ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಸಂಘಟನೆಗಳ ಐಕ್ಯತೆ ಮೂಡಿಸಿದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ಸಂಪನ್ನ!

ಬೆಂಗಳೂರು – ರಾಜಾಜಿನಗರದಲ್ಲಿರುವ ಅಕ್ಷರಧಾಮ ಅತಿಥಿ ನಿವಾಸದಲ್ಲಿ ಏಪ್ರಿಲ್ 11 ರ ಶನಿವಾರದಂದು ಹಿಂದೂ ಜನಜಾಗೃತಿ ಸಮಿತಿಯು ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು, ವಕೀಲರು, ಉದ್ಯಮಿಗಳು, ಗೋರಕ್ಷಕರು, ಅರ್ಚಕರು, ದೇವಸ್ಥಾನದ ಟ್ರಸ್ಟಿಗಳು ಉಪಸ್ಥಿತರಿದ್ದರು. ಈ ಅಧಿವೇಶನವು ಧರ್ಮಪ್ರೇಮದ ವಾತಾವರಣದಲ್ಲಿ ಯಶಸ್ವಿಯಾಗಿ ಸಂಪನ್ನವಾಯಿತು. ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಪೂ. ರಮಾನಂದ ಗೌಡ, ಶ್ರೀ ರಾಮ ಸೇನೆಯ ರಾಷ್ಟೀಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್, ವಿಶ್ವ ಹಿಂದೂ ಪರಿಷತ್ ನ ಕೋಶಾಧ್ಯಕ್ಷರಾದ ಶ್ರೀ. ದೀಪಕ್ ರಾಜಗೋಪಾಲ್, ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ್ ಕೆರೆಹಳ್ಳಿ, ಬೆಂಗಳೂರು ಬಿ.ಎ.ಪಿ.ಎಸ್. ಸ್ವಾಮಿನಾರಾಯಣ ಮಂದಿರದ ಸಂಸ್ಥಾಪಕರಾದ ಶ್ರೀ. ಗುಣವಂತ್ ಭಾಯ್, ಖ್ಯಾತ ಚಿಂತಕ ಹಾಗೂ ಉದ್ಯಮಿ ಶ್ರೀ. ಹೆಚ್. ಜಿ. ಚಂದ್ರಶೇಖರ್, ಬಿ.ಎ’.ಪಿ. ಎಸ್. ಪ್ರಚಾರಕ ಹಾಗೂ ಉದ್ಯಮಿ ಶ್ರೀ. ರೋಹಿತ್ ಷಾ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಅವರು ಉಪಸ್ಥಿತರಿದ್ದರು.
ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮುಖ್ಯ ವಕ್ತಾರರಾದ ಶ್ರೀ. ಪ್ರಮೋದ್ ಮುತಾಲಿಕ್ ಅವರು, “ನಮ್ಮ ಸಮಾಜವು ಕೇವಲ ವಿನಯತೆ ಮತ್ತು ಉದಾರತೆಗೆ ಸೀಮಿತವಾಗದೆ, ಸ್ವಾಮಿ ವಿವೇಕಾನಂದರು ನೀಡಿದ ಕರೆಯಂತೆ ಶಕ್ತಿ ಮತ್ತು ಕ್ಷಾತ್ರ ವೃತ್ತಿಯನ್ನು ಗಳಿಸಿಕೊಳ್ಳಬೇಕು. ಬರಿ ಪುಸ್ತಕದ ಓದು ಅಥವಾ ಸೌಹಾರ್ದತೆಯ ಭಜನೆಯಿಂದ ದೇಶವನ್ನು ಉಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಹಿಂದೂವೂ ಶಾರೀರಿಕವಾಗಿ ದೃಢವಾಗಬೇಕು ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು,” ಎಂದು ತಿಳಿಸಿದರು. ಪ.ಪೂ. ಡಾ. ಜಯಂತ ಆಠವಲೆ ಅವರು ನೀಡಿದ ‘ಸಂಘರ್ಷಕ್ಕೆ ಸಿದ್ಧರಾಗಿ’ ಎಂಬ ಸಂದೇಶವು ಅತಿ ದೊಡ್ಡ ದಿಕ್ಸೂಚಿಯಾಗಿದೆ. ಸಮಾಜವು ಆಂತರಿಕ ಮತ್ತು ಬಾಹ್ಯ ಶತ್ರುಗಳ ವ್ಯವಸ್ಥಿತ ಷಡ್ಯಂತರಗಳ ವಿರುದ್ಧ ಕೇವಲ ರಕ್ಷಣಾತ್ಮಕವಾಗಿರದೆ, ಅಕ್ರಮಗಳನ್ನು ಮೆಟ್ಟಿ ನಿಲ್ಲಲು ಸಂಘಟಿತ ಸಂಘರ್ಷಕ್ಕೆ ಸಿದ್ಧರಾಗಬೇಕು. ಶ್ರೀಕೃಷ್ಣನು ಸಂಧಾನದ ಎಲ್ಲ ಹಾದಿಗಳು ಮುಚ್ಚಿದಾಗ ಅರ್ಜುನನಿಗೆ ಯುದ್ಧದ ಮಾರ್ಗವನ್ನೇ ಅಂತಿಮವಾಗಿ ಬೋಧಿಸಿದಂತೆ, ಇಂದು ನಾವು ನಮ್ಮ ಅಸ್ತಿತ್ವ ಮತ್ತು ಧರ್ಮದ ರಕ್ಷಣೆಗಾಗಿ ಕ್ಷಾತ್ರತೇಜವನ್ನು ಜಾಗೃತಗೊಳಿಸಬೇಕಿದೆ, ಎಂದು ಅವರು ಪ್ರತಿಪಾದಿಸಿದರು.
