ಅಮೇರಿಕಾದಲ್ಲಿನ ಹಿಂದೂಗಳಿಂದ ಸಾಮೂಹಿಕ ಪ್ರಾಯಶ್ಚಿತ !

ತಿರುಪತಿಯ ಲಡ್ಡು ಪ್ರಸಾದದ ಪ್ರಕರಣ

ಫ್ರಿಸ್ಕೊ (ಟೆಕ್ಸಾಸ್) – ಅಮೇರಿಕೆಯ ಟೆಕ್ಸಾಸ್ ರಾಜ್ಯದ ಫ್ರಿಸ್ಕೊ ನಗರದಲ್ಲಿ ಸೆಪ್ಟೆಂಬರ್ 28 ರಂದು, ‘ಗ್ಲೋಬಲ್ ಹಿಂದಿ ಹೆರಿಟೇಜ್ ಫೌಂಡೇಶನ್’, ‘ಜನ ಸೇನಾ’ ಮತ್ತು ‘ವಿಶ್ವ ಹಿಂದೂ ಪರಿಷತ್’ ಈ ಸಂಘಟನೆಗಳ ಸದಸ್ಯರು ಶಾಂತಿಮಂತ್ರ ಮತ್ತು ಧ್ಯಾನವನ್ನು ಆಯೋಜಿಸಿದ್ದರು. ತಿರುಪತಿಯ ಭಗವಾನ ಶ್ರೀ ಬಾಲಾಜಿಗೆ ಕೊಬ್ಬುಮಿಶ್ರಣದ ಲಡ್ಡುವನ್ನು ಅರ್ಪಿಸುತ್ತಿರುವುದು ಬಹಿರಂಗವಾದ ಬಳಿಕ ಅದರ ಪ್ರಾಯಶ್ಚಿತ್ತವಾಗಿ ಶಾಂತಿ ಮಂತ್ರ ಮತ್ತು ಧ್ಯಾನ ಧಾರಣೆಯನ್ನು ಆಯೋಜಿಸಿದ್ದರು. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರು ಪ್ರಾಯಶ್ಚಿತ್ತವೆಂದು 11 ದಿನಗಳ ಉಪವಾಸ ಮಾಡಿದ್ದರು. ಇದರಿಂದ ಪ್ರೇರಣೆ ಪಡೆದು ಅಮೇರಿಕದಲ್ಲಿನ ಹಿಂದೂಗಳು ಸಾಮೂಹಿಕ ಪಶ್ಚಾತ್ತಾಪ ತೆಗೆದುಕೊಂಡರು.

1. ಆರಂಭದಲ್ಲಿ, ಶಶಿ ಕೇಜ್ರಿವಾಲ್ ಇವರು ಭಗವಾನ ಬಾಲಾಜಿಗೆ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಿದ ಪ್ರಸಾದವನ್ನು ಮಾಡಿದಕ್ಕಾಗಿ ವಿಷಾದ ವ್ಯಕ್ತಪಡಿಸಿದರು.

2. ತದನಂತರ ಆರ್.ವಿ.ವಿ.ಎಸ್.ಎಸ್. ದೇವಸ್ಥಾನದ ಮುಖ್ಯ ಅರ್ಚಕರು ಹಿಂದೂ ಭಕ್ತರ ಮನಸ್ಸು ಮತ್ತು ಶರೀರಗಳ ಶುದ್ಧಿಗಾಗಿ ಶಾಂತಿ ಮಂತ್ರವನ್ನು ಪಠಿಸಿದರು.

3. ‘ಗ್ಲೋಬಲ್ ಹಿಂದಿ ಹೆರಿಟೇಜ್ ಫೌಂಡೇಶನ್’ ಅಧ್ಯಕ್ಷ ಡಾ. ಪ್ರಕಾಶ ರಾವ ವೆಲಾಗಾಪುಡಿ ಮಾತನಾಡಿ, ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಎಣ್ಣೆಯನ್ನು ಬಳಸಿರುವುದು, ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳ ಗಂಭೀರ ಉಲ್ಲಂಘನೆಯಾಗಿದೆಯೆಂದು ಹೇಳಿದರು.

4. ‘ವಿಶ್ವ ಹಿಂದೂ ಪರಿಷತ್ತಿನ ಡಲ್ಲಾಸ್ ಅಧ್ಯಕ್ಷ ಶ್ರೀ ಗೌರ್, ಚಂದ್ರ ಕುಸಮ, ರಾಹುಲ ಧರಣಕರ್, ಕಮಾಂಡರ್ ಗವಿ ಕುಮಾರ್, ಸೇವಾ ಇಂಟರ್ನ್ಯಾಷನಲ್‌ನ ಸಚಿನ ಸುಗಂಧಿ, ಜನ ಸೇನಾ ಪಕ್ಷದ ಕಿಶೋರ್ ಅನಿಚೆಟ್ಟಿ, ಶ್ರೀರಾಮ ಮಥಿ, ತೆಲುಗು ದೇಶಂ ಪಕ್ಷದ ರಾಮು ಗುಲಾಪಲ್ಲಿ, ಹೇಮಂತ ಕಾಳೆ, ರಾಮಕೃಷ್ಣ ಜಿ.ವಿ. ಎಸ್. ಅವರು ಈ ಕಾರ್ಯಕ್ರಮದಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

ಆಂಧ್ರ ಪ್ರದೇಶ ಸರಕಾರಕ್ಕೆ ಮಂದಿರಗಳ ರಕ್ಷಣೆ ಕೋರುವ ಮನವಿ

ಈ ಕಾರ್ಯಕ್ರಮದಲ್ಲಿ ಹಿಂದೂಗಳು ತಮ್ಮ ಬೇಡಿಕೆಯ ಮನವಿಯನ್ನು ಆಂದ್ರಪ್ರದೇಶ ಸರಕಾರಕ್ಕೆ ಕಳುಹಿಸಿದರು, ಈ ಮನವಿಯಲ್ಲಿ,

1. ಹಿಂದೂ ಮಂದಿರಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿರಿ ಮತ್ತು ಅವುಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಸಮರ್ಥವಿರುವ ಹಿಂದೂಗಳ ವಶಕ್ಕೆ ನೀಡಿರಿ.

2. ಹಿಂದೂ ಮಂದಿರಗಳ ಮೇಲಿನ ದಾಳಿಗಳ ಬಗ್ಗೆ ವಿಚಾರಣೆ ನಡೆಸಿರಿ ಮತ್ತು ತನಿಖೆ ನಡೆಸಲು ವಿಫಲರಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವನ್ನು ಕೈಕೊಳ್ಳಿರಿ.

3. ದೇವಸ್ಥಾನದ ಹಣವನ್ನು ಇತರ ಧರ್ಮದವರಿಗೆ ಮತ್ತು ಜಾತ್ಯತೀತ ಚಟುವಟಿಕೆಗಳಿಗೆ ವಿನಿಯೋಗಿಸುವುದನ್ನು ನಿಲ್ಲಿಸಿರಿ.

4. ತಿರುಮಲ, ತಿರುಪತಿ ಮತ್ತು ತಿರುಚಾನೂರನ್ನು ‘ದಿವ್ಯ ಕ್ಷೇತ್ರ’ ಮತ್ತು ‘ಪವಿತ್ರ ನಗರಗಳು’ ಎಂದು ಘೋಷಿಸಿರಿ. ಇವು ವ್ಯಾಟಿಕನ್ ಮತ್ತು ಮೆಕ್ಕಾದಂತೆ ಧಾರ್ಮಿಕ ಕೇಂದ್ರವನ್ನಾಗಿ ಮಾಡಬೇಕು.