ಚಾತುರ್ಮಾಸ್ಯ

ತಿಥಿ : ‘ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯ ವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ.

ಕಾಲ ಮತ್ತು ದೇವತೆ

ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ.

ದಕ್ಷಿಣಾಯನವು ದೇವರ ರಾತ್ರಿಯಾಗಿದ್ದು ಉತ್ತರಾಯಣವು ಹಗಲಾಗಿದೆ. ಕರ್ಕ ಸಂಕ್ರಾಂತಿಗೆ ಉತ್ತರಾಯಣವು ಪೂರ್ಣವಾಗುತ್ತದೆ ಮತ್ತು ದಕ್ಷಿಣಾಯನವು ಅಂದರೆ ದೇವರ ರಾತ್ರಿಯು ಪ್ರಾರಂಭವಾಗುತ್ತದೆ. ಕರ್ಕ ಸಂಕ್ರಾಂತಿಯು ಆಷಾಢ ಮಾಸದಲ್ಲಿ ಬರುತ್ತದೆ. ಆದುದರಿಂದಲೇ ಆಷಾಢ ಶುಕ್ಲ ಏಕಾದಶಿಯನ್ನು ‘ಶಯನೀ ಏಕಾದಶಿ’ ಎಂದು ಕರೆಯಲಾಗಿದೆ; ಏಕೆಂದರೆ ‘ಆ ದಿನ ದೇವರು ನಿದ್ರೆಯಲ್ಲಿ (ಧ್ಯಾನಾವಸ್ಥೆ, ನಿರ್ಗುಣಾವಸ್ಥೆಯಲ್ಲಿ) ರುತ್ತಾರೆ ಎನ್ನುವ ನಂಬಿಕೆಯಿದೆ. ಕಾರ್ತಿಕ ಶುಕ್ಲ ಏಕಾದಶಿಯಂದು ದೇವರು ನಿದ್ರೆಯಿಂದ ಏಳುತ್ತಾರೆ (ಕಾರ್ಯನಿರತರಾಗುತ್ತಾರೆ). ಆದ್ದರಿಂದಲೇ ಅದನ್ನು ‘ಪ್ರಬೋಧಿನಿ (ಬೋಧಿನಿ, ದೇವೋತ್ಥಾನಿ) ಏಕಾದಶಿ’ ಎನ್ನುತ್ತಾರೆ. ವಾಸ್ತವದಲ್ಲಿ ದಕ್ಷಿಣಾಯನವು ಆರು ತಿಂಗಳುಗಳದ್ದಾಗಿರುವುದರಿಂದ ದೇವರ ರಾತ್ರಿಯೂ ಅಷ್ಟೇ ಕಾಲಾವಧಿಯದ್ದಾಗಿರಬೇಕಾಗಿತ್ತು. ಆದರೆ ಬೋಧಿನಿ ಏಕಾದಶಿಯವರೆಗೆ ನಾಲ್ಕು ತಿಂಗಳು ಮಾತ್ರ ಪೂರ್ಣವಾಗುತ್ತವೆ. ಇದರ ಅರ್ಥ ಒಂದು ತೃತೀಯಾಂಶದಷ್ಟು ರಾತ್ರಿ ಕಾಲ ಬಾಕಿ ಇರುವಾಗಲೇ ದೇವತೆಗಳು ಎದ್ದು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸುತ್ತಾರೆ’. (೧೬)

‘ಬ್ರಹ್ಮದೇವನ ನವಸೃಷ್ಟಿಯ ನಿರ್ಮಿತಿಯ ಕಾರ್ಯವು ನಡೆಯುತ್ತಿರುವಾಗ ಪಾಲನಕರ್ತನಾದ ವಿಷ್ಣುವು ನಿಷ್ಕ್ರಿಯನಾಗಿರುತ್ತಾನೆ; ಆದುದರಿಂದ ಚಾತುರ್ಮಾಸವನ್ನು ವಿಷ್ಣುಶಯನವೆಂದು ಕರೆಯಲಾಗಿದೆ. ಆಗ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ನಿದ್ರಿಸುತ್ತಾನೆಂದು ತಿಳಿಯಲಾಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ವಿಷ್ಣುಶಯನವನ್ನು ಮತ್ತು ಕಾರ್ತಿಕ ಶುಕ್ಲ ಏಕಾದಶಿಯ ನಂತರ ಅಂದರೆ ದ್ವಾದಶಿಯಂದು ವಿಷ್ಣುಪ್ರಬೋಧೋತ್ಸವವನ್ನು ಆಚರಿಸುತ್ತಾರೆ’. (೧೭)

ಮಹತ್ವ

ದೇವರ ಈ ನಿದ್ರಾಕಾಲದಲ್ಲಿ ಅಸುರರು ಪ್ರಬಲರಾಗುತ್ತಾರೆ ಮತ್ತು ಮಾನವರಿಗೆ ತೊಂದರೆಗಳನ್ನು ಕೊಡುತ್ತಾರೆ. ‘ಅಸುರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಒಂದಲ್ಲ ಒಂದು ವ್ರತವನ್ನು ಅವಶ್ಯವಾಗಿ ಮಾಡಬೇಕು’, ಹೀಗೆ ಧರ್ಮಶಾಸ್ತ್ರವು ಹೇಳುತ್ತದೆ

ವಾರ್ಷಿಕಾಂಶ್ಚತುರೋ ಮಾಸಾನ್ ವಾಹಯೇತ್ ಕೇನಚಿನ್ನರಃ |

ವ್ರತೇನ ನ ಚೇದಾಪ್ನೋತಿ ಕಿಲ್ಮಿಷಂ ವತ್ಸರೋದ್ಭವಮ್ ||

ಅರ್ಥ : ಪ್ರತಿವರ್ಷ ಚಾತುರ್ಮಾಸದಲ್ಲಿ ಮನುಷ್ಯನು ಯಾವುದಾದರೊಂದು ವ್ರತವನ್ನು ಅವಶ್ಯ ಮಾಡಬೇಕು; ಇಲ್ಲದಿದ್ದರೆ ಅವನಿಗೆ ಸಂವತ್ಸರೋದ್ಭವವೆಂಬ ದೋಷ ತಗಲುತ್ತದೆ.

(ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ಈ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿದ್ದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇದ್ದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿದ್ದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.

ಸೂಕ್ಷ್ಮ :  ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು