‘ಜಾಗತಿಕ’ ಬಲಿಷ್ಠ ರಾಷ್ಟ್ರದ ದಿಕ್ಕಿನತ್ತ ಭಾರತ !

ಸಮಾಜದಲ್ಲಿ ಜನರು, ಸಂಘಟನೆಗಳು, ಪಂಥ, ರಾಜಕೀಯ ಪಕ್ಷಗಳಲ್ಲಿ  ಪರಸ್ಪರ ವೈಮನಸ್ಸು ಇರುತ್ತವೆ. ಸ್ಪರ್ಧೆ, ಈರ್ಷ್ಯೆ ಇವುಗಳೊಂದಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ವಾಂಶಿಕ ಇತ್ಯಾದಿ ಕಾರಣಗಳು ಈ ಸಂಘರ್ಷಗಳನ್ನು ಉತ್ತೇಜಿಸುತ್ತಿರುತ್ತವೆ. ಇಂತಹ ವಾತಾವರಣದಲ್ಲಿ ಒಂದು ವೇಳೆ ಯಾವುದೇ ವ್ಯಕ್ತಿಯು ಇಂತಹ ಪರಸ್ಪರವಿರೋಧಿ ವಿಚಾರಶೈಲಿಯ ವ್ಯಕ್ತಿ, ಸಂಘಟನೆ, ಪಂಥಗಳೊಂದಿಗೆ ಸಂಧಾನದ ಅಥವಾ ಸೌಹಾರ್ದತೆಯ ಸಂಬಂಧವನ್ನಿಡುವ ನಿಲುವನ್ನು ಅಂಗೀಕರಿಸಿದರೆ, ಆ ವ್ಯಕ್ತಿ ಎಲ್ಲರಿಗೂ ಬೇಕೆನಿಸುತ್ತದೆ. ಅವನ ಈ ರಾಜನೀತಿ ಕೌಶಲ್ಯವು ಅವನನ್ನು ಸಾಮರ್ಥ್ಯಶಾಲಿಯನ್ನಾಗಿ ಮಾಡುತ್ತದೆ. ಇಂತಹ ವ್ಯಕ್ತಿ ‘ಯು ವಿನ್-ಐ ವಿನ್ ಅಟಿಟ್ಯೂಡ್’ ಅಂದರೆ ‘ನಿನ್ನ ಹಿತ ಮತ್ತು ನನ್ನ ಹಿತ’ ಈ ಸ್ವಭಾವವೈಶಿಷ್ಟ್ಯದ್ದಾಗಿರುತ್ತದೆ. ಇದೇ ನಿಲುವು ಜಾಗತಿಕ ರಾಜಕಾರಣಕ್ಕೂ ಅಷ್ಟೇ ಸಮರ್ಪಕವಾಗಿದೆ, ಬಹುಶಃ ಯಾವುದೇ ರಾಷ್ಟ್ರದ ಇಂತಹ ನಿಲುವು ಜಾಗತಿಕ ಮಾನಸಿಕತೆಯಲ್ಲಿ ಹಾಗೆಯೇ ಪ್ರತಿಬಿಂಬಿಸುತ್ತಾ ಇರುತ್ತದೆ. ವರ್ತಮಾನಕಾಲದ ಅಂತರರಾಷ್ಟ್ರೀಯ ರಾಜಕಾರಣದ ಚಿತ್ರಣದಲ್ಲಿ ‘ಭಾರತ’ ಆ ಸ್ಥಾನದ ಕಡೆಗೆ ಮುಂದುವರಿಯುತ್ತಿದೆ !

ಭಾರತದ ಬಲಿಷ್ಠ ಸ್ಥಾನಗಳು !

