ಚಲನಚಿತ್ರಗಳಿಗಾಗಿ 24 ಗಂಟೆ ನಡೆಯುುವ ವಾಹಿನಿಗಳಿರುವಾಗ ಶಿಕ್ಷಣಕ್ಕಾಗಿ ಏಕೆ ಇರಬಾರದು ? – ಮುಂಬೈ ಉಚ್ಚ ನ್ಯಾಯಾಲಯ

ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ? ನ್ಯಾಯಾಲಯವು ಏಕೆ ಇದನ್ನು ಹೇಳಬೇಕಾಗುತ್ತದೆ? – ಸಂಪಾದಕರು

ಮುಂಬೈ ಉಚ್ಚ ನ್ಯಾಯಾಲಯ

ಮುಂಬೈ – ಕೊರೊನಾ ಕಾಲದಲ್ಲಿ ವಿಕಲಾಂಗ ಹಾಗೂ ವಿಶೇಷ ಮಕ್ಕಳ ಸಹಿತ ಗ್ರಾಮೀಣ ಭಾಗದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸ್ವತಂತ್ರ ಶಿಕ್ಷಣ ವಾಹಿನಿಯನ್ನು ಏಕೆ ನಡೆಸಲಾಗುತ್ತಿಲ್ಲ? ದೂರದರ್ಶನದಲ್ಲಿ ಚಲನಚಿತ್ರಗಳು ಹಾಗೂ ಹಾಡುಗಳನ್ನು 24 ಗಂಟೆ ನಡೆಸುವ ವಾಹಿನಿಗಳು ಇರಬಹುದಾದರೆ ಶಿಕ್ಷಣಕ್ಕಾಗಿ ಪೂರ್ಣ ವೇಳೆ ವಾಹಿನಿಗಳು ಏಕೆ ಇರಬಾರದು? ಎಂಬ ಪ್ರಶ್ನೆಯನ್ನು ಮುಂಬೈನ ಉಚ್ಚ ನ್ಯಾಯಾಲಯವು ಕೇಳಿದೆ. ಸಂಚಾರ ನಿರ್ಬಂಧದಿಂದ ‘ಆನ್ ಲೈನ್’ ಶಿಕ್ಷಣ ಪಡೆಯುವಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತಿರುವುದರಿಂದ ‘ನೆಬ್’ ಎಂಬ ಸಂಸ್ಥೆಯ ವತಿಯಿಂದ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಆಗಸ್ಟ್ ಎರಡರಂದು ಮುಖ್ಯ ನ್ಯಾಯಮೂರ್ತಿ ದೀಪಾಂಕರ ದತ್ತ ಹಾಗೂ ನ್ಯಾಯಮೂರ್ತಿ ಗಿರೀಶ ಕುಲಕರ್ಣಿ ಇವರ ವಿಭಾಗೀಯ ಪೀಠದ ಎದುರು ಈ ವಿಷಯದ ಆಲಿಕೆ ನಡೆಯಿತು. ಆ ಸಮಯದಲ್ಲಿ ನ್ಯಾಯಾಲಯವು ಮೇಲಿನ ಪ್ರಶ್ನೆಯನ್ನು ಕೇಳಿದೆ.

ರಾಜ್ಯದಲ್ಲಿನ ದುರ್ಗಮ ಅಥವಾ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳ ಬಳಿ ಆನ್ ಲೈನ್ ಶಿಕ್ಷಣ ಪಡೆಯಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಕೆಲವರ ಬಳಿ ಸಂಚಾರವಾಣಿ(ಮೊಬೈಲ್) ಇದ್ದರೂ ನೆಟ್ ವರ್ಕ್ ಸಮಸ್ಯೆಯು ದೊಡ್ಡ ಪ್ರಮಾಣದಲ್ಲಿದೆ. ಇಂತಹ ಸಮಯದಲ್ಲಿ ವಿಶೇಷ ಮಕ್ಕಳಿಗೆ ಮನೆ ಮನೆಗೆ ಹೋಗಿ ಶಿಕ್ಷಣ ನೀಡುವ ಉಪಕ್ರಮಗಳನ್ನು ಸರಕಾರವು ಕೈಗೆತ್ತಿಕೊಂಡಿತ್ತು. ಆದರೆ ಅವುಗಳೆಲ್ಲವೂ ಕೇವಲ ಕಾಗದ ಪತ್ರದಲ್ಲಿಯೇ ಉಳಿದಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ವಿಷಯದಲ್ಲಿ ಸೂಚನೆಯನ್ನು ನೀಡುವಾಗ ನ್ಯಾಯಾಲಯವು ಮುಂದಿನಂತೆ ಹೇಳಿದೆ – ‘ಹಿಂದೆ ಸಂಚಾರವಾಣಿ (ಮೊಬೈಲ್) ಇರಲಿಲ್ಲ ಆಗ ಟಿವಿಯಲ್ಲಿಯೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ತೋರಿಸಲಾಗುತ್ತಿತ್ತು. ದೂರದರ್ಶನದಲ್ಲಿನ ‘ನಮ್ಮ ನೆಲ, ನಮ್ಮ ಜನರು’ ಎಂಬ ಕಾರ್ಯಕ್ರಮದಲ್ಲಿ ವಿಕಲಾಂಗ ಹಾಗೂ ವಿಶೇಷ ವಿದ್ಯಾರ್ಥಿಗಳಿಗಾಗಿ ಮಾತ್ರವಲ್ಲ, ಎಲ್ಲ ವಿದ್ಯಾರ್ಥಿಗಳಿಗಾಗಿ ದೂರದರ್ಶನದಲ್ಲಿ ನಿರ್ಧರಿತ ಕಾಲಾವಧಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳ ಕಾರ್ಯಕಲಾಪಗಳ ಪ್ರಸಾರಕ್ಕಾಗಿ ಸ್ವತಂತ್ರ ವಾಹಿನಿಗಳಿವೆ. ಹೀಗಿರುವಾಗ ಶಿಕ್ಷಣಕ್ಕಾಗಿ 1 ವಾಹಿನಿ ಏಕೆ ಇರಬಾರದು? ಅಥವಾ ಆಕಾಶವಾಣಿಯ ಮಾಧ್ಯಮದಿಂದ ಶಿಕ್ಷಣದ ಪ್ರಸಾರ ಏಕೆ ಆಗಬಾರದು? ಇಂತಹ ಶಿಕ್ಷಣ ವಾಹಿನಿಯನ್ನು ತರುವ ದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರಯತ್ನಿಸಬೇಕಿದೆ. ಈ ವಿಷಯದಲ್ಲಿ ಮಾಹಿತಿ ಮತ್ತು ಪ್ರಸಾರಣ ಮಂತ್ರಾಲಯದೊಂದಿಗೆ ಚರ್ಚಿಸಿ ಭೂಮಿಕೆಯನ್ನು ಸ್ಪಷ್ಟಪಡಿಸಬೇಕು.