ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರಬೇಕು. ಏಕೆಂದರೆ ಇಂತಹ ಕೃತಿಯಿಂದಲೇ ಹೆಚ್ಚು ಫಲವು ದೊರೆಯುತ್ತದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ ಹಾಗೂ ಉಪಾಸನೆಗೆ ಸಂಬಂಧಿಸಿದ ಕೃತಿಗಳನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ಮುಂದೆ ನೀಡಲಾಗಿದೆ.

ಪೂಜೆಯ ಆರಂಭಿಕ ಕೃತಿಗಳ ಶಾಸ್ತ್ರ !

ದತ್ತನ ಪೂಜೆಯನ್ನು ಪ್ರಾರಂಭಿಸುವ ಮೊದಲು ಹಣೆಯ ಮೇಲೆ ಕಿರುಬೆರಳಿನ ಹತ್ತಿರದ ಬೆರಳಿನಿಂದ (ಅನಾಮಿಕ ದಿಂದ) ವಿಷ್ಣುವಿನಂತೆ ಎರಡು ನೇರ ರೇಖೆಗಳಲ್ಲಿ ಗಂಧವನ್ನು ಹಚ್ಚಿಕೊಳ್ಳಬೇಕು. ಈ ರೀತಿ ಗಂಧವನ್ನು ಹಚ್ಚಿಕೊಳ್ಳುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ. ಹಾಗೆಯೇ ಗಂಧದಲ್ಲಿನ ಸಾತ್ತ್ವಿಕತೆಯಿಂದ ಭಾವ ಜಾಗೃತಿಯಾಗಿ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ಇದರಿಂದಾಗಿ ಪೂಜೆಯಿಂದ ಪ್ರಾಪ್ತವಾಗುವ ಚೈತನ್ಯವನ್ನು ಅಧಿಕ ಪ್ರಮಾಣದಲ್ಲಿ ಗ್ರಹಣ ಮಾಡಲು ಸಾಧ್ಯವಾಗುತ್ತದೆ. ದತ್ತನ ಪೂಜೆ ಮಾಡುವಾಗ ದತ್ತನಿಗೆ ಗಂಧವನ್ನು ಅನಾಮಿಕದಿಂದ ಹಚ್ಚಬೇಕು. ಹಾಗೆಯೇ ಬಲಗೈಯ ಹೆಬ್ಬೆರಳು ಮತ್ತು ಅನಾಮಿಕವನ್ನು ಜೋಡಿಸಿದ ಚಿಟಿಕೆಯಿಂದ ದತ್ತನ ಚರಣಗಳಲ್ಲಿ ಮೊದಲು ಅರಿಶಿಣ ಆಮೇಲೆ ಕುಂಕುಮವನ್ನು ಅರ್ಪಿಸಬೇಕು. ನೈರ್ಮಾಲ್ಯವನ್ನು ತೆಗೆಯುವಾಗಲೂ ಹೆಬ್ಬೆರಳು ಮತ್ತು ಅನಾಮಿಕ ಬೆರಳುಗಳನ್ನೇ ಉಪಯೋಗಿಸಬೇಕು. ಹೆಬ್ಬೆರಳು ಮತ್ತು ಅನಾಮಿಕ ಈ ಬೆರಳುಗಳನ್ನು ಜೋಡಿಸುವುದರಿಂದಾಗುವ ಮುದ್ರೆಯಿಂದ ಶರೀರದಲ್ಲಿನ ಅನಾಹತ ಚಕ್ರವು ಜಾಗೃತವಾಗಿ ಭಕ್ತಿಭಾವವು ನಿರ್ಮಾಣವಾಗಲು ಸಹಾಯವಾಗುತ್ತದೆ.

ದತ್ತತತ್ತ್ವ ಆಕರ್ಷಿಸುವ ಬಣ್ಣ ಮತ್ತು ಸುಗಂಧ

ಜಾಜಿ ಮತ್ತು ನಿಶಿಗಂಧ ಹೂವುಗಳಲ್ಲಿ ದತ್ತತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದತ್ತನಿಗೆ ಈ ಹೂವು ಗಳನ್ನು ಅರ್ಪಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ. ದೇವತೆಗಳ ಚರಣ ಗಳಲ್ಲಿ ಹೂವುಗಳನ್ನು ವಿಶಿಷ್ಟ ಸಂಖ್ಯೆಗಳಲ್ಲಿ ಮತ್ತು ವಿಶಿಷ್ಟ ರಚನೆಯಲ್ಲಿ ಅರ್ಪಿಸುವುದರಿಂದ ಹೂವಿನ ಕಡೆಗೆ ಆಯಾಯ ದೇವತೆಗಳ ತತ್ತ್ವವು ಬೇಗನೆ ಆಕರ್ಷಿತವಾಗುತ್ತದೆ. ಈ ತತ್ತ್ವಕ್ಕನುಸಾರ ದತ್ತನಿಗೆ ಹೂವುಗಳನ್ನು ಅರ್ಪಿಸುವಾಗ ಏಳು ಅಥವಾ ಏಳರ ಪಟ್ಟುಗಳಲ್ಲಿ ಅಂದರೆ ೭, ೧೪, ೨೧ ಇತ್ಯಾದಿ ಸಂಖ್ಯೆಗಳಲ್ಲಿ ಶಂಕರ ಪಾಳೆಯ (ಚತುರ್ಭುಜ) ಆಕಾರದಲ್ಲಿ ಅರ್ಪಿಸಬೇಕು. ವಿಶಿಷ್ಟ ದೇವತೆಗಳ ತತ್ತ್ವವು ವಿಶಿಷ್ಟ ಗಂಧದ ಕಡೆ ಬೇಗನೇ ಆಕರ್ಷಿತವಾಗುತ್ತದೆ. ಈ ತತ್ತ್ವ್ವಕ್ಕನುಸಾರ ದತ್ತನ ಪೂಜೆಯಲ್ಲಿ ಚಂದನ, ಕೇದಗೆ, ಮಲ್ಲಿಗೆ ಮತ್ತು ಜಾಜಿ ಈ ಪರಿಮಳದ ಊದುಬತ್ತಿ ಉಪಯೋಗಿಸಿದರೆ ಹೆಚ್ಚು ದತ್ತತತ್ತ್ವದ ಲಾಭವಾಗುತ್ತದೆ. ಆದುದರಿಂದ ದತ್ತನ ಪೂಜೆಯ ವಿಷಯದಲ್ಲಿ ಈ ಗಂಧದ ಊದುಬತ್ತಿಯನ್ನು ಉಪಯೋಗಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ. ದತ್ತನೊಂದಿಗೆ ಇತರ ಎಲ್ಲ ದೇವತೆಗಳಿಗೆ ಎಷ್ಟು ಊದುಬತ್ತಿಯನ್ನು ಬೆಳಗಬೇಕು ಎನ್ನುವ ಶಾಸ್ತ್ರವು ಮುಂದಿನಂತಿದೆ. ಒಂದು ಎಂಬುದು ಅದ್ವೈತದ ಪ್ರತೀಕವಾದರೆ ಎರಡು ದ್ವೈತದ ಪ್ರತೀಕವಾಗಿದೆ. ಪ್ರಾಥಮಿಕ ಹಂತದಲ್ಲಿ ಉಪಾಸಕನು ದೇವರು ಮತ್ತು ತಾನು ಹೀಗೆ ದ್ವೈತದ ಸ್ಥಿತಿಯನ್ನು ಅನುಭವಿಸುತ್ತಿರುತ್ತಾನೆ; ಆದ್ದರಿಂದ ಅವನು ಎರಡು ಊದುಬತ್ತಿಗಳನ್ನು ಬೆಳಗುವುದು ಹೆಚ್ಚು ಯೋಗ್ಯವಾಗಿದೆ. ಉಪಾಸಕನು ಭಕ್ತಿಯ ಮುಂದಿನ ಹಂತದಲ್ಲಿ ಒಂದು ಊದುಬತ್ತಿಯನ್ನು ಬೆಳಗಬಹುದು. ದೇವರಿಗೆ ಊದುಬತ್ತಿಯನ್ನು ಬೆಳಗುವಾಗ ಅದನ್ನು ತನ್ನ ಬಲಗೈಯ ತೋರುಬೆರಳು ಮತ್ತು ಹೆಬ್ಬೆರಳಿನಿಂದ ಹಿಡಿದು ಗಡಿಯಾರದ ಮುಳ್ಳುತಿರುಗುವ ದಿಶೆಯಲ್ಲಿ ಮೂರು ಬಾರಿ ಬೆಳಗಬೇಕು. (ಆಧಾರ : ಸನಾತನವು ಪ್ರಕಾಶಿಸಿದ ಕಿರುಗ್ರಂಥ ‘ದತ್ತ)