ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಗಲ್ಯಾಂಡ್‌ನ ರಾಣಿ ಗಾಯಡಿನಲೂ 

ಆಗಸ್ಟ್ ೧೫ ರಂದು ಇರುವ ‘ಸ್ವಾತಂತ್ರ್ಯ ದಿನ’ ನಿಮಿತ್ತ ಲೇಖನ

ನಾಗಲ್ಯಾಂಡ್‌ನ ರಾಣಿ ಗಾಯಡಿನಲೂ

ನಾಗಲ್ಯಾಂಡ್‌ನ ರಾಣಿ ಮಾಂ ಇವರು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ದೇಶ ಸ್ವತಂತ್ರವಾದ ನಂತರವೂ ಅಲ್ಲಿನ ಕ್ರೈಸ್ತ ಚರ್ಚ್ ಗಳು, ಧರ್ಮೋಪದೇಶಕರು ಹಾಗೂ ದೇಶವಿರೋಧಿ ಪ್ರವೃತ್ತಿಗಳನ್ನು ವಿರೋಧಿಸಲು ಹೋರಾಡಿದರು. ಭಾರತದಿಂದ ವಿಭಜನೆಯಾಗುವ ನಾಗಾ ಬಂಡುಕೋರರ ಕಾರ್ಯಾಚರಣೆಗಳ ವಿರುದ್ಧವೂ ಅವರು ಒಬ್ಬಂಟಿಯಾಗಿ ಹೋರಾಡಿದರು. ಭಾರತೀಯ ಸ್ವಾಭಿಮಾನ, ಸಂಸ್ಕೃತಿಯೊಂದಿಗೆ ತಮ್ಮ ಹೊಕ್ಕಳಬಳ್ಳಿಯ ಸಂಬಂಧವನ್ನು ಶಾಶ್ವತವಾಗಿಟ್ಟುಕೊಳ್ಳುವ ಈ ರಾಣಿಯ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ.

೧. ನಾಗಾಲ್ಯಾಂಡ್ ರಾಜ್ಯದಲ್ಲಿ ೧೫೦ ವರ್ಷಗಳಿಂದ ವಿದೇಶದ ಕ್ರೈಸ್ತ ಪಾದ್ರಿಗಳು ನಿರಂತರ ಧರ್ಮಪ್ರಚಾರ ಮಾಡುತ್ತಿದ್ದಾರೆ

‘ಉತ್ತರ ಪೂರ್ವ ಗಡಿ ಪ್ರದೇಶ ಅಂದರೆ ಪೂರ್ವಾಂಚಲದ ಮಹತ್ವದ ರಾಜ್ಯವಾಗಿರುವ ನಾಗಾಲ್ಯಾಂಡ್. ಜಗತ್ತಿನ ಏಕೈಕ ‘ಬಾಪ್ಟಿಸ್ಟ್ ಸ್ಟೇಟ್ ಎಂದು ಇದನ್ನು ಗುರುತಿಸಲಾಗುತ್ತದೆ. ಇಲ್ಲಿ ಶೇ. ೯೦ ರಷ್ಟು ಜನರು ಪ್ರೊಟೆಸ್ಟಂಟ್ ಕ್ರೈಸ್ತರು ಮತ್ತು ಶೇ. ೭.೫ ರಷ್ಟು ಹಿಂದೂಗಳ ಜನವಸತಿಯಿದೆ. ಕಳೆದ ೧೫೦ ವರ್ಷಗಳಿಂದ ಇಲ್ಲಿ ವಿದೇಶದಿಂದ ಕ್ರೈಸ್ತ ಪಾದ್ರಿಗಳು ಬಂದು ನಿರಂತರ ಧರ್ಮಪ್ರಚಾರ ಮಾಡುತ್ತಿದ್ದಾರೆ. ೧೪ ವಿವಿಧ ಪಂಗಡಗಳು ೧೧ ಜಿಲ್ಲೆಗಳಲ್ಲಿ ವಾಸಿಸುತ್ತಾರೆ. ಸಾಕ್ಷರತೆಯಿದ್ದರೂ ಇಂದು ಕೂಡ ಅಲ್ಲಿನ ಜನರ ಜೀವನಶೈಲಿ ಅಷ್ಟೇನೂ ಸುಧಾರಣೆಯಾಗಿಲ್ಲ. ಈ ವನವಾಸಿಗಳು ನಮ್ಮ ಹಾಗೆಯೆ ಬೇರೆ ಬೇರೆ ವಠಾರಗಳಲ್ಲಿ ಸಮೂಹಗಳಲ್ಲಿರುತ್ತಾರೆ.

೨. ಕ್ರೈಸ್ತರ ವರ್ಚಸ್ಸು ಇದ್ದರೂ ಕೆಲವು ಸ್ಥಳೀಯ ಪಂಗಡದವರು ಸಂಘಟಿತರಾಗಿದ್ದು ಧರ್ಮಪರಿವರ್ತನೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ

ಈ ಪ್ರದೇಶದಲ್ಲಿ ಕ್ರೈಸ್ತರ ವರ್ಚಸ್ಸಿದ್ದರೂ ಸ್ಥಳೀಯ ಕೆಲವು ಪಂಗಡದವರು ಸಂಘಟಿತರಾಗಿ ಧರ್ಮಪರಿವರ್ತನೆಯನ್ನು ತೀವ್ರವಾಗಿ ವಿರೋಧಿಸಿದರು. ನಾಗಾಲ್ಯಾಂಡ್ – ಮಣಿಪುರ ಗಡಿ ಪ್ರದೇಶದಲ್ಲಿ ತಮಗೆಂಲಾಗ್ ಜಿಲ್ಲೆಯ ರೂಗಮಯೀ ಎನ್ನುವ ಊರಿನಲ್ಲಿ ೨೬ ಜನವರಿ ೧೯೧೫ ರಂದು ರಾಣಿ ಮಾಂ ಗಾಯಡಿನ್‌ಲೂ ಇವರ ಜನ್ಮವಾಯಿತು. ರಾಣಿ ಮಾಂ ಇವರ ಪ್ರಾಥಮಿಕ ಶಿಕ್ಷಣವಾದ ನಂತರ ಅವರು ೧೩ ನೇ ವಯಸ್ಸಿನಲ್ಲಿ ಜಾದೋನಾಂಗ ಎಂಬ ಕ್ರಾಂತಿಕಾರಿಯ ಸಂಪರ್ಕಕ್ಕೆ ಬಂದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ಕ್ರಾಂತಿಕಾರರಲ್ಲಿ ಈ ಜಾದೋನಾಂಗರು ಒಬ್ಬರಾಗಿದ್ದರು.

೩. ಕ್ರಾಂತಿಕಾರಿ ಜಾದೋನಾಂಗ ಇವರನ್ನು ಗಲ್ಲಿಗೇರಿಸಿದಾಗ ೧೬ ವರ್ಷದ ರಾಣಿ ಸ್ವಾತಂತ್ರ್ಯದ ಪ್ರೇರಣೆ ಪಡೆದು ಕೊನೆಯವರೆಗೆ ಆಂಗ್ಲರ ಆಡಳಿತದ ವಿರುದ್ಧ ಹೋರಾಡುವುದು