ರಷ್ಯಾ-ಯುಕ್ರೇನ್‌ನಲ್ಲಿನ ಯುದ್ಧ ಆರಂಭವಾಗಿ ಒಂದುವರೆ ತಿಂಗಳಾಗುತ್ತಾ ಬಂದಿದೆ. ಈ ಅವಧಿಯಲ್ಲಿ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ತಿರುವು ಮುರುವು ಉಂಟಾಗಿದೆ. ದೇಶಗಳ ಪರಸ್ಪರರೊಂದಿಗಿರುವ ಸಂಬಂಧದಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು ಜಗತ್ತು ಎರಡು ಭಾಗವಾಗಿ ವಿಭಜಿಸಲ್ಪಟ್ಟಿರುವ ಸ್ಥಿತಿ ಉದ್ಭವಿಸಿದೆ. ಕಳೆದ ಶತಮಾನದಲ್ಲಿ ಹೇಗೆ ‘ಶೀತಲಸಮರ’ ನಡೆಯಿತೋ ಹಾಗೂ ಅಂದಿನ ಸೋವಿಯೆತ್ ಯುನಿಯನ್ ಮತ್ತು ಅಮೇರಿಕಾದ ಅನೇಕ ದಶಮಾನಗಳ ಈ ಸಂಘರ್ಷದಲ್ಲಿ ಜಗತ್ತು ಹೆಚ್ಚಿನಂಶ ಎರಡು ಭಾಗದಲ್ಲಿ ವಿಭಜಿಸಲ್ಪಟ್ಟಿತ್ತು, ಅದೇ ರೀತಿ ಇಂದಿನ ಸ್ಥಿತಿಯೂ ಕಾಣಿಸುತ್ತಿದೆ. ಇದರಲ್ಲಿ ರಶ್ಯಾ-ಯುಕ್ರೇನ್ನಲ್ಲಿನ ಸಂಘರ್ಷದ ರೂಪದಲ್ಲಿ ಮಾತ್ರ ‘ಪ್ರತ್ಯಕ್ಷ’ ಯುದ್ಧದ ಜ್ವಾಲೆಯು ಭುಗಿಲೆದ್ದಿದೆ. ಆದ್ದರಿಂದ ಅನೇಕ ತಜ್ಞರು ‘ಮೂರನೇ ಮಹಾಯುದ್ಧದ ಕಿಡಿ ಹೊತ್ತಿದೆಯೇ ?’, ಎನ್ನುವ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಪರಿಸ್ಥಿತಿಯಲ್ಲಿ ಜಗತ್ತು ಮಾತ್ರ ಭಾರತಕ್ಕೆ ಒಂದು ವಿಶೇಷ ಸ್ಥಾನವನ್ನು ನೀಡಿದೆ.

ಫೆಬ್ರವರಿ ೨೪ ರಂದು ರಷ್ಯಾ ಯುಕ್ರೇನ್‌ನ ಮೇಲೆ ಯುದ್ಧವನ್ನು ಸಾರಿದಾಗ, ಅದೇ ದಿನ ಯುಕ್ರೇನ್‌ನ ಭಾರತದ ರಾಯಭಾರಿ ಇಗೋರ ಪೊಲಿಖಾ ಇವರು ಈ ಕುಸಿದ ಸ್ಥಿತಿಯಲ್ಲಿ ಭಾರತವು ಮಧ್ಯಸ್ಥಿಕೆ ಮಾಡಬೇಕೆಂದು ವಿನಂತಿಸಿದರು. ಕಳೆದ ಕೆಲವು ವರ್ಷಗಳಿಂದ ‘ಭಾರತವು ಈಗ ಅಮೇರಿಕಾದ ಸಾಲಿನಲ್ಲಿ ಹೋಗಿ ಕುಳಿತಿದೆ’, ಎಂದು ಚರ್ಚೆ ನಡೆಯುವಾಗ ಯುಕ್ರೇನ್‌ನಂತಹ ರಾಷ್ಟ್ರಕ್ಕೆ ಭಾರತದ ಪ್ರಧಾನಮಂತ್ರಿ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತೀನ್ ಇವರೊಂದಿಗೆ ಚರ್ಚೆ ಮಾಡಿ ಯುದ್ಧವನ್ನು ನಿಲ್ಲಿಸುವಂತೆ ವಿನಂತಿಸಬೇಕೆನಿಸುತ್ತದೆ. ಅಂದರೆ ಪೊಲೀಖಾ ಇವರು ಭಾರತ ಮಧ್ಯಸ್ಥಿಕೆ ಮಾಡಬೇಕೆಂದು ವಿನಂತಿಸುವುದು, ಇದೊಂದು ಸಾಧಾರಣ ವಿಷಯವೆಂದು ಹೇಳಬಹುದು; ಆದರೆ ಯುಕ್ರೇನ್‌ನ ಪ್ರಧಾನಮಂತ್ರಿ ವ್ಲಾದಿಮಿರ್ ಝೆಲೆನ್ಸ್ಕೀ ಮತ್ತು ಅವರ ವಿದೇಶಮಂತ್ರಿ ದಿಮಿತ್ರೋ ಕುಲೇಬಾ ಇವರು ಕೂಡ ಮೋದಿಯವರು ಪುತೀನ್‌ರವರಿಗೆ ವಿನಂತಿಸಬೇಕೆಂದು ಪದೇ ಪದೇ ಒತ್ತಾಯಿಸಿದರು, ಇದಕ್ಕೇನು ಹೇಳಬೇಕು ? ಕಳೆದ ತಿಂಗಳಿಡೀ ಪಶ್ಚಿಮ ಯುರೋಪ್‌ನ ಬಲಿಷ್ಠ ರಾಷ್ಟ್ರಗಳಾಗಿರುವ ಜರ್ಮನಿ, ಬ್ರಿಟನ್, ಫ್ರಾನ್ಸ್ ಮೊದಲಾದ ದೇಶಗಳು ಕೂಡ ಭಾರತ ರಷ್ಯಾದ ವಿರುದ್ಧ ನಿಲುವನ್ನು ತೆಗೆದುಕೊಳ್ಳಬೇಕೆಂದು ಪದೇ ಪದೇ ಸೂಚಿಸಿದವು. ಭಾರತ ರಷ್ಯಾದ ವಿರುದ್ಧ ಹೋಗಲು ಇಚ್ಛಿಸದ ಕಾರಣ ಜಾಗತಿಕ ಬಲಿಷ್ಠ ರಾಷ್ಟ್ರವಾಗಿರುವ ಅಮೇರಿಕಾ ಕೆಲವೊಮ್ಮೆ ಭಾರತವನ್ನು ಪ್ರಶಂಸೆ ಮಾಡಿ ಅದನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪ್ರಯತ್ನಿಸಿತು, ಕೆಲವೊಮ್ಮೆ ಅದಕ್ಕೆ ಬೆದರಿಸಲು ಸಹ ಪ್ರಯತ್ನಿಸಿತು. ಇಷ್ಟೆಲ್ಲ ಆಗಿಯೂ ಪಶ್ಚಿಮದ ಶಕ್ತಿಗಳು ಸಂಯುಕ್ತ ರಾಷ್ಟ್ರದಲ್ಲಿ ರಷ್ಯಾವನ್ನು ಜಗತ್ತಿನಲ್ಲಿ ಏಕಾಂಗಿಯನ್ನಾಗಿ ಮಾಡಲು ಮಂಡಿಸಿದ ಠರಾವ್‌ನಲ್ಲಿ ಭಾರತ ತಟಸ್ಥವಾಗಿರಲು ಇಚ್ಛಿಸಿತು. ಇದಕ್ಕೆ ರಷ್ಯಾ ಸರಕಾರದ ಮುಖವಾಣಿ ‘ರಷ್ಯಾ ಡೇ’ ಭಾರತವನ್ನು ಬಾಯಿತುಂಬ ಹೊಗಳಿ ಅದನ್ನು ರಷ್ಯಾದ ಮೈತ್ರೀ ಸಂಬಂಧವನ್ನು ಜೋಪಾನ ಮಾಡಿತು, ಅದರ ಜೊತೆಗೆ ವ್ಯವಸಾಯವನ್ನು ಹೆಚ್ಚಿಸಿ ಸಂಬಂಧವನ್ನೂ ಇನ್ನೂ ಗಟ್ಟಿಮುಟ್ಟಾಗಿಸಲು ಪ್ರಯತ್ನಿಸಿತು. ಭಾರತದ ‘ಆಪರೇಶನ್ ಗಂಗಾ’ದ (ಯುಕ್ರೇನ್‌ನಲ್ಲಿ ಸಿಲುಕಿದ ಭಾರತೀಯ ನಾಗರಿಕರನ್ನು ತಮ್ಮ ದೇಶಕ್ಕೆ ಹಿಂತಿರುಗಿ ತರಲು ಹಮ್ಮಿಕೊಂಡಿದ್ದ ಆಂದೋಲನ) ಯಶಸ್ಸಿನ ಬಗ್ಗೆ ಜಗತ್ತಿನಾದ್ಯಂತ ಪ್ರಶಂಸೆಯಾಗುತ್ತಿದೆ !

ಶತ್ರುವಿನಿಂದ ಪ್ರಶಂಸೆ !

‘ಭಾರತ ‘ಸ್ವತಂತ್ರ ವಿದೇಶಿ ನಿಲುವ’ನ್ನು ಹಮ್ಮಿಕೊಂಡಿರುವುದರಿಂದಲೇ ಇಂದು ಅದು ತಲೆಯೆತ್ತಿ ಜಗತ್ತಿನ ಮುಂದೆ ನಿಂತುಕೊಂಡಿದೆ !’ ಇವೆಲ್ಲದರಲ್ಲಿ ಭಾರತದ ನೆರೆಯ ದೇಶ ಪಾಕಿಸ್ತಾನದ ಸ್ಥಿತಿ ಮಾತ್ರ ದಯನೀಯವಾಗಿದೆ. ಪುತಿನ್ ಇವರು ಯುದ್ಧವನ್ನು ಸಾರಿದ ದಿನವೇ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪಾಕಿಸ್ತಾನದ ವ್ಯಾಪಾರವನ್ನು ಹೆಚ್ಚಿಸುವ ಸಲುವಾಗಿ ರಷ್ಯಾಗೆ ಹೋಗಿದ್ದರು. ಪುತಿನ್ ಮಾತ್ರ ಅವರೊಂದಿಗೆ ಮುಕ್ತಾಯದ ಬೈಠಕ್ ತೆಗೆದುಕೊಂಡರು. ಅವರು ಯುದ್ಧಸಿದ್ಧತೆಗೆ ಆದ್ಯತೆ ನೀಡಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಖಾನ್ ಇವರಿಗೆ ಮುಖಭಂಗ ಮಾಡಿದರು. ಈಗ ಖಾನ್ ಇವರಿಗೆ ತಮ್ಮ ಹುದ್ದೆಯನ್ನು ಬಿಟ್ಟು ಕೆಳಗಿಳಿಯಬೇಕಾಯಿತು. ‘ಯಾವುದೇ ಸಂಕಟ ಬಂದಾಗ, ಮನುಷ್ಯನ ಮನಸ್ಸಿನಲ್ಲಿರುವ ಸತ್ಯವು ಪ್ರಾಮಾಣಿಕತನದ ರೂಪದಲ್ಲಿ ಬಾಯಿಯಿಂದ ಹೊರಬೀಳುತ್ತದೆ’, ಎನ್ನುವುದು ಮಾನವ ಮನಸ್ಸಿನ ನಿಯಮವಾಗಿದೆ. ಅದಕ್ಕೆ ಇಮ್ರಾನ್ ಖಾನ್ ಕೂಡ ಅಪವಾದವಲ್ಲ. ಅವರು ಹೋಗುತ್ತಾ ಭಾರತವನ್ನು ಹೊಗಳುತ್ತಾ ‘ಭಾರತವು ‘ಸ್ವತಂತ್ರ ವಿದೇಶಿ ನಿಲುವ’ನ್ನು ಹಮ್ಮಿಕೊಂಡಿರುವುದರಿಂದಲೇ ಇಂದು ಅದು ತಲೆಯೆತ್ತಿ ಜಗತ್ತಿನ ಮುಂದೆ ನಿಂತುಕೊಂಡಿದೆ. ಯಾರಲ್ಲಿ ಆತ್ಮವಿಶ್ವಾಸವಿರುತ್ತದೋ, ಅವರನ್ನು ಜಗತ್ತು ಗೌರವಿಸುತ್ತದೆ’, ಎಂದರು. ಇಷ್ಟು ಮಾತ್ರವಲ್ಲ, ಕೆಲವೇ ವಾರಗಳ ಹಿಂದೆ ಭಾರತದ ಒಂದು ಕ್ಷಿಪಣಿಯು ತಾಂತ್ರಿಕತೆ ಸಮಸ್ಯೆಯಿಂದ ಅನಿರೀಕ್ಷಿತ ಪಾಕಿಸ್ತಾನದ ಭೂಮಿಗೆ ಹೋಗಿ ಬಿತ್ತು. ತಪ್ಪು ಭಾರತದ್ದಾಗಿತ್ತು; ಆದರೆ ಪಾಕಿಸ್ತಾನ ಯಾವುದೇ ಪ್ರತಿಕಾರಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ. ಚೀನಾವೂ ಸುಮ್ಮನಿತ್ತು. ಇವೆಲ್ಲ ಪ್ರಸಂಗಗಳು ಭಾರತದ ಮುತ್ಸದ್ದಿತನ, ಯುದ್ಧಸಂಬಂಧ ಮತ್ತು ಭೂರಾಜಕೀಯ ವಿಶೇಷತ್ವದ ಕಡೆಗೆ ಬೆರಳು ತೋರಿಸುವುದಿಲ್ಲವೇ ?

ಸರಿ, ಈಗಂತೂ ರಷ್ಯಾವನ್ನು ಏಕಾಂಗಿಯನ್ನಾಗಿಸಲು ಅಮೇರಿಕಾ, ಬ್ರಿಟನ್ ಹಾಗೂ ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಜಪಾನ್ ಇತ್ಯಾದಿ ಟೊಂಕ ಕಟ್ಟಿರುವಾಗ ಅದು ಅವರಿಗೇ ತಿರುಗಿ ಬಿದ್ದಿದೆ. ‘ರಷ್ಯಾವನ್ನು ಅವಲಂಬಿಸಿರುವ ಜರ್ಮನಿಯ ಅರ್ಥವ್ಯವಸ್ಥೆಯು ಆರ್ಥಿಕಬಿಕ್ಕಟ್ಟಿನ ಕಡೆಗೆ ರಭಸದಿಂದ ಸರಿಯುತ್ತಿದೆ’, ಎಂದು ಅಲ್ಲಿನ ‘ಡಾಯನಾ ಬ್ಯಾಂಕ್’ ಘೋಷಣೆ ಮಾಡಿದೆ. ಬ್ರಿಟನ್‌ಗೂ ಕಳೆದ ೪೦ ವರ್ಷಗಳಲ್ಲಿನ ಅತೀ ಹೆಚ್ಚು ಬೆಲೆ ಏರಿಕೆಯನ್ನು ಎದುರಿಸಬೇಕಾಗಬಹುದು, ಅಮೇರಿಕನ್ ಡಾಲರ್‌ನ ‘ರಿಸರ‍್ವ್ ಕರೆನ್ಸಿ’ಯು (ಜಾಗತಿಕ ವ್ಯಾಪಾರದಲ್ಲಿ ಉಪಯೋಗಿಸಲ್ಪಡುವ ಚಲನ) ಲೌಕಿಕ ಧೂಳಿನಲ್ಲಿ ಸೇರುವುದೋ ? ಎನ್ನುವ ಸ್ಥಿತಿಯಲ್ಲಿದೆ. ‘ಕಳೆದ ಶತಮಾನದ ಮಧ್ಯದಲ್ಲಿ ಬ್ರಿಟೀಶ್ ಪೌಂಡ್‌ಗೆ (ಬ್ರಿಟನ್‌ನ ಚಲನ) ಆಗಿರುವ ಹಾಗೆ  ಡಾಲರ್‌ನ ಸ್ಥಿತಿ ಆಗಬಹುದು, ಎನ್ನುವ ಸಾಧ್ಯತೆಯನ್ನು ಜಾಗತಿಕ ಬ್ಯಾಂಕ್ ‘ಗೋಲ್ಡಮನ್ ಸಕ್ಸ್’ ಹೇಳಿದೆ. ಜಾಗತಿಕ ಅಸ್ಥಿರತೆ ರಾರಾಜಿಸುತ್ತಿರುವಾಗ ಭಾರತದ ರೂಪ ಮಾತ್ರ ಚಿನ್ನದಂತೆ ಹೊಳೆಯುತ್ತಿದೆ. ಭಾರತದಲ್ಲಿಯೂ ಪೆಟ್ರೋಲ್, ಡಿಸಲ್, ಗ್ಯಾಸ್ ಸಿಲಿಂಡರ್ ಇತ್ಯಾದಿಗಳ ಬೆಲೆ ಏರಿಕೆಯಿಂದ ದುಬಾರಿಯಾಗಬಹುದು; ಆದರೆ ಒಟ್ಟಾರೆ ಸ್ಥಿತಿ ಮತ್ತು ರಷ್ಯಾದ ಜೊತೆಗೆ ಅಮೇರಿಕಾ, ಇರಾನ್ ಇತ್ಯಾದಿ ದೇಶಗಳೊಂದಿಗಿದ್ದ ‘ಸ್ವತಂತ್ರ’ ಒಳ್ಳೆಯ ಸಂಬಂಧವು ಭಾರತವನ್ನು ಮುಂಬರುವ ಜಾಗತಿಕ ಬಲಿಷ್ಠ ದೇಶದ ಕಡೆಗೆ ಒಯ್ಯಲು ಸಾಕು, ಎಂದು ಕೇವಲ ವಿಚಾರವಲ್ಲ, ಪ್ರತ್ಯಕ್ಷ ಜಾಗತಿಕ ಚಟುವಟಿಕೆಗಳು ಹೇಳುತ್ತಿವೆ !