ಶ್ರೀ ಗಣೇಶ ಚತುರ್ಥಿಯಂದು ಬರುವ ಇತರ ವ್ರತಗಳು

ಹರಿತಾಲಿಕಾ

೧. ತಿಥಿ : ಭಾದ್ರಪದ ಶುಕ್ಲ ತೃತೀಯಾ

೨. ವ್ರತ ಮಾಡುವ ಪದ್ಧತಿ : ಮುಂಜಾನೆ ಮಂಗಲಸ್ನಾನ ಮಾಡಿ ಪಾರ್ವತಿ ಮತ್ತು ಅವಳ ಸಖಿಯರ ಮೂರ್ತಿಗಳನ್ನು ತಂದು ಅವುಗಳನ್ನು ಶಿವಲಿಂಗದೊಂದಿಗೆ ಪೂಜಿಸುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಉತ್ತರಪೂಜೆ ಮಾಡಿ ಲಿಂಗ ಮತ್ತು ಮೂರ್ತಿಗಳನ್ನು ವಿಸರ್ಜಿಸುತ್ತಾರೆ.

ಜೇಷ್ಠಾ ಗೌರಿ

೧. ತಿಥಿ : ಭಾದ್ರಪದ ಶುಕ್ಲಾಷ್ಟಮಿ

೨. ವ್ರತ ಮಾಡುವ ಪದ್ಧತಿ

ಅ. ಈ ವ್ರತವು ಮೂರು ದಿನಗಳ ವರೆಗೆ ನಡೆಯುತ್ತದೆ. ಪ್ರಾಂತ್ಯಗಳಿಗನುಸಾರ ಈ ವ್ರತವನ್ನು ಮಾಡುವ ವಿವಿಧ ಪದ್ಧತಿಗಳಿವೆ. ಇದರಲ್ಲಿ ಧಾತುವಿನ (ಲೋಹದ), ಮಣ್ಣಿನ ಪ್ರತಿಮೆಯನ್ನು ಮಾಡಿ ಅಥವಾ ಕಾಗದದ ಮೇಲೆ ಶ್ರೀ ಲಕ್ಷ್ಮೀಯ ಚಿತ್ರವನ್ನು ಬಿಡಿಸಿ, ಮತ್ತೆ ಕೆಲವು ಕಡೆಗಳಲ್ಲಿ ನದಿದಡದಿಂದ ಐದು ಸಣ್ಣ ಕಲ್ಲುಗಳನ್ನು ತಂದು ಅವುಗಳನ್ನು ಗೌರಿ ಎಂದು ಪೂಜಿಸುತ್ತಾರೆ.

ಆ. ಗೌರಿಯ ಸ್ಥಾಪನೆ ಮಾಡಿದ ನಂತರ ಮರುದಿನ ಅವಳ ಪೂಜೆಯನ್ನು ಮಾಡಿ ನೈವೇದ್ಯವನ್ನು ತೋರಿಸುತ್ತಾರೆ.

ಇ. ಮೂರನೆಯ ದಿನ ನದಿಯಲ್ಲಿ ಗೌರಿಯ ವಿಸರ್ಜನೆ ಮಾಡುತ್ತಾರೆ ಮತ್ತು ಹಿಂತಿರುಗಿ ಬರುವಾಗ ನದಿಯಲ್ಲಿನ ಸ್ವಲ್ಪ ಮರಳು/ಮಣ್ಣನ್ನು ಮನೆಗೆ ತಂದು ಮನೆಯೆಲ್ಲ ಹರಡುತ್ತಾರೆ.’ (ಆಧಾರ : ಸನಾತನ ನಿರ್ಮಿತ ಗ್ರಂಥ ‘ಶ್ರೀ ಗಣಪತಿ’)