ಮಣಿಪುರ ಹಾಗೂ ಆಸಾಮ್‌ನ ಪ್ರದೇಶದಿಂದ ಬ್ರಿಟೀಷರು ಹೊರಟು ಹೋಗಬೇಕು; ಎಂದು ಜಾದೋನಾಂಗ ಇವರ ಕ್ರಾಂತಿಕಾರಿ ಗುಂಪು ಸಕ್ರಿಯವಾಗಿತ್ತು. ಮಣಿಪುರ-ನಾಗಾಲ್ಯಾಂಡ್ ನಲ್ಲಿ ಅವರು ಬ್ರಿಟೀಷರ ಮುಂದೆ ದೊಡ್ಡ ಸವಾಲೊಡ್ಡಿದ್ದರು. ಎಲ್ಲೆಡೆ ಬಂಡಾಯವೆಬ್ಬಿಸಿದರು. ಅದರಲ್ಲಿ ಈ ಯುವಕನು ಬ್ರಿಟೀಷರ ಹಿಡಿತದಲ್ಲಿ ಸಿಲುಕಿದನು ಹಾಗೂ ಅವನನ್ನು ೨೯ ಆಗಸ್ಟ್ ೧೯೩೧ ರಂದು ಇಂಫಾಲದಲ್ಲಿ ಗಲ್ಲಿಗೇರಿಸಲಾಯಿತು. ಆಗ ರಾಣಿಗೆ ಕೇವಲ ೧೬ ವರ್ಷ ವಯಸ್ಸು. ಅವರು ಅದರಿಂದ ಸ್ವಾತಂತ್ರ್ಯದ ಪ್ರೇರಣೆ ಪಡೆದು ಕೊನೆಯ ವರೆಗೆ ಆಂಗ್ಲರ ವಿರುದ್ಧ ಹೋರಾಡುತ್ತಿದ್ದರು.

೪. ಸ್ವಾತಂತ್ರ್ಯಕ್ಕಾಗಿ ರಾಣಿಯು ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ತೀವ್ರ ಸಂಘರ್ಷ ಮಾಡುವುದು ಹಾಗೂ ಭೂಗತವಾಗಿದ್ದು ಹೋರಾಡುತ್ತಿದ್ದ ರಾಣಿಯನ್ನು ಕೊನೆಗೆ ಬ್ರಿಟೀಷರು ಬಂಧಿಸುವುದು

ರಾಣಿಗೆ ನೇತೃತ್ವ ಸಿಕ್ಕಿದ್ದರಿಂದ ಅವರು ಸ್ವಾತಂತ್ರ್ಯವನ್ನು ಪಡೆಯಲು ವಿವಿಧೆಡೆಗಳಲ್ಲಿ ಆಂದೋಲನಗಳು ಮತ್ತು ಅಸಹಕಾರವನ್ನು ಚಳುವಳಿಗಳನ್ನು ಮಾಡಿದರು. ಅತ್ಯಂತ ದುರ್ಗಮ ಪ್ರದೇಶಗಳು, ಅಲ್ಲಿ ಪ್ರಯಾಣ, ಅಲ್ಲಿ ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲ. ಕಾಲ್ನಡಿಗೆಯಲ್ಲಿ ಮತ್ತು ಅತ್ಯಾವಶ್ಯವೆನಿಸಿದರೆ ಅಲ್ಲಿನ ಕೋಣದಂತೆ ಕಾಣುವ ಮಿಥುನ ಎಂಬ ಪ್ರಾಣಿಯ ಮೇಲಿಂದ ಪ್ರಯಾಣಿಸುತ್ತಾ ಈ ಯುವತಿ ಧೃತಿಗೆಡದೆ ಹೋರಾಡಿದರು. ಅವರ ವಿರುದ್ಧ ಬ್ರಿಟೀಷರು ವಾರಂಟ್ ಜ್ಯಾರಿ ಮಾಡಿದರು. ರಾಣಿ ಆಸಾಮ್ ರೈಫಲ್ಸ್ ವಿರುದ್ಧ ನಾಗಾ ಸೈನಿಕರನ್ನು ನಿಲ್ಲಿಸಿದರು. ಈ ಸಂಘರ್ಷದಲ್ಲಿ ಭೂಗತವಾಗಿದ್ದು ಹೋರಾಡುತ್ತಿದ್ದ ಈ ರಾಣಿಯನ್ನು ಸಹ ಕೊನೆಗೆ ೧೭ ಏಪ್ರಿಲ್ ೧೯೩೫ ರಂದು ಬಂಧಿಸಲಾಯಿತು.

೫. ರಾಣಿಯ ಹೋರಾಟವನ್ನು ಬೆಂಬಲಿಸಿದ ಪಂಡಿತ ನೆಹರು

೧೯೩೯ ರಲ್ಲಿ ಪಂಡಿತ ನೆಹರು ಆಸಾಮ್‌ನ ಪ್ರವಾಸದಲ್ಲಿರುವಾಗ ಅವರು ಶಿಲ್ಲಾಂಗ್ ಸೆರೆಮನೆಗೆ ಹೋಗಿ ಈ ಯುವ ಮಹಿಳೆಯನ್ನು ಭೇಟಿಯಾದರು, ಅವಳನ್ನು ಶ್ಲಾಘಿಸಿದರು ಹಾಗೂ ಧೈರ್ಯವನ್ನು ತುಂಬಿದರು. ದೆಹಲಿಗೆ ಹಿಂದಿರುಗಿದ ನಂತರ ಪಂಡಿತರು ‘ಹಿಂದೂಸ್ಥಾನ ಟೈಮ್ಸ್ನಲ್ಲಿ ರಾಣಿಯ ವಿಷಯದ ಮಾಹಿತಿಯನ್ನು ನೀಡಿ ಹೋರಾಟವನ್ನು ಬೆಂಬಲಿಸಿದರು.

೬. ಇಂತಹ ತೇಜಸ್ವೀ ವ್ಯಕ್ತಿತ್ವದ ರಾಣಿ ಗಾಯಡೀನಲೂ ಇವರನ್ನು ಬ್ರಿಟೀಷರು ಸುಮಾರು ೧೩ ವರ್ಷಗಳವರೆಗೆ ಸೆರೆಮನೆಯಲ್ಲಿಟ್ಟರು

ನಾಗಾಲ್ಯಾಂಡ್ ಮತ್ತು ಮಿಝೋರಾಮ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರೈಸ್ತೀಕರಣ ನಡೆಯುತ್ತಿದ್ದ ಕಾರಣ ಅಲ್ಲಿನ ಜನಸಾಮಾನ್ಯರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕಾಗಿ ಪ್ರಖರವಾಗಿ ಹೋರಾಡುವ ಉತ್ಸಾಹವಿರಲಿಲ್ಲ. ಬ್ರಿಟೀಷರು ಕೂಡ ಕ್ರೈಸ್ತರಾಗಿದ್ದ ಕಾರಣ ಸ್ವಾತಂತ್ರ್ಯ ಸಿಗುವುದೆಂದರೇನು ? ಎಂಬುದು ಈ ಪ್ರದೇಶದ ಜನರಿಗೆ ಅರ್ಥವೇ ಆಗಿರಲಿಲ್ಲ; ಆದ್ದರಿಂದ ಈ ಸ್ವಾತಂತ್ರ್ಯ ಚಳುವಳಿಯಿಂದ ಅವರು ದೂರವಿದ್ದರು; ಆದರೆ ರಾಣಿ ಗಾಯಡೀನಲೂ ಜನಜಾಗೃತಿ ಮಾಡಿ ಸ್ವಾತಂತ್ರ್ಯದ ಮಹತ್ವವನ್ನು ಮನದಟ್ಟು ಮಾಡಿದರು ಹಾಗೂ ಅಲ್ಲಿನ ವನವಾಸಿ ಗುಡ್ಡಗಾಡು ಜನರ ಸಮಾಜದಲ್ಲಿ ದೊಡ್ಡ ಆಂದೋಲನವನ್ನು ಆರಂಭಿಸಿದರು. ಈ ವೀರಾಂಗನೆಯನ್ನು ಬಂಧನದಲ್ಲಿಟ್ಟರೂ ಸ್ಥಳೀಯ ಸ್ತರದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಖರ ಆಂದೋಲನ ಮುಂದುವರಿಯಿತು. ಸುಮಾರು ೧೩ ವರ್ಷಗಳ ವರೆಗೆ ಈ ತೇಜಸ್ವಿ ರಣರಾಗಿಣಿಯನ್ನು ಬ್ರಿಟೀಷರು ಸೆರೆಮನೆಯಲ್ಲಿಟ್ಟರು. ಸ್ವಾತಂತ್ರ್ಯವೀರ ಸಾವರಕರ ಮತ್ತು ಅನೇಕ ಕ್ರಾಂತಿಕಾರಿಗಳು ಹೇಗೆ ವಿವಿಧ ಸೆರೆಮನೆಯಲ್ಲಿ ದೀರ್ಘಕಾಲದವರೆಗೆ ನರಳುತ್ತಿದ್ದರೋ, ಅದೇ ಅವಸ್ಥೆ ಈ ವೀರಾಂಗನೆ ಅನುಭವಿಸಿದರು.

೭. ‘ನಾಗಾಲ್ಯಾಂಡ್’ನ್ನು ಸ್ವತಂತ್ರ ದೇಶವೆಂದು ಘೋಷಿಸುವ ಬೇಡಿಕೆಯನ್ನು ಮುಂದಿಟ್ಟ ‘ನಾಗಾ ನ್ಯಾಶನಲ್ ಕೌನ್ಸಿಲ್ನ ವಿರುದ್ಧ ರಾಣಿಯೂ ಆಂದೋಲನ ಮುಂದುವರಿಸಿದರು

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ೨ ತಿಂಗಳಲ್ಲಿ ೧೭ ಅಕ್ಟೋಬರ್ ೧೯೪೭ ರಂದು ರಾಣಿಯನ್ನು ಸೆರೆಮನೆಯಿಂದ ಮುಕ್ತಗೊಳಿಸಲಾಯಿತು. ಸರದಾರ ಪಟೇಲರು ಅವರನ್ನು ಸ್ವಾತಂತ್ರ್ಯಸೈನಿಕಳೆಂದು ಗೌರವಿಸಿದರು. ಮುಂದೆ ಅವರಿಗೆ ‘ಪದ್ಮಭೂಷಣ ಪುರಸ್ಕಾರವನ್ನು ನೀಡಲಾಯಿತು. ಸ್ವಾತಂತ್ರ್ಯ ಸಿಕ್ಕಿದ ನಂತರವೂ ‘ನಾಗಾ ನ್ಯಾಶನಲ್ ಕೌನ್ಸಿಲ್ನ ವಿರುದ್ಧ ಅವರು ತಮ್ಮ ಆಂದೋಲನವನ್ನು ಮುಂದುವರಿಸಿದರು. ‘ನಮ್ಮ ಸಂಸ್ಕೃತಿ, ಭಾಷೆ ಬೇರೆಯಾಗಿದ್ದು ಭಾರತದೊಂದಿಗೆ ನಮ್ಮ ಯಾವುದೇ ಸಂಬಂಧವಿಲ್ಲ. ನಮಗೆ ಸ್ವಾತಂತ್ರ್ಯವನ್ನು ನೀಡಿ ‘ನಾಗಾಲ್ಯಾಂಡನ್ನು ಸ್ವತಂತ್ರ ದೇಶವೆಂದು ಘೋಷಣೆ ಮಾಡಿರಿ, ಎನ್ನುವ ಷಡ್ಯಂತ್ರವನ್ನು ನಾಗಾ ನ್ಯಾಶನಲ್ ಕೌನ್ಸಿಲ್ ಈ ಪ್ರತ್ಯೇಕತಾವಾದಿ ಸಮೂಹವು ಹಮ್ಮಿಕೊಂಡಿತ್ತು.

