ಶ್ರೀಕೃಷ್ಣನು ಪೂರ್ಣಾವತಾರ ಆಗಿರುವುದರ ಉದಾಹರಣೆಗಳು !

೧. ‘ಈ ಶ್ರೀಕೃಷ್ಣಸ್ವರೂಪಿ ಪರಮಾತ್ಮನು ಬಾಲ್ಯದಲ್ಲಿಯೇ ಪೂತನಿಯ ಸ್ತನಪಾನ ಮಾಡಿ ಅವಳ ಪ್ರಾಣ ಹರಣ ಮಾಡಿದನು.

೨. ಮೂರನೇ ತಿಂಗಳಲ್ಲಿ ಚರಣಾಘಾತದಿಂದ ಶಕಟಾಸುರನನ್ನು ನಷ್ಟಗೊಳಿಸಿದನು.

೩. ತೆವಳುತ್ತಾ ಮುಂದೆ ಹೋಗಿ ಯಮಲಾರ್ಜುನ ವೃಕ್ಷಗಳ ನಡುವೆ ನುಗ್ಗಿ ವೃಕ್ಷಗಳನ್ನು ಕಿತ್ತು ಹಾಕಿದನು.

೪. ಕಾಲಿಯಾ ನಾಗನ ವಿಷದಿಂದ ದೂಷಿತವಾಗಿರುವ ಯಮುನಾಜಲವನ್ನು ಕುಡಿದು ಪ್ರಾಣ ಕಳೆದುಕೊಂಡಿದ್ದ ಗೋಪಾಲಕರನ್ನು, ಗೋವು-ಕರುಗಳನ್ನು ತನ್ನ ದೃಷ್ಟಿಯಿಂದ ಕೃಪೆಯ ಅಮೃತವೃಷ್ಟಿ ಮಾಡಿ ಜೀವಂತಗೊಳಿಸಿದನು.

೫. ವಿಷಮಯವಾಗಿರುವ ಯಮುನೆಯ ತಳದಲ್ಲಿ ಸ್ವಚ್ಛಂದವಾಗಿ ಜಲವಿಹಾರ ಮಾಡಿ ನಿರ್ವಿಷಗೊಳಿಸಿದನು.

೬. ಯಮುನಾತೀರದಲ್ಲಿ ಮಲಗಿರುವ ವ್ರಜವಾಸಿ ಗೋಪಾಲಕರನ್ನು ಕಾಡ್ಗಿಚ್ಚಿನಿಂದ ರಕ್ಷಿಸಿದನು.

೭. ಮಾತೆ ಯಶೋಧೆ ಕೃಷ್ಣನನ್ನು ಗೂಟಕ್ಕೆ ಕಟ್ಟಿಹಾಕಲು ಎಷ್ಟು ಹಗ್ಗವನ್ನು ತಂದರೂ ಅವೆಲ್ಲವೂ ಎರಡು ಬೆರಳಿನಷ್ಟು ಕಡಿಮೆಯಾಗುತ್ತಿದ್ದವು.

. ತನ್ನ ಆಕಳಿಸಿದ ಬಾಯೊಳಗೆ ೧೪ ಲೋಕ (ಸ್ವರ್ಗ-ಪಾತಾಳಾದಿ)ಗಳನ್ನು ತೋರಿಸಿ ಯಶೋದೆಯನ್ನು ವಿಸ್ಮಿತಗೊಳಿಸಿದನು.

೯. ನಂದ ಗೋಪಾಲನನ್ನು ಹೆಬ್ಬಾವಿನ ಬಂಧನದಿಂದ ಮತ್ತು ವರುಣನ ಪಾಶದಿಂದ ಮುಕ್ತಗೊಳಿಸಿದನು.

೧೦. ವ್ಯಾಮಾಸುರನು ಗೋಪಬಾಲೆಯರನ್ನು ಗಿರಿಗುಹೆಯಲ್ಲಿ ಬಂಧಿಸಿದಾಗ ಅದರಿಂದ ಅವರನ್ನು ಮುಕ್ತಗೊಳಿಸಿದನು.

೧೧. ತನ್ನ ೭ ನೇ ವಯಸ್ಸಿನಲ್ಲಿ ಘೋರವಾದ ಪರ್ಜನ್ಯ ವೃಷ್ಟಿಯಿಂದ ವ್ರಜವಾಸಿಗಳಾದ ಗೋಪಸಮಾಜವನ್ನು ಮತ್ತು ಅವರ ಪಶುಧನವನ್ನು ರಕ್ಷಣೆ ಮಾಡಲು ೭ ದಿನಗಳ ವರೆಗೆ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಶಿಲಿಂಧ್ರಪುಷ್ಪದ ಹಾಗೆ ನಿರಾಯಾಸವಾಗಿ ಎತ್ತಿಹಿಡಿದನು.

೧೨. ಈ ಬಾಲ್ಯಾವಸ್ಥೆಯಲ್ಲಿಯೆ ಬೆಳದಿಂಗಳ ರಾತ್ರಿ ಗೋಪಿಯರ ಜೊತೆಗೆ ರಾಸಲೀಲೆ ನಡೆಯುತ್ತಿರುವಾಗ ಕುಬೇರದೂತ ಶಂಕಚೂಡನು ಗೋಪಿಯರನ್ನು ಅಪಹರಿಸುವ ಧೈರ್ಯ ಮಾಡಿದಾಗ ಅವನ ರುಂಡವನ್ನು ಹಾರಿಸಿದನು.

೧೩. ಇದರ ಹೊರತು ಪ್ರಲಂಬಾಸುರ, ಧೇನುಕಾಸುರ, ಬಕಾಸುರ, ಕೇಶಿ, ಅರಿಷ್ಟಾಸುರ ಮುಂತಾದ ದೈತ್ಯರನ್ನು ಬಾಲ್ಯಾದಲ್ಲಿಯೆ ಸಂಹಾರ ಮಾಡಿದನು.

೧೪. ಮಥುರೆಗೆ ಹೋಗಿ ಚಾಣೂರ, ಮುಷ್ಟಿಕ, ಕವಲ್ಯಾಪೀಡ ಆನೆ ಮತ್ತು ಮಾಮಾ ಕಂಸನನ್ನು ವಧಿಸಿದನು.

೧೫. ಮುಂದೆ ತಾರುಣ್ಯದಲ್ಲಿ ಕಾಲಯವನ, ಭೌಮಾಸುರ, ಮಿಥ್ಯಾ ವಾಸುದೇವ, ಶಾಲ್ವ, ದಿವಿದವಾನರ, ಬಲ್ವಲ, ದಂತವಸ್ತ್ರ, ನಗ್ನಜಿತ ರಾಜನ ೭ ಗೂಳಿಗಳನ್ನು, ಶಂಬರಾಸುರ, ವಿದುರಥ ಮುಂತಾದ ದುಷ್ಟರನ್ನು ಸಂಹಾರ ಮಾಡಿ ಅವರಿಗೆ ಉತ್ತಮವಾದ ಗತಿಯನ್ನು ನೀಡಿದನು.

೧೬. ಗೋಕುಲದ ಪ್ರಿಯ ಗೋಪ-ಗೋಪಿಯರು ಸಾಧನಾಹೀನ ಪಾಮರರಾಗಿದ್ದರೂ ಅವರನ್ನು ಪ್ರೇಮಿಸಿ ಕೊನೆಗೆ ವೈಕುಂಠವಾಸದಲ್ಲಿ ಉತ್ತಮವಾದ ಗತಿಯನ್ನು ನೀಡಿದನು.

೧೭. ಅರ್ಜುನನಿಗೆ ಭಗವದ್ಗೀತೆಯನ್ನು ಹೇಳಿದನು.

ಶ್ರೀಕೃಷ್ಣನ ಎಲ್ಲ ಉಲ್ಲೇಖಿತ ಹಾಗೂ ಅನುಲ್ಲೇಖಿತ ಅಗಮ್ಯ ಲೀಲೆಗಳ ಸಂಗತಿಗಳು ಅವನನ್ನು ಪೂರ್ಣಾವತಾರವೆಂದು ಒಪ್ಪಿಕೊಂಡರೆ ಮಾತ್ರ ಅದು ಅನ್ವಯವಾಗುತ್ತದೆ.’

– ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ನವೆಂಬರ ೨೦೧೦)

ಪೂರ್ಣಾವತಾರ ಶ್ರೀಕೃಷ್ಣನ ಪೂರ್ಣ ಚರಿತ್ರೆ ತಿಳಿಯಬೇಕಾದರೆ ಮಹಾಭಾರತ, ಭಾಗವತ ಹಾಗೂ ಹರಿವಂಶ ಈ ಮೂರೂ ಗ್ರಂಥಗಳ ಅಧ್ಯಯನ ಮಾಡಬೇಕಾಗುತ್ತದೆ !

ಗುರುದೇವ ಡಾ. ಕಾಟೇಸ್ವಾಮೀಜಿ

‘ಶ್ರೀಕೃಷ್ಣ ಪರಮಾತ್ಮನ ಚರಿತ್ರೆಯು ಮಹಾಭಾರತದಲ್ಲಿದೆ. ಭಾಗವತದಲ್ಲಿದೆ ಹಾಗೂ ಹರಿವಂಶದಲ್ಲಿದೆ. ಈ ಮೂರೂ ಗ್ರಂಥಗಳ ಅಧ್ಯಯನವಾಗದೇ ಪೂರ್ಣಾವತಾರನಾದ ಶ್ರೀಕೃಷ್ಣನ ಸಂಪೂರ್ಣ ಚರಿತ್ರೆ ತಿಳಿಯಲಿಕ್ಕಿಲ್ಲ. ಮಹಾಭಾರತದ ಪಾರಾಯಣ ಮಾಡುವ ಪರಂಪರೆಯಿದೆ. ಹರಿವಂಶವನ್ನು ಓದದೆ ಪಾರಾಯಣ ಪೂರ್ಣವಾಗುವುದಿಲ್ಲ. ಮಹಾಭಾರತದ ೧ ಲಕ್ಷ ಶ್ಲೋಕಗಳು ಮತ್ತು ಹರಿವಂಶದ ೨೫ ಸಾವಿರ ಶ್ಲೋಕ ಇವೆರಡೂ ಒಟ್ಟಿಗೆ ೧ ಲಕ್ಷದ ೨೫ ಸಾವಿರ ಶ್ಲೋಕಗಳ ಪಾರಾಯಣವಾಗುತ್ತದೆ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||

– ಶ್ರೀಮದ್ಭಗವದ್ಗೀತಾ, ಅಧ್ಯಾಯ ೪, ಶ್ಲೋಕ ೮

ಅರ್ಥ : ಹೇ ಭರತಕುಲೋತ್ಪನ್ನ ಅರ್ಜುನಾ, ಯಾವಾಗ ಧರ್ಮಕ್ಕೆ ಗ್ಲಾನಿಯಾಗುತ್ತದೆಯೋ ಹಾಗೂ ಅಧರ್ಮ ಬೆಳೆಯುವುದೊ, ಆಗ ನಾನು ಸ್ವತಃ ಜನ್ಮ ತಾಳುತ್ತೇನೆ.

‘ಸಾಧುಗಳ, ಅಂದರೆ ಸಜ್ಜನರ (ಶಾಸ್ತ್ರಪ್ರಮಾಣವೆಂದು ಒಪ್ಪಿಕೊಂಡು ವಿಧಿ-ನಿಷೇಧವನ್ನು ಕಠೋರವಾಗಿ ಪಾಲಿಸುವವರು ಸಾಧುಗಳು ಹಾಗೂ ಶಾಸ್ತ್ರದ ಮೇರೆಯನ್ನು ಮೀರುವವರು ಅಸಾಧು ಅಂದರೆ ಅವರು ದುಷ್ಟರು) ರಕ್ಷಣೆ, ದುಷ್ಟರ ಸಂಹಾರ ಹಾಗೂ ಧರ್ಮಸಂಸ್ಥಾಪನೆಯೆಂದರೆ ‘ವರ್ಣಧರ್ಮ’ ಸ್ಥಾಪನೆಗಾಗಿ ಭಗವಾನ ತನ್ನ ಮಾಯೆಯ ಆಶ್ರಯದಿಂದ ಅವತಾರವನ್ನು ತಾಳುತ್ತಾನೆ.

ಶ್ರೀಕೃಷ್ಣನು ಅವತಾರ ಕಾರ್ಯವನ್ನು ಪೂರ್ಣಗೊಳಿಸಿದನು. ದುಷ್ಟರನ್ನು ಸಂಹರಿಸಿದನು. ಸಂಭಾವ್ಯ ದುಷ್ಟರನ್ನು (ಯಾದವರನ್ನು) ಸಂಹರಿಸಿದನು. ಮಹಾಭಾರತ ಯುದ್ಧದ ೩೬ ವರ್ಷಗಳ ನಂತರ ಯಾದವರನ್ನು ಸಂಹರಿಸಿದನು. ಅದರ ಹೊರತು ಅವನ ಅವತಾರ ಕಾರ್ಯವು ಪೂರ್ಣವಾಗುತ್ತಿರಲಿಲ್ಲ. ಉಗ್ರ ಪ್ರಕೃತಿಯ ಯಾದವರು ಅಧಿಕಾರ ಮತ್ತು ಸಂಪತ್ತಿನ ಮದದಿಂದ ಉದ್ರಿಕ್ತರಾಗಿದ್ದರು. ಭಗವಾನ ಶ್ರೀಕೃಷ್ಣನ ಹೊರತು ಯಾದವರನ್ನು ನಿಯಂತ್ರಿಸಲು ಬೇರೆ ಯಾರಿಂದಲೂ ಸಾಧ್ಯವಿರಲಿಲ್ಲ. ಅವತಾರ ಸಮಾಪ್ತಿಯ ನಂತರ ಯಾದವರು ಉದ್ರಿಕ್ತರಾಗುತ್ತಿದ್ದರೆ, ಪೃಥ್ವಿಯ ಮೇಲೆ ಪುನಃ ಅಧರ್ಮದ ರಾಜ್ಯ ನಿರ್ಮಾಣವಾಗುತ್ತಿತ್ತು. ಪುನಃ ಪೃಥ್ವಿಯು ಅಪಾರ ಹಿಂಸೆಗೊಳಗಾಗುತ್ತಿತ್ತು; ಆದ್ದರಿಂದ ಶ್ರೀಕೃಷ್ಣನು ಅವನ ವಂಶದವರೆ ಆಗಿರುವ ಈ ಅತಿಮತಾಂಧ ಯಾದವರನ್ನು ಸಂಹರಿಸಿದನು. ಯುಧಿಷ್ಠಿರನನ್ನು ಚಕ್ರವರ್ತಿ ರಾಜನನ್ನಾಗಿ ಮಾಡಿದನು. ಪೃಥ್ವಿಯ ಮೇಲೆ ಧರ್ಮರಾಜ್ಯವನ್ನು ಸ್ಥಾಪಿಸಿದನು. ನಂತರ ಅವನು ಅವತಾರವನ್ನು ಸಮಾಪ್ತಿ ಮಾಡಿದನು.’

– ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿ, (ಸಾಪ್ತಾಹಿಕ ಸನಾತನ ಚಿಂತನ, ೨೨.೪.೨೦೧೦)

|| ಶ್ರೀಕೃಷ್ಣಾರ್ಪಣಮಸ್ತು ||