ಬಿಹಾರದ ಶಾಲೆಗಳಲ್ಲಿ ರಕ್ಷಾಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ರಜೆಗೆ ಕತ್ತರಿ !

ಪಾಟಲೀಪುತ್ರ (ಬಿಹಾರ) – ಬಿಹಾರ ಸರಕಾರವು ಸರಕಾರಿ ಶಾಲೆಗಳಿಗೆ ನೀಡಲಾಗುತ್ತಿದ್ದ ರಜೆಗಳಲ್ಲಿ ಕಡಿತಗೊಳಿಸಿದೆ. ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಕೆ. ಪಾಠಕ ಇವರು ಹೊರಡಿಸಿರುವ ಆದೇಶದಲ್ಲಿ ರಕ್ಷಾಬಂಧನ, ಹರಿತಾಲಿಕಾ, ಜಿವುತಿಯಾ, ವಿಶ್ವಕರ್ಮ ಪೂಜೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಗುರು ನಾನಕ್ ಜಯಂತಿಗಳಂದು ರಜೆ ಇರುವುದಿಲ್ಲ ಎಂದು ತಿಳಿಸಿದೆ. ಇದನ್ನು ಭಾಜಪ ಟೀಕಿಸಿದೆ.

1. ಬಿಹಾರದಲ್ಲಿ, ಆಗಸ್ಟ್ 28 ರಿಂದ ಡಿಸೆಂಬರ್ 31 ರವರೆಗೆ ಸರಕಾರಿ ಶಾಲೆಗಳಿಗೆ ಸುಮಾರು 23 ರಜೆಗಳಿದ್ದವು, ಅವುಗಳನ್ನು 11 ಕ್ಕೆ ಇಳಿಸಲಾಗಿದೆ. ಇಲ್ಲಿಯವರೆಗೆ ದೀಪಾವಳಿಯಿಂದ ಛಠ್ ಪೂಜೆಯವರೆಗೆ ಸತತ ರಜೆಗಳಿದ್ದವು. ಈಗ ದೀಪಾವಳಿ, ಚಿತ್ರಗುಪ್ತ ಪೂಜೆ (ಸಹೋದರ ತದಿಗೆ) ಮತ್ತು ಛಠಗಾಗಿ 2 ದಿನಗಳು ಮಾತ್ರ ರಜೆ ಇರಲಿದೆ.

2. ಶಿಕ್ಷಣ ಇಲಾಖೆಯ ಹೇಳಿಕೆಯಂತೆ, ಹಕ್ಕು ಕಾಯಿದೆ 2009 ರ ಅಡಿಯಲ್ಲಿ ಪ್ರಾಥಮಿಕ ಶಾಲೆಗಳು (ಇಯತ್ತೆ 1 ರಿಂದ 5 ವರೆಗೆ) ಕನಿಷ್ಠ 200 ದಿನಗಳು ಮತ್ತು ಪ್ರೌಢ ಶಾಲೆಗಳು (ಇಯತ್ತೆ 6 ರಿಂದ 8 ವರೆಗೆ) ಕನಿಷ್ಠ 220 ದಿನಗಳವರೆಗೆ ಕಾರ್ಯನಿರ್ವಹಿಸುವುದು ಆವಶ್ಯಕವಿದೆ.

3. ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಮಾತನಾಡಿ, ಚುನಾವಣೆ, ಪರೀಕ್ಷೆ, ಹಬ್ಬಗಳು, ಪ್ರಕೃತಿ ವಿಕೋಪಗಳು ಮುಂತಾದವುಗಳಿಂದ ಶಾಲೆಯ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತವೆ. ಹಬ್ಬಗಳ ನಿಮಿತ್ತದಿಂದ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯಲ್ಲಿ ಏಕರೂಪತೆಯೂ ಇಲ್ಲ. ಕೆಲವು ಹಬ್ಬಗಳ ಸಂದರ್ಭದಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆಗಳು ತೆರೆದಿದ್ದರೆ ಇನ್ನು ಕೆಲವೆಡೆ ಮುಚ್ಚಲಾಗುತ್ತದೆ. ಹಾಗಾಗಿ ಶಿಕ್ಷಣ ಇಲಾಖೆ ಈಗ ಮಾಡಿರುವ ಬದಲಾವಣೆ 2023ರ ಉಳಿದ ಅವಧಿಗೆ ಕೇವಲ ಶಾಲೆಗಳ ಕಾರ್ಯನಿರ್ವಹಣೆಯಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳಲು ಮಾತ್ರ ಜಾರಿಗೊಳಿಸಲಾಗಿದೆ.

ಬಿಹಾರದಲ್ಲಿ ಷರಿಯತ ಕೂಡ ಜಾರಿಯಾಗಬಹುದು ! – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇವರ ಟೀಕೆ

ಭಾಜಪ ಸಂಸದ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇವರು ಮಾತನಾಡಿ ಬಿಹಾರ ಸರಕಾರವು ನವರಾತ್ರಿಯ ದುರ್ಗಾ ಪೂಜೆ, ದೀಪಾವಳಿ ಮತ್ತು ಛಠ ಪೂಜೆಯ ರಜೆಗಳನ್ನು ಕಡಿಮೆಗೊಳಿಸಿದೆ. ನಾಳೆ ಬಿಹಾರದಲ್ಲಿ ಷರಿಯಾ ಕಾನೂನು ಕೂಡ ಜಾರಿಯಾಗಬಹುದು, ಹಾಗೆಯೇ ಹಿಂದೂ ಹಬ್ಬಗಳನ್ನು ಆಚರಿಸುವುದನ್ನು ಕೂಡ ನಿಷೇಧಿಸುವ ಸಾಧ್ಯತೆಯಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ! – ಪ್ರಾಥಮಿಕ ಶಿಕ್ಷಕರ ಸಂಘ

ಶಿಕ್ಷಣ ಇಲಾಖೆಯ ಈ ಆದೇಶದ ನಂತರ ಶಿಕ್ಷಕರೂ ಆಕ್ರೋಶಗೊಂಡಿದ್ದಾರೆ. ಟಿ.ಇ.ಟಿ. ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಸಂಚಾಲಕ ರಾಜು ಸಿಂಹ ಇವರು ಮಾತನಾಡಿ, ಎಲ್ಲ ನಿಯಮ ಮತ್ತು ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ಇಂತಹ ಸೂಚನೆಗಳಿಂದ ಶಿಕ್ಷಕರಿಗೆ ಕಿರುಕುಳ ನೀಡಲಾಗುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಲಾಗುವುದು. ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ, ಶಿಕ್ಷಕರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವರು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಿಹಾರ ಸರಕಾರ ಇತರೆ ಧರ್ಮಗಳ ರಜಾದಿನಗಳನ್ನು ಏಕೆ ರದ್ದುಗೊಳಿಸಿಲ್ಲ ? ಇದರಿಂದ ಬಿಹಾರದ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಇವರ ಯುತಿ ಸರಕಾರ ಮುಸ್ಲಿಮರು ಮತ್ತು ಕ್ರೈಸ್ತರನ್ನು ನೋಯಿಸುವುದನ್ನು ತಪ್ಪಿಸಿ, ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !