ಸಂಪಾದಕೀಯ : ಜಿರಳೆ ಮತ್ತು ಬೋಧನೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರ ಹೇಳಿಕೆಯನ್ನು ವಿದೇಶದಲ್ಲಿ ಕುಳಿತಿದ್ದ ಭಾರತೀಯ (ಮಹಾರಾಷ್ಟ್ರದ) ಯುವಕನೊಬ್ಬ ತನಗೆ ಬೇಕಾದಂತೆ ಅರ್ಥೈಸಿಕೊಂಡು ಬೇಸರಪಟ್ಟುಕೊಂಡನು ಮತ್ತು ತದನಂತರ ಹೊಸ ಪಕ್ಷವೊಂದನ್ನು ಸ್ಥಾಪಿಸಿದನು. ಕೇವಲ ೪-೫ ದಿನಗಳಲ್ಲಿ ಅನುಯಾಯಿಗಳ ಸಂಖ್ಯೆಯಲ್ಲಿ ಭಾಜಪವನ್ನೂ ಹಿಂದಿಕ್ಕಿದ ಈ ಹೊಸ ಪಕ್ಷದ ಉದಯದ ಬಗ್ಗೆ ಜಗತ್ತಿನಾದ್ಯಂತ ಚರ್ಚೆಗಳು ಆರಂಭವಾದವು. ಮೇ ೧೫ ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ನಕಲಿ ಪದವಿಗಳ ಆಧಾರದ ಮೇಲೆ ಉದ್ಯೋಗ ಪಡೆಯುವ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ, ಅಂತಹ ಯುವಕರನ್ನು ‘ಕಾಕ್ರೊಚ್ ಅಂದರೆ ‘ಜಿರಳೆ’ ಎಂದು ಕರೆದಿದ್ದರು. ಇದರ ತಪ್ಪು ಅರ್ಥವನ್ನು ತೆಗೆದುಕೊಳ್ಳಲಾದ ಬಗ್ಗೆ ಅವರು ಸ್ಪಷ್ಟನೆಯನ್ನೂ ನೀಡಿದ್ದರು. ಇದೇ ಅವಧಿಯಲ್ಲಿ ನಿರುದ್ಯೋಗಿ ಯುವಕರನ್ನು ‘ಜಿರಳೆ’ ಎಂದು ಕರೆದಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾದವು ಮತ್ತು ಇದರ ಬೆನ್ನಲ್ಲೇ ಲಂಡನ್‌ನ ಬಾಸ್ಟನ್ ವಿಶ್ವವಿದ್ಯಾಲಯದ ಅಭಿಜಿತ್ ದೀಪಕೆ ಎಂಬ ಯುವಕನು ‘ಕಾಕ್ರೊಚ್ ಜನತಾ ಪಾರ್ಟಿ ಹೆಸರಿನ ಚುನಾವಣೆ ಸ್ಪರ್ಧಿಸದ ಪಕ್ಷವೊಂದನ್ನು ಸ್ಥಾಪಿಸಿದನು. ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯಿಂದ ಆರಂಭವಾದ ಈ ಬಿರುಗಾಳಿ ಕೇವಲ ನೂರು ಗಂಟೆಗಳಲ್ಲಿ ದೇಶವಿರೋಧಿ ಶಕ್ತಿಗಳ ಕೈಗೊಂಬೆಯಾಗಿದ್ದು ಹೇಗೆ? ಈ ಘಟನಾವಳಿಗಳನ್ನು ತಿಳಿದುಕೊಂಡರೆ ಅದು ನಮಗೆ ಅರ್ಥವಾಗುತ್ತದೆ.

ದೊಡ್ಡ ಬೆಂಬಲದ ಹಿಂದಿನ ಗಣಿತ

ರಾತ್ರೋರಾತ್ರಿ ರಚನೆಯಾದ ‘ಕಾಕ್ರೊಚ್ ಜನತಾ ಪಾರ್ಟಿಯ ಜಾಲತಾಣದಲ್ಲಿ ಈ ಪಕ್ಷದ ಪ್ರಣಾಳಿಕೆಯನ್ನು ಪ್ರಕಟಿಸಲಾಯಿತು. ಆ ತಥಾಕಥಿತ ಪ್ರಣಾಳಿಕೆಯಲ್ಲಿ, ‘ಸಾಮಾನ್ಯ ಅಸಮಾಧಾನದಿಂದ ಜನ್ಮತಾಳಿದ ಈ ಪಕ್ಷಕ್ಕೆ ಯಾವುದೇ ಪ್ರಾಯೋಜಕರಿಲ್ಲ, ಯಾರ ದೇಣಿಗೆಯೂ ಇಲ್ಲ ಎಂದು ಬರೆಯಲಾಗಿದೆ. ‘ನಿರುದ್ಯೋಗಿಗಳು, ಸೋಮಾರಿಗಳು, ದಿನದ ಬಹುಪಾಲು ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆನ್‌ಲೈನ್ ಕಳೆಯುವವರು ಮತ್ತು ವೃತ್ತಿಪರವಾಗಿ ಯಾರನ್ನಾದರೂ ಕಟುವಾಗಿ ಟೀಕಿಸುವವರು’ ಈ ಪಕ್ಷದ ಸದಸ್ಯರಾಗಲು ಇರುವ ‘ಅರ್ಹತೆ’ಯಾಗಿದೆ. ಈ ಪಕ್ಷದ ಸದಸ್ಯರಾಗಲು ಕರೆ ನೀಡಿದ ಕೇವಲ ೪-೫ ದಿನಗಳಲ್ಲಿ ೧ ಕೋಟಿ ೩೦ ಲಕ್ಷಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಭಾಜಪ ಇದನ್ನು ಸಾಧಿಸಲು ದಶಕಗಳ ಕಾಲ ಶ್ರಮಿಸಬೇಕಾಯಿತು, ಆದರೆ ‘ಕಾಕ್ರೊಚ್ ಜನತಾ ಪಾರ್ಟಿ ಅದನ್ನು ಕೆಲವೇ ದಿನಗಳಲ್ಲಿ ಮಾಡಿ ತೋರಿಸಿದ್ದರಿಂದ ಮಾಧ್ಯಮಗಳಲ್ಲೂ ಈ ಬಗ್ಗೆ ‘ಪ್ರೈಮ್ ಟೈಮ್ ಚರ್ಚೆಗಳು ನಡೆಯುತ್ತಿವೆ. ಭಾರತದಲ್ಲಿ ಬೇಡದ ಕಳೆ ಸಸ್ಯಗಳನ್ನು ಕಿತ್ತೊಗೆಯುವಂತೆ, ‘ಕಾಕ್ರೊಚ್ ಜನತಾ ಪಾರ್ಟಿಯ ‘ಎಕ್ಸ್’ (ಟ್ವಿಟರ್) ಖಾತೆಯ ಮೇಲೆ ಕ್ರಮ ಕೈಗೊಂಡು ಅದನ್ನು ಮುಚ್ಚಿಸಲಾಯಿತು ನಿಜ; ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನುಯಾಯಿಗಳ ಸಂಖ್ಯೆ ತಲುಪಿದ್ದು ಹೇಗೆ? ಇದರ ಮೂಲವನ್ನು ಹುಡುಕುವುದು ಮುಖ್ಯವಾಗುತ್ತದೆ.

ಕಡಿಮೆ ಸಮಯದಲ್ಲಿ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಲು ‘ಬಾಟ್ ವ್ಯವಸ್ಥೆಯನ್ನು ಬಳಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಸಹಜವಾಗಿಯೇ ಅದಕ್ಕಾಗಿ ಹಣವನ್ನು ಸುರಿಯಬೇಕಾಗುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಒಂದು ಮಾಹಿತಿಯನ್ನು ಹರಡಲು, ‘ವ್ಯೂಸ್ ಸಂಖ್ಯೆಯನ್ನು ಹೆಚ್ಚಿಸಲು ಒಂದೇ ಸ್ಥಳದಲ್ಲಿ ಹಲವಾರು ಮೊಬೈಲ್ ಫೋನ್‌ಗಳನ್ನು ಚಾಲನೆಯಲ್ಲಿಟ್ಟಿರುವುದು ಯಾವುದೋ ಒಂದು ದೇಶದಲ್ಲಿ ಬೆಳಕಿಗೆ ಬಂದಿತ್ತು. ಇದರೊಂದಿಗೆ, ಅನೇಕ ಸಾಮಾಜಿಕ ಜಾಲತಾಣಗಳ ಮುಖ್ಯ ಕಚೇರಿಗಳು ಮತ್ತು ಅವುಗಳ ‘ಡೇಟಾ ಸೆಂಟರ್‌ಗಳು’ ವಿದೇಶಿ ಶಕ್ತಿಗಳ ಕೈಯಲ್ಲಿವೆ. ಈ ಸಂಖ್ಯೆಯು ತಾಂತ್ರಿಕ ಜಾಲದ ಕಾರಣದಿಂದಾಗಿ ಹೆಚ್ಚಿರುವ ಸಾಧ್ಯತೆ ಹೆಚ್ಚು; ಏಕೆಂದರೆ ‘ಸನಾತನ ಪ್ರಭಾತ್ನಂತಹ ನಿಸ್ವಾರ್ಥ ಹಾಗೂ ಸಮಾಜ ಮತ್ತು ದೇಶದ ಹಿತ ಬಯಸುವ ಮಾಧ್ಯಮಗಳ ಅನುಯಾಯಿಗಳ ಸಂಖ್ಯೆಯಲ್ಲಿ ಕಮ್ಯುನಿಸ್ಟ್ ‘ಅಲ್ಗಾರಿದಮ್ ಕಾರಣದಿಂದಾಗಿ ಯಾವುದೇ ಬೆಳವಣಿಗೆ ಕಂಡುಬರುತ್ತಿಲ್ಲ.