‘ಭಾಯಿ-ಭಾಯಿ’ ಅಥವಾ ಸರ್ವಧರ್ಮ ಸಮಭಾವದ ಹೆಸರಿನಲ್ಲಿ ಹಿಂದೂಗಳ ಉದಾರತೆಯನ್ನು ದುರುಪಯೋಗಪಡಿಸಿಕೊಳ್ಳುವ ಶಕ್ತಿಗಳ ಕುರಿತು ಎಚ್ಚರಿಸಿದ ಅವರು, “ಸಮಾಜವು ದೌರ್ಬಲ್ಯವನ್ನು ಪ್ರದರ್ಶಿಸುವುದನ್ನು ನಿಲ್ಲಿಸಬೇಕು. ನಮ್ಮ ಮನೆ, ಮನ ಮತ್ತು ದೇವಸ್ಥಾನಗಳ ರಕ್ಷಣೆಗೆ ನಾವೇ ಸನ್ನದ್ಧರಾಗಬೇಕು. ಸಂಧಾನಕ್ಕಿಂತ ಹೆಚ್ಚಾಗಿ ಸಂಘಟಿತ ಪ್ರತಿರೋಧದ ಮೂಲಕವೇ ಧರ್ಮದ್ರೋಹಿಗಳಿಗೆ ಉತ್ತರ ನೀಡಬೇಕು, ಎಂದು ಸಮಾಜಕ್ಕೆ ನೇರ ಕರೆ ನೀಡಿದರು.
ಶ್ರೀ. ಪ್ರಮೋದ್ ಮುತಾಲಿಕ್ ಅವರ ಈ ಕರೆಗೆ ಅಧಿವೇಶನದಲ್ಲಿದ್ದ ನೂರಾರು ಕಾರ್ಯಕರ್ತರು ಘೋಷಣೆಗಳ ಮೂಲಕ ಬೆಂಬಲ ವ್ಯಕ್ತಪಡಿಸಿದರು ಮತ್ತು ತಮ್ಮ ಹಂತಗಳಲ್ಲಿ ಶೌರ್ಯದ ಜಾಗೃತಿಗೆ ಶ್ರಮಿಸುವುದಾಗಿ ಸಂಕಲ್ಪ ಮಾಡಿದರು.
