ಕೆಲವು ದೇವಿಯರ ಉಪಾಸನೆಯ ವೈಶಿಷ್ಟ್ಯಗಳು

೧. ಕುಮಾರಿ : ಇವಳ ಪೂಜೆಯಲ್ಲಿ ಹೂವು, ಹೂವಿನ ಮಾಲೆ, ಹುಲ್ಲು, ಎಲೆ, ಮರಗಳ ತೊಗಟೆ, ಹತ್ತಿಯ ನೂಲು, ಭಂಡಾರ (ಅರಿಶಿನ), ಸಿಂಧೂರ, ಕುಂಕುಮ ಇತ್ಯಾದಿಗಳಿಗೆ ಮಹತ್ವವಿರುತ್ತದೆ. ಚಿಕ್ಕಮಕ್ಕಳಿಗೆ ಇಷ್ಟವಾಗುವಂತಹ ಸಂಗತಿಗಳನ್ನು ಈ ದೇವಿಗೆ ಅರ್ಪಿಸುತ್ತಾರೆ.

೨. ರೇಣುಕಾ, ಅಂಬಾಬಾಯಿ ಮತ್ತು ತುಳಜಾಭವಾನಿ : ವಿವಾಹದಂತಹ ಯಾವುದಾದರೊಂದು ವಿಧಿಯ ನಂತರ ಈ ಕುಲದೇವತೆ ಇರುವವರ ಮನೆಯಲ್ಲಿ ದೇವಿಯ ಗೊಂದಲವನ್ನು (ಒಂದು ಕುಲಾಚಾರ) ಹಾಕುತ್ತಾರೆ. ಕೆಲವರ ಮನೆಯಲ್ಲಿ ವಿವಾಹದಂತಹ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದ್ದರಿಂದ ಸತ್ಯನಾರಾಯಣನ ಪೂಜೆ ಮಾಡುತ್ತಾರೆ ಅಥವಾ ಕೋಕಣಸ್ಥ ಬ್ರಾಹ್ಮಣರಲ್ಲಿ ದೇವಿಗೆ ಹಾಲು-ಮೊಸರನ್ನು ಅರ್ಪಿಸುತ್ತಾರೆ, ಇದೂ ಹಾಗೇ ಆಗಿದೆ.

೩. ಅಂಬಾಜಿ : ಗುಜರಾತಿನ ಅಂಬಾಜಿಯ (ಅಂಬಾಮಾತೆಯ) ದೇವಸ್ಥಾನದಲ್ಲಿ ದೀಪಕ್ಕಾಗಿ ಎಣ್ಣೆ ಬಳಸುವುದಿಲ್ಲ. ಅಲ್ಲಿ ತುಪ್ಪದ ನಂದಾದೀಪವು (ಸತತವಾಗಿ) ಉರಿಯುತ್ತಿರುತ್ತದೆ.

೪. ತ್ರಿಪುರಸುಂದರಿ : ‘ಇವಳು ತಾಂತ್ರಿಕ ದೇವತೆಯಾಗಿದ್ದಾಳೆ. ಇವಳ ಹೆಸರಿನಲ್ಲಿ ಒಂದು ಪಂಥವಿದೆ. ಈ ಪಂಥಾನುಸಾರ ದೀಕ್ಷೆಯನ್ನು ತೆಗೆದುಕೊಂಡ ನಂತರವೇ ಇವಳ ಉಪಾಸನೆಯನ್ನು ಮಾಡಬಹುದು ಎಂದು ಈ ಪಂಥದ ಅಭಿಪ್ರಾಯವಿದೆ.

೫. ತ್ರಿಪುರಭೈರವಿ : ಇವಳು ಓರ್ವ ತಾಂತ್ರಿಕ ದೇವತೆಯಾಗಿದ್ದಾಳೆ. ಇವಳು ‘ಧರ್ಮ, ಅರ್ಥ ಮತ್ತು ಕಾಮ ಈ ಮೂರು ಪುರುಷಾರ್ಥಗಳನ್ನು ಪ್ರಾಪ್ತಮಾಡಿಕೊಡುವ ದೇವತೆಯಾಗಿದ್ದಾಳೆ’, ಎಂದು ಮನ್ನಿಸಲಾಗಿದೆ. ಈ ದೇವಿಯು ಶಿವಲಿಂಗವನ್ನು ಭೇದಿಸಿ ಹೊರಗೆ ಬಂದಿದ್ದಾಳೆ. ಕಾಲಿಕಾ ಪುರಾಣದಲ್ಲಿ ಇವಳ ವರ್ಣನೆಯನ್ನು ನೀಡಿದ್ದಾರೆ. ಎಲ್ಲಾ ರೂಪಗಳಲ್ಲಿ ಭೈರವಿಯನ್ನು ತ್ರಿಪುರಳ ಪ್ರಭಾವಿ ರೂಪವೆಂದು ಭಾವಿಸಲಾಗಿದೆ. ಅವಳ ಪೂಜೆಯನ್ನು ಎಡಗೈಯಿಂದ ಮಾಡುತ್ತಾರೆ. ಅವಳಿಗೆ ಕೆಂಪು ಬಣ್ಣದ ರಕ್ತವರ್ಣ ಮದ್ಯ, ಕೆಂಪು ಹೂವು, ಕೆಂಪು ವಸ್ತ್ರ ಮತ್ತು ಸಿಂಧೂರ ಈ ವಸ್ತುಗಳು ಅವಳಿಗೆ ಪ್ರಿಯವಾಗಿವೆ.

೬. ಮಹಿಷಾಸುರಮರ್ದಿನಿ : ದೇವಿಯ ಶಕ್ತಿಯನ್ನು ಸಹಿಸುವ ಕ್ಷಮತೆಯಿಲ್ಲದಿದ್ದಲ್ಲಿ ಮೊದಲು ಶಾಂತಾದುರ್ಗೆಯನ್ನು ಆವಾಹನೆ ಮಾಡುತ್ತಾರೆ, ನಂತರ ದುರ್ಗಾದೇವಿಯನ್ನು ಮತ್ತು ಕೊನೆಯಲ್ಲಿ ಮಹಿಷಾಸುರಮರ್ದಿನಿಯನ್ನು ಆವಾಹನೆ ಮಾಡುತ್ತಾರೆ. ಇದರಿಂದ ದೇವಿಯ ಶಕ್ತಿಯನ್ನು ಸಹಿಸಲು ಹಂತಹಂತವಾಗಿ ಸಾಧ್ಯವಾಗಿ ಮಹಿಷಾಸುರಮರ್ದಿನಿಯ ಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ.

೭. ಕಾಳಿ : ‘ಬಂಗಾಲದಲ್ಲಿ ಕಾಳಿಯ ಉಪಾಸನೆಯು ಪ್ರಾಚೀನ ಕಾಲದಿಂದಲೂ ನಡೆದುಬಂದಿದೆ. ಪೂರ್ಣಾನಂದರ ‘ಶ್ಯಾಮಾ ರಹಸ್ಯ’ ಮತ್ತು ಕೃಷ್ಣಾನಂದರ ‘ತಂತ್ರಸಾರ’ ಇವೆರಡೂ ಗ್ರಂಥಗಳು ಸುಪ್ರಸಿದ್ಧವಾಗಿವೆ. ಈ ಪೂಜೆಯಲ್ಲಿ ಸುರಾ (ಮದ್ಯ) ಅತ್ಯಾವಶ್ಯಕವೆಂದು ಪರಿಗಣಿಸಲಾಗಿದೆ ಮಂತ್ರದಿಂದ ಶುದ್ಧಮಾಡಿ ಅದನ್ನು ಸೇವಿಸಲಾಗುತ್ತದೆ. ಕಾಳೀಪೂಜೆಗಾಗಿ ಉಪಯೋಗಿಸಲಾಗುವ ಕಾಳೀಯಂತ್ರ ತ್ರಿಕೋನ, ಪಂಚಕೋನ ಅಥವಾ ನವಕೋನವಿರಬೇಕು’ ಹೀಗೆ ಕಾಳಿಕೋಪನಿಷತ್ತಿನಲ್ಲಿ ಹೇಳಲಾಗಿದೆ. ಕೆಲವು ಬಾರಿ ಹದಿನೈದು ಕೋನಗಳ ಕಾಳಿಯಂತ್ರವನ್ನು ಮಾಡುತ್ತಾರೆ. ಕಾಳೀಪೂಜೆಯು ಕಾರ್ತಿಕ ಕೃಷ್ಣ ಪಕ್ಷದಲ್ಲಿ, ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಫಲದಾಯಕವೆಂದು ಹೇಳಲಾಗಿದೆ. ಈ ಪೂಜೆಯಲ್ಲಿ ಕಾಳೀಸ್ತೋತ್ರ, ಕವಚ, ಶತನಾಮ ಮತ್ತು ಸಹಸ್ರನಾಮ ಇವುಗಳ ಕಂಠಪಾಠ ಮಾಡುವುದು ಒಳ್ಳೆಯದಾಗಿದೆ.’

ಕೆಂಪು ಬಣ್ಣದ ವಸ್ತ್ರ ಮತ್ತು ಅದರ ತುಂಡುಗಳನ್ನು ಭಕ್ತರಿಗೆ ಪ್ರಸಾದವೆಂದು ನೀಡುತ್ತಾರೆ.

೮. ಚಾಮುಂಡಾ : ಎಂಟು ಗುಪ್ತತರ ಯೋಗಿನಿಯರು ಮುಖ್ಯ ದೇವತೆಯ ನಿಯಂತ್ರಣದಲ್ಲಿ ಚಕ್ರದಲ್ಲಿ ವಿಶ್ವದ ಸಂಚಲನೆ, ವಸ್ತುಗಳ ಉತ್ಸರ್ಗ, ಪರಿಣಾಮ ಇತ್ಯಾದಿ ಕಾರ್ಯಗಳನ್ನು ಮಾಡುತ್ತಾರೆ. ‘ಸಂಧಿಪೂಜೆ’ ಎಂಬ ಹೆಸರಿನ ಒಂದು ವಿಶೇಷ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಈ ತಿಥಿಗಳ ಸಂಧಿಕಾಲದಲ್ಲಿ ಮಾಡುತ್ತಾರೆ. ಈ ಪೂಜೆಯು ದುರ್ಗೆಯ ಚಾಮುಂಡಾ ಎಂಬ ರೂಪದ್ದಾಗಿರುತ್ತದೆ. ಈ ರಾತ್ರಿಯಲ್ಲಿ ಸಂಕೀರ್ತನೆ, ಆಟ ಇವುಗಳ ಮೂಲಕ ಜಾಗರಣೆ ಮಾಡುತ್ತಾರೆ.

(ಇನ್ನಷ್ಟು ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ : ಶಕ್ತಿಯ ಪ್ರಾಸ್ತಾವಿಕ ವಿವೇಚನೆ)