ಮಹಂತ ನರೇಂದ್ರ ಗಿರಿಯವರ ಸಾವಿನ ರಹಸ್ಯ ಇನ್ನೂ ನಿಗೂಢ

ಪೊಲೀಸರಿಂದ ವಿಶೇಷ ಅನ್ವೇಷಣಾ ಪಡೆಯ ಸ್ಥಾಪನೆ

ಶಿಷ್ಯ ಆನಂದ ಗಿರಿಯ ಬಂಧನ, ಹಾಗೂ ಇನ್ನಿಬ್ಬರು ವಶಕ್ಕೆ

ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷರಾದ ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಸಾವಿನ ವಿಚಾರಣೆಗಾಗಿ ಉತ್ತರಪ್ರದೇಶ ಪೊಲೀಸರು ವಿಶೇಷ ಅನ್ವೇಷಣೆ ಪಡೆಯನ್ನು ಸ್ಥಾಪಿಸಿದ್ದಾರೆ. ಪೊಲೀಸರು ಆ ಸಾವಿನ ವಿಷಯವಾಗಿ ಕಲಂ 306 ಅಂತರ್ಗತವಾಗಿ ಅಪರಾಧವನ್ನು ನೋಂದಾಯಿಸಿದ್ದಾರೆ. ಈ ಪ್ರಕರಣದಲ್ಲಿ ಮಹಂತ ನರೇಂದ್ರ ಗಿರಿಯವರ ಶಿಷ್ಯ ಆನಂದ ಗಿರಿಯವರನ್ನು ಬಂಧಿಸಲಾಗಿದ್ದು, ಅಲ್ಲಿನ ಲೆಟೆ ಹನುಮಾನಜೀ ದೇವಾಲಯದ ಅರ್ಚಕರಾದ ಆದ್ಯಾ ತಿವಾರಿ ಹಾಗೂ ಅವರ ಮಗ ಸಂದೀಪ ತಿವಾರಿಯವರನ್ನು ವಶಕ್ಕೆ ತೆಗೆದುಕೊಂಡಿದ್ದು ಅವರನ್ನು ವಿಚಾರಣೆ ಮಾಡಲಾಗುತ್ತಿದೆ. ಇವರಿಬ್ಬರ ಹೆಸರುಗಳು ಮಹಂತರು ಸಾಯುವ ಮೊದಲು ಬರೆದಿರುವ ಪತ್ರದಲ್ಲಿದೆ. ಆನಂದಗಿರಿಯವರ ಮೇಲೆ ಮಹಂತ ನರೇಂದ್ರ್ರ ಗಿರಿಯವರಿಗೆ ಮಾನಸಿಕ ಕಿರುಕುಳ ನೀಡಿರುವ ಆರೋಪವಿದೆ. ಈ ಘಟನೆಯ ಪ್ರಕರಣದಲ್ಲಿ 8 ಜನರ ಲಾಯ ಡಿಟೆಕಟರ್ ಪರೀಕ್ಷೆ (ಅಪರಾಧದ ಪ್ರಕರಣದಲ್ಲಿ ಸಂಬಂಧಪಟ್ಟ ಆರೋಪಿಯು ನಿಜ ಹೇಳುತ್ತಿದ್ದಾನೇನು ಅಥವಾ ಸುಳ್ಳು ಹೇಳುತ್ತಿದ್ದಾರೇನು, ಎಂಬುದನ್ನು ತಪಾಸಣೆ ಮಾಡುವುದು) ಮಾಡುವ ಸಾಧ್ಯತೆಯಿದೆ. ಇದರಲ್ಲಿ ಓರ್ವ ಕಟ್ಟಡ ವ್ಯವಹಾರಸ್ಥನ ಸಮಾವೇಶವಿರುವುದಾಗಿ ಹೇಳಲಾಗುತ್ತಿದೆ. ಪೊಲೀಸರು ಮಹಂತ ನರೇಂದ್ರ ಗಿರಿಯವರ ಸಂಚಾರವಾಣಿಯನ್ನು ಜಪ್ತಿ ಪಡಿಸಿಕೊಂಡಿದ್ದು ಅದನ್ನು ಪರಿಶೀಲಿಸಲಾಗುವುದು. ಸಾವಿನ ಮೊದಲು ಮಹಂತ ನರೇಂದ್ರ ಗಿರಿಯವರು ಸಂಚಾರವಾಣಿಯಲ್ಲಿ ಚಿತ್ರೀಕರಣ ಮಾಡಿರುವುದಾಗಿ ಹೇಳಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರವರು ‘ಪ್ರತಿಯೊಂದು ಘಟನೆಯ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದಾರೆ.

ಸೆಪ್ಟೆಂಬರ 20 ರಂದು ಬೆಳಿಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಪ್ರಯಾಗರಾಜದಲ್ಲಿ ಬಾಘಂಬರೀ ಮಠಕ್ಕೆ ಬಂದು ಮಹಂತ ನರೇಂದ್ರಗಿರಿಯವರ ಪಾರ್ಥಿವದ ದರ್ಶನವನ್ನು ಪಡೆದುಕೊಂಡರು. ಆಗ ಪ್ರಚಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ‘ನಾಳೆ ಮಹಂತರ (ಸಪ್ಟೆಂಬರ 22 ರಂದು) ಶವವಿಚ್ಛೇದನೆ ಮಾಡಲಾಗುವುದು ಹಾಗೂ ಅನಂತರ ಸಮಾಧಿಗೆ ನೀಡಲಾಗುವುದು’ ಎಂದು ನುಡಿದರು.

ನರೇಂದ್ರ ಗಿರಿಯವರನ್ನು ಬ್ಲಾಕಮೇಲ ಮಾಡುವ ಪ್ರಯತ್ನ

ಒಂದು ವಿಡಿಯೋದ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ನರೇಂದ್ರ ಗಿರಿಯವರನ್ನು ಬ್ಲಾಕಮೇಲ ಮಾಡುತ್ತಿದ್ದನು ಎಂದು ಸಹ ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ನಿರ್ದಿಷ್ಟವಾಗಿ ಏನಿತ್ತು? ಎಂಬುದನ್ನು ಕಂಡು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸಮಾಜವಾದಿ ಪಕ್ಷದ ಮಾಜಿ ಮಂತ್ರಿಯ ವಿಚಾರಣೆಯ ಸಾಧ್ಯತೆ

ಈ ಪ್ರಕರಣದಲ್ಲಿ ಮಾಜಿ ಸರಕಾರದಲ್ಲಿ ಮಂತ್ರಿಯಾಗಿದ್ದ ಅಂದರೆ ಸಮಾಜವಾದಿ ಪಕ್ಷದವರ ಒಬ್ಬರ ಹೆಸರು ಎದುರಿಗೆ ಬರುತ್ತಿದೆ. ಆ ಮಾಜಿ ಮಂತ್ರಿಯ ವಿಚಾರಣೆಯಾಗುವ ಸಾಧ್ಯತೆಯಿದೆ. ಆ ಮಂತ್ರಿಯು ಎಷ್ಟೋ ಸಲ ಬಾಘಂಬರೀ ಮಠದಲ್ಲಿ ನರೇಂದ್ರ ಗಿರಿಯವರನ್ನು ಭೇಟಿಯಾಗಲು ಬರುತ್ತಿದ್ದನು. ಬಂಧಿಸಲಾದ ಶಿಷ್ಯ ಆನಂದ ಗಿರಿಯವರಿಗೂ ಆ ಮಾಜಿ ಮಂತ್ರಿಯೊಂದಿಗೆ ಬಹಳ ಆತ್ಮೀಯ ಸಂಬಂಧವಿರುವುದಾಗಿ ತಿಳಿದು ಬರುತ್ತದೆ.

ಮರಣದ ಮೊದಲು ಬರೆದಿರುವ ಪತ್ರದ ಬಗ್ಗೆ ಸಂಶಯ

ಮಹಂತ ನರೇಂದ್ರ ಗಿರಿಯವರು ತಮ್ಮ ಮರಣದ ಮೊದಲು ಬರೆದಿರುವ ಪತ್ರದ ಬಗ್ಗೆ ಆನಂದ ಗಿರಿಯು ಸಂಶಯ ವ್ಯಕ್ತ ಪಡಿಸಿದ್ದಾನೆ. ಅವನು ಮಹಂತ ನರೇಂದ್ರ ಗಿರಿಯವರಿಗೆ ಸರಿಯಾಗಿ ಬರೆಯಲು ಬರುವುದಿಲ್ಲ ಎಂದು ಹೇಳಿದ್ದಾನೆ. ಅವರ ಶಿಷ್ಯ ನಿರ್ಭಯ ದ್ವಿವೇದಿ ಮಾತ್ರ ಸರಿಯಾಗಿ ಬರೆಯುತ್ತಾನೆ ಎಂದು ಕೂಡ ಹೇಳಿದನು.

ಮರಣದ ದಿನದಂದು ನರೇಂದ್ರ ಗಿರಿಯವರು ಯಾರನ್ನೋ ದಾರಿ ಕಾಯುತ್ತಿದ್ದರು !

‘ಮರಣದ ದಿನದಂದು ನರೇಂದ್ರ ಗಿರಿಯವರು ಒಬ್ಬರ ದಾರಿ ಕಾಯುತ್ತಿದ್ದರು’, ಎಂದು ನಿರ್ಭಯ ದ್ವಿವೇದಿಯವರು ಪೊಲೀಸರಿಗೆ ಹೇಳಿದರು. ನರೇಂದ್ರ ಗಿರಿಯವರು 2 ದಿನಗಳ ಮೊದಲು ಹಗ್ಗ ತಂದುಕೊಡುವಂತೆ ಹೇಳಿದ್ದರೆಂದು ಸೇವಕನೊಬ್ಬನು ಪೊಲೀಸರಿಗೆ ಹೇಳಿದನು. ನರೇಂದ್ರ ಗಿರಿಯವರು ಅದೇ ಹಗ್ಗದಿಂದ ನೇಣು ಹಾಕಿಕೊಂಡರು, ಎಂದು ಸೇವಕನು ಹೇಳಿದನು.

ಸಿಬಿಐ ತನಿಖೆ ನಡೆಸುವಂತೆ ನ್ಯಾಯಾಲಯದಲ್ಲಿ ಕೋರಿಕೆ

ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಮರಣದ ವಿಷಯವಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ಅಲಾಹಾಬಾದ ಉಚ್ಚ ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಲಾಗಿದೆ. ಕೋರಿಕೆ ಸಲ್ಲಿಸಿದ ನ್ಯಾಯವಾದಿ ಸುನೀಲ ಚೌಧರಿಯವರು ಪ್ರಯಾಗರಾಜದ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ ಮೇಲ್ವಿಚಾರಕರನ್ನು ಅಮಾನತುಗೊಳಿಸ ಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾರೆ.