ಶರೀರದಲ್ಲಿ ಉಷ್ಣತೆ ಹೆಚ್ಚಾದರೆ ಅದಕ್ಕೆ ಶಾರೀರಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಮಾಡಬೇಕಾದ ವಿವಿಧ ಉಪಾಯಗಳು !

೧. ದೇಹದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಲು ಶಾರೀರಿಕ ಸ್ತರದಲ್ಲಿ ಮಾಡಬೇಕಾದ ಉಪಾಯ

ಕು. ಮಧುರಾ ಭೋಸಲೆ

೧ ಅ. ತುಳಸಿಯ ಬೀಜಗಳನ್ನು ಸೇವಿಸುವುದು

ತುಳಸಿಯ ಎಲೆಗಳು ಉಷ್ಣ, ಆದರೆ ತುಳಸಿಯ ಬೀಜಗಳು ತಂಪು. ಶರೀರದ ಉಷ್ಣತೆಯನ್ನು ಕಡಿಮೆ ಮಾಡಲು ೧ ಚಮಚದಷ್ಟು ತುಳಸಿಯ ಬೀಜಗಳನ್ನು ಅರ್ಧ ಬಟ್ಟಲು ನೀರಿನಲ್ಲಿ ೩ ಗಂಟೆಗಳ ಕಾಲ ನೆನೆಹಾಕಬೇಕು ಮತ್ತು ಅದರಲ್ಲಿ ೧ ಬಟ್ಟಲು ಬೆಚ್ಚಗಿನ ಹಾಲು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ೭ ದಿನ ಮಾಡಬೇಕು.

೧ ಆ. ಗರಿಕೆಯ ರಸವನ್ನು ಕುಡಿಯುವುದು

ಗರಿಕೆ (ದೂರ್ವೆ) ಬಹಳ ತಂಪಾಗಿರುತ್ತವೆ. ಆದುದರಿಂದ ದಿನದಲ್ಲಿ ೨-೩ ಸಲ ಗರಿಕೆಯ ರಸವನ್ನು ತೆಗೆದು ಕುಡಿಯಬೇಕು.

೧ ಇ. ಲಾವಂಚ ಹಾಕಿದ ನೀರನ್ನು ಕುಡಿಯುವುದು

ನೀರಿನಲ್ಲಿ ಲಾವಂಚ ಹಾಕಿ ಆ ನೀರನ್ನು ದಿನದಲ್ಲಿ ನೀರಾಡಿಕೆಯಾದಾಗಲೆಲ್ಲ ಕುಡಿಯಬೇಕು.

೧ ಈ. ನೀರಿನಲ್ಲಿ ಸಬ್ಜಾ (ಕಾಮಕಸ್ತೂರಿ) ಅಥವಾ ಏಲಕ್ಕಿಯನ್ನು ಹಾಕಿ ಕುಡಿಯುವುದು

ನೀರಿನಲ್ಲಿ ಸಬ್ಜಾ ಅಥವಾ ಏಲಕ್ಕಿಯನ್ನು ಸುಲಿದು ಹಾಕಬೇಕು ಮತ್ತು ಆ ನೀರನ್ನು ದಿನದಲ್ಲಿ ನೀರಾಡಿಕೆಯಾದಾಗಲೆಲ್ಲ ಕುಡಿಯಬೇಕು.

೧ ಉ. ನೀರಿನಲ್ಲಿ ಹವಿಜಗಳನ್ನು ನೆನೆಸಿ ಆ ನೀರನ್ನು ಕುಡಿಯಬೇಕು.

ಹವಿಜಗಳನ್ನು (ಕೊತ್ತಂಬರಿ ಕಾಳುಗಳನ್ನು) ಸೇವಿಸುವುದರಿಂದ ದೇಹದಲ್ಲಿನ ಶೀತಲತೆ ಹೆಚ್ಚಾಗುತ್ತದೆ. ಆದುದರಿಂದ ನೀರಿನಲ್ಲಿ ಹವಿಜಗಳನ್ನು ನೆನೆಸಿ ಆ ನೀರನ್ನು ದಿನಪೂರ್ತಿ ನೀರಡಿಕೆಯಾದಾಗ ಕುಡಿಯಬೇಕು.

೧ ಊ. ಗುಲಕಂದವನ್ನು ಸೇವಿಸುವುದು

ಗುಲಾಬಿ ಹೂವಿನ ಪಕಳೆಗಳಿಂದ ಗುಲಕಂದವನ್ನು ತಯಾರಿಸುತ್ತಾರೆ. ಗುಲಾಬಿ ಹೂವಿನ ಪಕಳೆಗಳು ತಂಪಾಗಿರುವುದರಿಂದ ಉಷ್ಣತೆಯು ಹೆಚ್ಚಾದಾಗ ಬೆಚ್ಚಗಿನ ಹಾಲಿನಲ್ಲಿ ಗುಲಕಂದವನ್ನು ಹಾಕಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಗುಲಕಂದದ ಬದಲು ಗುಲಾಬಿ ಹೂವುಗಳ ಎಸಳುಗಳಿಂದ ತಯಾರಿಸಿದ ಶರಬತ್ತನ್ನು ಕುಡಿಯಬಹುದು.

೧ ಎ. ಭೋಜನದಲ್ಲಿ ಮಜ್ಜಿಗೆಯನ್ನು ಸೇವಿಸುವುದು

ಭೋಜನದಲ್ಲಿ ದೇಶಿ ಹಸುವಿನ ಹಾಲಿನಿಂದ ತಯಾರಿಸಿದ ಮಜ್ಜಿಗೆಯನ್ನು ಕುಡಿಯಬೇಕು. ದೇಶಿ ಹಸುವಿನ ಹಾಲು ಸಿಗದಿದ್ದರೆ ಎಮ್ಮೆಯ ಹಾಲಿನಿಂದ ತಯಾರಿಸಿದ ಮಜ್ಜಿಗೆಯನ್ನು ದಿನದಲ್ಲಿ ೧ ಬಾರಿ ಮಧ್ಯಾಹ್ನದ ಭೋಜನದ ನಂತರ ನಿಯಮಿತವಾಗಿ ಕುಡಿಯಬೇಕು. ಕೆಲವು ಜನರಿಗೆ ಮಜ್ಜಿಗೆಯನ್ನು ಕುಡಿದರೆ ತೊಂದರೆ ಹೆಚ್ಚಾಗುತ್ತದೆ. ಅಂತಹವರು ಮಜ್ಜಿಗೆ ಕುಡಿಯುವುದನ್ನು ನಿಲ್ಲಿಸಬೇಕು.

೧ ಏ. ಕಣ್ಣುಗಳ ಮೇಲೆ ಸೌತೆಕಾಯಿ ಅಥವಾ ಬಟಾಟೆಯನ್ನು ಕತ್ತರಿಸಿ ಅವುಗಳ ದುಂಡನೆಯ ತುಂಡನ್ನು ಇಟ್ಟುಕೊಳ್ಳುವುದು

ಉಷ್ಣತೆಯಿಂದ ಕಣ್ಣುಗಳು ಉರಿಯುತ್ತಿದ್ದರೆ, ಕಣ್ಣುಗಳ ಮೇಲೆ ಸೌತೆಕಾಯಿ ಅಥವಾ ಬಟಾಟೆಯನ್ನು ಕತ್ತರಿಸಿ ಅವುಗಳ ದುಂಡನೆಯ ತುಂಡನ್ನು ೧೫-೩೦ ನಿಮಿಷಗಳ ಕಾಲ ಇಟ್ಟುಕೊಳ್ಳಬೇಕು. ಈ ಉಪಾಯವನ್ನು ದಿನದಲ್ಲಿ ೨-೩ ಸಲ ಮಾಡಬೇಕು.

೧ ಐ ಅಂಗಾಲುಗಳಿಗೆ ಗೋಪಿಚಂದನ ಅಥವಾ ಚಂದನದ ಲೇಪಿಸುವುದು !

ದೇಹದಲ್ಲಿನ ಉಷ್ಣತೆ ಅಂಗಾಲುಗಳಿಂದ ಹೊರಗೆ ಹೋಗುತ್ತಿರುತ್ತದೆ. ಗೋಪಿಚಂದನ ಅಥವಾ ಚಂದನ ತಂಪಾಗಿರುವುದರಿಂದ (ಶೀತಲ) ಉಷ್ಣತೆ ಹೆಚ್ಚಾದಾಗ ಅವುಗಳ ಲೇಪನವನ್ನು ಅಂಗಾಲುಗಳಿಗೆ ದಿನದಲ್ಲಿ ೨-೩ ಸಲ ಹಚ್ಚಿಕೊಳ್ಳಬೇಕು ಮತ್ತು ಅದನ್ನು ಕನಿಷ್ಟ ೩೦ ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಬೇಕು.

೧ ಒ. ಅಂಗಾಲುಗಳಿಗೆ ಮೆಹಂದಿ ಹಚ್ಚಿಕೊಳ್ಳುವುದು

ಅಂಗಾಲುಗಳಿಗೆ ಮೆಹಂದಿಯನ್ನು ಹಚ್ಚಿಕೊಳ್ಳಬೇಕು.

೧ ಓ. ಅಂಗಾಲುಗಳಿಗೆ ಎಣ್ಣೆಯನ್ನು ಹಚ್ಚಿ ಕಂಚಿನ ಬಟ್ಟಲಿನಿಂದ ಮಾಲೀಶ ಮಾಡಬೇಕು

ಅಂಗಾಲುಗಳಿಗೆ ಕೊಬ್ಬರಿಎಣ್ಣೆಯನ್ನು ಹಚ್ಚಿ ಕಂಚಿನ ಬಟ್ಟಲಿನಿಂದ ದಿನದಲ್ಲಿ ಕನಿಷ್ಠಪಕ್ಷ ೧ ಸಲ ಮತ್ತು ಹೆಚ್ಚೆಂದರೆ ೩-೪ ಸಲ ಅಂಗಾಲುಗಳಿಗೆ ಮಾಲೀಶ್ ಮಾಡಿದರೆ ದೇಹದಲ್ಲಿನ ಉಷ್ಣತೆಯು ಕಂಚಿನ ಬಟ್ಟಲಲ್ಲಿ ಸೆಳೆಯಲ್ಪಡುತ್ತದೆ. ಹೊಟ್ಟೆಗೆ ಔಷಧಿಯನ್ನು ತೆಗೆದುಕೊಳ್ಳುವ ಆಯುರ್ವೇದೀಯ ಚಿಕಿತ್ಸೆಯನ್ನು ಹೆಚ್ಚೆಂದರೆ ೧೫ ದಿನಗಳ ವರೆಗೆ ಮಾಡಿ ನೋಡಬೇಕು. ಈ ಚಿಕಿತ್ಸೆಯ ನಂತರವೂ ತೊಂದರೆ ಕಡಿಮೆಯಾಗದಿದ್ದರೆ, ಸ್ಥಳೀಯ ವೈದ್ಯರ ಸಲಹೆಯನ್ನು ಪಡೆಯಬೇಕು.

೨. ದೇಹದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಲು ಆಧ್ಯಾತ್ಮಿಕ ಸ್ತರದ ಉಪಾಯಗಳು

