ಕರ್ನಾಟಕ ರಾಜ್ಯದ ಉಡುಪಿ, ಮೈಸೂರು, ಕಾರ್ಕಳ, ಕೇರೂರಿನಲ್ಲಿ ಭವ್ಯ ಹಿಂದೂ ಐಕ್ಯತಾ ಮೆರವಣಿಗೆಗಳು

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೮೦ನೇ ಜನ್ಮೋತ್ಸವದ ನಿಮಿತ್ತ…

ಹಿಂದೂ ಐಕ್ಯತಾ ಮೆರವಣಿಗೆಯ ಧ್ವಜಪೂಜೆಯನ್ನು ಮಾಡುತ್ತಿರುವ ಸೌ. ಸುಮಾ ಹಾಗೂ ಶ್ರೀ. ಯತೀಶ ಅಂಚನ್ ಹಾಗೂ ಉಪಸ್ಥಿತ ಪೂ. ರಮಾನಂದ ಗೌಡ (೧), ಶ್ರೀ. ಗುರುಪ್ರಸಾದ ಗೌಡ (೨) ಹಾಗೂ ಪೂ. ಉಮೇಶ ಶೆಣೈ (೩)

ಮಂಗಳೂರು – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ರಾಜ್ಯದ ಉಡುಪಿ, ಮೈಸೂರು, ಬೆಳಗಾವಿ, ಕಾರ್ಕಳ, ಕೇರೂರು (ಬಾಗಲಕೋಟೆ) ನಲ್ಲಿ ಹಿಂದೂ ಐಕ್ಯತಾ ಮೆರವಣಿಗೆಗಳು ಜರುಗಿದವು.

ಉಡುಪಿ ನಗರದ ತ್ರಿವೇಣಿ ವೃತ್ತದಿಂದ ಕಿನ್ನಿಮುಲ್ಕಿಯ ಶ್ರೀ ವೀರಭದ್ರ ದೇವಸ್ಥಾನದ ವರೆಗೆ ಹಿಂದೂ ಐಕ್ಯತಾ ಮೆರವಣಿಗೆಯು ಜರುಗಿತು. ಈ ವೇಳೆ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ  ಹಾಗೂ ಪೂ. ಉಮೇಶ ಶೆಣೈ ಇವರ ಉಪಸ್ಥಿತಿ ಇತ್ತು. ಈ ಸಂದರ್ಭದಲ್ಲಿ ಕೊನೆಯಲ್ಲಿ ಜರುಗಿದ ಸಭಾಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಶ್ರೀ. ಸುಧೀಶ ನಾಯಕ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ, ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈಯವರು ಮಾರ್ಗದರ್ಶನ ಮಾಡಿದರು.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಒಕ್ಕಲಿಗ ಸಮುದಾಯ ಭವನದಿಂದ ವಿದ್ಯಾರಣ್ಯಪುರಂ ಸರ್ಕಲ್, ಸೆಂಟ್ ಮೇರಿಸ್ ಸರ್ಕಲ್, ಸಿವೆಜ್ ಫಾರಂ ರಸ್ತೆಯ ಮೂಲಕ ಒಕ್ಕಲಿಗ ಸಮುದಾಯ ಭವನದಲ್ಲಿ ಮೆರವಣಿಗೆಯು ಸಂಪನ್ನವಾಯಿತು. ಮೈಸೂರಿನ ವಿವೇಕಾನಂದ ಗೆಳೆಯರ ಬಳಗ, ಶ್ರೀರಾಮಸೇನೆ ಕಾರ್ಯಕರ್ತರು ಸಹ ಇದರಲ್ಲಿ ಪಾಲ್ಗೊಂಡಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚೇತನ ಗಾಡಿ ಹಾಗೂ ಸನಾತನ ಸಂಸ್ಥೆಯ ಸೌ. ದೀಪಾ ತಿಲಕ ಇವರು ಕೊನೆಯಲ್ಲಿ ಮಾರ್ಗದರ್ಶನ ಮಾಡಿದರು.

ಕಾರ್ಕಳದ ಅನಂತಶಯನ ವೃತ್ತದಿಂದ, ಗಾಂಧಿ ಮೈದಾನದ ಶ್ರೀ ವೀರಭದ್ರ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಿತು. ಈ ವೇಳೆ ಅಜೇಕಾರಿನ ಉದ್ಯಮಿ ಶ್ರೀ. ನಂದಕುಮಾರ್ ಹೆಗ್ಡೆ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ, ಸನಾತನ ಸಂಸ್ಥೆಯ ಸೌ. ಶ್ರೀಕಲಾ ಜೋಶಿಯವರು ಮಾರ್ಗದರ್ಶನ ಮಾಡಿದರು.

ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ಆಯೋಜಿಸಲಾದ ಹಿಂದೂ ಐಕ್ಯತಾ ಮೆರವಣಿಗೆಯು ಬನಶಂಕರಿದೇವಿ ದೇವಸ್ಥಾನದಿಂದ ಪಟ್ಟಣದ ಮುಖ್ಯ ರಸ್ತೆಯ ಮೂಲಕ, ಮಾರುಕಟ್ಟೆ, ಬಸ್ ನಿಲ್ದಾಣದ ವರೆಗೆ ಹೊರಟು ಶ್ರೀ ಆಂಜನೇಯ ದೇವಸ್ಥಾನದಲ್ಲಿ ಸಮಾರೋಪ ಮಾಡಲಾಯಿತು. ಈ ವೇಳೆ ಡಾ. ಬಸವರಾಜ ಬೊಂಬ್ಲೆಯವರು ‘ಸನಾತನ ಸಂಸ್ಥೆ’ಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಜಯಂತಅ ಠವಲೆಯವರ ಸಂಕಲ್ಪದಂತೆ ಈ ದೇಶವನ್ನು ಹಿಂದೂರಾಷ್ಟ್ರವನ್ನಾಗಿಸುವ ವಿಚಾರಕ್ಕಾಗಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ’ ಎಂದರು. ಈ ವೇಳೆ ಕೆರೂರಿನ ಉದ್ಯಮಿ ಶ್ರೀ. ಗೋಪಾಲಪ್ಪ ಮದಿ ಮತ್ತು ಸಂಸ್ಥೆಯ ಸೌ. ವಿದುಲಾ ಇವರ ಮಾರ್ಗದರ್ಶನವಿತ್ತು.