ಪಾಪ, ಪುಣ್ಯ ಮತ್ತು ಅದರ ಪರಿಣಾಮಗಳ (ಕರ್ಮಯೋಗದ ಬಗ್ಗೆ) ಕುರಿತು ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಪೂ. (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು

೧. ಕರ್ಮಗಳ ಫಲವು ಸಿಕ್ಕೇ ಸಿಗುತ್ತದೆ !

‘ಕುರಿಯನ್ನು ಕೊಯ್ದು ಅದನ್ನು ಮಸಾಲೆಯಲ್ಲಿ ಕುದಿಸಿ ತಿನ್ನುತ್ತಾರೆ. ಹಾಗೆ ಕುರಿಯಂತೆ ನಿಮ್ಮನ್ನು ಯಾರಾದರೂ ಕುದಿಸಿ ತಿಂದರೆ ನಡೆಯುತ್ತದೆಯೇ ? ಅರೆ, ಅದೂ ನಮ್ಮಂತೆ ಒಂದು ಜೀವವೇ ಆಗಿದೆಯಲ್ಲ ? ಅದು ಬಡಪಾಯಿ ಪ್ರಾಣಿಯಾಗಿದೆ. ಅದು ಪ್ರೀತಿಯಿಂದ ಹೇಗೆ ತನ್ನ ಒಡೆಯನನ್ನು (ಮಾಲೀಕನನ್ನು) ನೆಕ್ಕುತ್ತದೆ ! ಸ್ವಲ್ಪ ಸಮಯದ ನಂತರ ಆ ಯಜಮಾನನು ಅದರ ಕುತ್ತಿಗೆಯ ಮೇಲೆ ಕುಡಗೋಲನ್ನು ಹಾಕುವವನಿದ್ದಾನೆಂದು, ಅದಕ್ಕೇನು ಗೊತ್ತು ಪಾಪ ? ಅರೆ, ಮುಂದಿನ ಜನ್ಮದಲ್ಲಿ ನೀವು ಕುರಿಯ ಜನ್ಮವನ್ನು ಪಡೆಯುವಿರಿ. ಆಗ ಅವನು ನಿಮ್ಮ ಕುತ್ತಿಗೆಯ ಮೇಲೆ ಕುಡುಗೋಲನ್ನು ಹಾಕುವನು. ‘ಮಾಡಿದ ಕರ್ಮವೇ ಮುಂದೆ, ಭೋಗವೆಂದು ನಮ್ಮ ಪಾಲಿಗೆ ಬರುತ್ತದೆ’, ಅದು ಬಂದೇ ಬರುತ್ತದೆ !’

೨. ಹಿಂದಿನಜನ್ಮದ ಕರ್ಮದ ಪರಿಣಾಮ

೨ ಅ. ಹೇಗೆ ಕರ್ಮವನ್ನು ಮಾಡುವಿರೋ, ಹಾಗೆ ಭೋಗಿಸ ಬೇಕಾಗುತ್ತದೆ; ಜೀವನದಲ್ಲಿ ಸತ್ಯದಿಂದ ನಡೆದುಕೊಂಡು ಧರ್ಮದಂತೆ ನಡೆದರೆ ಮನೆಯಲ್ಲಿ ಆನಂದ ಮತ್ತು ಶಾಂತಿ ಬರುವುದು ! : ‘ಮನೆಯಲ್ಲಿ ಕುಂಟರು, ಕುರುಡರು, ಕಳ್ಳರು, ಸುಳ್ಳು ಮಾತನಾಡುವರು ಮತ್ತು ಕೋಪಿಷ್ಟ ಮಕ್ಕಳು ಏಕೆ ಜನ್ಮಕ್ಕೆ ಬರುತ್ತವೆ ? ಅದರ ಕಾರಣ ಆ ಕುಟುಂಬದಲ್ಲಿ ಮೊದಲಿನ ೭ ಜನ್ಮಗಳಲ್ಲಿನ ಸಂಗ್ರಹವಾದ ಪಾಪವೇ ಜನ್ಮ ತಾಳುತ್ತದೆ. ‘ನಾವು ಮಾಡಿದ ಕರ್ಮವೇ, ನಮ್ಮ ಪಾಲಿಗೆ ಬರುತ್ತದೆ’, ಎಂಬಂತೆ ಪಾಪವನ್ನು ಮಾಡಿದರೆ ಪಾಪವೇ ಜನ್ಮಕ್ಕೆ ಬರುತ್ತದೆ ಮತ್ತು ಪುಣ್ಯವನ್ನು ಮಾಡಿದರೆ, ಪುಣ್ಯವೇ ಜನ್ಮಕ್ಕೆ ಬರುತ್ತದೆ. ತಂದೆಯು ಇನ್ನೊಬ್ಬರ ಪತ್ನಿಯನ್ನು ಅಪಹರಿಸಿಕೊಂಡು ಬಂದರೆ, ಮಗನೂ ಇನ್ನೊಬ್ಬರ ಪತ್ನಿಯನ್ನು ಅಪಹರಿಸಿಕೊಂಡು ಬರುತ್ತಾನೆ. ‘ತಾಯಿಯಂತೆ ಮಗಳು, ನೂಲಿನಂತೆ ಸೀರೆ ಆಗುವುದೇ ಇದೆ’; ಆದುದರಿಂದ ಯಾರಿಗೆ ತಮ್ಮ ಜೀವನವನ್ನು ಚೆನ್ನಾಗಿ ಮಾಡಿಕೊಳ್ಳಬೇಕೆಂದು ಅನಿಸುತ್ತದೆಯೋ, ಅವರು ಜೀವನದಲ್ಲಿ ಸತ್ಯ ಮಾರ್ಗದಿಂದ ನಡೆಯಬೇಕು. ಧರ್ಮದಂತೆ ನಡೆದುಕೊಳ್ಳಬೇಕು ಮತ್ತು ಪರೋಪಕಾರವನ್ನು ಮಾಡಬೇಕು. ನೀತಿಯಿಂದ ನಡೆಯಬೇಕು, ಆಗಲೇ ಅವನ ಮನೆಯಲ್ಲಿ ಸುಖ-ಸಮಾಧಾನ, ಆನಂದ ಮತ್ತು ಶಾಂತಿ ಬರುವುದು. ಪಾಪಿ ಮನುಷ್ಯನ ಮನೆಯಲ್ಲಿ ಶಾಂತಿ ಇರುವುದಿಲ್ಲ. ಅಲ್ಲಿ ಗೊಂದಲದ ವಾತಾವರಣವಿರುತ್ತದೆ.’

೨ ಆ. ಹಿಂದಿನ ಜನ್ಮದ ಪುಣ್ಯದಿಂದ ಅಥವಾ ಪಾಪದಿಂದ ಶ್ರೀಮಂತ ಅಥವಾ ಬಡವರ ಕುಟುಂಬದಲ್ಲಿ ಜನ್ಮ ಪಡೆಯಬೇಕಾಗುತ್ತದೆ ಮತ್ತು ಹಿಂದಿನ ಜನ್ಮದ ಪುಣ್ಯ ಅಥವಾ ಪಾಪವನ್ನು ಭೋಗಿಸಬೇಕಾಗುತ್ತದೆ, ಇದು ಸತ್ಯವಾಗಿದೆ :  ಈ ಜನ್ಮವು ನಾಯಿಯ ಜನ್ಮವಾಗಿದ್ದರೂ, ಅದರ ಹಿಂದಿನ ಜನ್ಮಗಳ ಪುಣ್ಯದಿಂದ ಅದು ಒಳ್ಳೆಯ ತಿನಿಸುಗಳನ್ನು ತಿನ್ನುತ್ತದೆ, ಬಂಗಲೆಯಲ್ಲಿರುತ್ತದೆ ಮತ್ತು ವಾಹನದಲ್ಲಿ ಓಡಾಡುತ್ತದೆ. ಪುಣ್ಯ ಅಲ್ಪವಿರುವ ಇತರ  ನಾಯಿಗಳು ಚರಂಡಿಯಲ್ಲಿ ಎಸೆದ ೪-೪ ದಿನಗಳ ತಂಗಳು ರೊಟ್ಟಿ ಅಥವಾ ಚಪಾತಿಗಳನ್ನು ಅವುಗಳಿಗೆ ಕಸ ತಗಲಿದ್ದರೂ ತಿನ್ನುತ್ತವೆ. ನಾವು ಇದನ್ನು ಪ್ರತಿದಿನ ಪ್ರತ್ಯಕ್ಷ ನೋಡುತ್ತೇವೆ. ಪುಣ್ಯದಿಂದ ಸುಖ ಮತ್ತು ಪಾಪದಿಂದ ದುಃಖ ಬರುತ್ತದೆ. ಒಂದು ಮಗು ಟಾಟಾ, ಬಿರ್ಲಾ, ಧೀರುಭಾಯೀ ಅಂಬಾನಿ ಇವರಂತಹ ಶ್ರೀಮಂತ ಕುಟುಂಬದಲ್ಲಿ ಜನ್ಮ ಪಡೆಯುತ್ತದೆ. ಅದಕ್ಕೆ ಹುಟ್ಟಿದಾಗಿನಿಂದಲೇ ಸಾಕಷ್ಟು ಸುಖ, ಬಂಗ, ವಾಹನ ಮತ್ತು ಅಪಾರ ಹಣ ಸಿಗುತ್ತದೆ. ಅದು ಅವನು ಅವನ ಹಿಂದಿನ ಜನ್ಮಗಳಲ್ಲಿ ಸಂಗ್ರಹಿಸಿದ ಪುಣ್ಯದಿಂದ ! ಇನ್ನೊಂದು ಮಗು ಮನೆ ಇಲ್ಲದಿರುವ, ರಸ್ತೆಯಲ್ಲಿ ಮಲಗುವ ಮತ್ತು ದಿನನಿತ್ಯ ಭಿಕ್ಷೆ ಬೇಡಿ ತಿನ್ನುವ ಭಿಕ್ಷುಕನ ಮನೆಯಲ್ಲಿ ಜನ್ಮ ಪಡೆಯುತ್ತದೆ. ‘ಹುಟ್ಟಿದಾಗಿನಿಂದಲೇ ಭಯಂಕರ ಬಡತನ’, ಹೀಗೇಕೆ ಆಗುತ್ತದೆ ? ಹಿಂದಿನ ಜನ್ಮದ ಪುಣ್ಯ ಮತ್ತು ಪಾಪದಿಂದ ಹೀಗಾಗುತ್ತದೆ, ಹಿಂದಿನ ಜನ್ಮದ ಪುಣ್ಯ ಮತ್ತು ಪಾಪವನ್ನು ಭೋಗಿಸಬೇಕಾಗುತ್ತದೆ’, ಇದು ಸತ್ಯವಾಗಿದೆ.’

೨ ಇ. ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡು ಬೇರೆಬೇರೆ ಜಗತ್ತುಗಳಿವೆ ಸೂಕ್ಷ್ಮ ಜಗತ್ತು ದೇವತೆಗಳದ್ದಾಗಿದೆ ಮತ್ತು ಸ್ಥೂಲ ಜಗತ್ತು ನಮ್ಮದು, ನಮ್ಮ ಕಣ್ಣಿಗೆ ಕಾಣಿಸುವುದಾಗಿದೆ. ಸ್ಥೂಲ ಜಗತ್ತಿನಲ್ಲಿ ಪಾಪ-ಪುಣ್ಯ ಇರುತ್ತದೆ ಮತ್ತು ಪುಣ್ಯವಂತರು ದೇವರ ಹತ್ತಿರ ಇರುತ್ತಾರೆ, ಪಾಪಿ ಮನುಷ್ಯರು ನರಕಕ್ಕೆ ಹೋಗಬೇಕಾಗುತ್ತದೆ : ಅವ್ಯಕ್ತ ನಿರಾಕಾರ ದೇವತೆಗಳ ಸ್ಥಾನವು ಸೂಕ್ಷ್ಮವಾಗಿದೆ. ಸೂಕ್ಷ್ಮ ಬುದ್ಧಿ ಅಥವಾ ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಅದು ಕಾಣಿಸಬಹುದು. ಇನ್ನೊಂದು ಜಗತ್ತಿಗೆ ಜೀವಸೃಷ್ಟಿ ಎನ್ನುತ್ತಾರೆ. ಅದು ೮೪ ಲಕ್ಷ ಯೋನಿಗಳ ಜಗತ್ತಾಗಿದೆ. ಅದು ನಮ್ಮ-ನಿಮ್ಮ ಜಗತ್ತಾಗಿದೆ; ಈ ನಮ್ಮ ಜಗತ್ತಿನಲ್ಲಿ ಪಾಪ-ಪುಣ್ಯದ ಬೆಳೆ ಬರುತ್ತದೆ. ದೇವತೆಗಳ ರಾಜ್ಯದಲ್ಲಿ ಮೇಲೆ ಪಾಪ-ಪುಣ್ಯದ ಬೆಳೆ ಇರುವುದಿಲ್ಲ. ಯಾವ ಪುಣ್ಯಾತ್ಮರು ಮರಣ ಹೊಂದಿದ ನಂತರ ಮೇಲೆ ಹೋಗುತ್ತಾರೋ, ಅವರಿಗೆ ದೇವರು ಉತ್ತಮ ಸ್ಥಾನವನ್ನು ನೀಡುತ್ತಾರೆ. ಅವರಿಗೆ ಸುಖದ ಸ್ಥಾನವು ಸಿಗುತ್ತದೆ. ಆ ಪುಣ್ಯಾತ್ಮರು ದೇವರ ಹತ್ತಿರ ಮೇಲಿರುತ್ತಾರೆ. ಉಳಿದ ಪಾಪಿ ಆತ್ಮಗಳನ್ನು ಮರಣದ ನಂತರ ನರಕಕ್ಕೆ ದೂಡಲಾಗುತ್ತದೆ.’

– ಪೂ. (ಹ.ಭ.ಪ.) ಸಖಾರಾಮ ರಾಮಜಿ ಬಾಂದ್ರೆ (೭೦ ವರ್ಷಗಳು), ಕಾತಳವಾಡಿ, ತಾ. ಚಿಪಳೂಣ, ರತ್ನಾಗಿರಿ ಜಿಲ್ಲೆ. (ಪೂ. ಸಖಾರಾಮ ರಾಮಜಿ ಬಾಂದ್ರೆ ಮಹಾರಾಜರು ಈ ಲೇಖನಗಳನ್ನು ೨೦೦೫ ರಿಂದ ೨೦೨೦ ಈ ಕಾಲಾವಧಿಯಲ್ಲಿ ಬರೆದಿದ್ದಾರೆ.)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆಯನ್ನು ಮಾಡುವವರಿಗೆ ಬರುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಜಗತ್ತು ಎನ್ನುತ್ತಾರೆ.