೨ ಅ. ನಾಮಜಪ

೨ ಅ ೧. ಆಪತತ್ತ್ವದ ಮುದ್ರೆಯನ್ನು ಮಾಡಿ ವರುಣದೇವರ ನಾಮಜಪವನ್ನು ಮಾಡುವುದು ಅಥವಾ ‘ವಂ’ ಈ ಬೀಜಮಂತ್ರವನ್ನು ಹೇಳುವುದು : ಅನಾಮಿಕಾ ಬೆರಳು (ಉಂಗುರ ಬೆರಳು) ಆಪತತ್ತ್ವಕ್ಕೆ ಸಂಬಂಧಿಸಿದೆ. ಆದುದರಿಂದ ದೇಹದಲ್ಲಿನ ಉಷ್ಣತೆ ಹೆಚ್ಚಾದಾಗ ಹೆಬ್ಬೆರಳಿನ ತುದಿಯನ್ನು ಅನಾಮಿಕಾದ ತುದಿಗೆ ಅಥವಾ ಮೂಲಕ್ಕೆ ಹಚ್ಚಿ ಆಪತತ್ತ್ವದ ಮುದ್ರೆಯನ್ನು ಮಾಡಿ ‘ಶ್ರೀ ವರುಣಾಯ ನಮಃ |’ ಈ ನಾಮಜಪವನ್ನು ಕನಿಷ್ಠ ಅರ್ಧಗಂಟೆ ಮಾಡಬೇಕು. ವರುಣದೇವತೆಯು ಆಪತತ್ತ್ವದ ದೇವತೆಯಾಗಿರುವುದರಿಂದ ಅವನ ನಾಮಜಪ ಮತ್ತು ‘ವಂ’ ಈ ಬೀಜಮಂತ್ರವು ಆಪತತ್ತ್ವಕ್ಕೆ ಸಂಬಂಧಿಸಿದುದರಿಂದ ಈ ಬೀಜಮಂತ್ರವನ್ನು ಕನಿಷ್ಠ ಅರ್ಧ ಗಂಟೆ ಮಾಡುವುದರಿಂದ ದೇಹದಲ್ಲಿನ ತೇಜತತ್ತ್ವವು ಕಡಿಮೆಯಾಗಿ ಆಪತತ್ತ್ವವು ಹೆಚ್ಚಾಗತೊಡಗುತ್ತದೆ.
ಇದರಿಂದ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ ಶೀತಲತೆ ಹೆಚ್ಚಾಗುತ್ತದೆ.

೨ ಅ ೨. ದೇವತೆಗಳ ತಾರಕ ರೂಪದ ನಾಮಜಪವನ್ನು ಮಾಡುವುದು ಮತ್ತು ರಾಮನಾಮದ ಜಪ ಮಾಡುವುದರ ಆಧ್ಯಾತ್ಮಿಕ ಮಹತ್ವ : ದೇವತೆಗಳ ತಾರಕ ರೂಪದ ನಾಮಜಪದಿಂದ ತಾರಕ ಶಕ್ತಿ ಮತ್ತು ಮಾರಕ ರೂಪದ ಜಪದಿಂದ ಮಾರಕ ಶಕ್ತಿಯು ಪ್ರಕ್ಷೇಪಿಸುತ್ತಿರುತ್ತದೆ. ತಾರಕ ಶಕ್ತಿಯ ಸ್ಪಂದನಗಳು ಶೀತಲ ಮತ್ತು ಮಾರಕ ಶಕ್ತಿಯ ಸ್ಪಂದನಗಳು ಉಷ್ಣವಾಗಿರುತ್ತವೆ. ಆದುದರಿಂದ ದೇಹದಲ್ಲಿನ ಉಷ್ಣತೆಯು ಹೆಚ್ಚಾದಾಗ ದೇವತೆಗಳ ತಾರಕ ರೂಪದ ನಾಮಜಪವನ್ನು ಕನಿಷ್ಠಪಕ್ಷ ೧ ಗಂಟೆ ಮಾಡಬೇಕು. ಎಲ್ಲ ದೇವತೆಗಳ ನಾಮಜಪಗಳ ಪೈಕಿ ಪ್ರಭು ಶ್ರೀರಾಮನ ತಾರಕ ರೂಪದ ನಾಮಜಪವನ್ನು ಕನಿಷ್ಠ ೧ ಗಂಟೆ ಮಾಡಿದರೆ ದೇಹದಲ್ಲಿ ಶೀತಲತೆ ಮತ್ತು ಮನಸ್ಸಿಗೆ ಶಾಂತಿಯು ಲಭಿಸುತ್ತದೆ. ಸಮುದ್ರಮಂಥನದ ಸಮಯದಲ್ಲಿ ಶಿವನು ಹಾಲಾಹಲ(ವಿಷ)ವನ್ನು ಕುಡಿದ ನಂತರ, ಅವನ ದೇಹದಲ್ಲಿ ಉಷ್ಣತೆಯು ಬಹಳ ಹೆಚ್ಚಾಯಿತು. ಆಗ ಶಿವನು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹಣೆಯ ಮೇಲೆ ಚಂದ್ರ, ಜಟೆಯಲ್ಲಿ ಗಂಗೆ, ದೇಹದ ಮೇಲೆ ಒಂಭತ್ತು ನಾಗಗಳನ್ನು ಮತ್ತು ಭಸ್ಮವನ್ನು ಲೇಪಿಸಿಕೊಂಡನು, ಆದರೂ ಶಿವನ ಉಷ್ಣತೆ, ಅಂದರೆ ದೇಹಕ್ಕಾಗುವ ದಾಹವು ಶಾಂತವಾಗದಿದ್ದಾಗ, ಶಿವನು ಪ್ರಭು ಶ್ರೀರಾಮನ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ನಾಮಜಪವನ್ನು ಆರಂಭಿಸಿದನು. ಇದರಿಂದ ಶಿವನ ದೇಹಕ್ಕಾಗುವ ದಾಹವು ಶಾಂತವಾಯಿತು. ಶ್ರೀವಿಷ್ಣುವಿನ ಸಾವಿರ ಹೆಸರುಗಳ ಪೈಕಿ ಶ್ರೀರಾಮನ ನಾಮವು ಸರ್ವಶ್ರೇಷ್ಠವಾಗಿದೆ. ೩ ಸಲ ಉಚ್ಚರಿಸಿದ ಶ್ರೀರಾಮನ ನಾಮವು ಶ್ರೀವಿಷ್ಣುಸಹಸ್ರನಾಮಕ್ಕೆ ಸಮಾನವಾಗಿದೆ.

೨ ಆ. ದೇಹದಲ್ಲಿನ ಸೂರ್ಯನಾಡಿಯನ್ನು ನಿಲ್ಲಿಸಿ ಚಂದ್ರನಾಡಿಯನ್ನು ಆರಂಭಿಸಲು ಪ್ರಾಣಾಯಾಮ ಮತ್ತು ಇತರ ಉಪಾಯಗಳನ್ನು ಮಾಡುವುದು

ಯಾವಾಗ ವ್ಯಕ್ತಿಯ ಸೂರ್ಯನಾಡಿ ಆರಂಭವಾಗುತ್ತದೆಯೋ, ಆಗ ಅವನ ದೇಹದಲ್ಲಿನ ಉಷ್ಣತೆಯು ಹೆಚ್ಚಾಗುತ್ತದೆ. ಬಲಮೂಗಿನ ಹೊಳ್ಳೆಯು ಸೂರ್ಯನಾಡಿಯ ಮತ್ತು ಎಡಮೂಗಿನ ಹೊಳ್ಳೆಯು ಚಂದ್ರನಾಡಿಯ ಪ್ರತೀಕವಾಗಿದೆ. ಎಡಮೂಗಿನ ಹೊಳ್ಳೆಯಿಂದ ೫-೧೦ ನಿಮಷಗಳ ಕಾಲ ಶ್ವಾಸ ತೆಗೆದುಕೊಂಡು ಅದನ್ನು ಎಡಮೂಗಿನ ಹೊಳ್ಳೆಯಿಂದಲೇ ಬಿಡಲು ಪ್ರಯತ್ನಿಸಬೇಕು. ಇದರಿಂದ ವ್ಯಕ್ತಿಯ ಚಂದ್ರನಾಡಿ ಆರಂಭವಾಗುತ್ತದೆ. ಅದರಂತೆ ೧೫ ರಿಂದ ೨೦ ನಿಮಿಷಗಳ ಕಾಲ ಬಲ ಮಗ್ಗುಲಿಗೆ ಮಲಗಿದರೆ ಸೂರ್ಯನಾಡಿಯು ನಿಂತು ಚಂದ್ರನಾಡಿಯು ಆರಂಭವಾಗುತ್ತದೆ. ಇದರಿಂದ ದೇಹದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ.

೨ ಇ. ಉಪ್ಪು ನೀರಿನಲ್ಲಿ ಕಾಲುಗಳನ್ನು ಮುಳುಗಿಸಿ ಉಪಾಯ ಮಾಡುವುದು

ದೇಹದಲ್ಲಿ ತೊಂದರೆದಾಯಕ ಶಕ್ತಿ ಸಂಗ್ರಹವಾದರೂ ದೇಹದಲ್ಲಿನ ಉಷ್ಣತೆ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ೧೫ ರಿಂದ ೨೦ ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಕಾಲುಗಳನ್ನು ಮುಳುಗಿಸಿ ಕುಳಿತುಕೊಳ್ಳಬೇಕು. ಅದರಿಂದ ದೇಹದಲ್ಲಿನ ತೊಂದರೆದಾಯಕ ಶಕ್ತಿಯು ಉಪ್ಪುನೀರಿನಲ್ಲಿ ಸೆಳೆಯಲ್ಪಟ್ಟು ದೇಹದಲ್ಲಿನ ಉಷ್ಣತೆಯು ಕಡಿಮೆಯಾಗಲು ಸಹಾಯವಾಗುತ್ತದೆ.

