ನವರಾತ್ರಿಯಲ್ಲಿ ಘಟಸ್ಥಾಪನೆಯನ್ನು ಮಾಡುವ ಯೋಗ್ಯ ಪದ್ಧತಿ

೧. ಮನೆಯಲ್ಲಿ ಪವಿತ್ರ ಸ್ಥಾನದಲ್ಲಿ ಸ್ವಚ್ಛ ಹಾಗೂ ಒಳ್ಳೆಯ (ಚಾಳಿಸಿಕೊಂಡಿರುವ) ಮಣ್ಣಿನ ವೇದಿಯನ್ನು ಮಾಡಬೇಕು.

೨. ವೇದಿಯಲ್ಲಿ ಅಗಸೆ ಬೀಜ ಮತ್ತು ಗೋದಿ ಎರಡನ್ನೂ ಮಿಶ್ರಣ ಮಾಡಿ ಬಿತ್ತಬೇಕು.

೩. ವೇದಿಯ ಮೇಲೆ ಅಥವಾ ಅದರ ಸಮೀಪದ ಪವಿತ್ರ ಸ್ಥಾನದಲ್ಲಿ ಭೂಮಿಯ ಪೂಜೆಯನ್ನು ಮಾಡಿ ಅಲ್ಲಿ ಚಿನ್ನ, ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಕಲಶವನ್ನು ಸ್ಥಾಪನೆ ಮಾಡಬೇಕು.

೪. ಅನಂತರ ಕಲಶದಲ್ಲಿ ಮಾವಿನ ಹಸಿರು ಎಲೆಗಳು, ಗರಿಕೆ, ನಾಣ್ಯ, ಅಕ್ಷತೆ ಹಾಕಿ ಕಲಶದ ಕೊರಳಿಗೆ ದಾರವನ್ನು ಕಟ್ಟಬೇಕು.

೫. ಕಲಶ ಸ್ಥಾಪನೆ ಮಾಡಿದ ನಂತರ ಗಣೇಶನ ಪೂಜೆಯನ್ನು ಮಾಡಬೇಕು. ಅನಂತರ ವೇದಿಯ ಒಂದು ಬದಿಯಲ್ಲಿ ಹಿತ್ತಾಳೆ, ಚಿನ್ನ, ಬೆಳ್ಳಿ, ಕಲ್ಲು, ಮಣ್ಣು ಇವುಗಳಲ್ಲಿ ಯಾವುದಾದರೊಂದು ಧಾತುವಿನ ದೇವಿಯ ಮೂರ್ತಿ ಅಥವಾ ದೇವಿಯ ಚಿತ್ರವನ್ನು ವಿಧಿಪೂರ್ವಕ ಸ್ಥಾಪಿಸಬೇಕು.

೬. ಅನಂತರ ಆಸನ, ಪಾದ್ಯ, ಅರ್ಘ್ಯ, ಆಚಮನ, ಸ್ನಾನ, ವಸ್ತ್ರ, ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪ, ನೈವೇದ್ಯ, ಪುಷ್ಪಾಂಜಲಿ, ನಮಸ್ಕಾರ, ಪ್ರಾರ್ಥನೆ ಇತ್ಯಾದಿಗಳಿಂದ ದೇವಿಯನ್ನು ಪೂಜಿಸಬೇಕು.

೭. ಅನಂತರ ‘ದುರ್ಗಾ ಸಪ್ತಶತಿ’ಯ ಪಠಣ ಮತ್ತು ದುರ್ಗಾಸ್ತುತಿ ಪಠಿಸಬೇಕು. ಪಾಠ ಮತ್ತು ಸ್ತುತಿಯ ನಂತರ ದುರ್ಗಾದೇವಿಯ ಆರತಿ ಮಾಡಿ ಪ್ರಸಾದ ಹಂಚಬೇಕು.

೮. ಅನಂತರ ಕುಮಾರಿಯರಿಗೆ ಭೋಜನ ನೀಡಬೇಕು. ನಂತರ ಸ್ವತಃ ಫಲಾಹಾರ ಮಾಡಬೇಕು.

೯. ಪಾಡ್ಯದಂದೇ ಧಾನ್ಯವನ್ನು ಬಿತ್ತುವ ವಿಧಿಯನ್ನೂ ಹೇಳಲಾಗಿದೆ.

೧೦. ಪಾಡ್ಯದಂದು ಬಿತ್ತಿದ ಈ ಧಾನ್ಯವನ್ನು ನವಮಿಯಂದು ನದಿ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡಬೇಕು.

೧೧. ಅಷ್ಟಮಿ ಮತ್ತು ನವಮಿಯನ್ನು ಮಹಾತಿಥಿಯೆಂದು ತಿಳಿಯಲಾಗುತ್ತದೆ. ಈ ಎರಡೂ ದಿನ ಪಾರಾಯಣದ ನಂತರ ಹವನ ಮಾಡಬೇಕು. ನಂತರ ಯಥಾಶಕ್ತಿ ಕನ್ಯೆಯರಿಗೆ ಭೋಜನ ನೀಡಬೇಕು.

೧೨. ನವರಾತ್ರಿಯಲ್ಲಿ ಏನು ಮಾಡಬೇಕು?  ಏನು ಮಾಡಬಾರದು? : ವ್ರತಾಚರಣಿಗಳು ನೆಲದ ಮೇಲೆಯೇ ಮಲಗಬೇಕು. ಬ್ರಹ್ಮ ಚರ್ಯೆ ಪಾಲಿಸಬೇಕು. ವ್ರತ ಮಾಡುವವರು ಫಲಾಹಾರ ಸೇವಿಸಬೇಕು. ತೆಂಗಿನ ಕಾಯಿ, ಲಿಂಬೆಹಣ್ಣು, ದಾಳಿಂಬೆ, ಬಾಳೆಹಣ್ಣು, ಮೋಸಂಬಿ ಮತ್ತು ಹಲಸು ಇತ್ಯಾದಿ ಫಲಗಳು ಮತ್ತು ಅನ್ನದ ನೈವೇದ್ಯವನ್ನು ತೋರಿಸಬೇಕು. ವ್ರತ ಮಾಡುವವರು ‘ಸ್ವತಃ ವ್ರತದ ಕಾಲದಲ್ಲಿ ಯಾವಾಗಲೂ ಕ್ಷಮೆ, ದಯೆ ಮತ್ತು ಔದಾರ್ಯ ಈ ಗುಣ ಗಳಿಗನುಸಾರ ಆಚರಣೆ ಮಾಡುವೆನು’, ಎಂದು ಸಂಕಲ್ಪ ಮಾಡಬೇಕು.

೧೩. ಈ ದಿನಗಳಲ್ಲಿ ವ್ರತ ಮಾಡುವವರು ಕ್ರೋಧ, ಮೋಹ, ಲೋಭ ಇತ್ಯಾದಿ ದುಷ್ಪ್ರವೃತ್ತಿಗಳನ್ನು ತ್ಯಾಗ ಮಾಡಬೇಕು; ದೇವಿಯ ಆವಾಹನೆ, ಪೂಜೆ, ವಿಸರ್ಜನೆ ಪಾಠ ಇತ್ಯಾದಿ ಎಲ್ಲವನ್ನು ಬೆಳಗ್ಗಿನ ಸಮಯದಲ್ಲಿ ಮಾಡುವುದು ಶುಭವಾಗಿರುತ್ತದೆ. ಆದ್ದರಿಂದ ಇವುಗಳನ್ನು ಅದೇ ಕಾಲದಲ್ಲಿ ಪೂರ್ಣಗೊಳಿಸಬೇಕು.’

(ಆಧಾರ : ಮಾಸಿಕ ‘ಅಕ್ಷರ ಪ್ರಭಾತ’)