ವಿಭಜಿತ ಸಮಾಜದ ಸಂಘಟನೆ ಮತ್ತು ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಯೇ ನಮ್ಮ ಅಂತಿಮ ಗುರಿ – ಶ್ರೀ ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇವತ್ತು ಹಿಂದೂ ಸಮಾಜ ಬೇರೆ ಬೇರೆ ಸಂಪ್ರದಾಯ, ಸಂಘಟನೆ, ಜಾತಿ, ಮತ ಸಂಘಟನೆಗಳಲ್ಲಿ ಇವತ್ತು ಬೇರೆ ಬೇರೆಯಾಗಿದೆ. ಹೀಗೆ ಹಂಚಿಹೋಗಿರುವ ಹಿಂದೂ ಸಮಾಜವನ್ನ, ಈ ಸಂಘಟನೆಯ ಪ್ರಮುಖರನ್ನ ನಾವು ಒಂದುಗೂಡಿಸಿದಾಗ ವ್ಯಾಪಕವಾದ ಹಿಂದೂ ಸಮಾಜದ ಐಕ್ಯತೆ ಸಾಧಿಸಲಿಕ್ಕೆ ಸಾಧ್ಯ ಇದೆ. ಹಿಂದೂ ರಾಷ್ಟ್ರದ ಬೀಜ ಇಂದು ಹೆಮ್ಮರವಾಗಿ ಬೆಳೆದಿದ್ದು ಇಂದು ರಾಷ್ಟ್ರದಾದ್ಯಂತ ಹಿಂದೂ ರಾಷ್ಟ್ರದ ಧ್ವನಿ, ಹಿಂದೂ ರಾಷ್ಟ್ರದ ಬೇಡಿಕೆ, ಹಿಂದೂ ರಾಷ್ಟ್ರದ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ. ಪ್ರಭು ಶ್ರೀರಾಮಚಂದ್ರ ಇವತ್ತು ಅಯೋಧ್ಯೆಯಲ್ಲಿ ವಿರಾಜಮಾನರಾಗಿದ್ದಾನೆ. ಖಂಡಿತವಾಗಿ ನಾವು ರಾಮರಾಜ್ಯದ ಸ್ಥಾಪನೆಯನ್ನ ನಮ್ಮ ಕಣ್ಣೆದುರೇ ನೋಡಲಿಕ್ಕೆ ಇದ್ದೇವೆ ಎಂದರು. ಆದ್ದರಿಂದ ಭಾರತ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಹೇಳಿ ಹೇಳಿದರು.
ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಸಮನ್ವಯದೊಂದಿಗೆ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಂಕಲ್ಪಿಸಿ- ಪೂಜ್ಯ ರಮಾನಂದ ಗೌಡ
ಮೆಕಾಲೆಯ ಶಿಕ್ಷಣ ಪದ್ಧತಿಯಿಂದಾಗಿ ಹಿಂದೂಗಳು ತಮ್ಮ ಮೂಲ ಸಂಸ್ಕಾರಗಳಿಂದ ವಂಚಿತರಾಗಿದ್ದಾರೆ. ನೈತಿಕ ಮೌಲ್ಯಗಳಿಲ್ಲದ ಶಿಕ್ಷಣವು ಸಮಾಜಕ್ಕೆ ಹಾನಿಕಾರಕವಾಗಿದೆ. ಕೇವಲ ಭೌತಿಕ ಶಿಕ್ಷಣದಿಂದ ನೈತಿಕ ಅದಃಪತನವಾಗುತ್ತಿದೆ. ಸಮಾಜದಲ್ಲಿ ಸುಖ ಮತ್ತು ಶಾಂತಿ ನೆಲೆಸಲು ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ಧರ್ಮ ಶಿಕ್ಷಣ ನೀಡುವುದು ಮತ್ತು ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರುವುದು ಅನಿವಾರ್ಯವಾಗಿದೆ. ಹಿಂದೂ ರಾಷ್ಟ್ರದ ಕಾರ್ಯವು ಕೇವಲ ಶಾರೀರಿಕ ಬಲದಿಂದ ಸಾಧ್ಯವಿಲ್ಲ. ಕಾರ್ಯಕರ್ತರು ಪ್ರತಿದಿನ ನಾಮಜಪ ಮತ್ತು ಸಾಧನೆ ಮಾಡುವ ಮೂಲಕ ಆಧ್ಯಾತ್ಮಿಕ ಶಕ್ತಿಯನ್ನು (ಬ್ರಾಹ್ಮತೇಜ) ವೃದ್ಧಿಸಿಕೊಳ್ಳಬೇಕು. ಜಾತಿ, ಪಂಗಡ ಮತ್ತು ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು, ಅಹಂಕಾರವನ್ನು ತ್ಯಜಿಸಿ ಎಲ್ಲರನ್ನೂ ಪ್ರೀತಿಯಿಂದ ಸಂಘಟಿಸಿದಾಗ ಮಾತ್ರ ದೈವೀ ಕಾರ್ಯದಲ್ಲಿ ಯಶಸ್ಸು ಸಿಗಲು ಸಾಧ್ಯ. ರಾಷ್ಟ್ರ ಮತ್ತು ಧರ್ಮದ ಕೆಲಸವನ್ನು ಅಧಿಕಾರದ ಆಸೆಯಿಲ್ಲದೆ ‘ಈಶ್ವರೀ ಸೇವೆ’ ಎಂದು ಭಾವಿಸಿ ನಿಷ್ಕಾಮವಾಗಿ ಮಾಡಬೇಕು. ಎಲ್ಲಿ ಧರ್ಮವಿರುತ್ತದೋ ಅಲ್ಲಿ ಭಗವಂತನ ವಿಜಯ ನಿಶ್ಚಿತ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