೮. ರಾಣಿ ಮಾಂ ಇವರು ಕ್ರೈಸ್ತರ ವಿವಿಧ ಚಟುವಟಿಕೆಗಳನ್ನು ವಿರೋಧಿಸಿದ್ದರಿಂದ ಪ್ರತ್ಯೇಕತಾವಾದಿ ಸಮೂಹಗಳು ಅವರನ್ನು ಬಂಧಿಸಿ ಬಲವಂತವಾಗಿ ದೂರದ ಜಿಲ್ಲೆಗೆ ಕಳುಹಿಸುವುದು

ಪ್ರತ್ಯೇಕತಾವಾದಿ ಸಮೂಹಗಳ ಅಡಿಪಾಯ ಎಷ್ಟು ಗಟ್ಟಿಮುಟ್ಟಾಗಿತ್ತೆಂದರೆ, ಇಂದು ಕೂಡ ಈ ಸಮೂಹಗಳು ನಾಗಾಲ್ಯಾಂಡ್‌ನಲ್ಲಿ ನಡುನಡುವೆ ತಲೆ ಎತ್ತುತ್ತಾ ಹಿಂಸಾತ್ಮಕ ಆಂದೋಲನ ಮಾಡುತ್ತವೆ.

ಒಂದು ಕಾಲದಲ್ಲಿ ಅವರ ‘ಸಮಾಂತರ ಸರಕಾರ ನಡೆಯುತ್ತಿತ್ತು. ನಾಗಾಲ್ಯಾಂಡ್‌ನಲ್ಲಿನ ಕೆಲವು ಪಂಗಡದಲ್ಲಿ ಶೇ. ೧೦೦ ರಷ್ಟು ಕ್ರೈಸ್ತರಿದ್ದಾರೆ, ಅಲ್ಲಿ ಇಂತಹ ವಿಭಜನೆಯ ಭಾವನೆಯು ಇಂದು ಕೂಡ ನೋಡಲು ಸಿಗುತ್ತದೆ. ಅವರು ಭಾರತೀಯರನ್ನು ಧಿಕ್ಕರಿಸುತ್ತಾರೆ ಹಾಗೂ ಸೈನ್ಯವನ್ನು ಕೂಡ ಪ್ರಸಂಗಾನುಸಾರ ಎದುರಿಸುತ್ತಾರೆ. ಅದಕ್ಕಾಗಿ ರಾಣಿ ಮಾಂ ಇವರಿಂದ ಕ್ರೈಸ್ತ ಧರ್ಮೋಪದೇಶಕರು ಚರ್ಚ್‌ಗಳು, ಅವರ ಶಾಲೆಗಳು, ಧರ್ಮಾರ್ಥ ಆಸ್ಪತ್ರೆ ಇತ್ಯಾದಿಗಳಿಗೆ ಮೊದಲಿಂದಲೂ ವಿರೋಧವಿತ್ತು; ಆದ್ದರಿಂದ ಸ್ವಾತಂತ್ರ್ಯ ಪ್ರಾಪ್ತಿಯ ನಂತರವೂ ಅವರನ್ನು ತಮ್ಮ ಗ್ರಾಮದಲ್ಲಿ ಬಂಧಿಸಿ ನಾಗಾಲ್ಯಾಂಡ್‌ನಲ್ಲಿ ದೂರದ ತ್ಯುಎನ್‌ಸಂಗ ಜಿಲ್ಲೆಗೆ ಬಲವಂತವಾಗಿ ಕಳುಹಿಸಿ ಅಲ್ಲಿಯೇ ಉಳಿಯುವಂತೆ ಮಾಡಿದರು.

೯. ಭಾರತದೊಂದಿಗೆ ಇರುವುದರಿಂದಲೇ ‘ನಾಗಾ ಸಮಾಜದ ಕಲ್ಯಾಣವಾಗುವುದು, ಎಂದು ರಾಣಿಯವರು ಹೇಳುವುದು

ಝಿಲಿಯಾಂಗ್ ಪಂಗಡಕ್ಕಾಗಿ ರಾಣಿ ತುಂಬಾ ಕಷ್ಟಪಟ್ಟರು; ಆದ್ದರಿಂದಲೇ ಇಂದು ಈ ಪಂಗಡದವರು ಮತಾಂತರವಾಗಿಲ್ಲ. ಹಿಂದಿನಿಂದ ನಡೆದು ಬಂದ ಸಂಸ್ಕೃತಿ, ಶ್ರದ್ಧೆ ಮತ್ತು ಪರಂಪರೆಗಾಗಿ ರಾಣಿಯವರು ಆಗ್ರಹಿಸಿದರು. ಅವರು ಗ್ರಾಮಸಂಸ್ಥೆಯ ಮೂಲಕ ಕಾರುಬಾರು ನಡೆಸಲು ಒತ್ತು ನೀಡಿದರು. ಭಾರತದೊಂದಿಗೆ ಇರುವುದರಿಂದಲೇ ನಾಗಾ ಸಮಾಜದ ಭವಿಷ್ಯ ಮತ್ತು ಅವರ ಕಲ್ಯಾಣವು ಆಗಲು ಸಾಧ್ಯವೆಂದು ಅವರು ಆಗ್ರಹಿಸಿದರು.

೧೦. ಕ್ರೈಸ್ತ ಧರ್ಮೋಪದೇಶಕರು ಕೂಡ ನಾಗಾಲ್ಯಾಂಡ್‌ನ ವಿಭಜನೆಯ ಬೇಡಿಕೆಯನ್ನು ನಿಲ್ಲಿಸಿ ಭಾರತೀಯ ಪ್ರಜಾಪ್ರಭುತ್ವದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವುದು

ರಾಣಿ ಮಾಂ ‘ಭಾರತ ಒಂದು ದೇಶವಾಗಿದೆ, ಅದು ತನ್ನದೆ ಸಂಘರಾಜ್ಯವಾಗಿದೆ, ಎನ್ನುವ ಭಾವನೆಯನ್ನು ಜನರ ಮನಸ್ಸಿನಲ್ಲಿ ಬಿಂಬಿಸುವುದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯಶಸ್ವಿಯಾದರು. ಭಾರತದಲ್ಲಿ ವಾಸಿಸುವವರಿಂದ ಪ್ರತ್ಯೇಕತಾವಾದವನ್ನು ಜೋಪಾನ ಮಾಡುವ ಪ್ರವೃತ್ತಿಗಳಿಗೆ ಅವರ ವಿರೋಧವಿತ್ತು ಹಾಗೂ ಅದು ಮುಂದೆ ಯಶಸ್ವಿಯಾಯಿತು. ಕ್ರೈಸ್ತ ಧರ್ಮೋಪದೇಶಕರು ಕೂಡ ೧೯೭೦ ರಲ್ಲಿ ಇದನ್ನು ಒಪ್ಪಿಕೊಂಡರು ಹಾಗೂ ನಾಗಾಲ್ಯಾಂಡ್‌ನ ಪ್ರತ್ಯೇಕತೆಯ ಬೇಡಿಕೆಯ ಆಗ್ರಹವನ್ನು ಬಿಟ್ಟು ಇಲ್ಲಿನ ಜನಜೀವನದೊಂದಿಗೆ ಮಿಶ್ರಣವಾಗಿದ್ದು ಭಾರತೀಯ ಪ್ರಜಾಪ್ರಭುತ್ವದ ಸಾರ್ವಭೌಮತ್ವವನ್ನು ಸ್ವೀಕರಿಸಿದರು. – ಸುರೇಶ ಸಾಠೆ (ಆಧಾರ : ‘ಧರ್ಮಭಾಸ್ಕರ, ಏಪ್ರಿಲ್ ೨೦೧೫)