೨ ಈ. ಖಾಲಿ ಪೆಟ್ಟಿಗೆಗಳ ಉಪಾಯ ಮಾಡುವುದು

೨ ಈ ೧. ಬಾಯಿಯ ಎದುರಿಗೆ ಖಾಲಿ ಪೆಟ್ಟಿಗೆಯನ್ನು ಹಿಡಿಯುವುದು : ಬಾಯಿಯಲ್ಲಿ ಉಷ್ಣತೆ ಹೆಚ್ಚಾದರೆ ಬಾಯಿಯನ್ನು ತೆರೆದು ಅದರೆದುರು ಖಾಲಿ ಪೆಟ್ಟಿಗೆಯನ್ನು ೧೫ ರಿಂದ ೨೦ ನಿಮಿಷಗಳ ಕಾಲ ಹಿಡಿಯಬೇಕು. ಅದರಿಂದ ಬಾಯಿಯಲ್ಲಿ ಸಂಗ್ರಹವಾದ ತೊಂದರೆದಾಯಕ ಶಕ್ತಿಯು ಖಾಲಿ ಪೆಟ್ಟಿಗೆಯಲ್ಲಿ ಸೆಳೆಯಲ್ಪಟ್ಟು ದೇಹದಲ್ಲಿನ ಉಷ್ಣತೆಯು ಕಡಿಮೆಯಾಗುತ್ತದೆ.

೨ ಈ ೨. ಖಾಲಿ ಪೆಟ್ಟಿಗೆಯಲ್ಲಿ ಕಾಲುಗಳನ್ನಿಟ್ಟು ಕುಳಿತುಕೊಳ್ಳುವುದು : ಉಷ್ಣತೆಯಿಂದ ಅಂಗಾಲುಗಳು ಉರಿಯುತ್ತಿದ್ದರೆ, ದೊಡ್ಡ ಆಕಾರದ ಖಾಲಿ ಪೆಟ್ಟಿಗೆಯಲ್ಲಿ ಎರಡೂ ಕಾಲುಗಳನ್ನಿಟ್ಟು ೨೦ ರಿಂದ ೩೦ ನಿಮಿಷಗಳ ಕಾಲ ಕುಳಿತುಕೊಳ್ಳಬೇಕು. ಇದರಿಂದ ಪೆಟ್ಟಿಗೆಯ ಟೊಳ್ಳಿನಲ್ಲಿ ಕಾಲುಗಳಲ್ಲಿನ ತೊಂದರೆದಾಯಕ ಶಕ್ತಿ ಅಥವಾ ಉಷ್ಣತೆ ಸೆಳೆಯಲ್ಪಟ್ಟು ದೇಹದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ.

೩. ಸಂಗೀತದಲ್ಲಿನ ಕೇದಾರ, ಮಾಲಕಂಸ ಮತ್ತು ಅಮೃತವರ್ಷಿಣೀ ಈ ರಾಗಗಳನ್ನು ಕೇಳುವುದು

‘ಮೇಘಮಲ್ಹಾರ’ ಆಪತತ್ತ್ವಕ್ಕೆ ಸಂಬಂಧಿಸಿದೆ. ‘ಕೇದಾರ ಮತ್ತು ಮಾಲಕಂಸ ರಾಗಗಳು ಶಿವತತ್ತ್ವಕ್ಕೆ ಸಂಬಂಧಿಸಿವೆ. ಅಮೃತವರ್ಷಿಣೀ ಈ ರಾಗವು ಕರ್ನಾಟಕೀ ರಾಗವಾಗಿದೆ. ಅದು ಆಪತತತ್ತ್ವಕ್ಕೆ ಸಂಬಂಧಿಸಿದೆ.’

– ಸುಶ್ರೀ (ಕು.) ತೇಜಲ ಪಾತ್ರೀಕರ (ಆಧ್ಯಾತ್ಮಿಕ ಮಟ್ಟ ಶೇ. ೬೩), ಸಂಗೀತ ವಿಶಾರದ, ಸನಾತನ ಆಶ್ರಮ, ರಾಮನಾಥಿ, ಗೋವಾ.)

ಕೇದಾರ ಮತ್ತು ಮಾಲಕಂಸ ಈ ರಾಗಗಳಲ್ಲಿ ಶಿವತತ್ತ್ವವು ಕಾರ್ಯನಿರತವಾಗಿದೆ. ಈ ತತ್ತ್ವಗಳು ನಿರ್ಗುಣ ಸ್ವರೂಪದ್ದಾಗಿದ್ದು ಅವು ಆಕಾಶತತ್ತ್ವಕ್ಕೆ ಸಂಬಂಧಿಸಿವೆ. ದೇಹದಲ್ಲಿನ ಉಷ್ಣತೆಯು ತೇಜತತ್ತ್ವಕ್ಕೆ ಸಂಬಂಧಿಸಿರುತ್ತದೆ. ಆದುದರಿಂದ ದೇಹದಲ್ಲಿನ ತೇಜತತ್ತ್ವ ಹೆಚ್ಚಾದರೆ ದೇಹದಲ್ಲಿನ ಉಷ್ಣತೆಯೂ ಹೆಚ್ಚಾಗುತ್ತದೆ, ಆಗ ಆಕಾಶತತ್ತ್ವಕ್ಕೆ ಸಂಬಂಧಿಸಿರುವ ‘ಕೇದಾರ ಮತ್ತು ಮಾಲಕಂಸ’ ಮತ್ತು ಆಪತತ್ತ್ವಕ್ಕೆ ಸಂಬಂಧಿಸಿದ ‘ಮೇಘಮಲ್ಹಾರ’ ಈ ರಾಗಗಳಲ್ಲಿನ ಸಂಗೀತ ಗಾಯನ ಅಥವಾ ವಾದನ ಇವುಗಳ ಸಂಗೀತವನ್ನು ೧೫ ರಿಂದ ೨೦ ನಿಮಿಷಗಳ ಕಾಲ ಕೇಳಿದರೆ ದೇಹದಲ್ಲಿನ ಆಕಾಶ ಅಥವಾ ಆಪತತ್ತ್ವವು ಹೆಚ್ಚಾಗಿ ತೇಜತತ್ತ್ವದ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ಹೆಚ್ಚಾದ ಉಷ್ಣತೆಯು ಕಡಿಮೆಯಾಗಿ ಶೀತಲತೆ ಹೆಚ್ಚಾಗುತ್ತದೆ. ವ್ಯಕ್ತಿಯ ಪ್ರಕೃತಿಗನುಸಾರ ಅವನಿಗೆ ವಿವಿಧ ರೀತಿಯ ಉಪಾಯಗಳು ಅನ್ವಯಿಸುತ್ತವೆ. ಆದುದರಿಂದ ಕೆಲವು ಜನರಿಗೆ ಶಿವತತ್ತ್ವಕ್ಕೆ, ಅಂದರೆ ಆಕಾಶತತ್ತ್ವಕ್ಕೆ ಮತ್ತು ಕೆಲವು ಜನರಿಗೆ ಆಪತತ್ತ್ವಕ್ಕೆ ಸಂಬಂಧಿಸಿದ ರಾಗವನ್ನು ಕೇಳಿದರೆ ಅವರಿಗೆ ಲಾಭವಾಗಿ ಅವರ ಉಷ್ಣತೆ ಕಡಿಮೆಯಾಗುತ್ತದೆ.’

ಕೃತಜ್ಞತೆ

‘ದೇವರ ಕೃಪೆಯಿಂದ ದೇಹದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಲು ಶಾರೀರಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಮೇಲಿನ ಉಪಾಯಗಳು ಹೊಳೆದವು’, ಇದಕ್ಕಾಗಿ ನಾನು ದೇವರ ಚರಣಗಳಲ್ಲಿ ಕೃತಜ್ಞಳಾಗಿದ್ದೇನೆ.’

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩) (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೯-೧-೨೦೨೨)