ಎರಡನೆಯದಾಗಿ, ಈ ಪಕ್ಷದ ಸಂಸ್ಥಾಪಕನಾದ ಅಭಿಜಿತ್ ದೀಪಕೆ ಆಮ್ ಆದ್ಮಿ ಪಕ್ಷದ (ಆಪ್) ಕಾರ್ಯಕರ್ತನಾಗಿದ್ದಾನೆ. ‘ಕಾಕ್ರೊಚ್ ಪಕ್ಷದ ಸ್ಥಾಪನೆಯಾದ ತಕ್ಷಣವೇ ಅವನಿಗೆ ಬೆಂಬಲ ನೀಡಲು ಮುಂದೆ ಬಂದ ಜರ್ಮನಿ ಮೂಲದ ಧ್ರುವ್ ರಾಠಿ ಅವರ ಭಾರತವಿರೋಧಿ ಮಾನಸಿಕತೆ ಎಲ್ಲರಿಗೂ ಪರಿಚಿತವಾದುದೇ ಆಗಿದೆ. ಅದರೊಂದಿಗೆ, ಅರಬ್ ದೇಶದ ಯಾವ ಮುಸಲ್ಮಾನ ಯುವಕನು ಈ ಜಾಲತಾಣವನ್ನು ತಯಾರಿಸಿಕೊಟ್ಟಿದ್ದಾನೋ, ಅವನೂ ಕೂಡ ಆಪ್ ಕಾರ್ಯಕರ್ತನಾಗಿದ್ದವನೇ. ಯಾವ ದೊಡ್ಡ ಮಾತುಗಳನ್ನು ಆಡುತ್ತಾ ಭ್ರಷ್ಟಾಚಾರ ವಿರೋಧಿ ಅಲೆಯನ್ನು ಎಬ್ಬಿಸಿ ‘ಆಪ್ ಜನ್ಮತಾಳಿತೋ, ಅದೇ ಮಾದರಿಯಲ್ಲಿ ಈ ‘ಕಾಕ್ರೊಚ್ ಪಕ್ಷವನ್ನೂ ಹುಟ್ಟುಹಾಕಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಪಕ್ಷದಲ್ಲಿ ಭಾಗವಹಿಸುವವರಲ್ಲಿ ಮತ್ತು ಅದಕ್ಕೆ ಬೆಂಬಲ ನೀಡುವವರಲ್ಲಿ ಕೆಲವು ನಿರ್ದಿಷ್ಟ ಪ್ರಸಿದ್ಧ ವ್ಯಕ್ತಿಗಳು ಹಾಗೂ ಕೆಲವು ರಾಜಕೀಯ ಜನಪ್ರತಿನಿಧಿಗಳೂ ಇದ್ದಾರೆ, ಇವರು ನಿರಂತರವಾಗಿ ಹಿಂದೂ ಮತ್ತು ದೇಶವಿರೋಧಿ ನಿರೂಪಣೆಗಳನ್ನು ಹರಡುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ವಿರೋಧ ಪಕ್ಷಗಳ ಕೆಲವು ನಾಯಕರೂ ಈ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಇದುವೇ ‘ಕಾಕ್ರೊಚ್ ಪಕ್ಷದ ರಾತ್ರೋರಾತ್ರಿಯ ಜನಪ್ರಿಯತೆಯ ಹಿಂದಿನ ಗಣಿತವಾಗಿದೆ.

