂದು ಗಮನಕ್ಕೆ ಬರುತ್ತಲೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸ್ವತಃ ಮೆಟ್ಟಲುಗಳಿಂದ ಇಳಿಯತೊಡಗಿದರು ಮತ್ತು ಅವರು ೧೦ ನಿಮಿಷಗಳಲ್ಲಿಯೇ ಎಲ್ಲ ಮೆಟ್ಟಲುಗಳನ್ನು ಇಳಿದು ಬೆಟ್ಟದ ತಳಹದಿಗೆ ಬಂದರು. ತಳಹದಿಯ ಮುಂದಿರುವ ವಾಹನದಲ್ಲಿ ಅವರು ಕುಳಿತ ತಕ್ಷಣವೇ ಧಾರಾಕಾರ ಮಳೆ ಬಿದ್ದಿತು. ಆ ಸಮಯದಲ್ಲಿ ನಮಗೆ ‘ವರುಣದೇವರು ಕೇವಲ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದೇವದರ್ಶನವಾಗಲೆಂದು ಕಾಯುತ್ತಿದ್ದನು’, ಎಂದು ಅರಿವಾಯಿತು.

೪ ಉ. ‘ದೇವಿಯನ್ನು ಭೇಟಿಯಾಗಲು ದೇವಿಯೇ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಹೋಗಿದ್ದಳು ಮತ್ತು ದೇವಿಯು ಅವಳ ಆನಂದವನ್ನು ಮಳೆಯ ಮಾಧ್ಯಮದಿಂದ ವ್ಯಕ್ತಪಡಿಸಿದಳು’, ಎಂದು ಪೂ. ಡಾ. ಓಂ ಉಲಗನಾಥನ್‌ಜಿಯವರು ಹೇಳುವುದು : ಎರಡು ದಿನಗಳಲ್ಲಿ ನಡೆದಿದ್ದೆಲ್ಲವನ್ನು ನೋಡಿ ನಮ್ಮೆಲ್ಲ ಸಾಧಕರಿಗೆ ‘ಏನು ನಡೆಯುತ್ತಿದೆ ?’, ಎಂಬುದೇ ಗೊತ್ತಾಗುತ್ತಿರಲಿಲ್ಲ. ಇದೆಲ್ಲವೂ ಆಶ್ಚರ್ಯಚಕಿತಗೊಳಿಸುವಂತಹದ್ದಾಗಿತ್ತು. ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಚೊಟಿಲಾದಲ್ಲಿನ ದೇವಿಯ ದರ್ಶನಕ್ಕೆ ಹೋಗುವುದು, ಆಕಸ್ಮಿಕವಾಗಿ ಮಳೆ ಬೀಳುವುದು, ಅವರ ದೇವಿದರ್ಶನವಾಗುವ ವರೆಗೆ ಮಳೆ ನಿಲ್ಲುವುದು’, ಈ ಎಲ್ಲ ಘಟನೆಗಳು ಸಹಜವಾಗಿರದೇ ದೈವಿಯೇ ಆಗಿವೆ. ಈ ಕುರಿತು ನಾವು ಪೂ. ಡಾ. ಓಂ ಉಲಗನಾಥನ್‌ಜಿಯವರಿಗೆ ತಿಳಿಸಿದಾಗ ಅವರು, “ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಬ್ಬರೂ ದೇವಿಯೇ ಇದ್ದಾರೆ. ನಿಜ ಹೇಳಬೇಕೆಂದರೆ, ದೇವಿಯನ್ನು ಭೇಟಿಯಾಗಲು ದೇವಿಯೇ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಹೋಗಿದ್ದಳು. ದೇವಿಯು ಅವಳ ಆನಂದವನ್ನು ಮಳೆಯ ರೂಪದಲ್ಲಿ ವ್ಯಕ್ತಪಡಿಸಿದಳು. ಈ ಎಲ್ಲ ಘಟನೆಗಳು ಸಾಮಾನ್ಯವಾಗಿರದೇ ದೈವೀಯಾಗಿವೆ. ಮುಂದಿನ ಇತಿಹಾಸದಲ್ಲಿ ಇದರ ನೋಂದಣಿಯಾಗುವುದು. ಸಾಮಾನ್ಯ ಮಳೆಯಲ್ಲಿ ಮತ್ತು ದೇವಿಯು ಬೀಳಿಸಿದ ಮಳೆಯಲ್ಲಿ ವ್ಯತ್ಯಾಸವಿದೆ. ಇದು ‘ಆನಂದದ ಮಳೆ’ ಆಗಿದೆ,” ಎಂದು ಹೇಳಿದರು. – ಶ್ರೀ. ವಿನಾಯಕ ಶಾನಭಾಗ, ಚೊಟಿಲಾ, ಗುಜರಾತ. (೧೦.೭.೨೦೨೧)