ಅಫಘಾನಿಸ್ತಾನದ ಮೇಲೆ ನಡೆಸಲಾದ ವೈಮಾನಿಕ ದಾಳಿಗೆ ಭಾರತದಿಂದ ಖಂಡನೆ! – Pakistan Launches Airstrikes on Afghanistan

ನವದೆಹಲಿ – ಪಾಕಿಸ್ತಾನವು ರಂಜಾನ್ ಪವಿತ್ರ ಮಾಸದಲ್ಲಿ ಅಫಘಾನಿಸ್ತಾನದ ಭೂಪ್ರದೇಶದ ಮೇಲೆ ನಡೆಸಿದ ವೈಮಾನಿಕ ದಾಳಿಯನ್ನು ಭಾರತವು ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ಈ ದಾಳಿಯಲ್ಲಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂಬುದು ಗಮನಕ್ಕೆ ಬಂದಿದೆ ಎಂದು ವಿದೇಶಾಂಗ ಸಚಿವಾಲಯದ ಕಚೇರಿ ತಿಳಿಸಿದೆ. ತಾನು ಭಯೋತ್ಪಾದಕರನ್ನು ಗುರಿ ಮಾಡುತ್ತಿರುವುದಾಗಿ ಪಾಕಿಸ್ತಾನ ವಾದಿಸಿತ್ತು. ಆದರೆ, ‘ಈ ದಾವೆ ಸುಳ್ಳು ಮತ್ತು ಅನೇಕ ನಿರಪರಾಧಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಅಫಘಾನ್ ಸರಕಾರ ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ದಾಳಿಯನ್ನು ಮಾಡಿದೆ ಎಂದು ಹೇಳಿದರು. ಅಫಘಾನಿಸ್ತಾನದ ಪ್ರಾದೇಶಿಕ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಭಾರತವು ಪೂರ್ಣ ಬೆಂಬಲ ನೀಡಿದೆ.