|
ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಬಾಗಪತ ಜಿಲ್ಲೆಯ ತಿಲವಾಡ ಗ್ರಾಮದಲ್ಲಿ ನಡೆಸಿದ ಉತ್ಖನನದ ಸಮಯದಲ್ಲಿ ಸುಮಾರು ೪ ಸಾವಿರ ವರ್ಷಗಳಷ್ಟು ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ೪ ತಿಂಗಳ ಕಠಿಣ ಪರಿಶ್ರಮದ ನಂತರ ಪುರಾತತ್ವ ಇಲಾಖೆಗೆ ಈ ಯಶಸ್ಸು ದೊರೆತಿದೆ. ಪತ್ತೆಯಾದ ವಸ್ತುಗಳಲ್ಲಿ ಮಣ್ಣಿನ ಪಾತ್ರೆಗಳು, ತಾಮ್ರದ ವಸ್ತುಗಳು, ಇಟ್ಟಿಗೆಗಳು ಮತ್ತು ಮಣಿಗಳು ಸೇರಿವೆ. ಬಾಗಪತವನ್ನು ಮಹಾಭಾರತದ ಪಾಂಡವರು ಸ್ಥಾಪಿಸಿದ ೫ ಗ್ರಾಮಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಬಾಗಪತ ಗ್ರಾಮದ ಹೊರತಾಗಿ ಸೋನಿಪತ, ಪಾಣಿಪತ, ಇಂದ್ರಪ್ರಸ್ಥ ಮತ್ತು ತಲಪತಗಳ ಉಲ್ಲೇಖ ಮಹಾಭಾರತದಲ್ಲಿದೆ. ಆದ್ದರಿಂದ ಬಾಗಪತ ತಿಲವಾಡದಲ್ಲಿ ನಡೆಸಲಾದ ಉತ್ಖನನಕ್ಕೆ ವಿಶೇಷ ಮಹತ್ವವಿದೆ.
೧. ಬಾಗಪತ ತಿಲವಾಡ ಗ್ರಾಮವು ಹರಿಯಾಣದ ಗಡಿಯಲ್ಲಿದೆ ಮತ್ತು ದೇಶದ ರಾಜಧಾನಿ ದೆಹಲಿಯಿಂದ ಸುಮಾರು ೮೫ ಕಿಲೋಮೀಟರ್ ದೂರದಲ್ಲಿದೆ. ತಿಲವಾರ ಗ್ರಾಮದಲ್ಲಿ ಉತ್ಖನನ ಕಾರ್ಯ ಡಿಸೆಂಬರ್ ೨೦೨೪ ರಲ್ಲಿ ಪ್ರಾರಂಭವಾಯಿತು.
೨. ಉತ್ಖನನದಲ್ಲಿ ಪತ್ತೆಯಾದ ಅವಶೇಷಗಳನ್ನು ಮೀರತ್ಗೆ ಕಳುಹಿಸಲಾಗುವುದು. ದೇಶದ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞರು ಇದರ ಮೇಲೆ ಸಂಶೋಧನೆ ನಡೆಸಲಿದ್ದಾರೆ. ಇಲ್ಲಿಂದ ಈ ಅವಶೇಷಗಳನ್ನು ಸಂಗ್ರಹಿಸುವ ಮೊದಲು ಪುರಾತತ್ವ ಇಲಾಖೆಯು ಅದರ ಪ್ರಾಥಮಿಕ ಪರಿಶೀಲನೆ ನಡೆಸಿತ್ತು.
೩. ಉತ್ಖನನಕ್ಕೂ ಮುಂಚೆಯೇ ಗ್ರಾಮಸ್ಥರಿಗೆ ಇಲ್ಲಿ ಅವಶೇಷಗಳು ಸಿಗಲು ಪ್ರಾರಂಭಿಸಿದ್ದವು. ಅವರು ಈ ಅವಶೇಷಗಳನ್ನು ಪುರಾತತ್ವ ಇಲಾಖೆಗೆ ನೀಡಿದ್ದರು. ಇದರಿಂದ ಪುರಾತತ್ವ ಇಲಾಖೆಯ ಅಧಿಕಾರಿಗಳು ಇಲ್ಲಿ ಉತ್ಖನನ ಮಾಡಲು ಅನುಮತಿ ಕೋರಿದ್ದರು. ಈ ಅನುಮತಿ ೨೦೨೩ ರಲ್ಲಿ ದೊರೆತಿದೆ.
೪. ಬಾಗಪತ ತಿಲವಾಡ ಗ್ರಾಮವು ಸಿನೌಲಿಯ ಬಳಿ ಇದೆ. ೨೦೦೫ ರಲ್ಲಿ ಡಾ. ಡಿ.ಬಿ. ಶರ್ಮಾ ಅವರು ಸಿನೌಲಿಯಲ್ಲಿ ಉತ್ಖನನವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಪುರಾತತ್ವ ಇಲಾಖೆಗೆ ೧೦೦ ಕ್ಕೂ ಹೆಚ್ಚು ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಅವು ೩ ಸಾವಿರ ವರ್ಷಗಳಿಗಿಂತಲೂ ಹಳೆಯದಾಗಿದ್ದವು.
೫. ಸಿನೌಲಿಯಲ್ಲಿ ಕೇವಲ ಅಸ್ಥಿಪಂಜರಗಳು ಮಾತ್ರವಲ್ಲದೆ, ರಥಗಳು, ಕಿರೀಟಗಳು, ಪಾತ್ರೆಗಳು ಮತ್ತು ಶಸ್ತ್ರಾಸ್ತ್ರಗಳು ಸಹ ಪತ್ತೆಯಾಗಿದ್ದವು. ಅಲ್ಲಿ ಪತ್ತೆಯಾದ ರಥದಿಂದಾಗಿ ಭಾರತದಲ್ಲಿ ೪ ಸಾವಿರ ವರ್ಷಗಳ ಹಿಂದೆ ಯುದ್ಧ ತಂತ್ರಜ್ಞಾನವು ಮುಂದುವರಿದಿತ್ತು ಎಂದು ಸಾಬೀತಾಗಿತ್ತು.