21 ದೇವಾಲಯಗಳಲ್ಲಿ ಅರ್ಪಿಸಿದ 1 ಸಾವಿರ ಕೆ.ಜಿ. ಚಿನ್ನವನ್ನು ಕರಗಿಸಿ ಬ್ಯಾಂಕಿನಲ್ಲಿಟ್ಟ ತಮಿಳುನಾಡು ಸರಕಾರ!

ಚಿನ್ನದ ಮೇಲೆ ಬಡ್ಡಿ ಸಿಗುತ್ತಿದೆ

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಡಿಎಂಕೆ ಸರಕಾರವು ರಾಜ್ಯದ 21 ದೇವಾಲಯಗಳಲ್ಲಿ ಭಕ್ತರು ಅರ್ಪಿಸಿದ 1 ಸಾವಿರ ಕೆ.ಜಿ.ಗೂ ಹೆಚ್ಚು ಚಿನ್ನವನ್ನು ಕರಗಿಸಿ 24 ಕ್ಯಾರೆಟ್ ಚಿನ್ನದ ಇಟ್ಟಿಗೆಗಳಾಗಿ ಪರಿವರ್ತಿಸಿ ಬ್ಯಾಂಕುಗಳಲ್ಲಿ ಠೇವಣಿ ಇರಿಸಲಾಗಿದೆ ಎಂದು ತಿಳಿಸಿದೆ. ಈ ಹೂಡಿಕೆಯಿಂದ ಸರಕಾರಕ್ಕೆ ವಾರ್ಷಿಕ ಸುಮಾರು 17 ಕೋಟಿ 81 ಲಕ್ಷ ರೂಪಾಯಿ ಬಡ್ಡಿಯ ರೂಪದಲ್ಲಿ ಲಭಿಸುತ್ತಿದೆ.

ರಾಜ್ಯ ಸರಕಾರ ನೀಡಿದ ಮಾಹಿತಿಯ ಪ್ರಕಾರ, ಈ ಎಲ್ಲಾ ಚಿನ್ನವನ್ನು ಮುಂಬಯಿಯ ಸರಕಾರಿ ಟಂಕಸಾಲೆಯಲ್ಲಿ ಕರಗಿಸಲಾಯಿತು ಮತ್ತು ನಂತರ ‘ಗೋಲ್ಡ್ ಇನ್ವೆಸ್ಟ್ಮೆಂಟ್ ಸ್ಕೀಮ್’ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿ ಇರಿಸಲಾಯಿತು. ಈ ಯೋಜನೆಯ ಮೇಲ್ವಿಚಾರಣೆಗಾಗಿ ರಾಜ್ಯದ 3 ವಲಯಗಳಲ್ಲಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ 3 ಸಮಿತಿಗಳನ್ನು ರಚಿಸಲಾಗಿದೆ, ಈ ಸಮಿತಿಗಳು ಚಿನ್ನ ಕರಗಿಸುವ ಮತ್ತು ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ಗಮನಿಸುತ್ತಿವೆ.

ಬೆಳ್ಳಿಯ ವಿಷಯದಲ್ಲೂ ಇದೇ ರೀತಿಯ ಯೋಜನೆ ಜಾರಿಗೊಳಿಸಲಿದೆ

ರಾಜ್ಯ ಸರಕಾರವು ಚಿನ್ನದ ನಂತರ, ದೇವಸ್ಥಾನಗಳಲ್ಲಿ ಬಳಕೆಯಾಗದ ಬೆಳ್ಳಿಯ ವಸ್ತುಗಳನ್ನು ಇದೇ ರೀತಿ ಕರಗಿಸಿ ಶುದ್ಧ ಬೆಳ್ಳಿಯ ಇಟ್ಟಿಗೆಗಳಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸುತ್ತಿದೆ ಎಂದು ಮಾಹಿತಿ ನೀಡಿದೆ. ಇದಕ್ಕಾಗಿ ಸರಕಾರವು ಅನುಮತಿ ನೀಡಿದ ಖಾಸಗಿ ಬೆಳ್ಳಿ ಕರಗಿಸುವ ಸಂಸ್ಥೆಗಳ ಸಹಾಯವನ್ನು ಪಡೆಯಲಾಗುತ್ತಿದೆ.

ದೇವಸ್ಥಾನಗಳ ಆಸ್ತಿಯ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಯೋಜನೆಗಳಿವೆ ಎಂದು ಹೇಳಿಕೆ

ಹಿಂದೂ ಧಾರ್ಮಿಕ ಮತ್ತು ದತ್ತಿ ದೇಣಿಗೆ ಇಲಾಖೆಯು ವಿಧಾನಸಭೆಯಲ್ಲಿ ಮಂಡಿಸಿದ ನೀತಿ ನಿರೂಪಣೆಯಲ್ಲಿ, ಈ ಯೋಜನೆಯು ಕೇವಲ ದೇವಸ್ಥಾನಗಳಿಗೆ ಆರ್ಥಿಕ ಲಾಭವನ್ನು ನೀಡುವುದಲ್ಲದೆ, ಭಕ್ತರು ನೀಡಿದ ಕಾಣಿಕೆಗಳ ಸದ್ಬಳಕೆಯನ್ನು ಸಹ ಖಚಿತಪಡಿಸುತ್ತದೆ ಎಂದು ಹೇಳಿದೆ. ದೇವಸ್ಥಾನಗಳ ಆಸ್ತಿಯನ್ನು ರಕ್ಷಿಸಲು ಮತ್ತು ಅವುಗಳ ಅಭಿವೃದ್ಧಿಗಾಗಿ ಬಳಸುವ ದೃಷ್ಟಿಯಿಂದ ಈ ಕ್ರಮವು ಅರ್ಥಪೂರ್ಣವಾಗಿದೆ ಎಂದು ಪರಿಗಣಿಸಲಾಗಿದೆ.

ಸಂಪಾದಕೀಯ ನಿಲುವು

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರಕಾರದ ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸುತ್ತಾರೆ. ಅಂತಹವರಿಗೆ ಹಿಂದೂ ದೇವಸ್ಥಾನಗಳಲ್ಲಿ ಭಕ್ತರು ಅರ್ಪಿಸಿದ ಚಿನ್ನವನ್ನು ಮುಟ್ಟಲು ಯಾವ ಅಧಿಕಾರವಿದೆಯೆಂದು ತಮಿಳುನಾಡಿನ ಹಿಂದೂಗಳು ಡಿಎಂಕೆ ಸರಕಾರವನ್ನು ಪ್ರಶ್ನಿಸುವ ಆವಶ್ಯಕತೆಯಿದೆ!