ಭಾವನೆಗಳ ಜಾಲ (ಸಂಚು)

ಭಾರತದಲ್ಲಿ ‘ಜೆನ್-ಝಿ’ ಚಳವಳಿಯನ್ನು ಹುಟ್ಟುಹಾಕುತ್ತಿರುವುದು ಇದೇ ಮೊದಲೇನಲ್ಲ. ಅದೇ ರೀತಿ, ಹುಟ್ಟಿದ ತಕ್ಷಣವೇ ಎದ್ದು ನಿಲ್ಲುವ ಹೆಣಗಾಟದಲ್ಲಿ ಅಂತಹ ಚಳವಳಿಗಳ ಬಣ್ಣ ಬಯಲು ಆಗುತ್ತಿರುವುದೂ ಇದೇ ಮೊದಲಲ್ಲ. ನೆರೆಹೊರೆಯ ದೇಶಗಳಲ್ಲಿ ಆಡಳಿತ ಬದಲಾವಣೆ ಮಾಡಬಲ್ಲ ಇಂತಹ ಬಿರುಗಾಳಿಗಳು ಭಾರತದಲ್ಲಿ ಎಷ್ಟು ಬಾರಿ ಎದ್ದಿದ್ದರೂ, ‘ಅವು ದೇಶಕ್ಕೆ ಒಳ್ಳೆಯದಲ್ಲ ಎಂಬುದನ್ನು ಭಾರತೀಯರು ಆಮ್ ಆದ್ಮಿ ಪಕ್ಷದ ಉಗಮದಿಂದ ಇಂದಿನವರೆಗಿನ ಅದರ ನಡವಳಿಕೆಯಿಂದ ಅರ್ಥಮಾಡಿಕೊಂಡಿದ್ದಾರೆ. ಪ್ರಶ್ನೆಗಳನ್ನು ಕೇಳಿ, ತರ್ಕ ಹೂಡಿ, ಅಭ್ಯಾಸ ಮಾಡಿ ಸಮತೋಲಿತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವವರ ಸಂಖ್ಯೆ ಭಾರತದಲ್ಲಿ ಇಂದಿಗೂ ದೊಡ್ಡದಾಗಿದೆ. ಆದ್ದರಿಂದ ತಲೆಮಾರುಗಳ ಮೇಲೆ ಗೂಬೆ ಕೂರಿಸಿ ಅವರ ನಡುವೆ ಕಂದಕ ಸೃಷ್ಟಿಸುವ ಇತ್ತೀಚಿನ ವರ್ಷಗಳ ಸಾಮ್ಯವಾದಿ ತಂತ್ರಗಳು ಭಾರತದ ಸಾಂಸ್ಕೃತಿಕ ಬೇರುಗಳನ್ನು ಸಡಿಲಗೊಳಿಸುವಲ್ಲಿ ಯಶಸ್ವಿಯಾಗಿಲ್ಲ. ಆದರೂ ‘ಡೀಪ್ ಸ್ಟೇಟ್-ಸಾಮ್ಯವಾದಿ-ಜಿಹಾದಿ ಮೈತ್ರಿಕೂಟವು ಭಾರತದ ‘ಜೆನ್ ಝಿ’ ತಲೆಮಾರಿನ ಮೇಲೆ ಆಸೆಯ ಕಣ್ಣು ನೆಟ್ಟು ಕುಳಿತಿದೆ. ಸರಕಾರಿ ವ್ಯವಸ್ಥೆಗಳ ಹಾಗೂ ಭ್ರಷ್ಟರ ಕೃತ್ಯಗಳಿಂದ ತತ್ತರಿಸಿದವರಲ್ಲಿ ಕೆಲವು ಜನರು ಅರಿಯದೆಯೇ ‘ಕಾಕ್ರೊಚ್ ಜನತಾ ಪಾರ್ಟಿಯ ಭ್ರಮೆಗಳಿಗೆ ಬಲಿಯಾಗಿರಬಹುದು. ನವ-ಮಾರ್ಕ್ಸ್‌ವಾದದಲ್ಲಿ ಅಂತಹವರನ್ನು ‘ಯೂಸ್‌ಫುಲ್ ಇಡಿಯಟ್ಸ್’ ಎಂದು ಕರೆಯಲಾಗುತ್ತಿದ್ದು, ಅವರನ್ನು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ‘ಕಾಕ್ರೊಚ್ ಜನತಾ ಪಾರ್ಟಿಯಂತಹ ಇಂತಹ ಗುಪ್ತ ಸಾಮ್ಯವಾದಿ ತಂತ್ರಗಳಿಗೆ ಭಾರತೀಯರು ಮರುಳಾಗಬಾರದು. ಅದಕ್ಕಾಗಿ ಪಂಚತಂತ್ರದ ಸಣ್ಣ ಬೋಧಪ್ರದ ಕಥೆಗಳನ್ನು ಮತ್ತೊಮ್ಮೆ ಅರ್ಥಮಾಡಿಕೊಳ್ಳಬೇಕು. ಸತ್ಯವನ್ನು ಒಪ್ಪದ ಮೂರ್ಖ ಗೂಬೆಗಳ ಮಾತು ಕೇಳಿ ಸುಳ್ಳನ್ನು ಸತ್ಯ ಎಂದು ನಂಬಬಾರದು ಮತ್ತು ಧೂರ್ತ ಜನರ ಸಹವಾಸದಲ್ಲಿ ತನ್ನ ಸ್ವಂತ ಅಸ್ತಿತ್ವವನ್ನೇ ತ್ಯಾಗ ಮಾಡುವ ಗೋಜಿಗೆ ಹೋಗಬಾರದು, ಇದುವೇ ಈ ‘ಜಿರಳೆ’ ಕಥೆಯ ಬೋಧನೆಯಾಗಿದೆ.

ಭಾರತ ಮತ್ತು ಭಾರತೀಯರು ಇಂಧನ ಬಿಕ್ಕಟ್ಟಿನ ಸಮಯದಲ್ಲಿ ಅದನ್ನು ತಪ್ಪಿಸಲು ಮತ್ತು ಅದರ ತೀವ್ರತೆಯನ್ನು ಕಡಿಮೆ ಮಾಡಲು ಶ್ರಮಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಭಾರತೀಯ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವವರ ಅಗತ್ಯವಿದೆ. ಭಾರತಕ್ಕೆ ನಾಗರಿಕರ ಒಗ್ಗಟ್ಟು ಮತ್ತು ದೇಶಪ್ರೇಮದ ಅಗತ್ಯವಿರುವಾಗ, ಬೇಡದ ಚಳವಳಿಗಳನ್ನು ಹುಟ್ಟುಹಾಕಿ ಭಾರತೀಯ ಯುವಕರ ಶಕ್ತಿಯನ್ನು ದಾರಿ ತಪ್ಪಿಸುವ ಇಂತಹ ಚಳವಳಿಗಳಿಗೆ ಯಾವುದೇ ಭವಿಷ್ಯವಿಲ್ಲ. ದೇಶವು ಇಂಧನ ಬಿಕ್ಕಟ್ಟಿನ ಹೊಸ್ತಿಲಲ್ಲಿರುವಾಗ ದೇಶದಲ್ಲಿ ಆರಂಭವಾಗುವ ಯಾವುದೇ ಚಳವಳಿಗಳಿಗೆ ಸರಿಯಾದ ದಿಕ್ಕು ಅತ್ಯಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳ ವೇಗದ ಯುಗದಲ್ಲಿ ಭಾವನೆಗಳನ್ನು ಕೆರಳಿಸುವುದು, ಕೃತಕ ಜನಪ್ರಿಯತೆಯನ್ನು ಸೃಷ್ಟಿಸುವುದು ಮತ್ತು ಕೆಲವು ಕಥಿತ ಯುವಕರ ಅಸಮಾಧಾನಕ್ಕೆ ರಾಜಕೀಯ ದಿಕ್ಕು ನೀಡುವುದು ದೇಶವಿರೋಧಿ ಶಕ್ತಿಗಳಿಗೆ ಸುಲಭವಾಗಿದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯನೂ ಯಾವುದೇ ಹೊಸ ಚಳವಳಿಯನ್ನು ಸ್ವೀಕರಿಸುವ ಮುನ್ನ ಅದರ ಹಿಂದಿನ ಸಿದ್ಧಾಂತ, ಧನಸಹಾಯ, ಉದ್ದೇಶ ಮತ್ತು ಫಲಾನುಭವಿಗಳ ಬಗ್ಗೆ ಅಭ್ಯಾಸ ಮಾಡುವುದು ಅಗತ್ಯವಾಗಿದೆ.

ಭಾರತಕ್ಕೆ ಇಂದು ಭಾವನಾತ್ಮಕ ಪ್ರಚೋದನೆಯಿಂದ ಬಂದ ಕ್ಷಣಿಕ ಆಕ್ರೋಶದ ಅಗತ್ಯವಿಲ್ಲ, ಬದಲಿಗೆ ರಾಷ್ಟ್ರನಿಷ್ಠ, ಸಂಯಮಿ ಮತ್ತು ಸೃಜನಾತ್ಮಕ ಯುವಶಕ್ತಿಯ ಅಗತ್ಯವಿದೆ.